ಒಂಬತ್ತನೇ ಸುತ್ತಿನ ಮಾತುಕತೆಯೂ ವಿಫಲ; ಸರ್ಕಾರದ ಮುಂದಿನ ನಡೆಯೇನು?
ನವದೆಹಲಿ, ಜನವರಿ 15: ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಶುಕ್ರವಾರ ಕೇಂದ್ರ ಹಾಗೂ ರೈತರ ನಡುವೆ ಒಂಬತ್ತನೇ ಸುತ್ತಿನ ಮಾತುಕತೆ ನಡೆದಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಸಭೆ ನಡೆದಿದ್ದು, ರೈತರು ಹಾಗೂ ಸರ್ಕಾರದ ನಡುವೆ ಯಾವುದೇ ಒಮ್ಮತಕ್ಕೆ ಬರದೇ ಸಭೆ ಮುಕ್ತಾಯವಾಗಿದೆ. ಮುಂದಿನ ಸುತ್ತಿನ ಮಾತುಕತೆಯನ್ನು ಜನವರಿ 19ಕ್ಕೆ ನಿಗದಿಪಡಿಸಲಾಗಿದೆ. ಮುಂದೆ ಓದಿ...

ಸಭೆಯಲ್ಲಿ ಯಾವುದೇ ಒಮ್ಮತ ಸಿಗಲಿಲ್ಲ
ಈ ಒಂಬತ್ತನೇ ಮಾತುಕತೆಯಲ್ಲಿಯೂ ಸರ್ಕಾರ ಕೃಷಿ ಕಾಯ್ದೆಗಳ ರದ್ದತಿ ಹೊರತಾಗಿ ತಿದ್ದುಪಡಿ ಆಯ್ಕೆಯನ್ನು ಮುಂದಿಟ್ಟಿದ್ದು, ಈ ಬೇಡಿಕೆಯನ್ನು ರೈತರು ತಿರಸ್ಕರಿಸಿದ್ದಾರೆ. ಕಾಯ್ದೆಗಳನ್ನು ಹಿಂಪಡೆಯಲೇಬೇಕೆಂಬ ತಮ್ಮ ನಿಲುವಿಗೆ ಗಟ್ಟಿಯಾಗಿದ್ದಾರೆ. ಹೀಗಾಗಿ ಯಾವುದೇ ಒಮ್ಮತಕ್ಕೆ ಬಾರದೇ ಸಭೆ ಕೊನೆಗೊಂಡಿತು.

"ರೈತರು ಒಂದು ಹೆಜ್ಜೆಯನ್ನೂ ಮುಂದಿಡುತ್ತಿಲ್ಲ"
"ಕೇಂದ್ರ ಸರ್ಕಾರ ರೈತರ ಹಲವು ಬೇಡಿಕೆಗಳನ್ನು ಒಪ್ಪಿಕೊಂಡಿದೆ. ಆದರೆ ರೈತರು ಹಟ ಬಿಡುತ್ತಿಲ್ಲ. ಈ ಹೋರಾಟ ಕೊನೆಗೊಳಿಸಲು ರೈತರೇ ಮುಂದಾಗುತ್ತಿಲ್ಲ. ತಮ್ಮ ಆ ಎರಡು ಬೇಡಿಕೆಗಳಿಗೆ ಅಂಟಿಕೊಂಡಿದ್ದಾರೆ. ಅವರು ಒಂದು ಹೆಜ್ಜೆಯನ್ನೂ ಮುಂದಿಡುತ್ತಿಲ್ಲ" ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.

ಹೋರಾಟ ಮುಂದುವರೆಸಲು ರೈತರ ನಿರ್ಧಾರ
ಈ ಬಿಕ್ಕಟ್ಟು ಶಮನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಮಿತಿ ರಚನೆ ಮಾಡಿದ್ದು, ಸಮಿತಿಯನ್ನು ರೈತರು ಒಪ್ಪಿಕೊಂಡಿಲ್ಲ. ಸಮಿತಿಯ ಯಾವುದೇ ಸಭೆಯಲ್ಲಿಯೂ ಭಾಗವಹಿಸುವುದಿಲ್ಲ. ಈ ಸಮಿತಿ ಸದಸ್ಯರು ಈ ಕಾಯ್ದೆ ಪರವಾಗಿಯೇ ಇದ್ದಾರೆ ಎಂದು ರೈತ ಸಂಘಟನೆಗಳು ತಿಳಿಸಿವೆ. ರೈತರ ಈ ಹೋರಾಟ ಮುಂದುವರೆಯುತ್ತದೆ ಎಂದು ರೈತ ಸಂಘಟನೆ ಮುಖ್ಯಸ್ಥ ರಾಕೇಶ್ ತಿಕೈಟ್ ತಿಳಿಸಿದ್ದಾರೆ.

ಜ.19ಕ್ಕೆ ಹತ್ತನೇ ಸುತ್ತಿನ ಮಾತುಕತೆ
ಈ ಒಂಬತ್ತನೇ ಸುತ್ತಿನಲ್ಲಿಯೂ ಯಾವುದೇ ಒಮ್ಮತಕ್ಕೆ ಬರದ ಕಾರಣ ಜನವರಿ 19ಕ್ಕೆ ಮಾತುಕತೆಯನ್ನು ಮುಂದೂಡಲಾಗಿದೆ. ಜನವರಿ 19ಕ್ಕೆ ಸುಪ್ರೀಂ ಕೋರ್ಟ್ ಸಮಿತಿಯ ಮೊದಲ ಸಭೆ ನಡೆಯಲಿದ್ದು, ಆ ಸಭೆಯಲ್ಲಿಯೇ ಒಮ್ಮತಕ್ಕೆ ಬರುವ ಭರವಸೆ ವ್ಯಕ್ತವಾಗಿದೆ.
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ದೆಹಲಿ ಗಡಿಗಳಲ್ಲಿ ಸುಮಾರು 40 ರೈತ ಸಂಘಟನೆಯ ರೈತ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವೆರಗೂ ನಡೆದಿರುವ ಸಭೆಗಳಲ್ಲಿಯೂ ರೈತರ ಪ್ರಮುಖ ಬೇಡಿಕೆಗಳಲ್ಲಿ ಒಮ್ಮತಕ್ಕೆ ಬರಲಾಗಿಲ್ಲ.












Click it and Unblock the Notifications