ನವೆಂಬರ್.15 ರಿಂದ ಆಳ್ವಾಸ್ ಕೃಷಿ ಸಿರಿ ಅರಂಭ
ಮಂಗಳೂರು, ಸೆಪ್ಟೆಂಬರ್.18: ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್ ನುಡಿಸಿರಿ 2018' ಇದೇ ಬರುವ ನವೆಂಬರ್ 16 ರಿಂದ 3 ದಿನಗಳ ಕಾಲ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ.
ಸಾಹಿತ್ಯ, ಸಂಸ್ಕೃತಿ ಗಂಭೀರ ಗೋಷ್ಠಿಗಳೊಂದಿಗೆ ಕೃಷಿಯನ್ನೂ ಮುನ್ನೆಲೆಗೆ ತರಬೇಕೆಂಬ ದೃಷ್ಠಿಕೋನ ದಿಂದ ನವೆಂಬರ್ 15ರಂದು ಆಳ್ವಾಸ್ ಕೃಷಿಸಿರಿ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಮೀನುಗಾರಿಕಾ ಇಲಾಖೆ, ಕೃಷಿ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಕೃಷಿಕ ಸಮಾಜ, ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಮತ್ತು ರೈತಸಂಘಗಳ ಸಹಯೋಗದೊಂದಿಗೆ ಈ ಕೃಷಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಕೃಷಿ ಸಂಬಂಧಿ ಚಟುವಟಿಕೆಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಹಾಗೂ ಮಾರಾಟಗಳನ್ನೂ ಹಮ್ಮಿಕೊಳ್ಳಲಾಗಿದ್ದು, ನವೆಂಬರ್.15ರಂದು ಸಂಜೆ ಉದ್ಘಾಟನೆಗೊಳ್ಳಲಿದೆ.
ಹಿರಿಯ ರೈತ ಮುಖಂಡ, ರೈತ ಹೋರಾಟಗಾರ ದಿ.ಕೆ.ಎಸ್.ಪುಟ್ಟಣ್ಣಯ್ಯನವರ ಗೌರವಾರ್ಥ ಆಳ್ವಾಸ್ ಕೃಷಿಸಿರಿ-ಕೃಷಿ ಮೇಳ ನಡೆಯುವ ಆವರಣಕ್ಕೆ 'ಕೆ.ಎಸ್.ಪುಟ್ಟಣ್ಣಯ್ಯ ಆವರಣ' ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ .
ಸಮ್ಮೇಳನಕ್ಕಾಗಿ ಎರಡು ಎಕರೆ ಪ್ರದೇಶದಲ್ಲಿ ಊರಿನ ಸಾಂಪ್ರದಾಯಿಕ ಮಾದರಿಯಲ್ಲಿ ತರಕಾರಿಗಳನ್ನು ಬೆಳೆಯಲಾಗುವುದು. 44 ವಿಧದ ಬಿದಿರಿನ ಗಿಡಗಳು, ನ್ಯೂಜಿಲೆಂಡ್ ಮೂಲದ ವಿಶಿಷ್ಟ ಬಣ್ಣಗಳ ಹಾಗೂ ಆಹಾರಕ್ಕಾಗಿ ಬಳಸುವ ಸಸ್ಯಗಳ ಪ್ರದರ್ಶನ, ಪುಷ್ಪ ಪ್ರದರ್ಶನ ಮತ್ತು ತರಕಾರಿ ಹಾಗೂ ಹಣ್ಣುಗಳಲ್ಲಿ ಕಲಾಕೃತಿಗಳ ರಚನೆಯ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.
ಜೊತೆಗೆ ಕೃಷಿ ಸಾಹಿತ್ಯ-ಸಲಕರಣೆಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೂ ಅವಕಾಶ ನೀಡಲಾಗಿದೆ. ವಿಶೇಷ ಆಕರ್ಷಣೆಯಲ್ಲಿ ಮತ್ಸ್ಯಮೇಳ, ಸಮುದ್ರ ಚಿಪ್ಪು ಪ್ರದರ್ಶನ, ಶ್ವಾನ ಪ್ರದರ್ಶನ. ಪಕ್ಷಿಗಳ ಹಾಗು ಬೆಕ್ಕು ಪ್ರದರ್ಶನಗಳನ್ನೂ ಆಯೋಜಿಸಲಾಗಿದೆ.












Click it and Unblock the Notifications