ರೈತರಿಗೆ ವಂಚಿಸುವವರ ಮೇಲೆ ಅಧಿಕಾರಿಗಳು ಸದಾ ಕಣ್ಣಿಟ್ಟಿರಬೇಕು: ಕೃಷಿ ಸಚಿವ ಬಿ.ಸಿ. ಪಾಟೀಲ್ ಸೂಚನೆ
ಬೆಳಗಾವಿ, ಸೆಪ್ಟೆಂಬರ್ 2 : ರೈತರಿಗೆ ಮೋಸ ಮಾಡುವ ನಕಲು ದಂಧೆಕೋರರಿಗೆ ಕೃಷಿ ಇಲಾಖೆ ಅಧಿಕಾರಿಗಳು ಸಿಂಹಸ್ವಪ್ನವಾಗಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸೂಚನೆ ನೀಡಿದರು. ರೈತರಿಗೆ ಅನ್ಯಾಯ ಆಗುವುದಂತೆ ನೋಡಿಕೊಳ್ಳುವ ಜವಾಬ್ದಾರಿ ಕೃಷಿ ಅಧಿಕಾರಿಗಳದ್ದಾಗಿದೆ ಎಂದು ಹೇಳಿದರು.
ಬೆಳಗಾವಿಯ ಸುವರ್ಣಸೌಧ ಸೆಂಟ್ರಲ್ ಹಾಲ್ನಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ 2022-23 ನೇ ಸಾಲಿನ ಜಿಲ್ಲಾ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ನಕಲಿ ಬೀಜ, ಗೊಬ್ಬರ ಪೂರೈಕೆ; ಕೃಷಿ ಸಚಿವರ ಖಡಕ್ ಎಚ್ಚರಿಕೆ
ಸಭೆಯಲ್ಲಿ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ಅನ್ನ ನೀಡುವ ರೈತನಿಗೆ ಕಳಪೆ ಗೊಬ್ಬರ, ರಾಸಾಯನಿಕ ಔಷಧಿ, ಬಿತ್ತನೆ ಬೀಜ ಮಾರುವುದಕ್ಕಿಂತ ನೀಚ ಕೆಲಸ ಮತ್ತೊಂದಿಲ್ಲ. ಇಂತಹ ವಂಚಕರ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಸದಾ ಹದ್ದಿನ ಕಣ್ಣಿಟ್ಟಿರಬೇಕು ಎಂದು ಹೇಳಿದರು.
ರೈತರನ್ನು ನಾವು ಪೋಷಿಸಿ, ಬೆಳೆಸಬೇಕು, ಆತನಿಗೆ ಒಳಿತಾದರೆ ನಾಡಿಗೆ ಒಳಿತಾದಂತೆ. ಈ ಹಿಂದೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಗೌರವ ಸಿಗುತ್ತಿರಲಿಲ್ಲ. ಆದರೆ ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ, ಕೃಷಿ ವಿಚಕ್ಷಣಾ ದಳದ ಕಾರ್ಯವೈಖರಿಯಿಂದ ಇಡೀ ಇಲಾಖೆಗೆ ಗೌರವ, ಮಹತ್ವ ಬಂದಿದೆ ಎಂದರು.
ಗದಗದಲ್ಲಿ ಬೆಳೆ ಜಲಾವೃತ, ಪರಿಹಾರದ ಭರವಸೆ ಕೊಟ್ಟ ಬಿ. ಸಿ. ಪಾಟೀಲ್
ರೈತರಿಗೆ ಆಗುವ ಮೋಸ ನಿಲ್ಲಬೇಕು
ರೈತರಿಗೆ ಮೋಸ ಮಾಡುವ ನಕಲು ದಂಧೆಕೋರರು ಕೃಷಿ ಇಲಾಖೆ ಅಧಿಕಾರಿಗಳೆಂದರೆ ಬೆಚ್ಚಿಬೀಳಬೇಕು. ರೈತರಿಗೆ ಮೋಸ ಮಾಡಲು, ತಪ್ಪು ಮಾಡಲು ಹೆದರಬೇಕು. ಆ ರೀತಿ ಕೃಷಿ ಇಲಾಖೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದರು.
ರಾಜ್ಯದಲ್ಲಿ ಕೃಷಿ ವಿಚಕ್ಷಣಾ (ಜಾಗೃತ) ದಳ ಹೆಚ್ಚು ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿದೆ. ಜಾಗೃತ ದಳದಿಂದ ಇಲ್ಲಿವರೆಗೆ 28 ಕೋಟಿ ರುಪಾಯಿ ಮೌಲ್ಯದ ನಕಲಿ ಕಳಪೆ ರಸಗೊಬ್ಬರ ಬಿತ್ತನೆ ಬೀಜವನ್ನು ವಶಪಡಿಸಿಕೊಳ್ಳಲಾಗಿದೆ. ನಕಲಿ ದಂಧೆಕೋರರಿಗೆ ಈವರೆಗೆ 15 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. 148 ನಕಲು ದಂಧೆಕೋರರ ಪರವಾನಗಿಯನ್ನು ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರೈತನ ಹಿತ ಕಾಪಾಡುವುದು ಉತ್ತಮ ಕೆಲಸ
ನಕಲಿ ರಸಗೊಬ್ಬರ, ಕಳಪೆ ಬಿತ್ತನೆ ಬೀಜ ಕೃತಕ ಅಭಾವ ಸೃಷ್ಠಿಸುವ ಜಾಲದ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ರೈತನಿಗೆ ಮೋಸ ಮಾಡುವವರನ್ನು ಗುರುತಿಸುವುಸುವುದು, ಕ್ರಮ ತೆಗೆದುಕೊಳ್ಳುವುದು ಮಾತ್ರ ಜಾಗೃತ ದಳಕದ ಕೆಲಸ ಎನ್ನುವುದನ್ನು ತಾತ್ಸಾರವಾಗಿ ನೋಡಬಾರದು. ಇದು ರಾಜ್ಯದ ಅನ್ನದಾತನ ಹಿತ ಕಾಯುವ ಕೆಲಸ, ಕೃಷಿಕನ ಒಳಿತಿಗಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಸದ್ಭಾವನೆ ಎಲ್ಲರ ಮನದಲ್ಲಿ ಮೂಡಬೇಕು ಎಂದು ಬಿ.ಸಿ ಪಾಟೀಲ್ ತಿಳಿಸಿದರು.
ರಸಗೊಬ್ಬರದ ಕೊರತೆ ಎಲ್ಲಿಯೂ ಇಲ್ಲ.ಆದರೆ ಕೆಲ ವ್ಯಾಪಾರಸ್ಥರು ದುರಾಸೆಯ ಲಾಭಕ್ಕಾಗಿ ಕೃತಕ ಲಾಭ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರುವ ಹುನ್ನಾರ ಮಾಡುತ್ತಲೇ ಇರುತ್ತಾರೆ. ರಸಗೊಬ್ಬರವನ್ನು ಕೇಂದ್ರ ಸಕಾಲದಲ್ಲಿ ಸಮರ್ಪಕವಾಗಿ ಪೂರೈಸುತ್ತಲೇ ಇದೆ. ರಸಗೊಬ್ಬರದ ದಾಸ್ತಾನು ಇದೆ, ಈ ವಿಚಾರಚನ್ನು ಅಧಿಕಾರಿಗಳು ರೈತರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ವಾರದೊಳಗೆ ಬೆಳೆ ಹಾನಿ ವರದಿ ನೀಡಲು ಸೂಚನೆ
ನ್ಯಾನೋ ಗೊಬ್ಬರ ಬಳಸುವಂತೆ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಭೂಮಿಯನ್ನು, ಮಣ್ಣಿನ ಫಲವತ್ತತೆಯನ್ನು ಉಳಿಸುವ ಕೆಲಸವನ್ನು ಕೃಷಿ ಅಧಿಕಾರಿಗಳು ಮಾಡಬೇಕು ಎಂದು ಹೇಳಿದರು.
ಮಳೆಯಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ತಾಕುಗಳಿಗೆ ಕಂದಾಯ ಇಲಾಖಾಧಿಕಾರಿಗಳೊಂದಿಗೆ ಕೃಷಿ ಇಲಾಖಾಧಿಕಾರಿಗಳೂ ಸಹ ಭೇಟಿ ನೀಡಿ ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಚಿವ ಬಿ.ಸಿ ಪಾಟೀಲ್ ಸೂಚನೆ ನೀಡಿದರು.
ಬೆಳಗಾವಿ ವಿಭಾಗದ ಎಲ್ಲಾ ಜಿಲ್ಲೆಗಳು ಒಂದು ವಾರದಲ್ಲಿ ಪರಿಹಾರ ತಂತ್ರಾಂಶದಲ್ಲಿ ಜಂಟಿ ಬೆಳೆ ಸಮೀಕ್ಷೆಯ ರೈತರ ವರದಿಗಳನ್ನು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ಬಿ.ಸಿ ಪಾಟೀಲ್ ಆದೇಶ ನೀಡಿದರು.
ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಿ
ರೈತ ವಿದ್ಯಾನಿಧಿ ಯೋಜನೆಯನ್ನು ರೈತ ಕೂಲಿಕಾರ್ಮಿಕ ಮಕ್ಕಳಿಗೂ ಸರ್ಕಾರ ವಿಸ್ತರಿಸಿದರ ಬಗ್ಗೆ ಹೆಚ್ಚು ಪ್ರಚಾರ ಮೂಡಿಸಬೇಕು. ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ದೊರೆಯುವ ಬಗ್ಗೆ ಹಾಗೂ ರೈತ ಸ್ನೇಹಿ ಆಡಳಿತ ನೀಡುವ ಬಗ್ಗೆ ಕೃಷಿಕರಲ್ಲಿ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ಕೃಷಿ ಅಧಿಕಾರಿಗಳು, ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎ.ಸಿ.ಮಂಜು, ಜಲಾನಯನ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಮತ್ತಿತ್ತರ ಪ್ರಮುಖರು ಪಾಲ್ಗೊಂಡಿದ್ದರು.