50 ಕೋಟಿ ಪರಿಹಾರ ಕೋರಿ ಅಗ್ನಿಗೆ ನೋಟೀಸ್
ಆರ್ಟ್ ಆಫ್ ಲಿವಿಂಗ್ ಆಶ್ರಮದ ಪರ ವಕಾಲತ್ತು ವಹಿಸಿರುವ ವಕೀಲ ದೊರೈರಾಜು ಅವರು ಶ್ರೀಧರ್ ಅವರಿಗೆ ನೋಟೀಸ್ ಕಳಿಸಿದ್ದಾರೆ. ನೋಟೀಸ್ ಬಂದಿರುವುದನ್ನು 'ಅಗ್ನಿ' ಶ್ರೀಧರ್ ದೃಢಪಡಿಸಿದ್ದು, ತಕ್ಕ ಉತ್ತರ ನೀಡುವುದಾಗಿ ಹೇಳಿದ್ದಾರೆ.
ಕೆಲ ಕಾಲಗಳಿಂದ ಅಗ್ನಿ ಪತ್ರಿಕೆ ಮತ್ತು ಆರ್ಟ್ ಆಫ್ ಲಿವಿಂಗ್ ನಡುವೆ ನಡೆಯುತ್ತಿರುವ ಜಟಾಪಟಿ ಈಗ ನ್ಯಾಯಾಲಯದ ಮೆಟ್ಟಲೇರುವ ಹಂತ ತಲುಪಿದೆ. ಆರ್ಟ್ ಆಫ್ ಲಿವಿಂಗ್ ನ ಸ್ವಾಮೀಜಿ ಶ್ರೀಶ್ರೀ ರವಿಶಂಕರ್ ಗುರೂಜಿ ಭೂಗಳ್ಳತನ ಮಾಡಿದ್ದಾರೆ ಎಂದು ಶ್ರೀಧರ್ ಆರೋಪಿಸಿದ್ದರು. ಶ್ರೀಧರ್ ತಮಗೆ ಫೋನ್ ಮಾಡಿ ಬೆದರಿಕೆ ಒಡ್ಡಿದ್ದರು. ತಮ್ಮಲ್ಲಿ ದಾಖಲೆಗಳಿದ್ದು ಕೇಳಿದಷ್ಟು ಹಣ ನೀಡದಿದ್ದರೆ ಎಲ್ಲ ಬಹಿರಂಗಪಡಿಸುವುದಾಗಿ ಹೆದರಿಸುತ್ತಿದ್ದಾರೆ ಎಂದು ಗುರೂಜಿ ಆರೋಪಿಸಿದ್ದರು.
ನೋಟೀಸಿನಲ್ಲಿ ತಮ್ಮ ವಿರುದ್ಧ ಕಳೆದ ಏಳು ವರ್ಷಗಳಿಂದ ಮಾಡಲಾಗಿರುವ ಎಲ್ಲ ಆರೋಪಗಳಿಗೆ ಆಡಿಯೋ ಅಥವಾ ವಿಡಿಯೋ ಸಾಕ್ಷ್ಯಗಳನ್ನ ಒದಗಿಸಬೇಕು. ಅಥವಾ ಮುಖಪುಟದಲ್ಲಿ ತಪ್ಪು ಒಪ್ಪಿಕೊಂಡು ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ 50 ಕೋಟಿ ರು. ಪರಿಹಾರ ಕೋರಿ ದಾವೆ ಹೂಡುವುದಾಗಿ ಆರ್ಟ್ ಆಫ್ ಲಿವಿಂಗ್ ನೀಡಿರುವ ನೋಟೀಸಿನಲ್ಲಿ ತಿಳಿಸಲಾಗಿದೆ.