ಮುಂಗಾರು ಪೂರ್ವ ಮಳೆಗೆ ದಾವಣಗೆರೆ ಜಿಲ್ಲೆಯ ಹಲವೆಡೆ ಕೃಷಿ ಬೆಳೆ ನಾಶ, ನೊಂದ ರೈತರ ಬೇಡಿಕೆಗಳೇನು?
ದಾವಣಗೆರೆ, ಮೇ, 28: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಅಕಾಲಿಕ ಮಳೆಯಿಂದ ಭತ್ತ, ತೋಟದ ಬೆಳೆಗಳು ಹಾಗೂ ಬಡವರ ಮನೆಗಳು ಹಾಳಾಗಿದ್ದು, ತುರ್ತು ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಬಲ್ಲೂರು ರವಿಕುಮಾರ್ ಅವರು, ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 53,700 ಹೆಕ್ಟೇರ್ ಭತ್ತ ಬೆಳೆದಿದ್ದು, 700 ಹೆಕ್ಟೇರ್ ಹಾಳಾಗಿದೆ. ಇದರಿಂದ 105 ಕೋಟಿ ರೂಪಾಯಿ ನಷ್ಟ ಆಗಲಿದೆ. ಪ್ರತಿ ಹೆಕ್ಟೇರ್ಗೆ 30 ಸಾವಿರ ರೂಪಾಯಿ ಖರ್ಚಾಗಲಿದೆ. ಗೊಬ್ಬರ, ಯಂತ್ರೋಪಕರಣ ಬಂಡವಾಳ ಸೇರಿದಂತೆ ಇಷ್ಟು ಖರ್ಚು ಬರುತ್ತದೆ. ಈ ಹಿನ್ನೆಲೆ ಪ್ರತಿ ಹೆಕ್ಟೇರ್ಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಒಂದು ಲಕ್ಷದ 20 ಸಾವಿರ ಹೆಕ್ಟೇರ್ನಲ್ಲಿ ತೋಟಗಾರಿಕೆ ಬೆಳೆ ಬೆಳೆದಿದ್ದು, ಇದರಲ್ಲು 86 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ಜಗಳೂರಿನಲ್ಲಿ 31.2 ಹೆಕ್ಟೇರ್, ದಾವಣಗೆರೆ 45 ಹೆಕ್ಟೇರ್, ಚನ್ನಗಿರಿ 37 ಹೆಕ್ಟೇರ್ ಹಾಳಾಗಿದೆ. ಇದರಲ್ಲಿ 21 ಹೆಕ್ಟೇರ್ ಬಾಳೆ, 5 ಹೆಕ್ಟೇರ್ ಪಪ್ಪಾಯಿ ನೀರುಪಾಲಾಗಿದೆ ಎಂದು ಮಾಹಿತಿ ನೀಡಿದರು.
ಮುಂಗಾರು ಹಂಗಾಮಿನ ಅಕಾಲಿಕ ಮಳೆಯಿಂದ ಭತ್ತ, ತೋಟದ ಬೆಳೆಗಳು, ಬಡವರ ಮೆನೆಗಳು ಹಾಳಾಗಿದ್ದು, ತುರ್ತು ಕ್ರಮ ತೆಗೆದುಕೊಳ್ಳಬೇಕು. ಮೇ ತಿಂಗಳಲ್ಲಿ ಅಕಾಲಿಕ ಮಳೆಯಿಂದ ದಾವಣಗೆರೆ ಜಿಲ್ಲೆಯ ಹಾಗೂ ತಾಲೂಕಿನ ಕಸಬಾ ಹೋಬಳಿಗಳು, ಹರಿಹರ ತಾಲೂಕಿನ ಮಲೇಬೆನ್ನೂರು ಹೋಬಳಿ, ಚನ್ನಗಿರಿ ತಾಲೂಕಿನ ಬಸವಾಪಟ್ಟಣ, ಸಂತೇಬೆನ್ನೂರು ಹೋಬಳಿಗಳಲ್ಲಿ ಭತ್ತದ ಬೆಳೆಗಳು ಹಾಳಾಗಿವೆ.
ಭತ್ತದ ಮಾರುಕಟ್ಟೆಯಲ್ಲಿ 2,200 ರೂಪಾಯಿ ರಿಂದ 2,300 ರೂಪಾಯಿ ದರ ಇದೆ. ಪ್ರಸ್ತುತ 40 ರಿಂದ 50 ಚೀಲ ಇಳುವರಿ ಬರುತ್ತಿದ್ದು, ಪ್ರತಿ ಹೆಕ್ಟೇರ್ಗೆ 75,000 ರಿಂದ 80,000 ರೂಪಾಯಿ ಹಣ ಸಿಗುತ್ತದೆ. ಆದರೆ ಅಕಾಲಿಕ ಮಳೆಯಿಂದ ಇದೀಗ ಸುಮಾರು 60,000 ರೂಪಾಯಿ ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರ ಭೂಮಿಯ ಉಳುಮೆ, ಗೊಬ್ಬರ ಔಷಧಿ ಮತ್ತು ಕೂಲಿ ಕೆಲಸಕ್ಕೆ ಪ್ರತಿ ಹೆಕ್ಟೇರ್ಗೆ 30,000 ರೂಪಾಯಿ ವೆಚ್ಚ ಆಗುತ್ತದೆ. ಆದ್ದರಿಂದ ಪ್ರತಿ ಹೆಕ್ಟೇರ್ 50,000 ರೂಪಾಯಿ ಸರ್ಕಾರದಿಂದ ರೈತರ ಖಾತೆಗೆ ಜಮಾ ಮಾಡಬೇಕು. ತೋಟದ ಬೆಳೆಗಳಾದ ಬಾಳೆ, ಎಲೆ, ಮಾವು ಸೇರಿದಂತೆ ಇತರೆ ತೋಟಗಳು ಮಳೆ ಮತ್ತು ಆಲಿಕಲ್ಲು ಮಳೆಯಿಂದ ನಾಶವಾಗಿದೆ.
ನಾವು ಇದೀಗ ಬೆಳೆ ನಷ್ವಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ಆದ್ದರಿಂದ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್ಗೆ 50,000 ರೂಪಾಯಿ ಭರಿಸಬೇಕು. ಮತ್ತೊಂದೆಡೆ ಬಡವರ ಮನೆಗಳ ಮೇಲ್ಚಾವಣಿಗಳು ಗಾಳಿ, ಮಳೆಯಿಂದ ಹಾರಿ ಹೋಗಿದ್ದು, ಇಂತಹ ಬಡವರ ಮನೆಗಳನ್ನು ಗುರುತಿಸಿ ಸರ್ಕಾರ ತಾತ್ಕಾಲಿಕ ಪರಿಹಾರವನ್ನು ನೀಡಬೇಕು. ಹಾಗೆಯೆ ಶಾಶ್ವತ ಪರಿಹಾರವಾಗಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಸರ್ಕಾರಕ್ಕೆ ಒತ್ತಾಯಿಸಿದೆ.
ರೈತರಿಗೆ ಗೊಬ್ಬರ, ಬಿತ್ತನೆ ಬೀಜವನ್ನು ರಾಜ್ಯ ಸರ್ಕಾರವು ಸಕಾಲದಲ್ಲಿ ರೈತರಿಗೆ ವಿತರಣೆ ಮಾಡಬೇಕು ಎಂದು ಬಲ್ಲೂರು ರವಿಕುಮಾರ್ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ. ಎಸ್. ಪ್ರಸಾದ್ ಕಬ್ಬಳ, ಜಿಲ್ಲಾ ಉಪಾಧ್ಯಕ್ಷ ರಾಂಪುರ ಬಸವರಾಜ, ತಾಲೂಕು ಅಧ್ಯಕ್ಷ ಐಗೂರು ಶಿವಮೂರ್ತಪ್ಪ, ಹಾಲೇಶ್, ಪ್ರತಾಪ್, ನಾಗರಾಜ್ ಐಗೂರು ಹಾಜರಿದ್ದರು.












Click it and Unblock the Notifications