ಮಂಡ್ಯ: ರೈತರ ಪ್ರತಿಭಟನೆಯಲ್ಲಿ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಭಾಗಿ, ಬೆಂಬಲ ಘೋಷಣೆ
ಮಂಡ್ಯ, ನವೆಂಬರ್ 16: ಕರ್ನಾಟಕ ರಾಜ್ಯದಲ್ಲಿನ ಬಹುತೇಕ ಸಕ್ಕರೆ ಕಾರ್ಖಾನೆಗಳು ಮಾಲೀಕತ್ವ ಶಾಸಕರು ಮತ್ತು ಸಚಿವರುಗಳಿಗೆ ಸೇರಿದ್ದರಿಂದಲೇ ರಾಜ್ಯ ಸರ್ಕಾರಕ್ಕೆ 16 ದಿನಗಳಿಂದ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ವಾಗ್ದಾಳಿ ನಡೆಸಿದರು.
''ಪ್ರತಿ ಟನ್ ಕಬ್ಬಿಗೆ 4,500 ರೂ. ಎಫ್ಆರ್ಪಿ (ನ್ಯಾಯಸಮ್ಮ ಮತ್ತು ಪ್ರೋತ್ಸಾಹದಾಯಕ ದರ)ನಿಗದಿ ಪಡಿಸಬೇಕು. ಪ್ರತಿ ಲೀಟರ್ ಹಾಲಿಗೆ 40 ರೂ. ಕನಿಷ್ಠ ಬೆಲೆ ನೀಡಬೇಕೆಂದು ರೈತರು ಆಗ್ರಹಿಸಿ ಜಿಲ್ಲೆಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ಬೆಂಬಲವಿದೆ'' ಎಂದು ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದರು.
ರೈತರೊಂದಿಗೆ ಪ್ರತಿಭಟನೆ ನಡೆಸುವ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಪೃಥ್ವಿರೆಡ್ಡಿ, ತಮ್ಮ ನ್ಯಾಯಸಮ್ಮತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಳೆದ 16 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇಷ್ಟಾದರೂ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ. ಕರ್ನಾಟಕ ರಾಜ್ಯದಲ್ಲಿನ ಬಹುತೇಕ ಸಕ್ಕರೆ ಕಾರ್ಖಾನೆಗಳು ಮಾಲೀಕತ್ವ ಶಾಸಕರು ಮತ್ತು ಸಚಿವರುಗಳಿಗೆ ಸೇರಿರುವುದೇ ಸರ್ಕಾರದ ನಿರ್ಲಕ್ಷ್ಯಕ್ಕೆ ಕಾರಣ ಎಂದು ದೂರಿದರು.

ಪಂಜಾಬ್ನಲ್ಲಿ ಕಬ್ಬಿಗೆ ಎಫ್ಆರ್ಪಿ ದರ 3,800ರೂ.
ಈ 40ಪರ್ಸೆಂಟ್ ರಾಜ್ಯ ಸರ್ಕಾರಕ್ಕೆ ಭ್ರಷ್ಟಾಚಾರ ಮಾಡುವುದು ಒಂದೇ ಗುರಿಯಾಗಿದೆ. ರೈತರ ಹಿತ ಮುಖ್ಯವಾಗಿಲ್ಲ. ರೈತರ ಕಷ್ಟಗಳಿಗೆ ಸ್ಪಂದಿಸದಿರುವುದು ಬೇಸರದ ಸಂಗತಿ. ಪಂಜಾಬ್ನ ಆಮ್ ಆದ್ಮಿ ಪಾರ್ಟಿ ಸರ್ಕಾರವು ಕಬ್ಬಿನ ಎಫ್ಆರ್ಪಿಯನ್ನು 3,800 ರೂ. ಏರಿಕೆ ಮಾಡಿದೆ. ಕರ್ನಾಟಕ ಸರ್ಕಾರ ಕೂಡ ಎಫ್ಆರ್ಪಿ ಪರಿಷ್ಕರಣೆ ಮಾಡಿ ರೈತರಿಗೆ ನೆರವಾಗಬೇಕು. ರಾಜ್ಯದಲ್ಲೂ ರೈತರ ಬಹುದಿನಗಳ ಬೇಡಿಕೆ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.

ಸಕ್ಕರೆ ಕಾರ್ಖಾನೆ ಪರವಿರುವ ಸರ್ಕಾರ ಬದಲಿಬೇಕು
ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಆದರೆ ಸರ್ಕಾರ ಸಕ್ಕರೆ ಕಾರ್ಖಾನೆಗಳ ಪರವಾಗಿದ್ದು, ರೈತಪರ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ರೈತರ ಭಾವನೆಗಳಿಗೆ ಬೆಲೆ ಸಿಗಬೇಕಾದರೆ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸರ್ಕಾರದ ಬದಲು ರೈತರ ಹಿತ ಬಯಸುವಂಥ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಅವರು ಹೇಳಿದರು.

ಮಾಜಿ ಯೋಧರ ಬಗ್ಗೆ ಕಾಳಜಿ ಇದ್ದರೆ ಪರಿಹಾರ ನೀಡಲಿ
ಮಂಡ್ಯ ತಾಲೂಕಿನ ಕಾರೆಮನೆ ಗೇಟ್ ಬಳಿ ರಸ್ತೆಗುಂಡಿ ತಪ್ಪಿಸಲು ಹೋದ ನಿವೃತ್ತ ಯೋಧ ಎಸ್.ಎನ್.ಕುಮಾರ್ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಮೃತ ಯೋಧ ಜಿಲ್ಲೆಯ ಸಾತನೂರು ಗ್ರಾಮದ ಬೀರೇಶ್ವರ ಬಡಾವಣೆಯ ನಿವಾಸಿಯಾಗಿದ್ದಾರೆ. ಅವರ ಮನೆಗೆ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದ ನಾಯಕರ ನಿಯೋಗ ಭೇಟಿ ನೀಡಿತು. ಯೋಧನ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿತು.

ರಸ್ತೆಗುಂಡಿ ಒಂದು ನಗರದ ಸಮಸ್ಯೆ ಅಲ್ಲ
ರಸ್ತೆಗುಂಡಿ, ಹಾಳಾದ ರಸ್ತೆ ಕೇವಲ ಬೆಂಗಳೂರು ನಗರದ್ದೊಂದೆ ಸಮಸ್ಯೆ ಅಲ್ಲ. ಇದು ಇಡೀ ಕರ್ನಾಟಕದ ಸಮಸ್ಯೆ. ಭ್ರಷ್ಟ ಬಿಜೆಪಿ ಸರ್ಕಾರದ ಲೂಟಿಕೋರರ ಜನಪ್ರತಿನಿಧಿಗಳಿಂದ ರಾಜ್ಯಾದ್ಯಂತ ರಸ್ತೆಗಳು ಗುಂಡಿಮಯವಾಗಿವೆ. ಮುಂದಿನ ಚುನಾವಣೆಯಲ್ಲಿ ಪ್ರಾಮಾಣಿಕ ಪಕ್ಷವನ್ನು ಗೆಲ್ಲಿಸುವ ಮೂಲಕ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಯೋಧರ ಬಗ್ಗೆ ಕಾಳಜಿ ಇದ್ದರೆ ಮೃತ ಯೋಧರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಈ ವೇಳೆ ಎಎಪಿ ಮುಖಂಡರಾದ ಸಂಚಿತ್ ಸವ್ಹಾನಿ, ಮೋಹನ್ ದಾಸರಿ, ಜಗದೀಶ್ ವಿ.ಸದಂ, ದರ್ಶನ್ ಜೈನ್, ಅಬ್ದುಲ್ ರಜಾಕ್ ಮಾರ್ಡಾಲ, ಮಂಡ್ಯದ ಸ್ಥಳೀಯ ನಾಯಕರಾದ ಮಹದೇವ ಸ್ವಾಮಿ, ವಕೀಲರಾದ ಬೊಮ್ಮಯ್ಯ ಮತ್ತಿತರ ನಾಯಕರು, ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.












Click it and Unblock the Notifications