ಶಿವಮೊಗ್ಗ: ಅ.31ರವರೆಗೆ ಜಾನುವಾರು ಜಾತ್ರೆ, ಜಾನುವಾರು ಸಾಗಾಣೆ ನಿಷೇಧ
ಶಿವಮೊಗ್ಗ, ಅಕ್ಟೋಬರ್ 10: ಚರ್ಮಗಂಟು ರೋಗ ಹರಡದಂತೆ ತಡೆಗಟ್ಟಲು ಶಿವಮೊಗ್ಗ ಜಿಲ್ಲೆಯಾದ್ಯಂತ ಅಕ್ಟೋಬರ್ 31ರವರೆಗೆ ಜಾನುವಾರು ಜಾತ್ರೆ, ಜಾನುವಾರು ಸಂತೆ ಮತ್ತು ಜಾನುವಾರು ಸಾಗಣಿಕೆಯನ್ನು ಜಿಲ್ಲಾಧಿಕಾರಿ ಅವರು ನಿಷೇಧಿಸಿದ್ದಾರೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಶಿವಯೋಗಿ ಬಿ.ಯಲಿ ಅವರು ತಿಳಿಸಿದ್ದಾರೆ.
ಚರ್ಮಗಂಟು ರೋಗಕ್ಕೆ ತುತ್ತಾಗಿ ಜಿಲ್ಲೆಯಲ್ಲಿ ಈಗಾಗಲೆ 6 ಜಾನುವಾರುಗಳು ಸಾವನ್ನಪ್ಪಿವೆ. 58 ಗ್ರಾಮಗಳ 626 ಜಾನುವಾರುಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ರೋಗ ಮತ್ತಷ್ಟು ಹರಡದಂತೆ ತಡೆಗಟ್ಟಲು ಜಾನುವಾರು ಜಾತ್ರೆ, ಜಾನುವಾರು ಸಂತೆ ಮತ್ತು ಜಾನುವಾರುಗಳ ಸಾಗಣೆಯನ್ನು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೋಗ ನಿಯಂತ್ರಣಕ್ಕೆ ಜಿಲ್ಲೆಯ ಪಶುಪಾಲನಾ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಶಿವಮೊಗ್ಗದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇದೆ. ಇನ್ನು, ರೋಗ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಲು ಒಂದು ಲಕ್ಷ ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಶಿವಯೋಗಿ ತಿಳಿಸಿದ್ದಾರೆ.
ಚರ್ಮಗಂಟು ರೋಗವು ಕ್ಯಾಪ್ರಿಪಾಕ್ಸ್ ವೈರಸ್ನಿಂದ ಬರುತ್ತಿದೆ. ಸೊಳ್ಳೆ, ನೊಣ ಮತ್ತು ಉಣ್ಣೆ ಸೇರಿ ಪರೋಪಜೀವಿಗಳು ಕಚ್ಚುವುದರಿಂದ ರೋಗ ಹರಡುತ್ತಿದೆ. ಆದ್ದರಿಂದ ಜಾನುವಾರುಗಳ ಸಂತೆ, ಜಾತ್ರೆ ಮತ್ತು ಜಾನುವಾರು ಸಾಗಣೆಯನ್ನು ನಿಷೇಧಿಸಾಗಿದೆ ಎಂದು ತಿಳಿಸಿದ್ದಾರೆ.

ದಾವಣಗೆರೆಯಲ್ಲೂ ಜಾನುವಾರುಗಳು ಸಾವು
ದಾವಣಗೆರೆ ಜಿಲ್ಲೆಯಾದ್ಯಂತ ಜಾನುವಾರುಗಳಲ್ಲಿ ಉಲ್ಬಣಗೊಳ್ಳುತ್ತಿದ್ದು, ಈ ರೋಗದಿಂದ ಮೃತಪಟ್ಟಿರುವ ಜಾನುವಾರುಗಳ ಸಂಖ್ಯೆ 22ಕ್ಕೇರಿದೆ. ಚರ್ಮಗಂಟು ರೋಗ (ಲಂಪಿ ಸ್ಕಿನ್ ಡಿಸೀಸ್) ಒಂದು ರೀತಿಯ ಅಂಟುರೋಗವಾಗಿದ್ದು, ಜಿಲ್ಲೆಯಲ್ಲಿ ಈ ರೋಗ ಲಕ್ಷಣಗಳು ಕಾಣಿಸಿಕೊಂಡ ಜಾನುವಾರುಗಳ ಸಂಖ್ಯೆ 1,500 ದಾಟಿದೆ. ಶೇ 98ಕ್ಕೂ ಅಧಿಕ ಜಾನುವಾರುಗಳು ಚೇತರಿಸಿಕೊಳ್ಳುತ್ತಿವೆ. ಆದರೂ ಕೆಲವು ಕಡೆ ಜಾನುವಾರುಗಳು ದಿಢೀರ್ ಸಾವು ಕಾಣುತ್ತಿರುವುದು ಆತಂಕ ಮೂಡಿಸುತ್ತಿದೆ.

ದೇವದುರ್ಗದಲ್ಲಿ ಒಂದು ತಿಂಗಳು ಜಾತ್ರೆ ಬಂದ್
ಜಾನುವಾರುಗಳಲ್ಲಿ ಚರ್ಮಗಂಟು ಬೇರೆ ಜಿಲ್ಲೆಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಶನಿವಾರ ಜಾನುವಾರುಗಳ ಸಂತೆಯನ್ನು ರಾಯಚೂರು ಜಿಲ್ಲಾಡಳಿತ ರದ್ದುಪಡಿಸಿತ್ತು. ಜಾನುವಾರುಗಳಿಗೆ ಚರ್ಮಗಂಟು ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ಒಂದು ತಿಂಗಳ ಕಾಲ ಶನಿವಾರದ ಜಾನುವಾರುಗಳ ಸಂತೆಯನ್ನು ಜಿಲ್ಲಾಡಳಿತ ರದ್ದುಪಡಿಸಿದೆ.

ಮಾಲೀಕರಿಗೆ ನಷ್ಟ ಭರಿಸಲು 2 ಕೋಟಿ ರೂ ಬಿಡುಗಡೆ
ಚರ್ಮಗಂಟು ರೋಗದಿಂದ ಸಾವಿಗೀಡಾದ ಜಾನುವಾರುಗಳ ಮಾಲೀಕರಿಗೆ ಪರಿಹಾರ ಧನ ನೀಡಲು ಸರಕಾರ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಚರ್ಮಗಂಟು ರೋಗದ ಹಾವಳಿ ಹೆಚ್ಚಾಗಿದ್ದು, ನೇರವಾಗಿ ಜಾನುವಾರುಗಳ ಆರೋಗ್ಯವನ್ನು ಹದಗೆಡಿಸಿ ಜಾನುವಾರುಗಳ ಉತ್ಪಾದಕತೆ ಕುಂಠಿತವಾಗುತ್ತಿದೆ. ಈ ರೋಗದಿಂದ ಉಂಟಾಗುವ ಜಾನುವಾರುಗಳ ಮರಣದಿಂದ ರೈತರ/ಜಾನುವಾರು ಮಾಲೀಕರಿಗೆ ನಷ್ಟವನ್ನು ಭರಿಸುವ ನಿಟ್ಟಿನಲ್ಲಿ ಸರ್ಕಾರ ಪರಿಹಾರ ಧನ ನೀಡಲು ನಿರ್ಧರಿಸಿದೆ.

ಪರಿಹಾರಕ್ಕೆ ಮರಣ ದೃಢೀಕರಣ ಪತ್ರ ಕಡ್ಡಾಯ
ಚರ್ಮಗಂಟು ರೋಗದಿಂದ ಮರಣಿಸಿದ ಪ್ರತಿ ಕರುವಿಗೆ 5,000 ರೂ., ಪ್ರತಿ ಹಸುವಿಗೆ 20,000 ರೂ. ಪ್ರತಿ ಎತ್ತುಗಳಿಗೆ 30,000 ರೂ. ನಿಗದಿಗೊಳಿಸಲಾಗಿದೆ. ಚರ್ಮಗಂಟು ರೋಗಕ್ಕೆ ತುತ್ತಾಗಿ ಮರಣ ಹೊಂದಿದ ಜಾನುವಾರುವಿನ ಚಿಕಿತ್ಸಾ ಮಾಹಿತಿಯನ್ನು ಆಧರಿಸಿ ಸಂಬಂಧಪಟ್ಟ ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ಜಾನುವಾರುವಿನ ಮರಣ ದೃಢೀಕರಣ ಪತ್ರ ಹೊಂದಿರಬೇಕು. ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರು ವಿಮಾ ಸೌಲಭ್ಯವನ್ನು ಹೊಂದಿದ್ದರೆ ಮರಣ ಪರಿಹಾರ ಧನ ಸಿಗುವುದಿಲ್ಲ.












Click it and Unblock the Notifications