ಚನ್ನಪಟ್ಟಣ:ಮಳೆರಾಯನ ವಿಶಿಷ್ಟ,ವಿಚಿತ್ರ ಶಾಸ್ತ್ರ

ಮಳೆ ಬರೋದರ ಬಗ್ಗೆ ಹವಾಮಾನ ಇಲಾಖೆ ಹೇಳೋ ವರದಿಗಳೇ ಒಮ್ಮೊಮ್ಮೆ ದೃಢಪಡುವುದಿಲ್ಲ. ಈ ನಡುವೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಹೊಸಳ್ಳಿ ಗ್ರಾಮಸ್ಥರು ಪೂರ್ವಿಕರ ಕಾಲದಿಂದ ನಡೆಸಿಕೊಂಡು ಬಂದಿರೋ ತಟ್ಟೆ, ಚೊಂಬು ಶಾಸ್ತ್ರವೆಂಬ ವಿಶಿಷ್ಟ ಆಚರಣೆಯ ಮೂಲಕ ಮಳೆಯಾವಾಗ ಬರುತ್ತೆ, ಹೋಗುತ್ತೇ ಅನ್ನೋದರ ಬಗ್ಗೆ ಮಳೆರಾಯನ ಜ್ಯೋತಿಷ್ಯವನ್ನು ತಿಳಿಯುತ್ತಾರೆ.
ಆಧುನಿಕತೆ ಎಷ್ಟೇ ಮುಂದುವರೆದಿದ್ದರು ಹಳ್ಳಿಗಾಡು ಪ್ರದೇಶದಲ್ಲಿನ ಸಂಪ್ರದಾಯ ಆಚರಣೆಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಮಳೆರಾಯನ ಜ್ಯೋತಿಷ್ಯವೇ ಸಾಕ್ಷಿಯಾಗಿದೆ. ಮಳೆರಾಯನಿಗೆ ತಮ್ಮ ನೋವಿನ ಕೂಗು ಕೇಳಲಿ ಎಂಬ ಕಾರಣಕ್ಕೆ ರೈತ ಮಕ್ಕಳು ಬಾಯಿಬಡಿದುಕೊಳ್ಳುವ ಮೂಲಕ ವಿಚಿತ್ರ ಆಚರಣೆಯನ್ನ ಕೂಡ ನಡೆಸಿದರು.
ಹಳ್ಳಿಗಳಲ್ಲಿ ಹಿಂದಿನಿಂದು ನಡೆದುಕೊಂಡು ಬಂದಿರುವಂತಹ ವಿಶಿಷ್ಠ ಮತ್ತು ವಿಚಿತ್ರ ಆಚರಣೆಗಳು ಇಂದಿಗೂ ಆಚರಣೆಯಲ್ಲಿವೆ. ವರುಣದೇವ ಯಾವಾಗ ಧರೆಗಿಳಿಯುತ್ತಾನೆ, ಅನ್ನದಾತನ ಬೇಸಾಯಕ್ಕೆ ಸಹಕಾರಿಯಾಗಿ ನಿಲ್ಲುತ್ತಾನೆಂಬುದನ್ನೇ ಇತ್ತೀಚಿಗೆ ಹೇಳುವುದಕ್ಕೆ ಆಗುತ್ತಿಲ್ಲ. ಹವಾಮಾನ ಇಲಾಖೆ ನೀಡುವ ವರದಿಗಳು ಕೆಲವೊಮ್ಮ ಎಡವಟ್ಟುಗಳಾಗುತ್ತಿವೆ.
ಈ ನಡುವೆ ಪೂರ್ವಿಕರು ನಡೆಸುತ್ತಿದ್ದಂತಹ ಮಳೆರಾಯನ ಶಾಸ್ತ್ರವನ್ನ ರಾಮನಗರ ಜಿಲ್ಲೆ ಚನ್ನಪಟ್ಟಣದ ಅಕ್ಕೂರು ಹೊಸಳ್ಳಿಯಲ್ಲಿ ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ಈ ಹಳ್ಳಿಗರ ಮಳೆರಾಯನ ಶಾಸ್ತ್ರವೇಳುವ ವಿಧಾನ ಒಂದು ರೀತಿ ವಿಶಿಷ್ಟ ಮತ್ತು ವಿಚಿತ್ರವಾಗಿದೆ. ಐದು ಚೊಂಬು(ತಂಬಿಗೆ)ಗಳಿಗೆ ನೀರು ತುಂಬಿ ಎಕ್ಕದಎಲೆಯನ್ನ ಮುಚ್ಚಿ ಒಂದೊಂದು ತಂಬಿಗೆಗೂ ಆಯಾ ಕಾಲಕ್ಕೆ ಬರುವ ಮಳೆಗಳ ಹೆಸರಾದ ಮಕೆ, ಉಬ್ಬೆ, ಉತ್ತರೆ, ಹಸ್ತ, ಚಿತ್ತ ಮಳೆಗಳ ಹೆಸರನ್ನಿಡುತ್ತಾರೆ.
ಎಕ್ಕದೆಲೆಯಲ್ಲಿ ಮುಚ್ಚಿನ ನೀರು ತುಂಬಿದ ತಂಬಿಗೆಯನ್ನ ಉಲ್ಟಾ ಮಾಡಿ ಗ್ರಾಮದ ಕೊಳದವರೆಗೂ ನಡೆದುಹೋಗುತ್ತಾರೆ ಈ ಸಂಧರ್ಭದಲ್ಲಿ ಯಾವ ಮಳೆ ಹೆಸರಿನ ತಂಬಿಗೆಯ ನೀರು ಹೊರಬರುವುದೋ ಅಂತಹ ಮಳೆ ನಿಗದಿತ ಸಮಯದಲ್ಲಿ ಮಳೆ ಬಂದು ಬೆಳೆಯಾಗುತ್ತದೆಂಬ ನಂಬಿಕೆ ಇದೆ.
ಒಂದು ವೇಳೆ ನಿಗದಿತ ಸಮಯದಲ್ಲಿ ತಂಬಿಗೆಯಿಂದ ಎಕ್ಕದೆಲೆ ಬಿದ್ದು ನೀರು ಹೊರಬರದಿದ್ದರೆ ಆ ತಂಬಿಗೆಗಿಟ್ಟಿ ಮಳೆ ಹೆಸರಿನ ಮಳೆ ಬರುವುದು ನಿಧಾನವಾಗುತ್ತದೆಂಬ ನಂಬಿಕೆ ಇದೆ. ಕಾಲ ಎಷ್ಟೇ ಮುಂದುವರೆದಿದ್ದರೂ ಹಳ್ಳಿಗಳಲ್ಲಿ ಇಂದಿಗೂ ಹಿಂದಿನಿಂದ ಬಂದಂತಹ ಸಂಪ್ರದಾಯ ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿವೆಎಂಬುದಕ್ಕೆ ಈ ಮಳೆರಾಯನ ತಟ್ಟೆ ತಂಬಿಗೆ ಶಾಸ್ತ್ರವೇ ಸಾಕ್ಷಿಯಾಗಿದೆ.
ಮಳೆರಾಯನಿಗೆ ರೈತರ ಮಕ್ಕಳು ಕೂಗು ಕೇಳಲಿ ಎಂಬ ಕಾರಣಕ್ಕೆ ರೈತರ ಮಕ್ಕಳು ಮೊದಲಿಗೆ ನೇಗಿಲು ನೊಗವನ್ನ ಹೆಗಲ ಮೇಲೆ ಹೊತ್ತು ಗ್ರಾಮದ ತುಂಬೆಲ್ಲ ಮೆರವಣಿಗೆ ನಡೆಸುತ್ತಾರೆ. ನಂತರ ಗ್ರಾಮದ ಮಂದಿಯೆಲ್ಲ ಧವಸ ಧಾನ್ಯಗಳನ್ನ ಒಂದೆಡೆ ಹಾಕು ಊಟವನ್ನ ಮಾಡಿ ಎಲ್ಲರ ಮನೆಯ ಸ್ಪಲ್ಪ ಮುದ್ದೆ ಅನ್ನವನ್ನ ತಟ್ಟೆಗೆ ಹಾಕಿ ಐದಾರು ಮಕ್ಕಳು ಸುತ್ತಲೂ ಕುಳಿತು ಗಬಗಬನೇ ತಿನ್ನುತ್ತಾರೆ, ಮತ್ತು ನೀರಿಲ್ಲದ ಮಡಿಕೆಯನ್ನ ಹೊಡೆದುಹಾಕಿ ಬಾಯಿಬಡಿದುಕೊಂಡು ಮಳೆರಾಯನಿಗೆ ನೋವಿನ ಧನಿ ಕೇಳಲಿ ಎಂಬ ಕಾರಣಕ್ಕೆ ಕಿರುಚುತ್ತಾರೆ.
ಅನಾದಿ ಕಾಲದಿಂದ ಬಂದ ಮಳೆರಾಯನಶಾಸ್ತ್ರ :ಈ ರೀತಿಯಲ್ಲಿ ಮಳೆರಾಯನ ಶಾಸ್ತ್ರ ಮಾಡುವ ಸಂಧರ್ಭದಲ್ಲಿ ಗ್ರಾಮದ ಹಿರಿಯರು, ಮಕ್ಕಳು, ಮಹಿಳೆಯರು ಎಲ್ಲರೂ ಭಾಗವಹಿಸುತ್ತಾರೆ. ಪೂಜೆ ಪುನಸ್ಕಾರಗಳನ್ನ ಸಾಂಪ್ರದಾಯಿಕವಾಗಿ ಮಾಡಿ ನಂತರ ಮಳೆರಾಯನ ಶಾಸ್ತ್ರವನ್ನ ನೆರವೇರಿಸುತ್ತಾರೆ. ಮುಂದಿನ ಪೀಳಿಗೆಗೂ ಪೂರ್ವಿಕರ ಕಾಲದಿಂದ ಬಂದಂತಹ ಮಳೆರಾಯನಶಾಸ್ತ್ರ ಉಳಿದುಕೊಳ್ಳಲಿ ಎಂಬ ಕಾರಣಕ್ಕೆ ಇಂದಿನ ಪೀಳಿಗೆಯ ಯುವಕರು ಕೂಡ ನಡೆಸಿಕೊಂಡು ಬರುತ್ತಿದ್ದಾರೆ. ಮಳೆರಾಯನ ಶಾಸ್ತ್ರದ ಸಂಪ್ರದಾಯದಂತೆ ಪ್ರತಿವರ್ಷವೂ ಮಳೆಯಾಗುತ್ತಿರುವುದರಿಂದ ಈ ಹಳ್ಳಿ ಮಂದಿಯ ನಂಬಿಕೆ ಹೆಚ್ಚಾಗಲು ಕಾರಣವಾಗಿದೆ.
ರಾತ್ರಿಯಿಡೀ ಮಳೆರಾಯ ಶಾಸ್ತ್ರ ಸಂಪ್ರದಾಯಗಳು ಗ್ರಾಮಸ್ಥರೆಲ್ಲರೂ ನೆರವೇರಿಸುತ್ತಾರೆ. ಮಳೆ ಬರದೆ ಕಂಗಾಲಾಗಿರುವ ರೈತರುಗಳ ಪಾಲಿಗೆ ವರುಣದೇವ ಕೃಪೆತೋರಿ ಕರುಣಿಸಲಿ ಎಂಬ ಕಾರಣಕ್ಕೆ ಮಳೆರಾಯನ ವಿಶಿಷ್ಠ ಮತ್ತು ವಿಚಿತ್ರ ಸಂಪ್ರದಾಯವನ್ನ ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.












Click it and Unblock the Notifications