ಹೈದರಾಬಾದ್ ಅಂಚೆ ಕಚೇರಿಗಳ ಮೇಲೆ ಸಿಬಿಐ ದಾಳಿ
ಏಕಕಾಲಕ್ಕೆ ಹೈದರಾಬಾದ್ ನ ಎಂಟು ಅಂಚೆ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹಿಮಾಯತ್ ನಗರದ ಅಂಚೆ ಕಛೇರಿಯಲ್ಲಿ ನಲವತ್ತು ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಹೈದರಾಬಾದ್, ನವೆಂಬರ್ 25: ಹೈದರಾಬಾದ್ ನ ವಿವಿಧ ಅಂಚೆ ಕಚೇರಿಗಳಿಗೆ ಗುರುವಾರ ಸಿಬಿಐ ಹಾಗೂ ಅಂಚೆ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. 500, 1000 ಹಳೇ ನೋಟುಗಳನ್ನು ರದ್ದು ಮಾಡಿದ ನಂತರ ಅಂಚೆ ಕಚೇರಿಗಳಲ್ಲಿ ನೋಟು ಬದಲಾವಣೆ ವೇಳೆ ನಿಯಮ ಮೀರಿದ ಕೆಲ ವ್ಯವಹಾರಗಳು ನಡೆಯುತ್ತಿವೆ ಎಂದು ಸಿಬಿಐಗೆ ಮಾಹಿತಿ ದೊರೆತಿತ್ತು.
ಏಕಕಾಲಕ್ಕೆ ಹೈದರಾಬಾದ್ ನ ಎಂಟು ಅಂಚೆ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹಿಮಾಯತ್ ನಗರದ ಅಂಚೆ ಕಛೇರಿಯಲ್ಲಿ ನಲವತ್ತು ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದ್ದು, ಅಂಚೆ ಕಚೇರಿ ಸಿಬ್ಬಂದಿಯ ವಿಚಾರಣೆ ನಡೆಸಲಾಗಿದೆ. ನವೆಂಬರ್ 9ರಿಂದ ನಡೆದ ಎಲ್ಲ ವ್ಯವಹಾರಗಳನ್ನು ಪರಿಶೀಲನೆ ನಡೆಸಿದ್ದಾರೆ.[ಡಿ.ಕೆ.ರವಿ ಸಾವು ಆತ್ಮಹತ್ಯೆ: ಅಂತಿಮ ಶರಾ ಬರೆದ ಸಿಬಿಐ]
ಕೆಲವು ಅಂಚೆ ಇಲಾಖೆ ಸಿಬ್ಬಂದಿ 500, 1000 ನೋಟುಗಳನ್ನು ಕಾನೂನುಬಾಹಿರವಾಗಿ ವಿನಿಮಯ ಮಾಡಿಕೊಡುತ್ತಿದ್ದಾರೆ ಎಂದು ಸಿಬಿಐಗೆ ದೂರು ಬಂದಿತ್ತು. ನವೆಂಬರ್ 8ರಂದು ನೋಟು ರದ್ದು ಘೋಷಣೆ ಆದ ನಂತರ ಉಳಿತಾಯ ಖಾತೆಗಳಲ್ಲಿ ಜಮೆಯಾಗಿರುವ ದೊಡ್ಡ ಮೊತ್ತಗಳ ಬಗ್ಗೆ ಕೂಡ ಪರಿಶೀಲನೆಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.