ಮೆಣಸಿನಕಾಯಿ ಬೆಳೆಗೆ ಕೀಟದ ಹಾವಳಿ: ತಜ್ಞರಿಂದ ರೈತರಿಗೆ ಸಲಹೆಗಳು
ಬಳ್ಳಾರಿ, ಡಿಸೆಂಬರ್ 02: ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಅನೇಕ ರೈತರು ಮೆಣಸಿನಕಾಯಿ ಬೆಳೆ ಬೆಳೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 33,605 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಬೆಳೆಗೆ ವಿವಿಧ ರೋಗ ಕಾಡುತ್ತಿದ್ದು, ರೈತರಿಗೆ ಆತಂಕ ಉಂಟಾಗಿದೆ. ಆದ್ದರಿಂದ ಬೆಂಗಳೂರಿನಿಂದ ಆಗಮಿಸಿದ ತಜ್ಞರು ಬೆಳೆಗಳ ಪರಿಶೀಲನೆ ನಡೆಸಿದರು.
ಬೆಂಗಳೂರಿನ ಪ್ರಾದೇಶಿಕ ಕೇಂದ್ರಿಯ ಸಮಗ್ರ ಸಸ್ಯಪೀಡೆ ನಿರ್ವಹಣಾ ಕೇಂದ್ರದ ಸಹಾಯಕ ಸಸ್ಯ ಸಂರಕ್ಷಣಾಧಿಕಾರಿ ಡಾ. ಜಯಸಿಂಹ ಜಿ.ಟಿ. ಮತ್ತು ಡಾ. ವಿನಯ್ ಜೆ. ಯು. ಬಳ್ಳಾರಿ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳ ರೈತರ ಮೆಣಸಿನಕಾಯಿ ಬೆಳೆಗಳ ತಾಕನ್ನು ಪರಿಶೀಲಿಸಿದರು. ರೋಗ ನಿರ್ವಹಣೆ ಕುರಿತು ರೈತರಿಗೆ ಸಲಹೆಗಳನ್ನು ನೀಡಿದರು.

ಕಳೆದ ವರ್ಷದಂತೆ ಈ ವರ್ಷವೂ ಮೆಣಸಿನಕಾಯಿ ಬೆಳೆಯನ್ನು ಬಾಧಿಸಿದ್ದ ಥ್ರಿಪ್ಸ್ ನುಸಿ ಕೀಟ ಮತ್ತು ಬಳ್ಳಾರಿ, ಕುರುಗೋಡು, ಕಂಪ್ಲಿ ತಾಲ್ಲೂಕುಗಳಲ್ಲಿ ಬೂದಿ ರೋಗ, ಹಣ್ಣು ಕೋಳೆ ರೋಗ ಹಾಗೂ ಎಲೆ ಮುಟುರು ರೋಗ ಲಕ್ಷಣಗಳು ಕಂಡು ಬಂದಿವೆ. ಈ ಹಿನ್ನಲೆಯಲ್ಲಿ ಸಸ್ಯ ಸಂರಕ್ಷಣಾಧಿಕಾರಿಗಳು ಪರಿಶೀಲನೆ ನಡೆಸಿದರು.
ರೈತರಿಗೆ ಸಲಹೆಗಳು: ಡಾ. ಜಯಸಿಂಹ ಜಿ. ಟಿ. ಮಾತನಾಡಿ, "ಬಳ್ಳಾರಿ ತಾಲ್ಲೂಕಿನಲ್ಲಿ 16,038 ಹೆಕ್ಟೇರ್, ಕುರುಗೋಡು ತಾಲ್ಲೂಕಿನಲ್ಲಿ 15,847 ಹೆಕ್ಟೇರ್ ಮತ್ತು ಕಂಪ್ಲಿ ತಾಲ್ಲೂಕಿನಲ್ಲಿ 1,720 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆಯಾಗಿದ್ದು, ಒಟ್ಟು 33,605 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ. ರೈತರು ರೋಗ ಮತ್ತು ಕೀಟ ಹತೋಟಿಗೆ ತೋಟಗಾರಿಕೆ ಇಲಾಖೆಯಿಂದ ನೀಡಲಾಗುತ್ತಿರುವ ಸೂಕ್ತ ಕ್ರಮ ಅನುಸರಿಸಬೇಕು" ಎಂದು ಹೇಳಿದರು.
ಹಾಲಿ ಥಿಪ್ಸ್ ನುಸಿಯ ಹಾವಳಿ ಶೇ.50ಕ್ಕಿಂತ ಅಧಿಕ ಪ್ರದೇಶದಲ್ಲಿ ಕಂಡುಬಂದಿದ್ದು, ಕೀಟದ ಹಾವಳಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ಎಲೆಗಳಲ್ಲಿ ಬೂದು ಬಣ್ಣದ ಮಚ್ಚೆ ರೋಗ ಕಂಡುಬಂದಲ್ಲಿ 1 ಗ್ರಾಂ ಕಾರ್ಬಂಡೈಜಿಮ್ ಅಥವಾ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಒಂದು ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು. ರೋಗ ಲಕ್ಷಣಗಳು ಕಡಿಮೆಯಾಗದ್ದಿದಲ್ಲಿ ಇದೇ ಸಿಂಪರಣೆಯನ್ನು 15 ದಿನಗಳ ಅಂತರದಲ್ಲಿ ಎರಡು ಬಾರಿ ಕೈಗೊಳ್ಳಬೇಕು ಎಂದರು.
ಡಾ. ವಿನಯ್ ಜೆ. ಯು. ಮಾತನಾಡಿ, "ಹಣ್ಣುಗಳ ಮೇಲೆ ವೃತ್ತಾಕಾರದ ತಗ್ಗಾದ ಕಪ್ಪನೆಯ ಚುಕ್ಕೆಗಳು ಕಾಣಿಸಿಕೊಳ್ಳುತ್ತಿದ್ದು, ಒಳಗಿನ ಬಣ್ಣವು ಗುಲಾಬಿ ವರ್ಣದಿಂದ ಕೂಡಿರುತ್ತದೆ. ಆ ಮೇಲೆ ಕಪ್ಪಾಗುತ್ತವೆ. ಮೆಣಸಿನಕಾಯಿ ಬೆಳೆಗೆ ತುದಿ ಸಾಯುವ ರೋಗ, ಹಣ್ಣು ಕೋಳೆಯುವ ರೋಗ ಹಾಗೂ ಬೂದಿ ರೋಗಗಳು ಕಂಡು ಬಂದಾಗ 1 ಗ್ರಾಂ ಕಾರ್ಬಂಡೈಜಿಮ್ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ 15 ದಿನಗಳ ಅಂತರದಲ್ಲಿ ನಾಲ್ಕು ಸಾರಿ ಸಿಂಪಡಿಸಬೇಕು" ಎಂದು ತಿಳಿಸಿದರು.
ಎಲೆ ಮುಟುರು ರೋಗ ಬಂದಿದ್ದರೆ ಹಳದಿ ಮಿಶ್ರಿತ ಹಸಿರು ಭಾಗವನ್ನು ಎಲೆಯಲ್ಲಿ ಕಾಣಬಹುದು. ಎಲೆಗಳು ವಕ್ರಾಕಾರದ ಅಥವಾ ಮುಟುರು ಎಲೆಗಳನ್ನು ಕಾಣಬಹುದು. ಆ ಮೇಲೆ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮುಟುರು ರೋಗದ ಬಾಧೆ ತಡೆಗಟ್ಟಲು ಶೇ.0.5ರ ಬೆಳ್ಳೊಳ್ಳಿ, ಹಸಿಮೆಣಿಸಿಕಾಯಿ, ಸೀಮೆ ಎಣ್ಣೆ ಕಷಾಯವನ್ನು ಬೇವು ಜನ್ಯ ಕೀಟನಾಶಕದೊಂದಿಗೆ (2.5 ಮಿ.ಲೀ ಪ್ರತಿ ಲೀಟರ್ ನೀರಿಗೆ) ಬೆರಸಿ ಅವಶ್ಯವಿದ್ದಾಗ ಸಿಂಪರಣೆ ಮಾಡಬೇಕು.
ಕೀಟನಾಶಕಗಳದ 0.3 ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.2 ಗ್ರಾಂ. ಥಯೋಮೆಥಾಕ್ಸಾಮ್ ಅಥವಾ 1.0 ಮಿ.ಲೀ ಫಿಪ್ರೋನಿಲ್ 5 ಎಸ್.ಸಿ ಅಥವಾ 1.0 ಗ್ರಾಂ. ಡಯಾಫೆನ್ಥಯೂರಾನ್ 50 ಡಬ್ಲ್ಯುಪಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಎಲ್ಲಾ ಅಥವಾ ಅಗತ್ಯವಿರುವ ನಿರ್ವಹಣಾ ಕ್ರಮಗಳನ್ನು ಪಾಲಿಸಿಕೊಂಡು ರೈತರು ಸಕಾಲದಲ್ಲಿ ಮೆಣಸಿನಕಾಯಿ ಬೆಳೆಗೆ ಔಷಧಿಗಳನ್ನು ಸೂಕ್ತ ರೀತಿಯಲ್ಲಿ ಸಿಂಪಡಿಸಿ ಉತ್ತಮ ಗುಣಮಟ್ಟದ ಇಳುವರಿ ಪಡೆಯಬಹುದು ಎಂದು ಅವರು ಹೇಳಿದರು.
ಬಳ್ಳಾರಿ, ಕುರುಗೋಡು ಮತ್ತು ಕಂಪ್ಲಿ ತಾಲ್ಲೂಕುಗಳಲ್ಲಿ ಮೆಣಸಿನಕಾಯಿ ಬೆಳೆಗೆ ಥ್ರಿಪ್ಸ್ ನುಸಿ ಕೀಟ, ಬೂದಿ ರೋಗ, ಹಣ್ಣು ಕೋಳೆ ರೋಗ, ಮತ್ತು ಎಲೆ ಮುಟುರು ರೋಗ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ಶಾಸ್ತ್ರದ ಹಿರಿಯ ವಿಜ್ಞಾನಿ ಡಾ. ಪಾಲಯ್ಯ, ಕೀಟ ಶಾಸ್ತ್ರಜ್ಞ ಡಾ. ಆನಂದ ಕುಮಾರ್ ಹಾಗೂ ತೋಟಗಾರಿಕೆ ಇಲಾಖೆಯಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರತ್ನಪ್ರಿಯಾ ಯರಗಲ್ ಮತ್ತು ರೂಪನಗುಡಿ ರೈತ ಸಂಪರ್ಕ ಕೇಂದ್ರ ಪ್ರವೀಣ್ ಕುಮಾರ್ ನಾಯ್ಕ ಒಳಗೊಂಡ ತಂಡವು ಹಳ್ಳಿಗಳಿಗೆ ಭೇಟಿ ಕೊಟ್ಟು ಮೆಣಸಿನಕಾಯಿ ಬೆಳೆಯ ರೋಗ ಮತ್ತು ಕೀಟ ಹತೋಟಿಗಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರೈತರಿಗೆ ಸಲಹೆ ನೀಡಿದೆ.












Click it and Unblock the Notifications