ಶಿಕ್ಷಕರ ವೇದಿಕೆಯಲ್ಲಿ ಗುಟ್ಕಾ ಸೇವಿಸಿದ ಸಚಿವ ಮಹಾಶಯ

ಸನ್ಮಾನ್ಯ ಕೃಷಿ ಸಚಿವ ಉಮೇಶ್ ವಿಶ್ವನಾಥ್ ಕತ್ತಿ ಅವರು ತಮ್ಮನ್ನು ಆರಿಸಿಕಳಿಸಿದ ಜನರೆದುರೇ, ಅದೂ ತನ್ನ ಯಜಮಾನ ಮುಖ್ಯಮಮಂತ್ರಿ ಜಗದೀಶ್ ಶೆಟ್ಟರ್ ಸಮ್ಮುಖದಲ್ಲೇ, ಅದೂ ಅವರು ಭಾಷಣ ಮಾಡುತ್ತಿದ್ದಾಗ ಶಿಷ್ಟಾಚಾರ ಮರೆತು, ಅದೂ ಮುಂದಿನ ಪೀಳಿಗೆಗೆ ಆದರ್ಶಪ್ರಾಯವಾಗುವ ಶಿಕ್ಷಕರ ದಿನಾಚಣೆ ಸಂದರ್ಭದಲ್ಲಿ ಯಾವುದೇ ಎಗ್ಗು-ಸಿಗ್ಗು ಇಲ್ಲದೇ ಗುಟ್ಕಾ ಜಗಿದಿದ್ದಾರೆ. ಇದನ್ನು TV9 ಇದೀಗತಾನೇ ಪ್ರಸಾರ ಮಾಡಿದೆ.
ಶಿಕ್ಷಕರ ದಿನಾಚಣೆಯ ಅಂಗವಾಗಿ ಬೆಳಗಾವಿ ನಗರದಲ್ಲಿ ಸರಕಾರವು ಇಂದು ಅಧಿಕೃತ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಮುಂದಿನ ಪೀಳಿಗೆಯವರನ್ನು ರೂಪಿಸುವ ಮಹತ್ಕಾರ್ಯದಲ್ಲಿ ಮಹತ್ಸಾಧನೆ ಮೆರೆದ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ಅದಾಗಿತ್ತು.
ಅದರಂತೆ ಶಿಕ್ಷಕರನ್ನು ಸನ್ಮಾನಿಸಿದ ಸನ್ಮಾನ್ಯ ಮುಖ್ಯಮಂತ್ರಿ ಶೆಟ್ಟರ್ ಅವರು ನಂತರ ಭಾಷಣ ಮಾಡಲು ಮೈಕ್ ಹಿಡಿದಾಗ ಇತ್ತ ಜಿಲ್ಲಾ ಉಸ್ತುವಾರಿ ಸಚಿವ ಮೇಶ್ ಕತ್ತಿ ಸಾಹೇಬರು ಪಕ್ಕಾ ಪಡ್ಡೆಗಳಂತೆ ಅಂಗೈಯಲ್ಲಿ ಗುಟ್ಕಾ ಅರೆಯುತ್ತಾ, ಅದನ್ನು ಬಾಯಿಗೆ ಹಾಕಿಕೊಳ್ಳುವ ದೃಶ್ಯ TV9ನಲ್ಲಿ ಸ್ಪಷ್ಟವಾಗಿ ಕಣ್ಣಿಗೆ ರಾಚಿದೆ.
ಆಡಳಿತಾರೂಢ ಬಿಜೆಪಿ ಶಾಸಕರು/ಸಚಿವರು ಆರಂಭದಿಂದ (ಇನ್ನೇನು) ಅಂತ್ಯಕಾಲದವರೆಗೂ ಹೀಗೆ ಮಾಡಬಾರದ್ದನ್ನೇ ಮಾಡುತ್ತಾ ಬಂದಿರುವುದರ ವಿರುದ್ಧ ನಾಡಿನ ಪ್ರಜ್ಞಾವಂತರು ಕಿಡಿಕಾರಿದ್ದಾರೆ.












Click it and Unblock the Notifications