ಬ್ರಹ್ಮಶ್ರೀ ನಡೆ ನಮಗೆಲ್ಲಾ ಮಾದರಿ : ಸಿದ್ದರಾಮಯ್ಯ
ಮಂಗಳೂರು, ಜನವರಿ, 19 :'ನಾರಾಯಣ ಗುರು ಜಾತಿ ವ್ಯವಸ್ಥೆಯ ಕರಾಳತೆಯನ್ನ ನೋಡಿದವರು. ಜಾತಿ, ವರ್ಣಭೇದವನ್ನ ತೊಡೆದು ಹಾಕಲು ಅಹಿಂಸಾ ಮಾರ್ಗವನ್ನು ಅನುಸರಿಸಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾರ ಮಂಗಳೂರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಹಾಗೂ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಹೊಸ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು,
'ಬ್ರಹ್ಮಶ್ರೀ ನಾರಾಯಣ ಗುರು ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯನ್ನು ತರಲು ಶ್ರಮಿಸಿದವರು. ಇವರ ಸಂದೇಶವನ್ನ ಸಾರುವ ಹೊಣೆಗಾರಿಕೆ ನಮ್ಮ ಮೇಲಿದೆ' ಎಂದರು.
ಇದೇ ವೇಳೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹೊಸದಾಗಿ ಆಯೋಜಿಸಿರುವ ಅಂತಾರಾಷ್ಟ್ರೀಯ ಮಟ್ಟದ ಮಾಡ್ಯುಲರ್ ಪ್ರಯೋಗಾಲಯಗಳನ್ನು ಉದ್ಘಾಟಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ,
' ಪಟ್ಟಭದ್ರ ಹಿತಾಸಕ್ತಿಗಳು ವರ್ಣಭೇದ, ಜಾತಿ ವ್ಯವಸ್ಥೆ ಮೂಲಕ ದೇಶವನ್ನ ಒಡೆಯುವ ಪ್ರಯತ್ನ ಮಾಡಿದರು. ಆ ಸಮಯದಲ್ಲಿ ನಾರಾಯಣ ಗುರು ಸಾಮರಸ್ಯವನ್ನ ಕಾಪಾಡಿ ಮನುಷ್ಯತ್ವವನ್ನ ಎತ್ತಿಹಿಡಿದರು' ಎಂದರು.
ಈ ವೇಳೆ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ರಜತ ಮಹೋತ್ಸವದ ಅಂಗವಾಗಿ ಪ್ರಸಾರಾಂಗದ 19 ವಿಭಿನ್ನ ಪುಸ್ತಕಗಳ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ , 'ಪುಸ್ತಕಗಳಿಗೆ ಸಾವಿಲ್ಲ.
ಪುಸ್ತಕಗಳು ಮಾತನಾಡುತ್ತವೆ. ಸುಖ - ದುಃಖಗಳ ಕುರಿತು ಪುಸ್ತಕಗಳು ಮಾತನಾಡುತ್ತವೆ' ಎಂದ ಅವರು ' ಬಡ್ಡಿ ಪೀಠ' ಗಳನ್ನ ' ಅಸಲಿ ಪೀಠ' ಮಾಡಬೇಕೆಂದು ಅವರು ಸಿಎಂ ಬಳಿ ಆಗ್ರಹಿಸಿದರು.
ಅರಣ್ಯ ಸಚಿವ ಬಿ.ರಮಾನಾಥ ರೈ 2016-17ನೆ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ದಾಖಲೆ ನಿರ್ಮಿಸಿರುವ ಮಂಗಳೂರು ವಿಶ್ವವಿದ್ಯಾ ನಿಲಯದ ಕ್ರೀಡಾಪಟುಗಳನ್ನು ಸನ್ಮಾನಿಸಿದರು.
ಶಾಸಕ ವಿನಯಕುಮಾರ್ ಸೊರಕೆ ಅಧ್ಯಯನ ಪೀಠದ ಬ್ರಹ್ಮಶ್ರೀ ನಾರಾಯಣಗುರು ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿದರು.