ಕೊರೊನಾದ ಬಿಸಿ; ಭತ್ತ ಬೆಳೆದ ಬಳ್ಳಾರಿ ರೈತರು ಕಂಗಾಲು
ಬಳ್ಳಾರಿ, ಮಾರ್ಚ್ 31: ಕೊರೊನಾ ಹರಡದಂತೆ ತಡೆಯಲು ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಇದರಿಂದಾಗಿ ರೈತರು ತರಕಾರಿ, ಹಣ್ಣುಗಳನ್ನು ಕೊಳ್ಳುವವರು ಇಲ್ಲದೇ ಕಂಗಾಲಾಗಿದ್ದಾರೆ. ಕರ್ನಾಟಕದ ಬಳ್ಳಾರಿಯಲ್ಲಿ ಭತ್ತ ಬೆಳೆದಿರುವ ರೈತರು ಆತಂಕಕ್ಕೆ ಸಿಲುಕಿದ್ದಾರೆ.
ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಕೊರೊನಾ ಬಿಸಿ ತಟ್ಟಿದೆ. ತಕ್ಷಣದಿಂದಲೇ ಸರ್ಕಾರ ತೆಲಂಗಾಣ ರಾಜ್ಯದ ಮಾದರಿಯಲ್ಲಿ ಪೋನ್ ಕಾಲ್ ರೈತ ಬಜಾರ್ ಯೋಜನೆಯನ್ನು ರೈತರ ನೆರವಿಗಾಗಿ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಸುಮಾರು 32,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಇದು ಈಗ ಕಟಾವಿಗೆ ಬಂದಿದೆ, ಸ್ಥಳೀಯವಾಗಿ ಯಂತ್ರೋಪಕರಣಗಳ ವ್ಯವಸ್ಥೆ ಇಲ್ಲದ ಕಾರಣ ರೈತರಿಗೆ ಸಮಸ್ಯೆಯಾಗಿದೆ.
ಭತ್ತದ ಕಟಾವು ಮಾಡಲು ಗಡಿ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಯಂತ್ರೋಪಕರಣಗಳನ್ನು ತರಿಸಬೇಕು ಎಂಬುದು ರೈತರ ಬೇಡಿಕೆಯಾಗಿದೆ. ಈ ಕುರಿತು ರೈತರು ಜಿಲ್ಲಾಧಿಕಾರಿಗಳಿಗೆ ಸಹ ಪತ್ರವನ್ನು ಬರೆದಿದ್ದಾರೆ. ಸರ್ಕಾರದಿಂದ ನೆರವು ಸಿಗುವ ನಿರೀಕ್ಷೆಯಲ್ಲಿದ್ದಾರೆ.

ರೈತ ಮುಖಂಡರು ಹೇಳುವುದೇನು?
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಮಾಧವ ರೆಡ್ಡಿ ಕರೂರು ಈ ಕುರಿತು ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ್ದಾರೆ. "ಭತ್ತ ಕಟಾವಿಗೆ ಬಂದು ನಿಂತಿದೆ. ಇಂತಹ ಸಮಯದಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಮಳೆ ಏನಾದರೂ ಬಂದರೆ ರೈತರು ಬೆಳೆದ ಭತ್ತವೆಲ್ಲ ಭೂಮಿಯ ಪಾಲಾಗುತ್ತದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿವಿಧ ಬೆಳೆಗಳು ಜಿಲ್ಲೆಯಲ್ಲಿವೆ
ಬಳ್ಳಾರಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಅಂದಾಜು 45000 ಹೆಕ್ಟೇರ್ ಪ್ರದೇಶದಲ್ಲಿ ಜೋಳ, 32,500 ಹೆಕ್ಟೇರ್ ಪದೇಶದಲ್ಲಿ ಭತ್ತ ಬೆಳೆಯಲಾಗಿದೆ. ಉಳಿದಂತೆ ತೋಟಗಾರಿಕಾ ಬೆಳೆಗಳು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗಿದೆ.

ಲಾಕ್ ಡೌನ್ನಿಂದಾಗಿ ಆತಂಕ
ಇಡೀ ದೇಶವೇ ಈಗ ಲಾಕ್ ಡೌನ್ ಆಗಿದೆ. ಇಂತಹ ಸಮಯದಲ್ಲಿ ರೈತರಿಗೆ ನೆರವಾಗಲು ತೆಲಂಗಾಣ ಸರ್ಕಾರ ಕಮಾಂಡರ್ ಕಂಟ್ರೋಲ್ ರೂಂ ಸ್ಥಾಪನೆ ಮಾಡಿದೆ. ಇದರ ಮೇಲ್ವಿಚಾರಣೆಗೆ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದೆ. ರೈತ ಬಜಾರ್ ಹೆಸರಿನಲ್ಲಿ ರೈತರು ಬೆಳೆದಂತಹ ಬೆಳೆಗಳಿಗೆ ಸರ್ಕಾರವೇ ಬೆಲೆ ನಿಗದಿ ಮಾಡಿದೆ. ಬೆಳೆಗಳನ್ನು ಫೋನ್ ಮೂಲಕ ನೋಂದಣಿ ಮಾಡಿಕೊಳ್ಳಲು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ.

ಸರ್ಕಾರಿಂದ ಪಾಸು ವಿತರಣೆ
ಫೋನ್ ಊಲಕ ನೋಂದಣಿ ಮಾಡಿಕೊಂಡ ರೈತರು ತಮ್ಮ ಉತ್ಪನ್ನಗಳನ್ನು ರೈತ ಬಜಾರ್ಗೆ ತರಲು ತೊಂದರೆಯಾಗದಂತೆ ಸರ್ಕಾರವೇ ಪಾಸುಗಳನ್ನು ನೀಡಿದೆ. ಬೆಳೆ ಹಾಳಾಗಬಾರದು ಎಂದು ಅಗತ್ಯ ವ್ಯವಸ್ಥೆಗಳನ್ನು ಸರ್ಕಾರ ಮಾಡಿದೆ.

ಸರ್ಕಾರಕ್ಕೆ ಮನವಿ ಏನು?
ಕರ್ನಾಟಕ ಸರ್ಕಾರ ಇಂತಹ ಯೋಜನೆಯನ್ನು ಜಾರಿಗೆ ತರಬೇಕು. ತಕ್ಷಣದಿಂದಲೇ ರೈತ ಬಜಾರ್ ಯೋಜನೆ ಆರಂಭಿಸಬೇಕು. ಭತ್ತದ ಕಟಾವಿಗೆ ಸರ್ಕಾರದ ವತಿಯಿಂದಲೇ ಯಂತ್ರೋಪಕರಣ ಪೂರೈಕೆ ಮಾಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.












Click it and Unblock the Notifications