ಚಿತ್ರದುರ್ಗ: ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ, ವಿವರ ತಿಳಿಯಿರಿ
ಚಿತ್ರದುರ್ಗ, ಜುಲೈ, 21: 2023-24ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಸೂಚಿಸಲಾಗಿದೆ. ಜುಲೈ 31 ವಿಮಾ ನೋಂದಣಿಗೆ ಕೊನೆಯ ದಿನವಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ 183 ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು, ದಾಳಿಂಬೆ ಬೆಳೆಗೆ 164 ಗ್ರಾಮ ಪಂಚಾಯಿ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಮಾವು ಬೆಳೆಗೆ 180 ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳನ್ನು ವಿಮಾ ಘಟಕಗಳಾಗಿ ಅಧಿಸೂಚಿಸಲಾಗಿದೆ.

ಮುಂಗಾರು ಹಂಗಾಮಿಗೆ ಅನುಮೋದಿಸಲಾದ ತೋಟಗಾರಿಕೆ ಬೆಳೆಗಳ ವಿಮಾ ಮೊತ್ತ, ವಿಮಾ ಕಂತಿನ ದರ ಹಾಗೂ ವಿಮಾ ಅನ್ವಯಿಸುವ ಅವಧಿ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಅಡಿಕೆ ವಿಮಾ ಮೊತ್ತ 1,28,000 ರೂಪಾಯಿ, ರೈತರ ವಿಮಾ ಕಂತಿನ ದರ 6400 ರೂಪಾಯಿ, ದಾಳಿಂಬೆ ವಿಮಾ ಮೊತ್ತ 1,27,000 ರೂಪಾಯಿ, ರೈತರ ವಿಮಾ ಕಂತಿನ ದರ 6350 ರೂಪಾಯಿ, ಮಾವು ವಿಮಾ ಮೊತ್ತ 80,000 ರೂಪಾಯಿ, ರೈತರ ವಿಮಾ ಕಂತಿನ ದರ 4000 ರೂಪಾಯಿ, ಅಡಿಕೆ ಬೆಳೆಗೆ ವಿಮಾ ಅನ್ವಯಿಸುವ ಅವಧಿ 2023ರ ಆಗಸ್ಟ್ 1ರಿಂದ 2024ರ ಜೂನ್ 30 ಆಗಿರುತ್ತದೆ.
ದಾಳಿಂಬೆ ಮತ್ತು ಮಾವು ಬೆಳೆಗಳಿಗೆ ವಿಮಾ ಅನ್ವಯಿಸುವ ಅವಧಿ 2023ರ ಆಗಸ್ಟ್ 1 ರಿಂದ 2024 ಜೂನ್ 30 ಆಗಿರುತ್ತದೆ. ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಹಾಗೂ ಪಾವತಿಸಬೇಕಾದ ವಿಮಾ ಕಂತಿನ ಮೊತ್ತವು ಒಂದೇ ಆಗಿರುತ್ತದೆ. ರೈತರು ಪ್ರಸಕ್ತ ಸಾಲಿನ ಪಹಣಿ ಪತ್ರಿಕೆ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಹತ್ತಿರದ ಗ್ರಾಮ ಒನ್ ಕೇಂದ್ರ ಅಥವಾ ಬ್ಯಾಂಕ್ಗಳಲ್ಲಿ ಅಥವಾ ಸಿ.ಎಸ್.ಸಿ ಕೇಂದ್ರಗಳಲ್ಲಿ ವಿಮಾ ಯೋಜನೆಗೆ ನೊಂದಾಯಿಸಿಕೊಳ್ಳಬಹುದು.
ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಟಾನಗೊಳಿಸಲು ಚಿತ್ರದುರ್ಗ ಜಿಲ್ಲೆಗೆ KSHEMA GENERAL ವಿಮಾ ಸಂಸ್ಥೆಯು ಹಂಚಿಕೆ ಆಗಿರುತ್ತದೆ. ಹವಾಮಾನ ವಿಭಾಗಗಳಾದ ತಾಪಮಾನ, ಗಾಳಿಯ ವೇಗ, ಮಳೆಯ ಪ್ರಮಾಣ, ಆದ್ರ್ರತೆ ಇತ್ಯಾದಿ ಮಾಹಿತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಿಸುವ ಅಂಶಗಳ ಆಧಾರದ ಮೇಲೆ ಬೆಳೆ ವಿಮಾ ನಷ್ಠವನ್ನು ತೀರ್ಮಾನಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಹತ್ತಿರದ ಬ್ಯಾಂಕ್ಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಚಿತ್ರದುರ್ಗ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.












Click it and Unblock the Notifications