ಜರ್ಮನಿಯಲ್ಲಿ ಬಾಗಲಕೋಟೆ ಯುವಕನ ನಾಪತ್ತೆ ಪ್ರಕರಣ: ಮೊದಲ ಸುಳಿವು ಪತ್ತೆ
ಹ್ಯಾಮ್ ಬರ್ಗ್ (ಜರ್ಮನಿ), ಜೂನ್ 22: ಜರ್ಮನಿಯ ಹ್ಯಾಮ್ ಬರ್ಗ್ ಗೆ ತೆರಳಿದ್ದ ಬಾಗಲಕೋಟೆ ಮೂಲದ ಮಂಜುನಾಥ್(28) ಎಂಬುವವರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಚಪ್ಪಲಿ, ಸೈಕಲ್ ಹ್ಯಾಮ್ಸ್ ಬರ್ಗ್ ನದಿಯ ಪಕ್ಕ ಪತ್ತೆಯಾಗಿದೆ. ಜೊತೆಗೆ ಅವರು ತಮ್ಮ ರೂಮಿನಲ್ಲಿ ಕನ್ನಡದಲ್ಲಿ ಪತ್ರವೊಂದನ್ನು ಬರೆದಿಟ್ಟು ರೂಮಿನ ಬಾಗಿಲು ಹಾಕಿಕೊಂಡು, ಮೊಬೈಲ್ ಫೋನ್ ಅನ್ನೂ ರೂಮಿನಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂಬ ಮಾಹಿತಿ ದೊರಕಿದೆ.
ಭಾರತೀಯರನ್ನು ಕರೆತರಲು ಕತಾರ್ ಗೆ ಹೆಚ್ಚುವರಿ ವಿಮಾನ
ಮಂಜುನಾಥ್ ನ ರೂಮ್ ಮೇಟ್ ಗೆ ಈ ಪತ್ರ ದೊರಕಿದ್ದು, ಆತನಿಗೆ ಕನ್ನಡ ಬಾರದ ಕಾರಣ ಪತ್ರದಲ್ಲೇನಿದೆ ಎಂಬುದು ಗೊತ್ತಾಗುತ್ತಿಲ್ಲ. ಶೀಘ್ರವೇ ಪತ್ರವನ್ನು ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.
ಮಂಜುನಾಥ್ ಅವರ ತಂದೆ ಕಳೆದ ನವೆಂಬರ್ ನಲ್ಲಿ ಮೃತರಾಗಿದ್ದು, ಅವರ ಅತ್ಯಂಸಂಸ್ಕಾರಕ್ಕೆಂದು ಬಂದಿದ್ದ ಮಂಜುನಾಥ್ ನಂಗತರ ಹಲವು ಬಾರಿ ಅವರ ತಾಯಿಗೆ ಫೋನ್ ಮಾಡಿ, ತಂದೆಯ ಸಾವಿಗೆ ಸಾಂತ್ವನ ನೀಡುತ್ತಿದ್ದರು.
ಒಂದೂವರೆ ವರ್ಷದ ಹಿಂದೆ ಎಂ.ಎಸ್.ಮಾಡಲೆಂದು ಜರ್ಮನಿಗೆ ತೆರಳಿದ್ದ ಮಂಜುನಾಥ್ ಒಂದು ವಾರದಿಂದ ಅಂದರೆ ಕಳೆದ ಭಾನುವಾರದಿಂದ (ಜೂನ್ 18) ಸಂಪರ್ಕಕ್ಕೆ ಸಿಕ್ಕುತ್ತಿಲ್ಲ ಎಂದು ಬಾಗಲಕೋಟೆಯಲ್ಲಿರುವ ಆತನ ಕುಟುಂಬಸ್ಥರು ಆತಂಕಗೊಂಡಿದ್ದರು.
ಇದೀಗ ಹ್ಯಾಮ್ಸ್ ಬರ್ಗ್ ನದಿಯ ಪಕ್ಕ ಇವರ ಸೈಕಲ್, ಚಪ್ಪಲಿ ಮತ್ತು ರೂಮಿನಲ್ಲಿ ಕನ್ನಡದಲ್ಲಿ ಇವರೇ ಬರೆದ ಪತ್ರವೂ ಪತ್ತೆಯಾಗಿದ್ದು, ಮತ್ತಷ್ಟು ಆತಂಕ ಹುಟ್ಟಿಸಿದೆ.
ಮಗನ ನಿಗೂಢ ಕಣ್ಮರೆಯಿಂದಾಗಿ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.