ಮುನ್ನೆಚ್ಚರಿಕೆ ಡೋಸ್ V/s ಬೂಸ್ಟರ್ ಡೋಸ್: ವ್ಯತ್ಯಾಸ ತಿಳಿಯಿರಿ
ನವದೆಹಲಿ, ಡಿಸೆಂಬರ್ 27: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಹೊಸ ರೂಪಂತರ ತಳಿ ಓಮಿಕ್ರಾನ್ ಕಾರಣವಾಗುತ್ತದೆ ಎಂಬ ಆತಂಕದ ನಡುವೆ ಮುನ್ನೆಚ್ಚರಿಕೆ ಡೋಸ್ ವಿತರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕಳೆದ ಡಿಸೆಂಬರ್ 25ರ ಕ್ರಿಸ್ ಮಸ್ ಹಬ್ಬದ ದಿನವೇ ಈ ಕುರಿತು ಮಹತ್ವದ ಘೋಷಣೆಯನ್ನು ಹೊರಡಿಸಿದ್ದಾರೆ.
ದೇಶದಲ್ಲಿ ಜನವರಿ 10ರಿಂದ ವೈದ್ಯಕೀಯ ಸಿಬ್ಬಂದಿ, ಮೊದಲ ಶ್ರೇಣಿ ಕಾರ್ಮಿಕರಿಗೆ ಮುನ್ನೆಚ್ಚರಿಕೆ ಡೋಸ್ ಅನ್ನು ನೀಡಲು ಸರ್ಕಾರ ಅನುಮತಿ ನೀಡಿದೆ. ಇದರ ಜೊತೆಗೆ ತೀವ್ರ ಅಸ್ವಸ್ಥತೆಯನ್ನು ಎದುರಿಸುತ್ತಿರುವ 60 ವರ್ಷ ಮೇಲ್ಪಟ್ಟ ವಯೋಮಾನದವರು ವೈದ್ಯರ ಶಿಫಾರಸ್ಸಿನ ಮೇಲೆ ಮುನ್ನೆಚ್ಚರಿಕೆ ಲಸಿಕೆಯನ್ನು ಪಡೆದುಕೊಳ್ಳಬಹುದು. ಓಮಿಕ್ರಾನ್ ಸೋಂಕು ಪುಟ್ಟ ಮಕ್ಕಳಲ್ಲಿ ಹೆಚ್ಚಿನ ಅಪಾಯವನ್ನು ಹುಟ್ಟು ಹಾಕುತ್ತದೆ ಎಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಜನವರಿ 3ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಶಾಲೆಗಳಲ್ಲೇ ಕೊವಿಡ್-19 ಲಸಿಕೆಯನ್ನು ನೀಡಲಾಗುವುದು ಎಂದು ಮೋದಿ ಹೇಳಿದ್ದಾರೆ.
ಭಾರತದ ಹೊರತಾಗಿ ಇಡೀ ಜಗತ್ತಿನಲ್ಲಿ ಹಲವು ರಾಷ್ಟ್ರಗಳು ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ನಾಲ್ಕನೇ ಅಲೆಯನ್ನು ಎದುರಿಸುತ್ತಿವೆ. ಅಂಥ ದೇಶಗಳಲ್ಲಿ ಈಗಾಗಲೇ ಬೂಸ್ಟರ್ ಡೋಸ್ ಅನ್ನು ವಿತರಣೆ ಮಾಡಲಾಗುತ್ತಿದೆ. ಅಂಥ ಬೂಸ್ಟರ್ ಡೋಸ್ ಲಸಿಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಸ ಹೆಸರು ಕೊಟ್ಟಿದ್ದು, ಅದನ್ನು ಮುನ್ನೆಚ್ಚರಿಕೆ ಡೋಸ್ ಎಂದು ಕರೆದಿದ್ದಾರೆ.
ಹಾಗಿದ್ದರೆ ಬೂಸ್ಟರ್ ಡೋಸ್ ಎಂದರೇನು?, ಭಾರತದಲ್ಲಿ ಮುನ್ನೆಚ್ಚರಿಕೆ ಡೋಸ್ ಮತ್ತು ಬೂಸ್ಟರ್ ಡೋಸ್ ನಡುವಿನ ವ್ಯತ್ಯಾಸವೇನು?, ಬೂಸ್ಟರ್ ಡೋಸ್ಗಿಂತ ಮುನ್ನೆಚ್ಚರಿಕೆಯ ಡೋಸ್ ಹೇಗೆ ಭಿನ್ನವಾಗಿರುತ್ತದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ಮುಂದೆ ತಿಳಿಯಿರಿ.

ಕೊವಿಡ್-19 ಮುನ್ನೆಚ್ಚರಿಕೆ ಡೋಸ್
* ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕೆ ಡೋಸ್ ಪಡೆಯಲು ಕೊಮೊರ್ಬಿಡಿಟಿ ಪ್ರಮಾಣಪತ್ರದ ಅಗತ್ಯವಿರುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಎಸ್ ಶರ್ಮಾ ತಿಳಿಸಿದ್ದಾರೆ. ಫಲಾನುಭವಿಗಳಿಗೆ ಬೂಸ್ಟರ್ ಡೋಸ್ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಆರ್ಎಸ್ ಶರ್ಮಾ ಹೇಳಿದ್ದಾರೆ.
*2021ರ ಜನವರಿ 16ರಂದು ಮೊದಲ ಬಾರಿಗೆ ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆಯನ್ನು ಪ್ರಾರಂಭಿಸಲಾಗಿತ್ತು, ಕೇಂದ್ರ ಸರ್ಕಾರವು ಈ ಹಿಂದೆ ಬಳಸಿದ ಕೊಮೊರ್ಬಿಡಿಟಿಯ ಪಟ್ಟಿಯನ್ನು ಮತ್ತೆ ಬಳಸುವ ಸಾಧ್ಯತೆಯಿದೆ.
* ವರದಿಗಳ ಪ್ರಕಾರ, ಎರಡನೇ ಡೋಸ್ ಮತ್ತು ಈ ಮೂರನೇ ಮುನ್ನೆಚ್ಚರಿಕೆಯ ಡೋಸ್ ನಡುವಿನ 9 ರಿಂದ 12 ತಿಂಗಳು ಅಂತರ ಇರಬೇಕು
* ಈ ಮುನ್ನೆಚ್ಚರಿಕೆಯ ಡೋಸ್ಗೆ ಲಸಿಕೆ ಯಾವುದು? ಎಂಬುದನ್ನು ಮುಂದಿನ ದಿನಗಳಲ್ಲಿ ತಜ್ಞರೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಲಾಗುವುದು ಎಂದು ವರದಿಗಳು ತಿಳಿಸಿವೆ. ಮೂರನೇ ಡೋಸ್ ಅಥವಾ ಮುನ್ನೆಚ್ಚರಿಕೆಯ ಡೋಸ್ ಮೊದಲ ಎರಡು ಡೋಸ್ಗಳಿಗಿಂತ ಭಿನ್ನವಾಗಿರಬೇಕು ಎಂಬುದು ಆರೋಗ್ಯ ತಜ್ಞರ ಸಾಮಾನ್ಯ ಅಭಿಪ್ರಾಯವಾಗಿದೆ. ಅಂದರೆ ಮೊದಲ ಎರಡು ಡೋಸ್ ಕೊವಿಶೀಲ್ಡ್ ಪಡೆದುಕೊಂಡ ಫಲಾನುಭವಿಗೆ ಕೊವ್ಯಾಕ್ಸಿನ್ ಅಥವಾ ಬೇರೆ ಕೊವಿಡ್-19 ಲಸಿಕೆಯನ್ನು ನೀಡಬೇಕು. ಆದರೆ ಸರ್ಕಾರ ಇದುವರೆಗೆ ಯಾವುದೇ ಮಿಶ್ರಣ ಮತ್ತು ಹೊಂದಾಣಿಕೆ ನೀತಿಯನ್ನು ಪ್ರಕಟಿಸಿಲ್ಲ.
* ಸರ್ಕಾರವು ಮೂರನೇ ಡೋಸ್ಗೆ ಮಿಶ್ರಣ ಮತ್ತು ಹೊಂದಾಣಿಕೆ ನೀತಿಯನ್ನು ಅಳವಡಿಸಿಕೊಂಡರೆ, ಹೆಚ್ಚಿನ ಜನರು ಮೊದಲ ಎರಡು ಡೋಸ್ಗಳಲ್ಲಿ ಕೋವಿಶೀಲ್ಡ್ ಅನ್ನು ತೆಗೆದುಕೊಂಡಿದ್ದಾರೆ. ಇದರಿಂದ ಕೊವಾಕ್ಸಿನ್ ಲಸಿಕೆಯ ಲಭ್ಯತೆ ಬಗ್ಗೆ ಸರ್ಕಾರ ಖಚಿತಪಡಿಸಿಕೊಳ್ಳಬೇಕಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.

ಮುನ್ನೆಚ್ಚರಿಕೆ, ಬೂಸ್ಟರ್, 3ನೇ ಡೋಸ್; ಯಾವುದು ಸರಿ?
ಸಾಮಾನ್ಯವಾಗಿ ಕೊರೊನಾವೈರಸ್ ಲಸಿಕೆಯ ಎರಡನೇ ಡೋಸ್ ಪಡೆದ 7 ರಿಂದ 8 ತಿಂಗಳುಗಳಲ್ಲಿ ಅದರ ಸಾಮರ್ಥ್ಯ ತಗ್ಗುತ್ತದೆ. ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವುದೇ ಮೂರನೇ ಡೋಸ್ ಪ್ರಮುಖ ಉದ್ದೇಶವಾಗಿರುತ್ತದೆ. ಕೆಲವು ವಿಜ್ಞಾನಿಗಳ ಪ್ರಕಾರ, ಹೊಸತಾಗಿ ಪಡೆದುಕೊಳ್ಳುವ ಮುನ್ನೆಚ್ಚರಿಕೆ ಲಸಿಕೆಯು ಕೊವಿಡ್-19 ಹೊಸ ರೂಪಾಂತರಗಳಿಂದ ರಕ್ಷಣೆ ನೀಡುತ್ತದೆ. ಆದರೆ ಇದೇ ಬೂಸ್ಟರ್ ಡೋಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಅಷ್ಟೊಂದು ಒಲವು ಹೊಂದಿಲ್ಲ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಇನ್ನೂ ಲಸಿಕೆ ವಿತರಣೆ ಅಭಿಯಾನವು ಸಮರ್ಪಕವಾಗಿ ನಡೆಯುತ್ತಿಲ್ಲ. ಅನೇಕ ದೇಶಗಳಲ್ಲಿ ಶೇ.40ರಷ್ಟು ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿಲ್ಲ. ಎರಡು ಡೋಸ್ ಲಸಿಕೆ ವಿತರಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ವಾದವಾಗಿದೆ.

ಭಾರತದಲ್ಲಿ 141.70 ಕೋಟಿ ಡೋಸ್ ಲಸಿಕೆ ವಿತರಣೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ ದೇಶದ 94 ಕೋಟಿ ಅರ್ಹ ಫಲಾನುಭವಿಗಳಿಗೆ ಡಿಸೆಂಬರ್ 31ರೊಳಗೆ ಲಸಿಕೆ ವಿತರಿಸುವ ಉದ್ದೇಶವನ್ನು ಹೊಂದಲಾಗಿತ್ತು. ಅದರ ಭಾಗವಾಗಿ ಒಟ್ಟು 1,48,37,98,635 ಡೋಸ್ ಲಸಿಕೆಯನ್ನು ಸರಬರಾಜು ಮಾಡಲಾಗಿತ್ತು. ಈ ಪೈಕಿ ಡಿಸೆಂಬರ್ 26ರ ಸಂಜೆ 7 ಗಂಟೆ ಹೊತ್ತಿಗೆ ಒಟ್ಟು 1,41,70,25,654 ಡೋಸ್ ಕೊವಿಡ್-19 ಲಸಿಕೆ ವಿತರಿಸಲಾಗಿದೆ. 17,90,54,941 ಡೋಸ್ ಲಸಿಕೆಯು ಬಾಕಿ ಉಳಿದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಆತಂಕ ಸೃಷ್ಟಿಸಿರುವ ಓಮಿಕ್ರಾನ್ ರೂಪಾಂತರಿ
ಭಾರತದಲ್ಲಿ ಕೊರೊನಾವೈರಸ್ ಬೂಸ್ಟರ್ ಲಸಿಕೆ ಬಗ್ಗೆ ಪ್ರಸ್ತಾಪಿಸುವುದಕ್ಕೆ ಮುಖ್ಯವಾಗಿ ಓಮಿಕ್ರಾನ್ ರೂಪಾಂತರಿ ಕಾರಣವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್ ಹೊತ್ತಿಗೆ ಕಾಣಿಸಿಕೊಂಡ ರೂಪಾಂತರಿ ವೈರಸ್ ಭಾರತಕ್ಕೆ ಲಗ್ಗೆಯಿಟ್ಟು ಕೆಲವು ದಿನಗಳಲ್ಲೇ ಏರಿಕೆಯಾಗುತ್ತಿರುವುದು ಆತಂಕ ಸೃಷ್ಟಿಸುತ್ತಿದೆ. ದೇಶದಲ್ಲಿ ಈಗಾಗಲೇ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ 422ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳುಗಳು ವರದಿಯಾಗಿದ್ದು, ಈವರೆಗೆ 108 ಮಂದಿಗೆ ಓಮಿಕ್ರಾನ್ ಅಂಟಿರುವುದು ದೃಢಪಟ್ಟಿದೆ. ದೆಹಲಿಯಲ್ಲಿ 79 ಓಮಿಕ್ರಾನ್ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 23 ಜನ ಚೇತರಿಸಿಕೊಂಡಿದ್ದಾರೆ. ಗುಜರಾತ್ನಲ್ಲಿ 43 ಪ್ರಕರಣ ಪತ್ತೆಯಾಗಿದ್ದು, 10 ಸೋಂಕಿತರು ಚೇತರಿಸಿಕೊಂಡಿದ್ದಾರೆ.
ತೆಲಂಗಾಣದಲ್ಲಿ ಹೊಸ ರೂಪಾಂತರದ 41 ಪ್ರಕರಣಗಳು ದಾಖಲಾಗಿದ್ದು, 10 ಮಂದಿ ಚೇತರಿಸಿಕೊಂಡಿದ್ದಾರೆ. ಕೇರಳ ಮತ್ತು ತಮಿಳುನಾಡಿನಲ್ಲಿ ಕ್ರಮವಾಗಿ 38 ಪ್ರಕರಣಗಳು ದಾಖಲಾಗಿದ್ದು ಒಬ್ಬ ಓಮಿಕ್ರಾನ್ ಸೋಂಕಿತ ಗುಣಮುಖನಾಗಿದ್ದಾನೆ. ಕರ್ನಾಟಕದಲ್ಲಿ 31 ಪ್ರಕರಣಗಳು ದಾಖಲಾಗಿದ್ದು 15 ಜನರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications