ಕೇರಳದತ್ತ ಮುಖ ಮಾಡಿದ ಚಾಮರಾಜನಗರದ ಕೂಲಿ ಕಾರ್ಮಿಕರು!
ಚಾಮರಾಜನಗರ, ಜನವರಿ 29:ಕೇರಳದಲ್ಲೀಗ ಕಾಫಿ, ಕರಿಮೆಣಸು ಕೊಯ್ಲುನ ಕಾಲವಾಗಿರುವುದರಿಂದಾಗಿ ಕೃಷಿ ಕಾರ್ಮಿಕರಿಗೆ ಬಿಡುವಿಲ್ಲದ ಕೆಲಸ. ಹೀಗಾಗಿ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆಯಿದ್ದು, ಕೈತುಂಬಾ ಕೆಲಸ ಮತ್ತು ಹಣ ಸಿಗುತ್ತದೆ ಎಂಬ ಕಾರಣಕ್ಕೆ ಚಾಮರಾಜನಗರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಕೇರಳದತ್ತ ತೆರಳುತ್ತಿರುವುದು ಕಂಡು ಬರುತ್ತಿದೆ.
ಬಹಳಷ್ಟು ಜನ ಚಾಮರಾಜನಗರ ಜಿಲ್ಲೆಯ ವಿವಿಧ ಊರುಗಳಿಂದ ಈಗಾಗಲೇ ಕೇರಳಕ್ಕೆ ತೆರಳಿ ಕಾಫಿ ಎಸ್ಟೇಟ್ಗಳಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರತಿವರ್ಷವೂ ಜನವರಿ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ಜನ ಕೇರಳದತ್ತ ಕೂಲಿ ಕೆಲಸಕ್ಕಾಗಿ ತೆರಳವುದು ಕಂಡು ಬರುತ್ತದೆ. ಹೀಗಾಗಿ ಜಿಲ್ಲೆಯಿಂದ ಕೇರಳದ ಕಡೆಗೆ ತೆರಳುವ ಬಸ್ಗಳು ತುಂಬಿ ತುಳುಕುತ್ತಿರುತ್ತವೆ. ಮೊದಲೆಲ್ಲ ಕಾಫಿ ಕೊಯ್ಲು ಮಾಡಲು ಕೊಡಗಿನ ಕಡೆಗೂ ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಹೆಚ್ಚಿನವರು ಕೇರಳದತ್ತ ತೆರಳುತ್ತಿರುವುದು ಕಂಡು ಬರುತ್ತಿದೆ.

ಅದರಲ್ಲೂ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಿಂದಲೇ ಕೇರಳದತ್ತ ಕೆಲಸಕ್ಕೆ ಹೆಚ್ಚಿನ ಜನ ಹೋಗುವುದು ಕಂಡು ಬರುತ್ತದೆ. ಇದಕ್ಕೆ ಕೇರಳ ಹತ್ತಿರ ಇರುವುದು ಕಾರಣವಾಗಿದೆ. ಇನ್ನು ಅಂತರ್ಜಲ ಕುಸಿತದ ಕಾರಣ ಜಮೀನಿನಲ್ಲಿ ಕೆಲಸ ಸಿಗುತ್ತಿಲ್ಲ. ಮನರೇಗಾದಲ್ಲಿ ಕೆಲಸವಿದ್ದರೂ ಕೂಲಿ ಕಡಿಮೆ.
ಈ ಯೋಜನೆಯಡಿ ವಾರ್ಷಿಕ 150 ದಿನಗಳು ದಿನವೊಂದಕ್ಕೆ 249 ರೂ. ಕೂಲಿ ನೀಡಲು ಅವಕಾಶವಿದ್ದರೂ ಜಾಬ್ ಕಾರ್ಡ್ ಮಾಡಿಸುವುದು, ಕೂಲಿಗೆ ಬೇಡಿಕೆ ಸಲ್ಲಿಸುವುದು, ಕೂಲಿ ಹಣವನ್ನು ಬ್ಯಾಂಕ್ ಮುಖಾಂತರ ಪಡೆಯುವುದು ಇದೆಲ್ಲವೂ ಕೂಲಿ ಕಾರ್ಮಿಕರಿಗೆ ಕಿರಿಕಿರಿಯಾಗುತ್ತಿದ್ದು ಅದರ ಹಿಂದೆ ಓಡಾಡಲು ಯಾರೂ ಇಷ್ಟಪಡುತ್ತಿಲ್ಲ.
ಬದಲಿಗೆ ಕೇರಳದಲ್ಲಿ ಕಾಫಿ ತೋಟದ ಮಾಲೀಕರು ಕಾಫಿ ಕೊಯ್ಲು ಮಾಡಿದರೆ ಕೆಜಿ ಲೆಕ್ಕದಲ್ಲಿ ಹಣ ನೀಡುತ್ತಾರೆ. ಹೀಗಾಗಿ ಎಷ್ಟು ಕೆಲಸ ಮಾಡುತ್ತಾರೋ ಅಷ್ಟು ಹಣವನ್ನು ಪಡೆಯಲು ಸಾಧ್ಯವಿದೆ. ಬೆಳಗ್ಗಿನಿಂದ ಸಂಜೆ ತನಕ ಕೆಲಸ ಮಾಡಿದರೆ ಸಾವಿರ ರೂ.ತನಕ ಸಂಪಾದಿಸಲು ಅವಕಾಶವಿದೆ.
ಪ್ರತಿವರ್ಷವೂ ಹುರುಳಿ ಸೇರಿದಂತೆ ಇತರೆ ಬೆಳೆಗಳ ಒಕ್ಕಣೆ ಕಾರ್ಯ ಮುಗಿಯುತ್ತಿದ್ದಂತೆ ಗುಂಡ್ಲುಪೇಟೆ ತಾಲೂಕಿನ ಗ್ರಾಮೀಣ ಭಾಗದ ಕಾರ್ಮಿಕರು ಕೇರಳದ ಕಡೆಗೆ ಮುಖ ಮಾಡುವುದು ಮಾಮೂಲಾಗಿದೆ. ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ಕೇರಳದ ಕಡೆಗೆ ತೆರಳುವ ಕೂಲಿ ಕಾರ್ಮಿಕರು ಒಂದೆರಡು ತಿಂಗಳ ಕಾಲ ಕೆಲಸ ಮಾಡಿ ಯುಗಾದಿ ವೇಳೆಗೆ ತಮ್ಮ ಊರಿನತ್ತ ಹಿಂತಿರುಗುತ್ತಾರೆ. ಅವರು ಅಲ್ಲಿದ್ದಷ್ಟು ದಿನವೂ ಉಳಿದುಕೊಳ್ಳಲು ಮನೆಗಳನ್ನು ನೀಡುವುದರಿಂದ ಆಹಾರ ಪದಾರ್ಥ, ಪಾತ್ರೆಗಳೊಂದಿಗೆ ತೆರಳುತ್ತಾರೆ.
ಇತ್ತ ಹಳ್ಳಿಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ವಯಸ್ಸಾದವರು, ಕಠಿಣ ಕೆಲಸ ಮಾಡಲಾಗದ ಅನಾರೋಗ್ಯ ಪೀಡಿತರು ಮಾತ್ರ ಇರುವುದನ್ನು ಕಾಣಬಹುದಾಗಿದೆ.












Click it and Unblock the Notifications