ಸರಕಾರದ ಹಣದಲ್ಲಿ ತೆಲಂಗಾಣ ಶಾಸಕರಿಗೆ ಕೋಟಿ ವೆಚ್ಚದ ಗೃಹಕಚೇರಿ
ತೆಲಂಗಾಣದ ಎಲ್ಲ ಶಾಸಕರಿಗೆ ಅವರವರ ಕ್ಷೇತ್ರದಲ್ಲಿ ಸರಕಾರದಿಂದ ಒಂದು ಕೋಟಿ ರುಪಾಯಿ ವೆಚ್ಚದಲ್ಲಿ ಗೃಹಕಚೇರಿ ನಿರ್ಮಾಣ ಮಾಡಿಕೊಡಲು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನಿರ್ಧರಿಸಿದ್ದಾರೆ. ಸಾಲದಿಂದ ತತ್ತರಿಸಿದ ರಾಜ್ಯಕ್ಕೆ ಹೊರೆಯಾಗಲಿದೆ
ಹೈದರಾಬಾದ್, ಮಾರ್ಚ್ 1: ನಲವತ್ತು ಕೋಟಿ ವೆಚ್ಚದ ಬಂಗಲೆ ಕಟ್ಟಿಸಿ, ದೇವಸ್ಥಾನಕ್ಕೆ ಐದು ಕೋಟಿ ಮೌಲ್ಯದ ಕಾಣಿಕೆ ಕೊಡುವುದರ ಜತೆಗೆ ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಖಾಲಿಯಾದರು ಅಂತ ಅಂದುಕೊಂಡಿದ್ದೀರಾ? ಇಲ್ಲ, ಕೆಸಿಆರ್ ಗೆ ಈಗ ಹೊಸ ಐಡಿಯಾ ಬಂದಿದೆ. ಅದರ ಪ್ರಕಾರ ತೆಲಂಗಾಣದ ಎಲ್ಲ ಶಾಸಕರಿಗೂ ಒಂದು ಕೋಟಿ ವೆಚ್ಚದಲ್ಲಿ ಗೃಹ-ಕಚೇರಿ ನಿರ್ಮಿಸಿಕೊಡುತ್ತಾರಂತೆ.
ಈ ಯೋಚನೆಯ ಖರ್ಚು 120 ಕೋಟಿ ರುಪಾಯಿ. ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಈ ರೀತಿ ಗೃಹಕಚೇರಿ ನಿರ್ಮಿಸಿಕೊಟ್ಟರೆ ಶಾಸಕರು ಅಲ್ಲೇ ಇದ್ದು, ಜನರೊಂದಿಗೆ ಉತ್ತಮ ಸಂಪರ್ಕ ಸಂವಹನ ಇರಿಸಿಕೊಳ್ಳುತ್ತಾರೆ ಎಂಬುದು ಕೆಸಿಆರ್ ಆಲೋಚನೆಯಂತೆ. ಈ ರೀತಿಯ ಮೊದಲ ಗೃಹ ಕಚೇರಿ ಗುರುವಾರ ಪರ್ಕಲ್ ನಲ್ಲಿ ಉದ್ಘಾಟನೆಯಾಗುತ್ತಿದೆ.[ಹರಕೆ ತೀರಿಸಿದ ಕೆಸಿಆರ್, ತಿಮ್ಮಪ್ಪನಿಗೆ 5.6 ಕೋಟಿ ಮೊತ್ತದ ಚಿನ್ನಾಭರಣ ಸಮರ್ಪಣೆ]
ತೆಲಂಗಾಣ ಸರಕಾರವೇ ಎಲ್ಲ ಶಾಸಕರಿಗೂ ಅವರವರ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಕಟ್ಟಿಸಿಕೊಡುತ್ತದೆ. ವಿಧಾನಸಭಾ ಕ್ಷೇತ್ರಗಳಿಗೆ ಹೋಗಿ ಇರುವುದಕ್ಕೆ ನಮಗೆ ಕಚೇರಿಗಳಿಲ್ಲ ಎಂದು ಹೇಳಿಕೊಂಡಿದ್ದರಂತೆ ಶಾಸಕರು. ಅದಕ್ಕಾಗಿಯೇ ಇಂಥ ನಿರ್ಧಾರ ಕೈಗೊಳ್ಳಲಾಗಿದೆ. ಎರಡಂತಸ್ತಿನ ಗೃಹ ಕಚೇರಿ ಕಟ್ಟಿಸಲಾಗುತ್ತದೆ.
ಅದರಲ್ಲಿ ಅತಿಗಣ್ಯರ ಲಾಂಜ್, ಬೆಂಬಲಿಗರು-ಕಾರ್ಯಕರ್ತರ ಸಭೆ ನಡೆಸಲು ಸಭಾಭವನ, ಸಾರ್ವಜನಿಕರು ಅಹವಾಲು ಸಲ್ಲಿಸಲು ಕೊಠಡಿ, ಶಾಸಕರ ಕಚೇರಿ ಒಳಗೊಂಡಿರುತ್ತದೆ. ಇದು ಕೆಳ ಅಂತಸ್ತಿನ ವಿವರವಾಯಿತು. ಮೇಲಂತಸ್ತಿನಲ್ಲಿ ಮನೆ ಇರುತ್ತದೆ. ಮೂರು ಕೊಠಡಿ, ಹಜಾರ, ಊಟದ ಮನೆ, ಅಡುಗೆ ಮನೆ, ಉಗ್ರಾಣ, ದೇವರ ಕೋಣೆ ಹಾಗೂ ಸ್ನಾನಗೃಹ ಇರುತ್ತದೆ.[38 ಕೋಟಿ ವೆಚ್ಚದ ಗೃಹ ಪ್ರವೇಶ ಮಾಡಿದ ತೆಲಂಗಾಣ ಸಿಎಂ!]
ಅಂದಹಾಗೆ, ತೆಲಂಗಾಣ ರಾಜ್ಯ ಈಗಾಗಲೇ ಸಾಲದ ಹೊರೆಯಿಂದ ತತ್ತರಿಸಿದೆ. ಅಲ್ಲಿನ ರೈತರು ಬರಗಾಲ ಸ್ಥಿತಿಯಿಂದ ಕಂಗೆಟ್ಟಿದ್ದಾರೆ. ಈ ಮಧ್ಯೆ ಕೆಸಿಆರ್ ಇಂಥ ಯೋಜನೆ ಕೈಗೆತ್ತಿಕೊಳ್ಳುತ್ತಿದ್ದಾರೆ.