ಕಬ್ಬು ಬೆಳಗಾರರಿಗೆ 1ನೇ ಹಂತದಲ್ಲಿ 21ಕೋಟಿ ರೂ. ಪಾವತಿ ಶೀಘ್ರ: ಬೊಮ್ಮಾಯಿ
ಮಂಡ್ಯ, ಡಿಸೆಂಬರ್ 16: ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆಯಿಂದ 21 ಕೋಟಿ ರೂ. ಕಬ್ಬಿನ ಬಿಲ್ನ ಮೊದಲ ಕಂತನ್ನು ರೈತರಿಗೆ ಪಾವತಿಸಲಾಗುವುದು. ಮಂಡ್ಯ ಭಾಗವನ್ನು ಸಂಪೂರ್ಣ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶುಕ್ರವಾರ ಮಂಡ್ಯ ಜಿಲ್ಲೆಯ ಪಾಂಡವಪುರದ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ನಡೆದ 'ಜನ ಸಂಕಲ್ಪ ಯಾತ್ರೆ' ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಂಡ್ಯ ಜಿಲ್ಲೆಗೆ ಎಥನಾಲ್ ಪ್ಲಾಂಟ್ ಸ್ಥಾಪಿಸಿ, ಈ ಭಾಗದ ರೈತರ ಕಬ್ಬನ್ನು ಅರೆಸುವ ಕಾರ್ಯ ಮಾಡಲಾಗುವುದು ಎಂದರು.
ಜಿಲ್ಲೆಯ ಪಾಂಡವಪುರದ ಶ್ರೀರಾಂಪುರ ಸಕ್ಕರೆ ಕಾರ್ಖಾನೆಯಲ್ಲಿ ಮಂಡ್ಯ ಜಿಲ್ಲೆಯ ಕಬ್ಬನ್ನು ಅರೆಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಕೆಆರ್ ಎಸ್ ಜಲಾಶಯದ ಕ್ರೆಸ್ಟ್ ಗೇಟ್ಗಳು ಹಳೆಯದಾಗಿದ್ದು, ನೀರು ಸೋರುತ್ತಿದೆ. 16 ಗೇಟ್ ಗಳನ್ನು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಬದಲಾಯಿಸಿ ಹೊಸಗೇಟ್ ಅಳವಡಿಸಲಾಗುವುದು ಎಂದು ಹೇಳಿದರು.

454 ಕೋಟಿ ರೂ.ನಿಂದ 180 ಕೆರೆ ತುಂಬಿಸಲಾಗುವುದು
ವಿ.ಸಿ.ನಾಲೆಯ ನಿರ್ಮಾಣವನ್ನು 330 ಕೋಟಿ ರೂ.ಗಳ ವೆಚ್ಚದಲ್ಲಿ ನಮ್ಮ ಸರ್ಕಾರ ಪೂರ್ಣಗೊಳಿಸಿದೆ. ರೈತರ ಹೊಲಕ್ಕೆ ನೀರು ತಲುಪಿಸುವ ಸಂಕಲ್ಪದೊಂದಿಗೆ ವಿ.ಸಿ.ನಾಲೆ ಹೆಬ್ಬಗೋಡಿ ಆಧುನೀಕರಣಕ್ಕೆ 606 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗುವುದು. ಮಂಡ್ಯ ಜಿಲ್ಲೆಯ 180 ಕೆರೆಗಳನ್ನು ತುಂಬಿಸುವ 454 ಕೋಟಿ ರೂ. ಅನುದಾನ ಆದಷ್ಟು ಶೀಘ್ರವೇ ಸರ್ಕಾರ ಬಿಡುಗಡೆ ಮಾಡಲಿದೆ. ರೈತರ ಸಬಲೀಕರಣ, ಔದ್ಯೋಗಿಕರಣ ಬಿಜೆಪಿಯ ಸಂಕಲ್ಪವಾಗಿದೆ ಎಂದರು.

ಕರ್ನಾಟಕದಲ್ಲಿ ಬಿಜೆಪಿಗೆ ಅಧಿಕಾರ ಗದ್ದುಗೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಮ್ಮೆ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂದ ಸದಾಶಯದಿಂದ ಜನಸಂಕಲ್ಪ ಯಾತ್ರೆಯ ನೇತೃತ್ವವನ್ನು ವಹಿಸಿದ್ದಾರೆ. ಬಿಜೆಪಿ ಎಂದಿಗೂ ಸಕಾರಾತ್ಮಕ ರಾಜಕಾರಣ ಮಾಡುತ್ತದೆ. ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎಂಬ ಮಂತ್ರದೊಂದಿಗೆ ರಾಜ್ಯದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಕಲ್ಯಾಣ ಕಾರ್ಯಕ್ರಮಗಳ ಸಾಧನೆಯ ರಿಪೋರ್ಟ್ ಕಾರ್ಡ್ ಅನ್ನು ಮುಂದಿಟ್ಟುಕೊಂಡು ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

10,000 ಕೋಟಿಯಲ್ಲಿ ಬೆಂಗಳೂರು-ಮೈಸೂರು ಹೈವೆ
ಬಿಜೆಪಿಯು ಜಲಜೀವನ ಮಿಷನ್ ಯೋಜನೆಯಲ್ಲಿ ಕರ್ನಾಟಕದಲ್ಲಿ ಒಂದೂವರೆ ವರ್ಷದಲ್ಲಿ 30 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಿದೆ. ಈ ವರ್ಷ 20 ಲಕ್ಷ ಮನೆಗಳಿಗೆ ನಳಸಂಪರ್ಕ ನೀಡಲಾಗುವುದು. 6000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯದಿಂದ 3000 ಕಿ.ಮೀ. ರಾಜ್ಯ ಹೆದ್ದಾರಿಗಳನ್ನು ರಾಜ್ಯದಲ್ಲಿ ನಿರ್ಮಿಸಲಾಗುತ್ತಿದೆ. ಬೆಂಗಳೂರು ಮೈಸೂರು ಎಕ್ಸಪ್ರೆಸ್ ಹೈವೇಯನ್ನು 10 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಬೆಂಗಳೂರು ಮೈಸೂರು ಹೈಸ್ಪೀಡ್ ರೈಲು ಪ್ರಾರಂಭಿಸಲಾಗಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳು ಡಬಲ್ ಇಂಜಿನ ಸರ್ಕಾರದಿಂದ ಸಾಧ್ಯವಾಗಿದೆ. ಈ ಕೆಲಸ ಕಾಂಗ್ರೆಸ್ ನವರ ಕೇಂದ್ರ ಅಥವಾ ರಾಜ್ಯ ಸರ್ಕಾರದ ಅವಧಿಯಲ್ಲಿ ಆಗಲಿಲ್ಲ ಎಂದು ತಿವಿದರು.

20ಲಕ್ಷ ಹೆಣ್ಣುಮಕ್ಕಳು 'ಭಾಗ್ಯ ಲಕ್ಷ್ಮೀ' ಫಲಾನುಭವಿಗಳು
60 ಲಕ್ಷಕ್ಕೂ ಹೆಚ್ಚು ರೈತರ ಕುಟುಂಬಗಳು ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಕೇಂದ್ರದ 6000 ರೂ. ಕ್ಕೆ ರಾಜ್ಯ ಸರ್ಕಾರದ 4000 ರೂ. ಸೇರಿಸಿ, ಒಟ್ಟು 10 ಸಾವಿರ ರೂ. ಪರಿಹಾರ ಒದಗಿಸಲಾಗುತ್ತಿದೆ. ಬಿಎಸ್.ಯಡಿಯೂರಪ್ಪ ಅವರು ರೈತಪರ ಕಾಳಜಿಯುಳ್ಳ ನಾಯಕ. ತಾವು ಅಧಿಕಾರಕ್ಕೆ ಬಂದಾಗ ರೈತರಿಗೆ 10 ಎಚ್ಪಿ ಉಚಿತ ವಿದ್ಯುತ್ ನೀಡಿದ್ದರು. 2ನೇ ಬಾರಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕಿಸಾನ್ ಸಮ್ಮಾನ ನಿಧಿಯಲ್ಲಿ ರಾಜ್ಯದಿಂದ 4000 ರೂ. ಮಂಜೂರು ಮಾಡಿದರು. ಭಾಗ್ಯಲಕ್ಷ್ಮೀ ಯೋಜನೆ, ವಿಧವಾ ಮಾಸಾಶನ, ಸಂಧ್ಯಾ ಸುರಕ್ಷಾ ಯೋಜನೆಯನ್ನು ಜಾರಿ ಮಾಡಿದರು. 20 ಲಕ್ಷ ಹೆಣ್ಣುಮಕ್ಕಳು ಭಾಗ್ಯಲಕ್ಷ್ಮಿ ಯೋಜನೆಯ ಲಾಭ ಪಡೆದಿದ್ದಾರೆ. ಇದರಲ್ಲಿ ಶೇ.25 ರಷ್ಟು ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿದ್ದಾರೆ ಎಂದರು.

46 ಸಾವಿರ ನೇಕಾರರಿಗೆ ಆರ್ಥಿಕ ನೆರವು
ರೈತ ಮಕ್ಕಳಿಗೆ ವಿದ್ಯಾನಿಧಿ , ನೇಕಾರ ಸಮ್ಮಾನ ನಿಧಿಯನ್ನು 5000 ರೂ. ಹೆಚ್ಚಿಸಿ 46 ಸಾವಿರ ನೇಕಾರರಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ವಿವಿಧ ಕಸುಬುದಾರರಿಗೆ ಕಾಯಕ ಯೋಜನೆಯಡಿ 50 ಸಾವಿರ ವರೆಗೆ ಧನಸಹಾಯ ನೀಡಲಾಗುತ್ತಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಿಂದ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ, ಸ್ತ್ರೀ ಸಾಮರ್ಥ್ಯ ಯೋಜನೆಯಿಂದ 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ, ದುಡಿಯುವ ವರ್ಗಕ್ಕೆ ಬೆಂಬಲ ನೀಡಲಾಗುತ್ತಿದೆ ಎಂದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಅಬಕಾರಿ ಸಚಿವರು ಹಾಗೂ ಮಂಡ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ, ಕಂದಾಯ ಸಚಿವ ಆರ್.ಅಶೋಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ಡಾ. ಕೆ.ಸಿ ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.












Click it and Unblock the Notifications