ಬಿಜೆಪಿಗೆ ಬೆದರಿ ಸಿದ್ದರಾಮಯ್ಯರಿಂದ ಸಾಲ ಮನ್ನಾ: ಪ್ರತಾಪ್ ಸಿಂಹ
ಮೈಸೂರು, ಜೂನ್ 21: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವು ರಾಜ್ಯದ ಕೃಷಿಕರು ಸಹಕಾರ ಸಂಘಗಳಲ್ಲಿ ಪಡೆದ ಸಾಲ ಮನ್ನಾ ಮಾಡಿರುವುದು ಬಿಜೆಪಿಯ ಹೋರಾಟದ ಫಲ ಎಂಬ ಹೇಳಿಕೆ ನೀಡಿದ್ದಾರೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ.
ರಾಜ್ಯ ಸರಕಾರವು ಬುಧವಾರ ಸಹಕಾರಿ ಬ್ಯಾಂಕ್ ಗಳಲ್ಲಿ ರೈತರು ಮಾಡಿರುವ ಐವತ್ತು ಸಾವಿರದವರೆಗಿನ ಕೃಷಿ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಸರಕಾರದಿಂದ 50,000 ರೂ.ವರೆಗಿನ ರೈತರ ಸಾಲ ಮನ್ನಾ
ಬಿಜೆಪಿಯು ರಾಜ್ಯದಾದ್ಯಂತ ಹೋರಾಟದ ಫಲವಾಗಿಯೇ ಸಿದ್ದರಾಮಯ್ಯ ಒತ್ತಡಕ್ಕೆ ಮಣಿದರು. ಸಹಕಾರ ಬ್ಯಾಂಕ್ ಗಳಲ್ಲಿನ ಐವತ್ತು ಸಾವಿರದವರೆಗಿನ ರೈತರ ಸಾಲ ಮನ್ನಾ ಮಾಡಿದ್ದಾರೆ. ಇದು ಬಿಜೆಪಿಗೆ ಸಿಕ್ಕ ಜಯ ಎಂದು ಹೇಳಿದ್ದಾರೆ ಪ್ರತಾಪ್ ಸಿಂಹ.
ಕೃಷಿ ಸಾಲ ಮನ್ನಾ ಕುರಿತಾಗಿ ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರಕಾರ ಸಾಲ ಮನ್ನಾ ಮಾಡಬೇಕು ಎಂದು ಎಲ್ಲ ಜಿಲ್ಲೆಗಳ ಜನ ಸಂಪರ್ಕ ಸಭೆಗಳಲ್ಲಿ ಬಿಜೆಪಿ ಒತ್ತಡ ಹಾಕಿತ್ತು. ಅಷ್ಟೇ ಅಲ್ಲ, ನಮ್ಮ ನಾಯಕರಾದ ಯಡಿಯೂರಪ್ಪನವರು, ಸರಕಾರದ ಮೂಗು ಹಿಡಿದು ರೈತರ ಸಾಲ ಮನ್ನಾ ಮಾಡಿಸುವುದಾಗಿ ಹೇಳಿದ್ದರು.
ಸಿದ್ದರಾಮಯ್ಯ ಪಟ್ಟು ಹಿಡಿದು ಕೂತಿದ್ದರು
ಒಂದು ಹಂತದವರೆಗೆ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡದೆ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರು ಪಟ್ಟು ಹಿಡಿದು ಕೂತಿದ್ದರು. ಆದರೆ ಬಿಜೆಪಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ರೈತರ ಹೋರಾಟಕ್ಕೆ ವಿಚಲಿತರಾಗಿ ವಿಧಾನಸಭೆ ಅಧಿವೇಶನದ ಕೊನೆ ದಿನ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ಈ ನಿರ್ಧಾರ ಸ್ವಾಗತಾರ್ಹ ಎಂದು ಅವರು ಹೇಳಿದರು.
ಅನೇಕ ರಾಜ್ಯಗಳಾಲ್ಲಿ ಸಾಲ ಮನ್ನಾ ಮಾಡಿದ್ದಾರೆ
ರೈತರ ಸಂಕಷ್ಟ ಅರಿತು ಅನೇಕ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ರಾಜ್ಯ ಸರಕಾರ ಕೂಡ ರೈತರ ನೆರವಿಗೆ ಧಾವಿಸಬೇಕು ಎಂಬ ಕೂಗು ನಿರಂತರವಾಗಿತ್ತು. ಅಂತಿಮವಾಗಿ ಜನತೆಯ ಬೇಡಿಕೆಗೆ ರಾಜ್ಯ ಸರಕಾರ ಮಣಿದಿದೆ ಎಂದರು.
ಸಿದ್ದು ಪಟ್ಟಿಗೆ ಸಿಕ್ಕು ಕರ್ನಾಟಕದಲ್ಲಿ ವಿಲವಿಲ ಎನ್ನಲಿದೆಯಾ ಬಿಜೆಪಿ?
ಮೂರು ವರ್ಷಗಳ ಬರಗಾಲ ಮನಸ್ಸು ಕರಗಿಸಿರಲಿಲ್ಲ
ಸತತ ಮೂರು ವರ್ಷಗಳ ಕಾಲ ರೈತರು ಸಂಕಷ್ಟದಲ್ಲಿದ್ದರೂ ರಾಜ್ಯ ಸರಕಾರದ ಮನಸ್ಸು ಕರಗಿರಲಿಲ್ಲ. ಇದೀಗ ಬಿಜೆಪಿ ರಾಜ್ಯಾದ್ಯಂತ ಮಾಡಿದ ಜಾಗೃತಿಯಿಂದಾಗಿ ಸಾಲ ಮನ್ನಾ ಮಾಡುವ ತೀರ್ಮಾನ ಕೈಗೊಂಡಿದೆ. ಸಹಕಾರ ಸಂಘಗಳಲ್ಲಿದ್ದ ರೈತರ ಒಂದು ಲಕ್ಷ ರುಪಾಯಿವರೆಗಿನ ಸಾಲವನ್ನು ಮನ್ನಾ ಮಾಡಬೇಕು ಎನ್ನುವುದು ನಮ್ಮ ಬೇಡಿಕೆ ಎಂದರು.
ಸಹಕಾರಿ ಬ್ಯಾಂಕ್ ಗಳಲ್ಲಿನ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಲಿ
ಕೃಷಿ ಚಟುವಟಿಕೆಗೆ ವಿಶೇಷ ಒತ್ತು ಸಿಗುವ ದೃಷ್ಟಿಯಿಂದ ಸಹಕಾರ ಸಂಘಗಳಲ್ಲಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದರು.
ಸಾಲಮನ್ನಾಗೆ ನಾಯಕರ ಸ್ವಾಗತ, ಕೇಂದ್ರದ ಮೇಲೆ ಹೆಚ್ಚಿದ ಒತ್ತಡ
ಸಾಲ ಮನ್ನಾಗೆ ವಿಜಯೋತ್ಸವ
ಮೈಸೂರು ನಗರದ ಬಂಡಿಪಾಳ್ಯ ಮಾರುಕಟ್ಟೆಯ ಬಳಿ ಇರುವ ಎಸ್ಬಿಐ ಬ್ಯಾಂಕ್ಗೆ ಬಂದಿದ್ದ ರೈತರು ಈ ವಿಚಾರ ತಿಳಿದು ಜಯಕಾರ ಹಾಕಿ ವಿಜಯೋತ್ಸವ ಆಚರಿಸಿದರು. ರೈತರ ಸಾಲ ಮನ್ನಾ ಮಾಡಿರುವ ಸಿದ್ದರಾಮಯ್ಯ ಸರಕಾರಕ್ಕೆ ಜಯವಾಗಲಿ ಎಂದು ರೈತರು ಜೈಕಾರ ಹಾಕಿದರು.