Monsoon Rain: ಕೊಡಗು ಜಿಲ್ಲೆಯಲ್ಲಿ ಮಳೆ, ಕೃಷಿ ಚಟುವಟಿಕೆ ಚುರುಕು
ಮಡಿಕೇರಿ, ಜುಲೈ 02: ಕೊಡಗು ಜಿಲ್ಲೆಯಲ್ಲಿ ಪೂರ್ವ ಮುಂಗಾರು, ನೈಋತ್ಯ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ. ಇದರಿಂದಾಗಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಜಿಲ್ಲಾಡಳಿತದ ಮಾಹಿತಿ ಪ್ರಕಾರ ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆ 775 ಮಿ. ಮೀ. ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 260.71 ಮಿ. ಮೀ. ಮಳೆಯಾಗಿತ್ತು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ ಮಾತನಾಡಿ, "ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ. ಈಗಾಗಲೇ ಮುಸುಕಿನ ಜೋಳ ಬಿತ್ತನೆ ಕಾರ್ಯವು 77 ಹೆಕ್ಟೇರ್ ಪ್ರದೇಶದಲ್ಲಿ ಪೂರ್ಣಗೊಂಡಿದೆ. ಹಾಗೆಯೇ ಭತ್ತ ಸಸಿಮಡಿ ಕಾರ್ಯ ಆರಂಭವಾಗಿದೆ" ಎಂದು ಹೇಳಿದ್ದಾರೆ.

"ಮೇ ತಿಂಗಳಲ್ಲಿ 138 ಮಿ. ಮೀ. ವಾಡಿಕೆ ಮಳೆಗೆ 280 ಮಿ. ಮೀ. ಮಳೆಯಾಗಿದ್ದು, ಶೇ 102 ರಷ್ಟು ಮಳೆಯಾಗಿತ್ತು. ಜೂನ್ ತಿಂಗಳಲ್ಲಿ 534 ಮಿ. ಮೀ. ವಾಡಿಕೆ ಮಳೆಗೆ 435 ಮಿ. ಮೀ. ಮಳೆಯಾಗಿದ್ದು, ಶೇ.18ರಷ್ಟು ಮಳೆ ಕಡಿಮೆಯಾಗಿದೆ. ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ" ಎಂದು ಮಾಹಿತಿ ನೀಡಿದ್ದಾರೆ.
ಮೇ ತಿಂಗಳಿನಲ್ಲಿ ಸುರಿದ ಪೂರ್ವ ಮುಂಗಾರು ಮಳೆ, ಜೂನ್ನಲ್ಲಿ ಸುರಿದ ನೈಋತ್ಯ ಮುಂಗಾರು ಮಳೆಯಿಂದಾಗಿ ರೈತರು ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆಯನ್ನು ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಭತ್ತದ ಸಸಿಮಡಿ ಕಾರ್ಯವು ಪ್ರಗತಿಯಲ್ಲಿರುತ್ತದೆ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ನಾಟಿ ಕಾರ್ಯ ಕೈಗೊಳ್ಳಲಾಗುತ್ತದೆ.
ಯಾವ-ಯಾವ ಬೆಳೆಗಳು?; ಕೊಡಗು ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಭತ್ತ, ಮುಸುಕಿನ ಜೋಳವನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಮುಸುಕಿನ ಜೋಳ ಬಿತ್ತನೆ ಕಾರ್ಯವು ಪ್ರಾರಂಭಗೊಂಡಿದ್ದು, ರೈತರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳನ್ನು ಇಲಾಖೆಯ ರೈತ ಸಂಪರ್ಕ ಕೇಂದ್ರಗಳು, ಸಹಕಾರ ಸಂಘಗಳು ಮತ್ತು ಖಾಸಗಿ ಮಾರಾಟಗಾರರಲ್ಲಿ ದಾಸ್ತಾನು ಮಾಡಲಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 2171 ಕ್ವಿಂಟಾಲ್ ಭತ್ತ ಮತ್ತು 41 ಕ್ವಿಂಟಾಲ್ ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವ ಗುರಿ ಹೊಂದಲಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಸ್ತುತ ದಿನಾಂಕದವರೆಗೆ ಒಟ್ಟು 1552 ಕ್ವಿಂಟಾಲ್ ಭತ್ತ ಹಾಗೂ 2.4 ಕ್ವಿಂಟಾಲ್ ಮುಸುಕಿನ ಜೋಳದ ವಿವಿಧ ತಳಿಯ ಬಿತ್ತನೆ ಬೀಜಗಳು ಸರಬರಾಜಾಗಿದೆ. ಒಟ್ಟಾರೆ ಇಲ್ಲಿಯವರೆಗೆ 833.96 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 20 ಕ್ವಿಂಟಾಲ್ ದಾಸ್ತಾನು ಇದ್ದು, ಇದರಲ್ಲಿ ರೈತ ಸಂಪರ್ಕ ಕೇಂದ್ರ ಕಸಬಾ 5 ಕ್ವಿಂಟಾಲ್, ನಾಪೋಕ್ಲು 5, ಭಾಗಮಂಡಲ 5 ಹಾಗೂ ಸಂಪಾಜೆ 5 ಕ್ವಿಂಟಾಲ್ ಇದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಒಟ್ಟು 239.13 ಕ್ವಿಂಟಾಲ್ ದಾಸ್ತಾನು ಇದ್ದು, ಇದರಲ್ಲಿ ರೈತ ಸಂಪರ್ಕ ಕೇಂದ್ರ ಕಸಬಾ 80 ಕ್ವಿಂಟಾಲ್, ಶನಿವಾರಸಂತೆ 62.31, ಹಾಗೂ ಕೊಡ್ಲಿಪೇಟೆ 96.82 ಕ್ವಿಂಟಾಲ್ ಇದೆ.
ಕುಶಾಲನಗರ ತಾಲ್ಲೂಕಿನಲ್ಲಿ ಒಟ್ಟು 159.72 ಕ್ವಿಂಟಾಲ್ ದಾಸ್ತಾನು ಇದ್ದು, ಇದರಲ್ಲಿ ರೈತ ಸಂಪರ್ಕ ಕೇಂದ್ರ ಕಸಬಾದಲ್ಲಿ 137.97 ಕ್ವಿಂಟಾಲ್, ಸುಂಟಿಕೊಪ್ಪ 21.75 ಕ್ವಿಂಟಾಲ್ ಇದೆ. ವೀರಾಜಪೇಟೆ ತಾಲ್ಲೂಕಿನಲ್ಲಿ ಒಟ್ಟು 98 ಕ್ವಿಂಟಾಲ್ ದಾಸ್ತಾನು ಇದ್ದು, ಇದರಲ್ಲಿ ರೈತ ಸಂಪರ್ಕ ಕೇಂದ್ರ ಕಸಬಾ 56.75 ಕ್ವಿಂಟಾಲ್, ಅಮ್ಮತ್ತಿ 41.25 ಕ್ವಿಂಟಾಲ್ಗಳು.
ಪೊನ್ನಂಪೇಟೆ ತಾಲ್ಲೂಕಿನಲ್ಲಿ ಒಟ್ಟು 202.75 ಕ್ವಿಂಟಾಲ್ ದಾಸ್ತಾನು ಇದ್ದು, ಇದರಲ್ಲಿ ರೈತ ಸಂಪರ್ಕ ಕೇಂದ್ರ ಕಸಬಾ 93.75 ಕ್ವಿಂಟಾಲ್, ಹುದಿಕೇರಿ 47.5 ಕ್ವಿಂಟಾಲ್, ಬಾಳೆಲೆ 30.5 ಕ್ವಿಂಟಾಲ್ ಹಾಗೂ ಶ್ರೀಮಂಗಲ 31 ಕ್ವಿಂಟಾಲ್ ದಾಸ್ತಾನು ಇರುತ್ತದೆ.












Click it and Unblock the Notifications