'ಪ್ರಧಾನಿ ಮುಂದೆ ಸಾಲ ಮನ್ನಾ ಬಗ್ಗೆ ಬಿಜೆಪಿಯವರು ಬಾಯಿ ಬಿಡಲಿಲ್ಲ'
ಕನಕಗಿರಿ (ಕೊಪ್ಪಳ ಜಿಲ್ಲೆ), ಡಿಸೆಂಬರ್ 14: "ಪ್ರಣಾಳಿಕೆಯಲ್ಲಿ ನಾವು ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಈಡೇರಿಸಿದ್ದೀವಿ. ಪ್ರತಿ ಬಜೆಟ್ ನಲ್ಲೂ ಪ್ರಣಾಳಿಕೆಯನ್ನು ಜತೆಯಲ್ಲಿಟ್ಟುಕೊಂಡು ಅವುಗಳನ್ನು ಪೂರೈಸಿದ್ದೇವೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಇಲ್ಲಿ ಹೇಳಿದರು.
ಇಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾತನಾಡಿ, ನಾವು ಬಜೆಟ್ ನಲ್ಲಿ ಹೇಳದ ಕೆಲಸಗಳನ್ನು ಸಹ ಹಲವಾರು ಮಾಡಿದ್ದೀವಿ. ಹಿಂದಿನ ಸರಕಾರಗಳು ಈ ರೀತಿ ಕೊಟ್ಟ ಮಾತನ್ನು ಉಳಿಸಿಕೊಂಡಿವೆಯಾ ಎಂದು ಅವರು ಪ್ರಶ್ನೆ ಮಾಡಿದರು.
Recommended Video


ನಮ್ಮ ಸರಕಾರ ನೀರಾವರಿ ಯೋಜನೆಗಾಗಿ 52 ಸಾವಿರ ಕೋಟಿ ರುಪಾಯಿ ಖರ್ಚು ಮಾಡಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಅವರು ಖರ್ಚು ಮಾಡಿದ್ದು 17 ಸಾವಿರ ಕೋಟಿ ರುಪಾಯಿ ಮಾತ್ರ. ಅವರೇ ಎಲ್ಲ ಮಾಡಿದ್ದರೆ ಇಷ್ಟೆಲ್ಲ ಕೆಲಸಗಳು ಬಾಕಿ ಇರುತ್ತಿದ್ದವಾ ಎಂದು ಅವರು ಕೇಳಿದರು.
ರೈತರ ಸಾಲ ಮನ್ನಾಕ್ಕಾಗಿ ನಾವು 8165 ಕೋಟಿ ರುಪಾಯಿ ನೀಡಿದೆವು. ಕೇಂದ್ರ ಸರಕಾರವು ರಾಷ್ಟ್ರೀಕೃತ ಹಾಗೂ ಶೆಡ್ಯೂಲ್ ಬ್ಯಾಂಕ್ ಗಳಲ್ಲಿನ 42 ಸಾವಿರ ಕೋಟಿ ರುಪಾಯಿ ರೈತರ ಸಾಲ ಮನ್ನಾ ಮಾಡಲಿ ಎಂಬುದು ನಮ್ಮ ಮನವಿಯಾಗಿತ್ತು. ಆದರೆ ನರೇಂದ್ರ ಮೋದಿ ಅವರು ಸ್ಪಂದಿಸಲೇ ಇಲ್ಲ. ಯಡಿಯೂರಪ್ಪನವರು ಮೋದಿ ಮೂಗು ಹಿಡಿದು ಸಾಲ ಮನ್ನಾ ಮಾಡಿಸಲಿ ಎಂದರು.
ಪ್ರಧಾನ ಮಂತ್ರಿ ಅವರ ಬಳಿ ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಿ ರೈತರ ಸಾಲ ಮನ್ನಾ ಮಾಡಿ ಎಂದು ಪ್ರಧಾನಿ ಅವರಲ್ಲಿ ಕೈ ಮುಗಿದು ಕೇಳಿಕೊಂಡೆ. ಅವರು ಒಪ್ಪಲೇ ಇಲ್ಲ. ಜತೆಗೆ ಬಂದಿದ್ದ ಶೆಟ್ಟರ್, ಈಶ್ವರಪ್ಪ, ಸದಾನಂದ ಗೌಡ, ಅನಂತಕುಮಾರ್ ಈ ಯಾವ ಗಿರಾಕಿಗಳೂ ಬಾಯಿ ಬಿಡಲಿಲ್ಲ ಎಂದು ವ್ಯಂಗ್ಯವಾಡಿದರು.












Click it and Unblock the Notifications