ಅ.2ರಂದು ಬೆಂಗಳೂರಲ್ಲಿ ಜನರಿಕ್ ಔಷಧ ಕೇಂದ್ರ ಆರಂಭ
ನವದೆಹಲಿ, ಸೆಪ್ಟೆಂಬರ್ 19 : ಕರ್ನಾಟಕ ರಾಜ್ಯದಲ್ಲಿ 200 ಜನರಿಕ್ ಔಷಧಿ ಕೇಂದ್ರಗಳಿಗೆ ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ಕೇಂದ್ರ ರಾಸಾಯನ ಮತ್ತು ರಸಗೊಬ್ಬರ ಖಾತೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರು ಹೇಳಿದ್ದಾರೆ.
ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಔಷಧಿಯನ್ನು ಪೂರೈಕೆ ಮಾಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಜನೌಷಧಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಸೋಮವಾರ ಪ್ರಕಟಿಸಿದರು. [ಅನಂತ್ ಕುಮಾರ್ ಅವರ ಕನಸಿನ ಹಸಿರು ಬೆಂಗಳೂರು 1:1]
ನವದೆಹಲಿಯಲ್ಲಿಂದು ತಮ್ಮನ್ನು ಭೇಟಿಯಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ರಮೇಶ್ ಕುಮಾರ್ ಅವರೊಂದಿಗೆ ಈ ಕುರಿತು ಚರ್ಚಿಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 168 ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 32 ಕೇಂದ್ರಗಳನ್ನು ಸ್ಥಾಪಿಸಲಾಗಿದು ಎಂದು ಅನಂತ್ ಕುಮಾರ್ ವಿವರಿಸಿದರು.
ಅಂದೇ ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಈ ಕೇಂದ್ರಗಳ ಮೂಲಕ 580 ಮಾದರಿಯ ಜನರಿಕ್ ಔಷಧಿಗಳನ್ನು ವಿತರಿಸಲಾಗುವುದು. ರಾಜ್ಯ ಸರ್ಕಾರವು ತನ್ನ ವ್ಯಾಪ್ತಿಯಲ್ಲಿ ಈ ಔಷಧಿಯು ಸಾರ್ವಜನಿಕರಿಗೆ ಸುಲಲಿತವಾಗಿ ತಲುಪುವಂತೆ ಕ್ರಮ ಕೈಗೊಳ್ಳಬಹುದಾಗಿದೆ. ಮಳಿಗೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರವು 2.5 ಲಕ್ಷ ರೂ. ಧನ ಸಹಾಯ ನೀಡಲಿದೆ ಎಂದು ಅವರು ತಿಳಿಸಿದರು. ['ನೆಲ್ಲಿಕಾಯಿ' ಮರದಿಂದ ಬದುಕು ಕಟ್ಟಿಕೊಂಡ ಮೈಸೂರು ದಿವಾಕರ್]
ಕರ್ನಾಟಕ ರಾಜ್ಯವು 100 ಎಕರೆ ಜಮೀನು ನೀಡಿದರೆ ಕರ್ನಾಟಕ ರಾಜ್ಯದಲ್ಲಿ ಫಾರ್ಮಾ ಆಫ್ ಪಾರ್ಕ್ ಅನ್ನು ಸ್ಥಾಪಿಸಲಾಗುವುದು. ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಔಷಧೀಯ ಇಲಾಖೆಯ ಕಾರ್ಯದರ್ಶಿ ಜಯಪ್ರಿಯ ಪ್ರಕಾಶ್, ಜಂಟಿಕಾರ್ಯದರ್ಶಿ ಸುಧಾಂಶು ಪಂತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.