ರಾಜಧಾನಿಯಲ್ಲಿ ಹೆಚ್ಚಾಗುತ್ತಿದೆ ಬಾಳೆಹಣ್ಣಿನ ದರ: ಕಾರಣ ಏನು ಗೊತ್ತಾ?
ಬೆಂಗಳೂರು, ಜೂನ್ 23: ತರಕಾರಿ ನಂತರ ಈಗ ಬಾಳೆಹಣ್ಣಿನ ದರ ಏರಿಕೆಯ ಹಾದಿ ಹಿಡಿದಿದೆ, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಏಲಕ್ಕಿ ಬಾಳೆಹಣ್ಣು 90 ರುಪಾಯಿವರೆಗೆ ಮಾರಾಟವಾಗುತ್ತಿದೆ. ದಿಢೀರ್ ಎಂದು ಬಾಳೆಹಣ್ಣು ದರ ಹೆಚ್ಚಾಗುತ್ತಿರುವುದು ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಹಲವಾರು ರೈತರು ಬಾಳೆ ಬೆಳೆಯುವುದನ್ನು ಕೈಬಿಟ್ಟ ಪರಿಣಾಮ ಮಾರುಕಟ್ಟೆಯಲ್ಲಿ ಬಾಳೆಹಣ್ಣು ಪೂರೈಕೆಯಲ್ಲಿ ಕೊರತೆಯುಂಟಾಗಿದೆ ಎಂದು ವರದಿಯಾಗಿದೆ. ಪೂರೈಕೆ ಕಡಿಮೆಯಾದ ಕಾರಣ ಬಾಳೆಹಣ್ಣು ದರದಲ್ಲಿ ಏರಿಕೆಯಾಗುತ್ತಿದೆ.
ಮಳೆ ಕೊರತೆ; ಉತ್ತರ ಭಾರತದ ರಾಜ್ಯಗಳ ಕೃಷಿಗೆ ಎರಡು ವಾರ ನಿರ್ಣಾಯಕ
ಶಾಪಿಂಗ್ ಮಾಲ್ಗಳು ಮತ್ತು ಆನ್ಲೈನ್ ವಾಣಿಜ್ಯ ಸ್ಥಳಗಳಲ್ಲಿ ಚಿಲ್ಲರೆ ಮಾರಾಟಗಾರರು ಮತ್ತು ವಿತರಕರು ಬಾಳೆಹಣ್ಣುಗಳನ್ನು ಕೆಜಿಗೆ 100 ರುಪಾಯಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಮಾರುಕಟ್ಟೆಗಳಿಗೆ ಬಾಳೆಹಣ್ಣಿನ ಆವಕದ ಮೇಲೆ ತೀವ್ರ ಹೊಡೆತ ಬಿದ್ದಿರುವುದರಿಂದ ಕನಿಷ್ಠ ಮುಂದಿನ ಆರು ತಿಂಗಳವರೆಗೆ ಬೆಲೆಗಳ ಏರಿಕೆ ಹೀಗೆ ಮುಂದುವರಿಯುತ್ತದೆ ಎಂದು ವರದಿ ಹೇಳಿದೆ.
ಇತರ ರೀತಿಯ ಬಾಳೆಹಣ್ಣುಗಳು ಸಾಮಾನ್ಯ ಬೆಲೆಗಳನ್ನು ಹೊಂದಿವೆ. ರೋಬಸ್ಟಾ ತಳಿ ಕೆ.ಜಿ.ಗೆ 20 ರು. ಗಳಿಂದ 23 ರುಪಾಯಿವರೆಗೆ ಇದೆ ಎನ್ನಲಾಗಿದ್ದು, ನೇಂದ್ರ ತಳಿ ಕೆ.ಜಿಗೆ 55 ರುಪಾಯಿಯಿಂದ 60 ರುಪಾಯಿಗೆ ಮಾರಾಟವಾಗುತ್ತಿದೆ, ಮತ್ತೊಂದು ಪ್ರಮುಖ ತಳಿ ಚಂದ್ರಾ ತಳಿ ಪ್ರತಿ ಕೆ.ಜಿ.ಗೆ 40 ರುಪಾಯಿಯಿಂದ 45 ರುಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ.
ಬಾಳೆಹಣ್ಣು ಪೂರೈಕೆ ಕೊರತೆ ಮುಂದಿನ ವರ್ಷದವರೆಗೆ ಮುಂದುವರೆಯುವ ನಿರೀಕ್ಷೆಯಿದೆ. ಮುಂಗಾರು ವೇಳೆಯಲ್ಲಿ ಬಾಳೆ ಬೆಳೆ ನಾಟಿ ಮಾಡಲಿದ್ದು, ಫಸಲು ಬರಲು ಕನಿಷ್ಠ ಒಂದು ವರ್ಷ ಕಾಯಬೇಕಾಗಿದೆ.
ಕೋವಿಡ್ ಸಮಯದಲ್ಲಿ ರೈತರಿಗೆ ನಷ್ಟ
ಕೋವಿಡ್ ಸಮಯದಲ್ಲಿ ಬಾಳೆಹಣ್ಣಿಗೆ ಸಮರ್ಪಕ ಮಾರುಕಟ್ಟೆಯಿಲ್ಲದೆ ರೈತರು ನಷ್ಟ ಅನಿಭವಿಸಿದ್ದರು. ಸಾಂಕ್ರಾಮಿಕ ಕಾರಣ ಬೆಲೆಗಳಲ್ಲೂ ತೀವ್ರ ಕುಸಿತ ಉಂಟಾಗಿತ್ತು. ಇದರಿಂದ ಎಷ್ಟೋ ರೈತರು ಬಾಳೆ ಬೆಳೆ ನಾಶಪಡಿಸಿದ್ದರು, ಮತ್ತೆ ಹೊಸದಾಗಿ ಬಾಳೆ ನಾಟಿ ಮಾಡಲು ರೈತರು ನಿರಾಸಕ್ತಿ ತೋರಿದ ಪರಿಣಾಮ ಇಂದು ಮಾರುಕಟ್ಟೆಯಲ್ಲಿ ಬಾಳೆಹಣ್ಣು ಪೂರೈಕೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.
ಬೇಸಿಗೆಯ ಬಿಸಿಲಿನ ಪರಿಣಾಮ ಇಳುವರಿಯಲ್ಲಿ ಗಮನಾರ್ಹ ಕುಸಿತವನ್ನು ಉಂಟುಮಾಡಿದ ನಂತರ ಟೊಮೆಟೊ ಬೆಲೆ ದೇಶಾದ್ಯಂತ ಗಗನಕ್ಕೇರಿತ್ತು. ಬೆಂಗಳೂರಿನಲ್ಲಿ ಶತಕ ದಾಟಿದ್ದ ಟೊಮಾಟೊ ಬೆಲೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿತ್ತು. ಈಗ ಬಾಳೆಹಣ್ಣಿನ ಬೆಲೆ ಹೆಚ್ಚಳವಾಗುತ್ತಿದೆ ಸದ್ಯದಲ್ಲೇ ಬೆಲೆ ಕಡಿಮೆಯಾಗುವ ಸಾಧ್ಯತೆ ಕಡಿಮೆ ಎಂದು ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
Recommended Video