ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಪರ-ವಿರೋಧದ ಘೋಷಣೆ
ಬೆಳಗಾವಿ, ಆಗಸ್ಟ್.02: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಬಂದ್ ಹಿನ್ನೆಲೆಯಲ್ಲಿ ರೈತರು ನಗರದ ಪ್ರಮುಖ ಮಾರುಕಟ್ಟೆ ಪ್ರದೇಶದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು.
ಆದರೆ ಇದಕ್ಕೆ ಒಪ್ಪದ ಪೊಲೀಸರು ಬೆಳಗಾವಿ ಕೋಟೆ ಕೆರೆ ಕಿಲ್ಲಾ ಬಳಿಯ ಅಶೋಕ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಡಿಸಿ ಕಚೇರಿವರೆಗೆ ಮೆರವಣಿಗೆಗೆ ಅನುಮತಿ ನೀಡಿದ್ದಾರೆ.
ಪೊಲೀಸರು ಸೂಚಿಸಿದ ಮಾರ್ಗ ಬಿಟ್ಟು ಬೇರೆ ಕಡೆ ಪ್ರತಿಭಟನೆ ಮಾಡಿದರೆ ಕಾನೂನು ಕ್ರಮ ಕತಗೊಳ್ಳಲಾಗುವುದು ಎಂದು ಪ್ರತಿಭಟನೆ ನಿರತ ರೈತರಿಗೆ ಬೆಳಗಾವಿಯಲ್ಲಿ ಪೊಲಿಸ್ ಕಮಿಷನರ್ ಡಿ ಸಿ ರಾಜಪ್ಪ ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಮಹಾದೇವ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಕೋಟೆ ಕೆರೆ ಬಳಿಯ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಲು ರೈತರು ಸಜ್ಜಾಗಿದ್ದಾರೆ.

ಪ್ರತಿಭಟನೆಗೆ ರಾಮದುರ್ಗ ಯರಗಟ್ಟಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ರೈತರು ಆಗಮಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲಿಸ್ ಬಂದೋಬಸ್ತ್ ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಉತ್ತರ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಕುರಿಗಾರ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬಂದ್ ವಿಫಲ ಮಾಡುವ ಪ್ರಯತ್ನ ಮಾಡಲಾಗಿದೆ.
ಕಾಣದ ಕೈಗಳ ಕೈವಾಡದಿಂದ ಬಂದ್ ಗೆ ಹಿನ್ನಡೆಯಾಗಿದೆ.
ಆದರೂ ನಾವು ಹೋರಾಟವನ್ನು ಮಾಡುತ್ತೇವೆ. ಇವತ್ತು ಸಾಂಕೇತಿಕವಾಗಿ ಪ್ರತಿಭಟನಾ ರಾಲಿ ನಡೆಸಿ ಮನವಿ ಸಲ್ಲಿಸುತ್ತೇವೆ. ಆದರೆ ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ನಾವು ಯಾವುದೇ ರಾಜಕೀಯ ಪ್ರೇರಿತ್ ಬಂದ್ ಗೆ ಕರೆ ಕೊಟ್ಟಿಲ್ಲ ಎಂದು ಬಸವರಾಜ ಕರಿಗಾರ ಹೇಳಿಕೆ ನೀಡಿದ್ದಾರೆ.
ಕರವೇ ನಾರಾಯಣಗೌಡ ಬಣದಿಂದ ಚನ್ನಮ್ಮ ವೃತ್ತದಲ್ಲಿ ಅಖಂಡ ಕರ್ನಾಟಕವನ್ನು ಇಬ್ಭಾಗ ಮಾಡಲು ಹೊರಟ ಶಾಸಕರಿಗೆ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿ, ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಮನವಿ ಸಲ್ಲಿಸಲು ಸಂಘಟನೆಯ ಕಾರ್ಯಕರ್ತರು ತೆರಳಿದರು.
ಒಟ್ಟಿನಲ್ಲಿ ಬೆಳಗಾವಿಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಪರ-ವಿರೋಧಿ ಹೋರಾಟಗಾರರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಉತ್ತರ ಕರ್ನಾಟಕ ವಿಕಾಸ ವೇದಿಕೆ ರಾಜ್ಯಾಧ್ಯಕ್ಷ ಭೀಮಪ್ಪ ಗಡಾದ ನೇತ್ರತ್ವದಲ್ಲಿ ಅಭಿವೃದ್ಧಿ ಮಾಡಿ ಇಲ್ಲವೇ ಪ್ರತ್ಯೇಕ ರಾಜ್ಯ ಮಾಡಿ ಎಂದು ಕೂಗು ಹಾಕಿದರು.
ಇದಕ್ಕೆ ವಿರೋಧವಾಗಿ ಪ್ರತ್ಯೇಕ ರಾಜ್ಯ ಬೇಡವೆಂದು ಕರವೇ ಹೋರಾಟಗಾರರ ಪ್ರತಿಭಟನೆ ನಡೆಸಿದ್ದು, ಪರ-ವಿರೋಧ ಘೋಷಣೆಗಳು ತೀವ್ರಗೊಂಡಿವೆ.












Click it and Unblock the Notifications