ಮಹಿಳೆಯರು, ವೃದ್ಧರೂ ಸಹ ಅಡಿಕೆ ಮರ ಏರಲು ನೆರವಾಗುವ ಟ್ರೀ ಸೈಕಲ್ ಆವಿಷ್ಕರಿಸಿದ ರೈತ
ಮಂಗಳೂರು, ಅಕ್ಟೋಬರ್ 1: ಕರಾವಳಿಯ ಕೃಷಿಕರ ಜೀವನಾಡಿ ಅಡಿಕೆ ಬೆಳೆ. ಗದ್ದೆಗಳೆನ್ನೆಲ್ಲಾ ತೋಟವನ್ನಾಗಿಸಿ, ಗದ್ದೆಗೆ ಅಡಿಕೆ ಗಿಡ ಹಾಕಿ ಲಾಭ ಗಳಿಸುವ ಯೋಚನೆ ಮಾಡಿದ ಕೃಷಿಕ ಈಗ ಕಾರ್ಮಿಕರ ಸಮಸ್ಯೆಯನ್ನು ಅನುಭವಿಸುತ್ತಿದ್ದಾನೆ.
ನುರಿತ ಕಾರ್ಮಿಕರ ಅಭಾವದಿಂದ ಅಡಿಕೆ ಮರವೇರಲು ಜನವಿಲ್ಲದೇ ಅಡಿಕೆ ಬೆಳೆಯನ್ನು ಸರಿಯಾಗಿ ನಿರ್ವಹಣೆ ಮಾಡಲಾಗದೇ ನಷ್ಟವನ್ನು ಅನುಭವಿಸುತ್ತಿದ್ದಾನೆ. ಅಡಿಕೆಬೆಳೆಗಾರರ ಸಂಕಟ ಅರಿತ ಕೃಷಿಕ ನೋರ್ವ ಅಡಿಕೆ ಮರ ಏರಲು ಟ್ರೀ ಸೈಕಲ್ ಅವಿಷ್ಕಾರ ಮಾಡಿದ್ದು, ಕೃಷಿಕರ ಚಿತ್ತ ಸೆಳೆದಿದೆ.
ಅಡಿಕೆ ಬೆಳೆಗೆ ರೋಗ: ಉಚಿತ ಔಷಧಿ, ಸಲಕರಣೆಗೆ ಸರ್ಕಾರದ ಸಬ್ಸಿಡಿ
ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಚಾರ್ವಾಕದ ಯುವ ಕೃಷಿಕ ಬಾಸ್ಕರ್ ಟ್ರೀ ಸೈಕಲ್ ಅವಿಷ್ಕಾರ ಮಾಡಿ ಎಲ್ಲರ ಕಣ್ಣು ಸೆಳೆದಿದ್ದಾರೆ. ಸಣ್ಣ ತೋಟ ಹೊಂದಿರುವ ಭಾಸ್ಕರ್ ತಾನೇ ಸ್ವಾವಲಂಭಿಯಾಗಿ ತೋಟದ ಕೆಲಸದಲ್ಲಿ ತೊಡಗುವಂತಹ ಉಪಕರಣವೊಂದನ್ನು ಆವಿಷ್ಕರಿಸಿದ್ದಾರೆ. ಅಡಿಕೆ ಮರಗಳಿಗೆ ಸಲೀಸಾಗಿ ಹತ್ತಲು ಉಪಕಾರಿಯಾಗುವ ಈ ಉಪಕರಣದಿಂದ ಅಡಿಕೆಗೆ ಔಷದಿ ಸಿಂಪಡಿಸುವ, ಅಡಿಕೆ ಕೊಯ್ಯವ ಕೆಲಸವನ್ನು ಮಾಡಬಹುದಾಗಿದೆ. ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರೂ ಈ ಉಪಕರಣವನ್ನು ಬಳಸಿ ಅಡಿಕೆ ಮರವನ್ನು ಹತ್ತಬಹುದಾಗಿದೆ.
ಕಬ್ಬಿಣದ ರಾಡ್ ಗಳನ್ನು ಬಳಸಿ ಈ ಉಪಕರಣವನ್ನು ನಿರ್ಮಿಸಲಾಗಿದ್ದು, ಅಡಿಕೆ ಮರವನ್ನು ಚೈನ್ ಮೂಲಕ ಲಾಕ್ ಮಾಡಿ, ಕೈ ಹಾಗೂ ಕಾಲಿನ ಸಹಾಯದಿಂದ ಈ ಉಪಕರಣವನ್ನು ಉಪಯೋಗಿಸಬಹುದಾಗಿದೆ.
26 ವರ್ಷಗಳಲ್ಲೇ ಹೊಸ ದಾಖಲೆ: ದಕ್ಷಿಣ ಭಾರತದ ನಾಯಕನಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸ್ಥಾನ!
ಸಣ್ಣ ಕೃಷಿಕರಿಗೆ ಉಪಕಾರಿ ಟ್ರೀ ಸೈಕಲ್
5 ನೇ ತರಗತಿಯವರೆಗೆ ಓದಿರುವ ಬಾಸ್ಕರ್, ಬಳಿಕ ಹಲವಾರು ಕಾರಣಗಳಿಂದಾಗಿ ಓದನ್ನು ಅರ್ಧಕ್ಕೇ ಬಿಟ್ಟು ಕೃಷಿಯತ್ತ ಮುಖ ಮಾಡಿದವರು. ಅಡಿಕೆ ತೋಟವನ್ನು ಹೊಂದಿರುವ ಭಾಸ್ಕರ್ ಗೆ ಕಾರ್ಮಿಕರ ಸಮಸ್ಯೆಯ ಬಗ್ಗೆ ಅರಿವಿತ್ತು. ಸಾಮಾನ್ಯವಾಗಿ ಕಾರ್ಮಿಕರು ದೊಡ್ಡ ತೋಟಗಳಲ್ಲಿ ಹೆಚ್ಚು ಆದಾಯ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಸಣ್ಣ ಕೃಷಿ ತೋಟಗಳತ್ತ ಕೆಲಸಕ್ಕೆ ಬರಲು ನಿರ್ಲಕ್ಷ್ಯ ವಹಿಸೋದರಿಂದ ಸಣ್ಣ ಕೃಷಿಕನ ತೋಟಕ್ಕೆ ಸರಿಯಾದ ಸಮಯದಲ್ಲಿ ಮದ್ದು ಬಿಡದೆ ಅಡಿಕೆ ಬೆಳೆ ನಾಶವಾದ ಉದಾಹರಣೆಗಳೂ ಇವೆ. ಇದರಿಂದಾಗಿ ಸಣ್ಣ ಕೃಷಿಕರಿಗೆ ಉಪಕಾರಿಯಾಗಲಿ ಎನ್ನುವ ಕಾರಣಕ್ಕೆ ಈ ಮರ ಹತ್ತುವ ಟ್ರೀ ಸೈಕಲ್ ಅನ್ನು ಸಿದ್ಧಪಡಿಸಿದ್ದಾರೆ.
ಮೂರು ವರ್ಷಗಳ ಪರಿಶ್ರಮ ಯಶಸ್ಸು
ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಉಪಕರಣವನ್ನು ನಿರ್ಮಿಸಿರುವ ಬಾಸ್ಕರ್ 3 ವರ್ಷದ ಹಿಂದೆ ಈ ಕಾರ್ಯದಲ್ಲಿ ತೊಡಗಿದ್ದಾರೆ. ಮೂರು ವರ್ಷಗಳ ಕಾಲ ಹಲವು ಮಾರ್ಪಾಡು ಮತ್ತು ಲೋಪದೋಷಗಳನ್ನು ಸರಿಪಡಿಸಿ ಈ ಉಪಕರಣವನ್ನು ಎಲ್ಲಾ ರೀತಿಯ ಪ್ರಯೋಗಕ್ಕೆ ಒಳಪಡಿಸಿ ಇದೀಗ ಯಶಸ್ವಿಯಾಗಿದ್ದಾರೆ.
6500 ರೂಪಾಯಿ ಕೃಷಿಕರಿಗೆ ಮಾರಾಟ
ತನ್ನ ತೋಟ ಮಾತ್ರವಲ್ಲದೆ ಇತರ ತೋಟಗಳಲ್ಲೂ ಇದೀಗ ಮದ್ದು ಬಿಡುವ ಮತ್ತು ಅಡಿಕೆ ಕೊಯ್ಯುವ ಕೆಲಸಕ್ಕೆ ಬಾಸ್ಕರ್ ಇದೇ ಉಪಕರಣವನ್ನು ಬಳಸುತ್ತಿದ್ದಾರೆ. ಅಡಿಕೆ ಮರಕ್ಕೆ ಚೈನ್ ಮೂಲಕ ಲಾಕ್ ಮಾಡಿ , ಕೈ ಹಾಗು ಕಾಲಿನ ಮೂಲಕ ಈ ಉಪಕರಣವನ್ನು ಉಪಯೋಗಿಸಿ ಮರವನ್ನು ಸಲೀಸಾಗಿ ಹತ್ತಲಾಗುತ್ತದೆ. ಇದರ ಉಪಯೋಗವನ್ನು ಅರಿತ ಹಲವು ಕೃಷಿಕರಿಗೆ ಭಾಸ್ಕರ್ ಉಪಕರಣವನ್ನು ನೀಡಿದ್ದು, 6500 ರೂಪಾಯಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.ಉಪಕರಣ ಪಡೆಯಲು ಬರುವ ಕೃಷಿಕನಿಗೆ ತನ್ನ ಅಡಿಕೆ ತೋಟದಲ್ಲೇ ತರಬೇತಿ ನೀಡಿದ ಬಳಿಕವೇ ಉಪಕರಣವನ್ನು ಮಾರಾಟ ಮಾಡುತ್ತಾರೆ.
ಸುಲಭ ಮತ್ತು ಸುರಕ್ಷಿತ ಉಪಕರಣ
ಮರವೇರುವ ಈ ಉಪಕರಣವನ್ನು ಇದೀಗ ಹಲವೆಡೆ ಬಳಕೆ ಮಾಡಲಾಗುತ್ತಿದೆ. ಸುಲಭವಾಗಿ ಮರ ಏರಬಹುದಾಗಿರುವ ಮತ್ತು ಸುರಕ್ಷಿತವಾಗಿರುವ ಕಾರಣ ಸಣ್ಣ ಕೃಷಿಕರು ತಾವೇ ಅಡಿಕೆಗೆ ಮದ್ದು ಬಿಡುವ ಮತ್ತು ಕೊಯ್ಯವ ಕೆಲಸ ಮಾಡಬಹುದಾಗಿದೆ. ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿರುವ ಅಡಿಕೆ ಬೆಳೆಗಾರನಿಗೆ ಈ ಉಪಕರಣ ಬಹಳ ಉಪಕಾರಿಯಾಗಲಿದೆ ಎನ್ನುವುದು ಕೃಷಿಕರ ಅಭಿಪ್ರಾಯವೂ ಆಗಿದೆ.