ಅಡಿಕೆಗೆ ಚುಕ್ಕೆ ರೋಗ: ಔಷಧಿಗಾಗಿ ₹10 ಕೋಟಿ ಬಿಡುಗಡೆ- ಸಿಎಂ ಬೊಮ್ಮಾಯಿ
ಉಡುಪಿ, ನವೆಂಬರ್ 08: ಅಡಿಕೆ ಮರಗಳಿಗೆ ಎಲೆ ಚುಕ್ಕೆ ರೋಗ ತಗುಲಿದ್ದು, ಅದನ್ನು ತಡೆಗಟ್ಟಲು ಅಗತ್ಯವಿರುವ ಔಷಧಿಗಾಗಿ ರಾಜ್ಯ ಸರ್ಕಾರದಿಂದ ಕೂಡಲೇ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕುಡಿಯುವ ನೀರು, ಮರವಂತೆ ಮೀನುಗಾರಿಕೆ ಬಂದರು, ಏತ ನೀರಾವರಿ ಯೋಜನೆಗಳ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಹಲವು ದಿನಗಳಿಂದ ಅಡಿಕೆ ಬೆಳೆಗಾರರು ಈ ಎಲೆಚುಕ್ಕೆ ರೋಗದಿಂದಾಗಿ ಸಂಕಷ್ಟಕ್ಕೆ ಈಡಾಗಿದ್ದಾರೆ. ರೋಗ ನಿವಾರಣೆಗೆ ಬೇಕಾದ ಔಷಧಿ ಸಿಂಪಡಣೆಗೆ ಅನುದಾನ ಸರ್ಕಾರ ನೀಡಲಿದೆ ಎಂದರು.
ಕರಾವಳಿ ಭಾಗಲದ್ಲಿ ರೈತರಿಂದ ಕುಚಲಕ್ಕಿಯನ್ನು ಖರೀದಿಸಿ ಪಡಿತರ ಚೀಟಿ ಮೂಲಕ ವಿತರಿಸಲು ಸೂಚಿಸಲಾಗಿದೆ. ಈ ಭಾಗದ ಬೇಕು ಬೇಡಗಳ ಬಗ್ಗೆ ನಮಗೆ ಅರಿವಿದೆ. ಬರುವ ದಿನಗಳಲ್ಲಿ ನಮ್ಮ ಕೆಲಸಗಳ ವರದಿಯನ್ನು ಜನರ ಮುಂದೆ ಇಡಲಾಗುವುದು. ರಾಜ್ಯದ ಅಭಿವೃದ್ಧಿಯನ್ನು ನಿರಂತರವಾಗಿ ಮಾಡುತ್ತಿದ್ದು, ಅದು ನಿಲ್ಲವುದಿಲ್ಲ ಎಂದು ಹೇಳಿದರು.

ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ
ರೈತ ವಿದ್ಯಾನಿಧಿ ಯೋಜನೆಯನ್ನು ಈ ವರ್ಷ ರೈತ ಕೂಲಿಕಾರರ ಮಕ್ಕಳಿಗೂ ವಿಸ್ತರಿಸಲಾಗಿದೆ. ಕರಾವಳಿಯಲ್ಲಿನ 2 ಲಕ್ಷ ಮೀನುಗಾರರ ಮಕ್ಕಳಿಗೆ ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನೀಡಲಿದ್ದೇವೆ. ಮೀನುಗಾರರ ಮಕ್ಕಳು ಓದಿ ಮುಂದೆ ಬಂದರೆ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಬಹುದು. ದುಡಿಯುವ ವರ್ಗ ಸ್ವಾವಲಂಬನೆಯ ಮೂಲಕ ಸ್ವಾಭಿಮಾನದ ಬದುಕು ಸಾಗಿಸಬೇಕು. ಅವರೂ ಮುಖ್ಯವಾಹಿನಿಗೆ ಬರಬೇಕು. ದುಡಿಮೆಯೇ ದೊಡ್ಡಪ್ಪ ಎಂದು ನಮ್ಮ ಸರ್ಕಾರ ನಂಬಿದೆ.

ಎಸ್ಸಿ, ಎಸ್ಟಿಗೆ ವಿಶೇಷ ಅನುದಾನ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಎಸ್ಸಿ ಮತ್ತು ಎಸ್ಸಿ ಅವರಿಗೆ ವಿಶೇಷ ಅನುದಾನ ನೀಡಲಾಗಿದೆ. 28 ಸಾವಿರ ಕೋಟಿ ಅನುದಾನ ಬಜೆಟ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ನೂರು ಡಾ. ಬಿ.ಆರ್ ಅಂಬೇಡ್ಕರ್ ವಿದ್ಯಾರ್ಥಿ ನಿಲಯ, ಕನಸದಾಸರ ಹೆಸರಿನಲ್ಲಿ 50 ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುತ್ತಿದೆ. ಮಂಗಳೂರಿನಲ್ಲಿ 1,000 ವಿದ್ಯಾರ್ಥಿಗಳ ಸಾಮರ್ಥ್ಯವುಳ್ಳ ವಿದ್ಯಾರ್ಥಿ ನಿಲಯ ಹಾಗೂ ಬೆಂಗಳೂರು, ಕಲಬುರಗಿ, ಧಾರವಾಡ, ಮೈಸೂರಿನಲ್ಲಿಯೂ ಸ್ಥಾಪಿಸಲಾಗುತ್ತಿದೆ. ನಾಲ್ಕು ವಸತಿ ಶಾಲೆಗಳನ್ನು ಈ ವರ್ಷ ಮಂಜೂರಾತಿ ಮಾಡಲಾಗಿದ್ದು, ಅಡಿಗಲ್ಲು ಹಾಕಲಾಗಿದೆ ಎಂದು ಅಭಿವೃದ್ಧಿ ಕುರಿತು ತಿಳಿಸಿದರು.

ಐದು ದಶಕದ ಮೀಸಲಾತಿ ಬೇಡಿಕೆ ಈಡೇರಿಕೆ
ಐದು ದಶಕಗಳಿಂದ ಇದ್ದ ಮೀಸಲಾತಿ ಹೆಚ್ಚಳದ ಬೇಡಿಕೆಯನ್ನು ಪರಿಗಣಿಸಿ ಪರಿಶಿಷ್ಟ ಜಾತಿಗೆ ಇದ್ದ ಶೇ. 15 ಮೀಸಲಾತಿಯನ್ನು 17ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3 ರಿಂದ ಶೇ. 7ಕ್ಕೆ ಹೆಚ್ಚಿಸಲಾಗಿದೆ. ಕರ್ನಾಟಕದಾದ್ಯಂತ ಈ ಸಮುದಾಯ ನಮ್ಮನ್ನು ಗುರುತಿಸಿ, ಗೌರವಿಸಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ನೀಡಿದಕ್ಕೆ ಸಂತೋಷ ವ್ಯಕ್ತಪಡಿಸಿದೆ. ಇದರೊಂದಿಗೆ ಎಸ್ಸಿ, ಎಸ್ಟಿಯವರಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಮನೆ ನಿರ್ಮಾಣದ ಮೊತ್ತವನ್ನು 2 ಲಕ್ಷಕ್ಕೆ ಏರಿಸಲಾಗಿದೆ. ಭೂಮಿಯನ್ನು ಕೊಳ್ಳಲು 15 ಲಕ್ಷ ಇದ್ದ ಮೊತ್ತವನ್ನು 20 ಲಕ್ಷಕ್ಕೆ ಏರಿಸಲಾಗಿದೆ ಎಂದು ತಮ್ಮ ಸಾಧನೆ ಬಗ್ಗೆ ಮುಖ್ಯಮಂತ್ರಿಗಳು ವಿವರಿಸಿದರು.

ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ಸರ್ಕಾರ ನಮ್ಮದು
ಬೈಂದೂರಿನಲ್ಲಿ ಅಭಿವೃದ್ಧಿಯ ಶಕೆ ಪ್ರಾರಂಭವಾಗಿದೆ. ಜನಪರ ಸರ್ಕಾರ ಇದ್ದರೆ, ಜನಪರ ನಾಯಕ ಅದರ ಮುಖ್ಯಸ್ಥನಾದರೆ ಜನಸ್ಪಂದನೆ ದೊರೆಯುತ್ತದೆ ಎನ್ನಲು ಬೈಂದೂರಿನ ಅಭಿವೃದ್ಧಿಯ ಕಥೆಯೇ ಸಾಕ್ಷಿ. ಕೇಂದ್ರ ಹಾಗೂ ರಾಜ್ಯದ ಯೋಜನೆಗಳು ಎರಡು ಸಮನಾಗಿ ಜನರಿಗೆ ಮುಟ್ಟಿಸುವ ಕೆಲಸವಾಗಲು ಡಬಲ್ ಇಂಜಿನ್ ಸರ್ಕಾರ ಇದೆ. ಸಂಸದ ಬಿ.ವೈ ರಾಘವೇಂದ್ರ ಹಾಗೂ ಶಾಸಕ ಸುಕುಮಾರ್ ಶೆಟ್ಟಿ ಇಬ್ಬರೂ ಅಭಿವೃದ್ಧಿಯ ವೇಗ ಹೆಚ್ಚಿಸಿದ್ದಾರೆ. ಜನರ ಕಷ್ಟ ಸುಖದಲ್ಲಿ ಪಾಲ್ಗೊಂಡು ಅದಕ್ಕೆ ಪರಿಹಾರವನ್ನು ಕೊಡುವ, ಅಭಿವೃದ್ಧಿಯ ಪರವಾಗಿರುವ ಸರ್ಕಾರ ನಮ್ಮದು. ಮನೆ ಮನೆಗೆ ಬೆಳಕು ಅಡಿ ಬಡವರ ಮನೆಗೆ ವಿದ್ಯತ್ ಸಂಪರ್ಕ ನೀಡಲಾಗಿದೆ. ಉದ್ಯೋಗಕ್ಕೆ ಒತ್ತು ನೀಡಲಾಗಿದೆ. ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದಲ್ಲಿ 9.3 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮುಂದಿನ ದಿನಗಳಲ್ಲಿ ಆಗಲಿದೆ ಎಂದರು.

ಎಲ್ಲ ವರ್ಗದ ಹಿಂದುಳಿದವರಿಗೆ ಶೇ. 10ಮೀಸಲಾತಿ
ಡೀಮ್ಡ್ ಅರಣ್ಯವಾಗಿದ್ದ ಆರು ಲಕ್ಷ ಹೆಕ್ಟೇರ್ ಮೂಲ ಕಂದಾಯ ಭೂಮಿಯನ್ನು ಉಳುಮೆ ಮಾಡುವ ರೈತನಿಗೆ ಹಕ್ಕು ಸಿಗುವ ರೀತಿಯಲ್ಲಿ ತೀರ್ಮಾನ ಮಾಡಲಾಗಿದೆ. 90ಸಿ ಮತ್ತು 90ಸಿಸಿ ಅಡಿ ನಿಗದಿತ ಸಮಯದಲ್ಲಿ ಹಕ್ಕನ್ನು ನೀಡುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿಯಾಗುತ್ತಿದೆ.
ಕಿಸಾನ್ ಸಮ್ಮಾನ್, ಮುದ್ರಾ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಉಜ್ವಲ ಯೋಜನೆ ನೀಡಿದ್ದಾರೆ. ಸಾಮಾಜಿಕ ಬದಲಾವಣೆ ಕೇಂದ್ರದಲ್ಲಿಯೂ ನಡೆಯುತ್ತಿದೆ. ಇಂದು ಎಲ್ಲಾ ವರ್ಗದ ಆರ್ಥಿಕವಾಗಿ ಹಿಂದುಳಿದಿರುವವರಿಗೆ ಶೇ.10 ರಷ್ಟು ಮೀಸಲಾತಿಯನ್ನು ನೀಡಿದ್ದು ಅದನ್ನು ಸವೋಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ಇದರಿಂದ ಶಿಕ್ಷಣ ಮತ್ತು ಉದ್ಯೋದಲ್ಲಿ ಅವಕಾಶಗಳು ದೊರೆಯಲಿವೆ ಎಂದು ತಿಳಿಸಿದರು.
ಈ ವೇಳೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಎಸ್.ಅಂಗಾರ, ಸುನೀಲ್ ಕುಮಾರ್, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಸುಕುಮಾರ್ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್, ರಘುಪತಿ ಭಟ್, ಜಯಪ್ರಕಾಶ್ ಹೆಗ್ಡೆ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications