ಪ್ರಧಾನಿ ಪತ್ರಕ್ಕೂ ಕಿಮ್ಮತ್ತು ಕೊಡದ ಚಾಮರಾಜನಗರ ಜಿಲ್ಲಾಡಳಿತ
ಚಾಮರಾಜನಗರ, ನವೆಂಬರ್ 15 : ಫಸಲ್ ಭೀಮ್ ಯೋಜನೆಯಡಿ ಪರಿಹಾರ ಕೇಳಿರುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಪ್ರಧಾನ ಮಂತ್ರಿ ಕಾರ್ಯಾಲಯದಿಂದ 4 ತಿಂಗಳ ಹಿಂದೆಯೇ ಪತ್ರ ಬಂದಿದ್ದರೂ ಇದುವರೆಗೂ ಚಾಮರಾಜನಗರ ಜಿಲ್ಲಾಧಿಕಾರಿ ಯಾವುದೇ ಕ್ರಮಕೈಗೊಂಡಿಲ್ಲ.
ಗುಂಡ್ಲುಪೇಟೆ ತಾಲೂಕಿನ ಮಾಲಾಪುರ ಗ್ರಾಮದ ಮಹಾಲಿಂಗಪ್ಪ, ಚನ್ನಮಲ್ಲಪ್ಪ, ಶಂಕರಪ್ಪ, ಮಹದೇವಸ್ವಾಮಿ, ಬಸಪ್ಪ, ಮುದ್ದಪ್ಪ ಎಂಬುವರು ಕೃಷಿ ಇಲಾಖೆಯ ಮೂಲಕ ಮುಂಗಾರು ಬೆಳೆವಿಮೆಗೆ ಯೂನಿವರ್ಸಿಯಲ್ ಸ್ಯಾಂಪೋ ಇನ್ಸೂರೆನ್ಸ್ ಕಂಪನಿಗೆ ವಿಮೆ ಹಣ ಕಟ್ಟಿದ್ದರು. ಆದರೆ, ಬೆಳೆ ನಷ್ಟಕ್ಕೊಳಗಾಗಿದ್ದರೂ ವಿಮೆ ಸೌಲಭ್ಯ ಪಡೆದಿದ್ದ ರೈತರಿಗೆ ಯಾವುದೇ ಪರಿಹಾರ ನೀಡದೆ ವಿಮೆಯ ಕಂತು ಮಾತ್ರ ಖಾತೆಗೆ ಜಮಾ ಆಗಿತ್ತು.

ಈ ಕುರಿತಂತೆ ರೈತರು ಜೂನ್ ತಿಂಗಳಲ್ಲಿ ಪ್ರಧಾನಮಂತ್ರಿ ಕಚೇರಿಗೆ ಪತ್ರ ಬರೆದು ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದರು. ರೈತರ ಪತ್ರಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿ ಕಚೇರಿಯ ಸಿಬ್ಬಂದಿ 26.07.2017 ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ರೈತರ ಅರ್ಜಿಯನ್ನು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.
ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ನಾಲ್ಕು ತಿಂಗಳು ಕಳೆದಿದ್ದರೂ ಈ ಬಗ್ಗೆ ಇನ್ನೂ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಈ ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಜಂಟಿ ಕೃಷಿ ನಿರ್ದೇಶಕರಿಗೆ ಕಳುಹಿಸಿ ಕೊಡಲಾಗಿದೆ. ಆದರೆ, ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.
ಇದರಿಂದ ನೊಂದ ರೈತರು ಸಮಸ್ಯೆಯನ್ನು ಪ್ರಧಾನಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.











Click it and Unblock the Notifications