ಮತ್ತೆ ಕರ್ನಾಟಕಕ್ಕೆ ಬರುತ್ತಾ ಬಿಟಿ ಬದನೆಕಾಯಿ?
ಬೆಂಗಳೂರು, ಜೂನ್ 16: ಬಿಟಿ ಬದನೆಕಾಯಿ ಮತ್ತೆ ಕರ್ನಾಟಕಕ್ಕೆ ಬರಲಿದೆಯೇ?. ಮಹಾರಾಷ್ಟ್ರ ಮೂಲಕ ಕಂಪನಿಯೊಂದು ರಾಜ್ಯದ ಬಾಗಲಕೋಟೆಯಲ್ಲಿ ಪ್ರಾಯೋಗಿಕವಾಗಿ ಬಿಟಿ ಬದನೆ ಕೃಷಿಯನ್ನು ಮಾಡಲು ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಕೆ ಮಾಡಿದೆ.
ಬೀಜ್ ಶೀತಲ್ ಪ್ರವೇಟ್ ಲಿಮಿಟೆಡ್ ಮತ್ತು ಜಲ್ನಾ ಎಂಬ ಎರಡು ಕಂಪನಿಗಳು ಈ ವರ್ಷದ ಜನವರಿಯಲ್ಲಿ ಕರ್ನಾಟಕ ಸರ್ಕಾರಕ್ಕೆ ಪ್ರಾಯೋಗಿಕವಾಗಿ ಬಿಟಿ ಬದನೆ ಕೃಷಿ ಮಾಡಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿವೆ. ಬಾಗಲಕೋಟೆಯ ತೋಟಗಾರಿಕಾ ವಿವಿಯಲ್ಲಿ ಕೃಷಿ ಮಾಡುತ್ತೇವೆ ಎಂದು ಹೇಳಿದೆ.

ಈ ಎರಡು ಕಂಪನಿಗಳು ಬಿಟಿ ಬದನೆಕಾಯಿ ಬೆಳೆಯಲು ರಾಜ್ಯ ಸರ್ಕಾರ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್ಒಸಿ) ನೀಡಬೇಕು ಎಂದು ಮನವಿ ಮಾಡಿದೆ. ಈ ಪ್ರಸ್ತಾವನೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ತಜ್ಞರು ಇರುವ ಸಮಿತಿಯ ಮುಂದೆ ಬಂದಿತ್ತು. ಆದರೆ ಬಳಿಕ ಚುನಾವಣೆ ಕಾರ್ಯಗಳು ಪ್ರಾರಂಭವಾದ ಕಾರಣ ಪ್ರಸ್ತಾವನೆ ಹಾಗೆಯೇ ಉಳಿದಿದೆ.
ಕೇಂದ್ರದ ಅನುಮತಿ ಸಿಕ್ಕಿದೆಯೇ?; ಎರಡು ಕಂಪನಿಗಳು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಪರಿಸರ ಇಲಾಖೆ ಕಂಪನಿಗಳಿ ಹೇಳಿರುವಂತೆ ಅವುಗಳು ಕುಲಾಂತರಿ ಸಂಶೋಧನಾ ಅನುಮೋದನೆ ಸಮಿತಿ (ಜಿಇಎಸಿ) ಅನುಮತಿ ಪಡೆದಿರುವ ಆದೇಶ ತುಂಬ ಹಿಂದಿನದು. ಅದು ಮೂರು ವರ್ಷಗಳ ಹಿಂದಿನ ಅನುಮತಿಯಾಗಿದೆ. ಹೊಸದಾಗಿ ಪ್ರಸ್ತಾವನೆ ಸಲ್ಲಿಸಿ, ಅನುಮತಿ ಪಡೆಯಿರಿ ಎಂದು ಸಲಹೆ ನೀಡಿದೆ.
ಕಂಪನಿಯ ಅಧಿಕಾರಿಗಳ ಪ್ರಕಾರ ಕೇಂದ್ರ ಸರ್ಕಾರದ ಜೊತೆ ಬಿಟಿ ಬದನೆ ಕೃಷಿಗೆ ಅನುಮತಿ ಪಡೆಯುವ ಕುರಿತು ಮಾತುಕತೆಗಳು ನಡೆಯುತ್ತಿವೆ. ಹೊಸ ನೀತಿಯಂತೆ ಸರ್ಕಾರ ಶೀಘ್ರವೇ ಅನುಮತಿಯನ್ನು ನೀಡುವ ನಿರೀಕ್ಷೆ ಇದೆ. ಆದರೆ ಕರ್ನಾಟಕದಲ್ಲಿ ತಜ್ಞರು ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ತಜ್ಞರು ಇರುವ ಸಮಿತಿಯ ಸದಸ್ಯರಾದ ಟಿ. ವಿ. ರಾಮಚಂದ್ರ ಪ್ರಸ್ತಾವನೆ ಬಗ್ಗೆ ಮಾತನಾಡಿ, "ಪ್ರಾಯೋಗಿಕವಾಗಿ ಬಿಟಿ ಬದನೆಕಾಯಿ ಬೆಳೆಯುವ ಪ್ರಸ್ತಾವನೆ ಕುರಿತು ರೈತ, ಪರಿಸರದ ಮೇಲೆ ಆಗುವ ಪರಿಣಾಮಗಳ ಕುರಿತು ಕೂಲಂಕುಷ ಪರಿಶೀಲನೆ ಅಗತ್ಯವಿದೆ" ಎಂದು ಹೇಳಿದ್ದಾರೆ.
"ಉತ್ತರ ಕನ್ನಡ ಜಿಲ್ಲೆಯಲ್ಲಿ ನಾವು ಸುಮಾರು 12 ಬಗೆಯ ವಿವಿಧ ರುಚಿ, ಸುವಾಸನೆಯ ಬದನೆಕಾಯಿ ತಳಿಗಳನ್ನು ಹೊಂದಿದ್ದೇವೆ. ಬಹುರಾಷ್ಟ್ರೀಯ ಕಂಪನಿಗಳ ಪ್ರಸ್ತಾಪಕ್ಕೆ ಒಪ್ಪಿಗೆ ನೀಡುವ ಮೊದಲು ನಾವು ಇವುಗಳ ಮೇಲೆ ಹೂಡಿಕೆ ಮಾಡಿ ಸಂಶೋಧನೆಗೆ ಆದ್ಯತೆ ನೀಡಬೇಕು" ಎಂದು ಸಲಹೆ ನೀಡಿದ್ದಾರೆ.
ಕರ್ನಾಟಕ ಸರ್ಕಾರ ಕಳೆದ ವರ್ಷ ಬಿಟಿ ಹತ್ತಿ ಮತ್ತು ಬಿಟಿ ಜೋಳದ ಪ್ರಾಯೋಗಿಕ ಕೃಷಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ನೀಡಿತ್ತು. ಕುಲಾಂತರಿ ಬೆಳೆಗಳಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭವಾಗಲಿದೆ, ರೈತರಿಗೆ ಸಹಕಾರಿಯಲ್ಲ ಎಂಬ ವಾದವೂ ಇದೆ. ಇದರಿಂದಾಗಿ ಸ್ಥಳೀಯ ವಿವಿಧ ಮಾದರಿಯ ತಳಿಗಳಿಗೆ ಹಾನಿಯಾಗಲಿದೆ ಎಂಬ ಆತಂಕವೂ ಇದೆ.
ಜಿಇಎಸಿ 2020 ರಿಂದ 2023ರ ತನಕ ಮಧ್ಯಪ್ರದೇಶ, ಬಿಹಾರ, ಛತ್ತೀಸಗಢ್, ಜಾರ್ಖಂಡ್, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬಿಟಿ ಬದನೆಕಾಯಿಯ ಎರಡು ಮಾದರಿಗಳ ವೈಜ್ಞಾನಿಕ ಪ್ರಯೋಗಕ್ಕೆ ಅನುಮತಿ ನೀಡಿತ್ತು. ಆಗ ಭಾರತೀಯ ಕಿಸಾನ್ ಸಂಘ ಮತ್ತು ಇತರ ರೈತ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು.
ಈ ಹಿಂದೆ ಜಿಇಎಸಿ ಬಿಟಿ ಬದನೆಕಾಯಿ ಸೇರಿದಂತೆ ಕುಲಾಂತರಿ ತಳಿಗಳ ವೈಜ್ಞಾನಿಕ ಕ್ಷೇತ್ರ ಪ್ರಯೋಗಕ್ಕೆ ಮುನ್ನ ಆಯಾ ರಾಜ್ಯ ಸರ್ಕಾರದಿಂದ ಎನ್ಒಸಿ ಪಡೆಯುವುದು ಮುಖ್ಯ ಎಂದು ಹೇಳಿದೆ. ಪ್ರತ್ಯೇಕವಾಗಿರುವ ಜಮೀನು ಗುರುತಿಸಿ ಬೇರೆ ಜಮೀನಿಗೆ ತೊಂದರೆ ಆಗುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ಪ್ರಯೋಗ ಮಾಡಬೇಕು ಎಂದು ಹೇಳಿದೆ.












Click it and Unblock the Notifications