ಸಿದ್ದಾಪುರ; ಹೆಗ್ಗರಣಿಯಲ್ಲಿರುವ ಉಂಚಳ್ಳಿ ಜಲಪಾತದ ಸೊಬಗು; ತಲುಪುವ ಮಾರ್ಗ
ಕಾರವಾರ, ಅಕ್ಟೋಬರ್, 07: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗರಣಿ ವ್ಯಾಪ್ತಿಯಲ್ಲಿ ಕಂಡುಬರುವ ಉಂಚಳ್ಳಿ ಜಲಪಾತದ ಸೊಬಗನ್ನು ನೋಡಲು ಪ್ರವಾಸಿಗರು ನಿತ್ಯ ಕಕ್ಕಿರಿದು ಬರುತ್ತಾರೆ. ಹಚ್ಚ ಹಸಿರಿನ ಅರಣ್ಯದ ನಡುವೆ ಬಿಳಿ ಹಾಲ್ನೊರೆಯಂತೆ ದುಮ್ಮಿಕ್ಕುವ ಈ ಜಲಪಾತ ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತದೆ. ಮಳೆಗಾಲದಲ್ಲಿ ಇದರ ಸೌಂದರ್ಯ ಇನ್ನು ಹೆಚ್ಚಾಗಿರುತ್ತದೆ. ಅಲ್ಲದೆ ನೂರಾರು ಮೀಟರ್ ದೂರಕ್ಕೆ ದುಮ್ಮಿಕ್ಕುವ ಈ ಜಲಧಾರೆಯ ಸದ್ದು ನೋಡುಗರರನ್ನು ತನ್ನತ್ತ ಸೆಳೆದೇ ಬಿಡುತ್ತದೆ.
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ಗರಣಿ ವ್ಯಾಪ್ತಿಯಲ್ಲಿ ಈ ಜಲಪಾತ ಕಂಡುಬರುತ್ತದೆ. ಇಲ್ಲಿ ನೀರಿನ ಬೋರ್ಗರೆತದ ಸದ್ದು ಕಿವಿಗೆ ಇಂಪು ನೀಡುತ್ತದೆ. ಇದನ್ನು ಕೆಪ್ಪ ಜೋಗ ಎಂತಲೂ ಕರೆಯಲಾಗುತ್ತದೆ. 1875ರಲ್ಲಿ ಬ್ರಿಟಿಷ್ ಅಧಿಕಾರಿ ಜೆ.ಡಿ. ಲೂಶಿಂಗ್ಟನ್ ಅವರು ಜಲಪಾತವನ್ನು ಗುರುತಿಸಿದ್ದರು ಎನ್ನಲಾಗಿದೆ. ಆದ್ದರಿಂದ ಇದನ್ನು ಲೂಶಿಂಗ್ಟನ್ ಜಲಪಾತ ಎಂತಲೂ ಕರೆಯುತ್ತಾರೆ.
ಉತ್ತರ ಕನ್ನಡ; ಕೋವಿಡ್ ಬಳಿಕ ಚೇತರಿಕೆ ಹಾದಿಯಲ್ಲಿ ಪ್ರವಾಸೋದ್ಯಮ; ಪ್ರವಾಸಿಗರ ಒಲವು ಬೀಚ್ಗಳತ್ತ
ಅಘನಾಶಿನಿ ನದಿಗೆ ಹೊಂದಿಕೊಂಡಿರುವ ಈ ಜಲಪಾತಕ್ಕೆ ನೀರು ಮಲೆನಾಡಿನ ನದಿ ಮೂಲಗಳಿಂದ ಹರಿದುಬರುತ್ತದೆ. ಕೊನೆಗೆ ಇದು ಕರಾವಳಿಯ ಕುಮಟಾದಲ್ಲಿ ಕಡಲಿನ ಮಡಿಲು ಸೇರುತ್ತದೆ. ಮಳೆಗಾಲದಲ್ಲಿ ಕೆಸರು ನೀರಿನಿಂದ ದುಮ್ಮಿಕ್ಕುವಾಗ ಅದರ ಸೌಂದರ್ಯ ವರ್ಣಿಸುವುದಕ್ಕೂ ಅಸಾಧ್ಯವಾಗಿರುತ್ತದೆ. ಬೆಳಗಿನ ಸಮಯದಲ್ಲಿ ಜಲಧಾರೆಯ ಬಳಿ ಇಬ್ಬನಿ ಮುಸಿಕಿದ ವಾತವರಣ ಇದ್ದು, ಜಲಪಾತದ ಸಂಪೂರ್ಣ ದೃಶ್ಯ ಗೋಚರವಾಗುವುದಿಲ್ಲ. ಆದರೂ ಕಾದು ನೋಡುವವರಿಗೆ ಜಲಾಪಾತದ ಸ್ವರ್ಗ ದರ್ಶನ ಗೋಚರವಾಗುತ್ತದೆ. ಮಳೆಗಾಲ ಮುಗಿದು ಕೆಲ ತಿಂಗಳುಗಳವರೆಗೂ ಜಲಪಾತ ವೀಕ್ಷಣೆಗೆ ಯೋಗ್ಯವಾದ ಸಮಯವಾಗಿದೆ.
ಕಾಲ್ನಡಿಗೆಯಲ್ಲಿ ಸಾಗುವುದು ಅನಿವಾರ್ಯ
ಇನ್ನು ಜಲಪಾತ ವೀಕ್ಷಣೆಗೆ ತೆರಳುವವರು ಒಂದು ಕಿಲೋ ಮೀಟರ್ಗೂ ಹೆಚ್ಚು ಕಾಲ್ನಡಿಗೆಯಲ್ಲಿ ಸಾಗಬೇಕಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗಿದ್ದು, ಜಲಪಾತ ವೀಕ್ಷಣೆಗೆ ಎರಡು ವೀಕ್ಷಣಾ ಗೋಪುರ ಕೂಡ ಇವೆ. ಈ ಗೋಪುರದ ಮೇಲೆ ಹತ್ತಿದರೆ ಸಾಕು ಎರಡು ಕಡೆಯಿಂದಲೂ ಜಲಪಾತದ ಸೌಂದರ್ಯ ಸ್ಪಷ್ಟವಾಗಿ ಗೋಚರವಾಗುತ್ತದೆ. ಅಲ್ಲದೆ ಕುಳಿತುಕೊಳ್ಳುವುದಕ್ಕೆ ಆಸನದ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಜಲಪಾತದ ಸಮೀಪದಲ್ಲಿಯೇ ಅಂಗಡಿ ಇದೆ ಆದರೂ, ಆ ಅಂಗಡಿ ಎಲ್ಲ ದಿನವೂ ತೆರೆಯುವುದಿಲ್ಲ.
ಗುಡ್ಡ ಕೊರೆದು ರಸ್ತೆ ಕಾಮಗಾರಿ: ಕಾರವಾರದ ನಿವಾಸಿಗಳಲ್ಲಿ ಆತಂಕ
ಅಧಿಕಾರಿಗಳ ವಿರುದ್ಧ ಪ್ರವಾಸಿಗರ ಅಸಮಾಧಾನ
ಜಲಪಾತದ ವೀಕ್ಷಣೆ ತೆರಳುವ ಮುನ್ನ ಸ್ಥಳೀಯ ಉಂಚಳ್ಳಿ ಗ್ರಾಮ ಅರಣ್ಯ ಸಮಿತಿ ವಾಹನ ಶುಲ್ಕವನ್ನು ಪಡೆಯುತ್ತಿದ್ದು, ಇದನ್ನು ಜಲಪಾತದ ನಿರ್ವಹಣೆಗಾಗಿ ನಿರ್ಮಾಣ ಮಾಡಲಾಗಿದೆ. ಆದರೆ ಇದುವರೆಗೂ ಸಮರ್ಪಕ ನಿರ್ವಹಣೆ ಆಗಿಲ್ಲ ಎಂದು ಅಲ್ಲಿ ಪ್ರವಾಸಿಗರ ಅಭಿಪ್ರಾಯವಾಗಿದೆ. ಜಲಪಾತಕ್ಕೆ ತೆರಳುವ ದಾರಿ ಉದ್ದಕ್ಕೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನ ಎಸೆಯಲಾಗುತ್ತಿದ್ದು, ಇದು ಜಲಪಾತ ವೀಕ್ಷಣೆಗೆ ಬಂದವರಿಗೆ ಅಸಹ್ಯ ಹುಟ್ಟಿಸುತ್ತಿದೆ. ಆದ್ದರಿಂದ ಇದನ್ನು ನಿರ್ವಹಣೆ ಮಾಡುವವರು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನವುದು ಪ್ರವಾಸಿಗರ ಆಗ್ರಹವಾಗಿದೆ.
ಡಾಂಬರ್ ರಸ್ತೆ ಬಿಟ್ಟರೆ ಬೇರೆ ಮಾರ್ಗ ಇಲ್ಲ
ಶಿರಸಿಯಿಂದ ಹೆಗ್ಗರಣಿ ಮಾರ್ಗವಾಗಿ ತೆರಳಿದರೆ 35 ಕಿಲೋ ಮಿಟರ್ ದೂರದಲ್ಲಿ ಉಂಚಳ್ಳಿ ಜಲಪಾತ ಸಿಗುತ್ತದೆ. ಸಿದ್ದಾಪುರದಿಂದ ಗೊಳಿಮಕ್ಕಿಗೆ ಬಂದರೆ ಅಲ್ಲಿಂದ 10 ಕಿಲೋ ಮೀಟರ್ ದೂರದಲ್ಲಿ ಜಲಪಾತ ಸಿಗುತ್ತದೆ. ಜಲಪಾತ ವೀಕ್ಷಣೆಗೆ ತೆರಳುವವರು ಡಾಂಬರ್ ರಸ್ತೆ ಮೂಲಕವೇ ಬರಬಹುದಾಗಿದೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಮಾರ್ಗಗಳಿಲ್ಲ. ಶಿರಸಿಯಿಂದ ಉಂಚಳ್ಳಿಯವರೆಗೆ ದಿನಕ್ಕೆ ಎರಡು ಬಸ್ಗಳ ವ್ಯವಸ್ಥೆ ಮಾತ್ರ ಇದೆ. ಬಸ್ ನಿಲ್ದಾಣದಿಂದ ಜಲಪಾತಕ್ಕೆ 3 ಕಿಲೋ ಮೀಟರ್ ದೂರ ಆಗುತ್ತದೆ.
ಮಳಿಗೆಗನ್ನು ಸ್ಥಪಿಸುವಂತೆ ಜನರ ಪಟ್ಟು
ಜಲಪಾತದ ಬಳಿ ಮಾರಾಟ ಮಳಿಗೆ ಹಾಗೂ ಯಾತ್ರಿ ನಿವಾಸ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಬೇಡಿಕೆ ಆಗಿದೆ. ಅರಣ್ಯ ಇಲಾಖೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಯಾತ್ರಿ ನಿವಾಸ ನಿರ್ಮಾಣದ ಪ್ರಸ್ತಾವನೆಯನ್ನು ಮಾಡುತ್ತಲೇ ಇದೆ. ಆದರೆ ಯಾತ್ರಿ ನಿವಾಸ ನಿರ್ಮಿಸುವ ಮುಹೂರ್ತ ಕೂಡ ಇನ್ನು ನಿಗದಿ ಮಾಡಿಲ್ಲ. ತ್ವರಿತವಾಗಿ ಯಾತ್ರಿ ನಿವಾಸ ನಿಮಾರ್ಮಾಣ ಆಗಬೇಕು. ಸ್ಥಳೀಯರು ತಾವು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಮಳಿಗೆಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗುವುದಲ್ಲದೆ ಪ್ರವಾಸಿಗರಿಗೂ ಅನುಕೂಲವಾಗಲಿದೆ.