ಬಿಎಸ್ವೈ ಬಿಟ್ಟು, ರೈತರ ಮನೆಗೆ ಹೊರಟ ಬಿಜೆಪಿ ನಾಯಕರು
ಬೆಂಗಳೂರು, ಜುಲೈ 15 : ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಲು ಕರ್ನಾಟಕ ಬಿಜೆಪಿ 6 ತಂಡಗಳನ್ನು ರಚನೆ ಮಾಡಿದೆ. ಅಚ್ಚರಿ ಎಂಬಂತೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಯಾವುದೇ ತಂಡದಲ್ಲಿಲ್ಲ, ಉಳಿದ ನಾಯಕರು ಮಾತ್ರ ಭೇಟಿ ನೀಡಲಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ಆರು ತಂಡಗಳನ್ನು ಮಾಡಿಕೊಂಡು ಜುಲೈ 25 ಮತ್ತು 26ರಂದು ರೈತರ ಮನೆಗಳಿಗೆ ಭೇಟಿ ನೀಡಲು ನಾಯಕರು ತೀರ್ಮಾನ ಕೈಗೊಂಡರು. ['ರೈತರ ಮನೆಗೆ ನಾನೇ ಹೋಗಿ ಸಾಂತ್ವನ ಹೇಳುವೆ']
ಕೋರ್ ಕಮಿಟಿ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಪ್ರಹ್ಲಾದ್ ಜೋಶಿ ಅವರು, ಪಕ್ಷದ ನಾಯಕರು 6 ತಂಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ. ಜಗದೀಶ್ ಶೆಟ್ಟರ್, ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಸಿ.ಟಿ ರವಿ, ಪರಿಷತ್ ಸದಸ್ಯ ಕೆ.ಬಿ.ಶಾಣಪ್ಪ ನೇತೃತ್ವದಲ್ಲಿ ತಂಡ ರೈತರ ಮನೆಗೆ ಭೇಟಿ ನೀಡಲಿದೆ. ಜೋಶಿ ಪತ್ರಿಕಾಗೋಷ್ಠಿ ವಿವರಗಳು

ರೈತರ ಮನೆಗೆ ಬಿಜೆಪಿಯ ಆರು ತಂಡ
ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಲು ಕರ್ನಾಟಕ ಬಿಜೆಪಿ 6 ತಂಡಗಳನ್ನು ರಚನೆ ಮಾಡಿದೆ. ಜುಲೈ 18 ಮತ್ತು 19ರಂದು ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ನಾಯಕರು ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಜುಲೈ 25 ಮತ್ತು 26ರಂದು ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಲಿದ್ದಾರೆ.

ಯಡಿಯೂರಪ್ಪ ಅವರು ತಂಡದಲ್ಲಿಲ್ಲ
ಅಚ್ಚರಿಯ ಬೆಳವಣಿ ಎಂಬಂತೆ ರೈತರ ಮನೆಗೆ ಭೇಟಿ ನೀಡುವ ತಂಡದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಲ್ಲ. ರೈತರ ಮನಗೆ ಭೇಟಿ ನೀಡುವ ದಿನ ಯಡಿಯೂರಪ್ಪ ಅವರು ದೆಹಲಿಯಲ್ಲಿರುತ್ತಾರೆ. ಆದ್ದರಿಂದ, ಅವರು ತಂಡದಲ್ಲಿಲ್ಲ ಎಂದು ನಾಯಕರು ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿಯ ಮೊದಲ ತಂಡ
ರೈತರ ಮನೆಗೆ ಭೇಟಿ ನೀಡುವ ಮೊದಲ ತಂಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಶಾಸಕ ಸುನಿಲ್ ಕುಮಾರ್ ಮತ್ತು ಹಾವೇರಿ ಸಂಸದ ಶಿವಕುಮಾರ್ ಉದಾಸಿ ಇದ್ದಾರೆ.

ಜಗದೀಶ್ ಶೆಟ್ಟರ್ ನೇತೃತ್ವದ 2ನೇ ತಂಡ
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಗೋವಿಂದ ಕಾರಜೋಳ, ಸೋಮಣ್ಣ ಬೇವಿನಮಠದ ಮುಂತಾದವರು 2ನೇ ತಂಡದಲ್ಲಿದ್ದಾರೆ.

ಈಶ್ವರಪ್ಪ ನೇತೃತ್ವದ 3ನೇ ತಂಡ
ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಅರವಿಂದ ಲಿಂಬಾವಳಿ, ವಿಧಾನ ಪರಿಷತ್ ಸದಸ್ಯ ಅಶ್ವತ್ಥನಾರಾಯಣ ಮುಂತಾದವರು 3ನೇ ತಂಡದಲ್ಲಿದ್ದಾರೆ.

ಬಿಜೆಪಿ ನಾಯಕರ 4, 5 ಮತ್ತು 6ನೇ ತಂಡ
* ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ವಿ.ಸೋಮಣ್ಣ ಮುಂತಾದವರಿದ್ದಾರೆ.
* ಬಿಜೆಪಿ ನಾಯಕರ 5ನೇ ತಂಡದಲ್ಲಿ ಮಾಜಿ ಸಚಿವ ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಮುಂತಾದವರಿದ್ದಾರೆ.
* ಬಿಜೆಪಿ ನಾಯಕರ 6ನೇ ತಂಡದಲ್ಲಿ ಶಾಣಪ್ಪ, ಲಕ್ಷ್ಮಣ ಸವದಿ, ರಘುನಾಥ್ ರಾವ್ ಮಲ್ಕಾಪುರೆ ಮುಂತಾದವರಿದ್ದಾರೆ.












Click it and Unblock the Notifications