ಕುಮಾರಸ್ವಾಮಿ ವಿರುದ್ಧ ರಾಜ್ಯವ್ಯಾಪಿ ಹೋರಾಟಕ್ಕೆ ಯಡಿಯೂರಪ್ಪ ಕರೆ
Recommended Video

ಬೆಂಗಳೂರು, ನವೆಂಬರ್ 20: ರೈತರ ಸಮಸ್ಯೆಗಳಿಗೆ ದನಿಯಾಗದೆ, ದುರಹಂಕಾರ ಪ್ರದರ್ಶಿಸುತ್ತಿರುವ ಕುಮಾರಸ್ವಾಮಿ ವಿರುದ್ಧ ಬಿಜೆಪಿಯು ರಾಜ್ಯವ್ಯಾಪಿ ಪ್ರತಿಭಟನೆಗಳನ್ನು ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇಂದು ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆ ರೈತ ಹೆಣ್ಣುಮಗಳು ಕುಮಾರಸ್ವಾಮಿ ಅವರನ್ನು 'ನಾಲಾಯಕ್' ಮುಖ್ಯಮಂತ್ರಿ ಎಂದುದರಲ್ಲಿ ಯಾವುದೇ ತಪ್ಪು ಇಲ್ಲ, ಅವರು ನಾಲಾಯಾಕ್ ಮುಖ್ಯಮಂತ್ರಿಯೇ ಎಂದು ಪುನರ್ ಉಚ್ಚರಿಸಿದರು.
ರೈತ ಮಹಿಳೆಗೆ ಅಂದ ಮಾತಿಗೆ ಕ್ಷಮೆ ಕೇಳಿ ಎಂದು ಒತ್ತಾಯಸಿದರೆ ಮುಖ್ಯಮಂತ್ರಿ ಅವರು ಸ್ಪಷ್ಟೀಕರಣ ನೀಡಿದ್ದಾರೆ. ಮತ ಕೇಳುವ ಸಮಯದಲ್ಲಿ ಅನ್ನದಾತ ಎಂದು ಆನಂತರ ಗೂಂಡಾಗಳೆಂದು ಕರೆದಿದ್ದಾರೆ. ಇಂತಹಾ ಮುಖ್ಯಮಂತ್ರಿ ವಿರುದ್ಧ ಬಿಜೆಪಿಯು ರಾಝ್ಯದಾದ್ಯಂತ ಉಗ್ರ ಹೋರಾಟ ಮಾಡಲಿದೆ ಎಂದು ಯಡಿಯೂರಪ್ಪ ಹೇಳಿದರು.
ಬಾಯಿಬಿಟ್ಟರೆ ಯಡಿಯೂರಪ್ಪ ಗೋಲಿಬಾರ್ ಮಾಡಿಸಿದ್ದಾರೆ ಎಂದು ಹೇಳುತ್ತಾರೆ, ಆದರೆ ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಿದ್ದೇನೆ, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದೇನೆ, ಗೋಲಿಬಾರ್ನಲ್ಲಿ ಅಸುನೀಗಿದ ರೈತರ ಕುಟುಂಬಕ್ಕೆ ಪೂರ್ಣ ನೆರವು ನೀಡಿದ್ದೇನೆ ಎಂದು ಅವರು ಹೇಳಿದರು.

ಅಪ್ಪ-ಮಕ್ಕಳು ಅವಕಾಶವಾದಿ ರಾಜಕಾರಣಿಗಳು
ಕುಮಾರಸ್ವಾಮಿ-ದೇವೇಗೌಡ ಅವರುಗಳ ಬಗ್ಗೆ ವಾಗ್ದಾಳಿ ನಡೆಸಿದ ಯಡಿಯೂರಪ್ಪ ಅವರು, 'ಅಪ್ಪ-ಮಕ್ಕಳು' ವಿಶ್ವದಲ್ಲೇ ಅತ್ಯಂತ ಅವಕಾಶವಾದಿ ರಾಜಕಾರಣಿ, ಅವರು ರಾಜ್ಯವನ್ನು ಮುಳುಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ' ಎಂದು ಅವರು ಹೇಳಿದರು.

ದೇವೇಗೌಡರ ಇತಿಹಾಸ ತೆಗೆದ ಬಿಎಸ್ವೈ
ದೇವೇಗೌಡರು ರಾಮಕೃಷ್ಣ ಹೆಗಡೆಗೆ ಅವಮಾನ ಮಾಡಿದರು, ನಂತರ ಅವರ ಕಾಲು ಹಿಡಿದು ಅಧ್ಯಕ್ಷರಾದರು, ನಂತರ ಅವರನ್ನೇ ಪಕ್ಷದಿಂದ ಹೊರ ಹಾಕಿದರು. ಎಸ್ಆರ್ ಬೊಮ್ಮಾಯಿಗೆ ದೇವೇಗೌಡ ಮಾಡಿದ ಉಪಕಾರ ಏನು ಎಂಬುದು ನಮಗೆ ಗೊತ್ತಿದೆ. ಸಿದ್ದರಾಮಯ್ಯ ಅವರ ವಿರುದ್ಧ ಪಿತೂರಿ ಮಾಡಿ ಅವರನ್ನು ಸೋಲಿಸಿದರು. ಸಿದ್ದರಾಮಯ್ಯ ಅವರು ಅವಕಾಶಕ್ಕಾಗಿ ಕಾದಿದ್ದಾರೆ ಎಂದು ನಾನು ನಂಬಿದ್ದೇನೆ ಎಂದು ಯಡಿಯೂರಪ್ಪ ಇತಿಹಾಸವನ್ನು ಕೆದಕಿದರು.

ಅಧಿಕಾರಕ್ಕೆ ಅವರ ಬಾಗಿಲಿಗೆ ಹೋಗಿದ್ದೆ ಎಂಬುದು ಸುಳ್ಳು
ನಾನು ಮಂತ್ರಿಗಿರಿಗೆ ಮನೆ ಬಾಗಿಲಿಗೆ ಬಂದಿದ್ದೆ ಎಂದು ಸುಳ್ಳು ಹೇಳಿದ್ದಾರೆ. ಧರಂಸಿಂಗ್ಗೆ ಕೈಕೊಟ್ಟು, ನಮ್ಮ ಜೊತೆ ಕೈಜೋಡಿಸಿದರು. ಆ ನಂತರ ನಮಗೆ ಕೈಕೊಟ್ಟರು. ಆದರೆ ಈಗ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಒಂದೂ ಋಣಮುಕ್ತ ಪತ್ರ ನೀಡಿಲ್ಲ
ಕುಮಾರಸ್ವಾಮಿ ಸಿಎಂ ಆದಾಗಿನಿಂದಲೂ ಸಾಲಮನ್ನಾ ಮಾಡಿದ್ದೇನೆ ಎನ್ನುತ್ತಿದ್ದಾರೆ. ಆದರೆ ಈವರೆಗೂ ಋಣಮುಕ್ತ ಪತ್ರದ ವಿತರಣೆ ಆಗಿಲ್ಲ. ಖಾಸಗಿ ಬ್ಯಾಂಕ್ನ ಒಂದು ರೂಪಾಯಿ ಸಹ ಮನ್ನಾ ಆಗಿಲ್ಲ. ಇವರು ಅಧಿಕಾರ ವಹಿಸಿಕೊಂಡ ಮೇಲೆ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ
ಕುಮಾರಸ್ವಾಮಿ ವಿರುದ್ಧ ನಾಳೆಯಿಂದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬಿಜೆಪಿಯು ಪ್ರತಿಭಟನೆ ಮಾಡಲಿದೆ. ಇಂದು ಸಂಜೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಯಾವ ರೀತಿ ಹೋರಾಟ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.

ಮಹಾರಾಷ್ಟ್ರ, ಗುಜರಾತ್ ಮಾದರಿ
ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿನ ಬಿಜೆಪಿ ಸರ್ಕಾರಗಳು ದೊಡ್ಡ ಮೊತ್ತದ ಬೆಂಬಲ ಬೆಲೆಯನ್ನು ರೈತರಿಗೆ ನೀಡುತ್ತಿವೆ ಕುಮಾರಸ್ವಾಮಿ ಅವರು ಅಲ್ಲಿಗೆ ಹೋಗಿ ನೋಡಿಕೊಂಡು ಬರಲಿ. ಬಾಯಿ ತೆಗೆದರೆ ಕೇವಲ ಮೋದಿಯನ್ನು ಬೈಯ್ಯುವ ಕಾರ್ಯವನ್ನಷ್ಟೆ ಅಪ್ಪ-ಮಕ್ಕಳು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.











Click it and Unblock the Notifications