ಬೇಡಿದ್ದನ್ನು ಈಡೇರೀಸುವ ಮೈಸೂರಿನ ಈ ಕ್ಷೇತ್ರ ಯಾವುದು ಗೊತ್ತಾ?
ಮೈಸೂರು, ಜನವರಿ 06: ರಾಜ್ಯ ಸರ್ಕಾರ ಶಕ್ತಿಯೋಜನೆಯನ್ನು ಜಾರಿಗೆ ತಂದ ಬಳಿಕ ದೇಗುಲಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಬಹುತೇಕರು ತಮ್ಮ ಕುಟುಂಬ ಮತ್ತು ಮಹಿಳಾ ಸಂಘಗಳ ಮೂಲಕ ಈಗಾಗಲೇ ಪ್ರಸಿದ್ಧ ದೇಗುಲಗಳನ್ನೆಲ್ಲ ಸುತ್ತಿ ಬಂದಿದ್ದು, ಈಗಲೂ ದೇಗುಲಗಳಿಗೆ ತೆರಳುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ನೀವೇನಾದರೂ ಸಂಕಷ್ಟದಲ್ಲಿದ್ದು ತಮ್ಮ ನೋವುಗಳನ್ನು ದೇವರ ಮುಂದೆ ನಿವೇದಿಸಿ ಹಗುರವಾಗಬೇಕೆಂದು ಬಯಸಿದ್ದರೆ ಕಪ್ಪಡಿ ಕ್ಷೇತ್ರಕ್ಕೆ ಭೇಟಿ ನೀಡಬಹುದು.
ಯಾವುದೀ ಕಪ್ಪಡಿ ಕ್ಷೇತ್ರ? ಇಲ್ಲಿ ಅಂತಹ ವಿಶೇಷತೆ ಏನಿದೆ? ಎಂಬ ಪ್ರಶ್ನೆಗಳು ಮೂಡುವುದು ಸಹಜ. ಈ ಕ್ಷೇತ್ರದ ಬಗ್ಗೆ ಹೆಚ್ಚಿನವರಿಗೆ ಗೊತ್ತಿರುತ್ತದೆ. ಒಂದು ವೇಳೆ ತಾವು ಕೂಡ ಈ ಕ್ಷೇತ್ರಕ್ಕೆ ಹೋಗಬೇಕೆಂದು ಬಯಸುತ್ತಿದ್ದರೆ ಅಂತಹವವರು ಈ ಕ್ಷೇತ್ರಕ್ಕೆ ಹೋಗುವುದು ಹೇಗೆಂದು ಯೋಚಿಸುತ್ತಿದ್ದರೆ ಒಂದಿಷ್ಟು ಮಾಹಿತಿ ಇಲ್ಲಿದೆ. ಕಪ್ಪಡಿ ಕ್ಷೇತ್ರವು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹೆಬ್ಬಾಳಿನಿಂದ ಎಂಟು ಕಿ.ಮೀ.ದೂರದಲ್ಲಿ ಕಾವೇರಿ ನದಿ ತೀರದಲ್ಲಿದೆ. ದೂರದಿಂದ ಬರುವವರು ಕೆ.ಆರ್.ನಗರಕ್ಕೆ ಆಗಮಿಸಿದರೆ ಅಲ್ಲಿಂದ ಕಪ್ಪಡಿ ಕ್ಷೇತ್ರಕ್ಕೆ ತೆರಳಲು ವಾಹನಗಳ ವ್ಯವಸ್ಥೆಯೂ ಇದೆ.

ಇನ್ನು ಕಪ್ಪಡಿ ಕ್ಷೇತ್ರಕ್ಕೆ ಹೋಗಿ ಉರಿಗಣ್ಣ ರಾಚಪ್ಪಾಜಿ ಮತ್ತು ಚೆನ್ನಮ್ಮಾಜಿ ದೇವರ ಗದ್ದುಗೆ ಮುಂದೆ ಭಕ್ತಿಭಾವದಿಂದ ಬೇಡಿಕೊಂಡರೆ ಬೇಡಿದ್ದನ್ನು ಈಡೇರಿಸುವುದು ಈ ಕ್ಷೇತ್ರದ ಮಹಿಮೆಯಾಗಿದೆ. ಹೀಗಾಗಿಯೇ ಭಕ್ತರು ಸದಾ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಹೆಚ್ಚಿನ ಭಕ್ತರು ಪೂಜಾಕೈಂಕರ್ಯ ನೆರವೇರಿಸಿ ದೇವರ ದರ್ಶನ ಮಾಡಿಕೊಂಡು ಬರಲೆಂದು ದೇಗುಲಗಳಿಗೆ ತೆರಳುತ್ತಾರೆ. ಆದರೆ ಕಪ್ಪಡಿ ಕ್ಷೇತ್ರದಲ್ಲಿ ದೇವರ ಮುಂದೆ ತಮ್ಮ ಕಷ್ಟಗಳನ್ನು ಹೇಳಿಕೊಂಡು ಪರಿಹರಿಸುವಂತೆ ಹರಕೆ ಕಟ್ಟಲು ಅಥವಾ ಹರಕೆ ಮಾಡಿದ್ದು ಈಡೇರಿದ್ದರಿಂದ ಅದನ್ನು ತೀರಿಸಲೆಂದು ಭಕ್ತರು ಬರುತ್ತಾರೆ.
ಕಪ್ಪಡಿ ಸತ್ಯಾಸತ್ಯತೆಗೆ ಹೆಸರುವಾಸಿ
ಕಪ್ಪಡಿ ಕ್ಷೇತ್ರವು ಮೊದಲಿನಿಂದಲೂ ಸತ್ಯಾಸತ್ಯತೆಗೆ ಹೆಸರುವಾಸಿಯಾಗಿದ್ದು, ಬೇಡಿದ ವರವನು ಈಡೇರಿಸುವ ಪವಿತ್ರ ಸ್ಥಳವಾಗಿ ಜನಜನಿತವಾಗಿದೆ. ಬೇರೆಲ್ಲ ಕ್ಷೇತ್ರಗಳಿಗೆ ಹೋಲಿಸಿದರೆ ಈ ಕ್ಷೇತ್ರ ವಿಭಿನ್ನ ಮತ್ತು ವಿಶಿಷ್ಟವಾಗಿ ಭಕ್ತರನ್ನು ಆಕರ್ಷಿಸುತ್ತದೆ. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿ ಯಾವುದೇ ವಿಗ್ರಹಗಳಿಲ್ಲ. ಬದಲಿಗೆ ಉರಿಗಣ್ಣ ರಾಚಪ್ಪಾಜಿಯವರ ಗದ್ದಿಗೆ ಮತ್ತು ಚೆನ್ನಮ್ಮಾಜಿಯವರ ಗದ್ದುಗೆಯಿದ್ದು, ಇದರ ದರ್ಶನ ಮಾಡಿ ಪೂಜೆ ಸಲ್ಲಿಸಿ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಭಕ್ತರು ಬೇಡಿಕೊಳ್ಳುವುದು ಸಂಪ್ರದಾಯವಾಗಿದೆ.

ಇಲ್ಲಿನ ದೇವರ ಮಹಿಮೆ ಮತ್ತು ಪವಾಡಗಳ ಬಗ್ಗೆ ನೂರಾರು ನಿದರ್ಶನಗಳು ಸಿಗುತ್ತವೆ. ರಾಚಪ್ಪಾಜಿ ಮತ್ತು ಚೆನ್ನಮ್ಮಾಜಿಯ ಕುರಿತಂತೆ ನೀಲಗಾರರು, ಕಂಸಾಳೆಯವರು ಹಾಡುವ ಮಂಟೇಸ್ವಾಮಿ ಅವರ ಕಾವ್ಯದಲ್ಲಿ ವರ್ಣಿಸಿರುವುದನ್ನು ನಾವು ಕಾಣಬಹುದಾಗಿದೆ. ಇಲ್ಲಿನ ಮಹಿಮೆ ಅರಿತು ಕ್ಷೇತ್ರಕ್ಕೆ ಮೈಸೂರು ವ್ಯಾಪ್ತಿಯಲ್ಲದೆ, ರಾಜ್ಯದ ವಿವಿಧ ಕಡೆಗಳಿಂದ ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಹೋಗುತ್ತಾರೆ.
ವ್ಯಾಜ್ಯಗಳ ಇತ್ಯರ್ಥಗೊಳಿಸುವ ಕ್ಷೇತ್ರ
ಕಪ್ಪಡಿ ಕ್ಷೇತ್ರದ ಮಹಿಮೆ ಮತ್ತು ದೇವರ ಕಾರ್ಣಿಕ ಹೇಗಿದೆ ಎಂದರೆ ಕೆ.ಆರ್.ನಗರ ತಾಲೂಕು ಹಾಗೂ ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ಆಸ್ತಿ, ಪಾಸ್ತಿ, ಯಾವುದೇ ವ್ಯವಹಾರದಲ್ಲಿ ಲೋಪ, ತಕರಾರು, ಪ್ರಕರಣಗಳು, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಘರ್ಷಣೆ, ಒಡಕು, ಉದ್ಬವವಾದಾಗ ರಾಚಪ್ಪಾಜಿಯವರ ಮೇಲೆ ಆಣೆ ಪ್ರಮಾಣ ಮಾಡುತ್ತಾರೆ. ಇವತ್ತಿಗೂ ಕೋರ್ಟ್, ಕಚೇರಿ, ಪಂಚಾಯಿತಿಗಳಲ್ಲಿ ಇತ್ಯರ್ಥವಾಗದ ಹಲವಾರು ಪ್ರಕರಣಗಳನ್ನು ಜನರು ಸನ್ನಿಧಿಗೆ ಬಂದು ಆಣೆ ಪ್ರಮಾಣ ಮಾಡಿ ಬಗೆಹರಿಸಿರುವ ನಿದರ್ಶನಗಳ ಬಗ್ಗೆ ಇಲ್ಲಿನವರು ಹೇಳುತ್ತಾರೆ.

ಕ್ಷೇತ್ರದಲ್ಲಿ ನೆಲೆನಿಂತಿರುವ ರಾಚಪ್ಪಾಜಿ ಚೆನ್ನಮ್ಮಾಜಿಯನ್ನು ಧರೆಗೆ ದೊಡ್ಡವರೆಂದೇ ಹೇಳಲಾಗುತ್ತದೆ. ರಾಚಪ್ಪಾಜಿ ಚೆನ್ನಮ್ಮಾಜಿ ಮಾಡಿದ ಪವಾಡಗಳು, ಭಕ್ತರಿಗೆ ನೀಡಿದ ಅಭಯಗಳು ಬಹಳಷ್ಟಿದೆ. ಇವರು ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದವರಾಗಿದ್ದು, ಮೈಸೂರು ಅರಸರಿಂದ ಪೂಜೆ ಸ್ವೀಕರಿಸಿ ಎಡತೊರೆ, ಚಂದಗಾಲು, ಮಾರ್ಗವಾಗಿ ಬಂದು ಕಾವೇರಿ ನದಿ ತಟದ ದಟ್ಟ ಕಾಡಿನಿಂದ ಆವೃತವಾಗಿದ್ದ ಕಪ್ಪಡಿಯಲ್ಲಿ ನೆಲೆ ನಿಂತರು ಎಂಬುದು ಜನವಲಯದಲ್ಲಿರುವ ನಂಬಿಕೆಯಾಗಿದೆ.
ಹರಕೆಯಾಗಿ ಕೋಳಿ, ಕುರಿ ಅರ್ಪಣೆ
ಇನ್ನೊಂದೆಡೆ ಎಡತೊರೆಯ ಉಪ್ಪಲಗಶೆಟ್ಟಿ ಎಂಬಾತನ ಕನಸಿನಲ್ಲಿ ಕಾಣಿಸಿಕೊಂಡ ರಾಚಪ್ಪಾಜಿ ತಮಗೆ ಶಿವಯೋಗ ಮಂದಿರವನ್ನು ನಿರ್ಮಿಸುವಂತೆ ಕೇಳಿಕೊಂಡರಂತೆ ಅದರಂತೆ ಗುರುವಿನೆಡೆಗೆ ಬಂದ ಉಪ್ಪಲಗಶೆಟ್ಟಿ ಬಾವಿಯನ್ನು ತೋಡಿ ನಂದಾದೀವಿಗೆ ಗೂಡನ್ನು ಕೊರೆದು ವರವೊಂದನ್ನು ಬೇಡಿದನಂತೆ. ಅದಕ್ಕೆ ಗುರುಗಳು ಒಪ್ಪಿದಾಗ ಉಪ್ಪಲಗಶೆಟ್ಟಿಯು ತಮ್ಮ ನಂತರದ ದಿನ ಉರಿಗದ್ದುಗೆಯ ಮೇಲಿರುವ ರುಮಾಲನ್ನು ಪಡೆಯಬೇಕೆಂದು ಅಣತಿ ಮಾಡುತ್ತಾನೆ.
ಆಗ ಈ ಮನುಷ್ಯನ ಹಂಗು ತಮಗಿನ್ನು ಬೇಡವೆಂದು ರಾಚಪ್ಪಾಜಿ ತಂಗಿ ಚೆನ್ನಮ್ಮಾಜಿಯವರೊಡನೆ ಬಾವಿಗಿಳಿದು ಶಾಶ್ವತ ಶಿವಯೋಗದಲ್ಲಿ ನೆಲೆಸಿದರಂತೆ. ಅಂದಿನಿಂದ ಕಪ್ಪಡಿಯಲ್ಲಿ ಪೂಜಾ ಕಾರ್ಯಗಳು ಆರಂಭಗೊಂಡವೆಂದೂ, ಕಾಲಾಂತರದಲ್ಲಿ ಮೈಸೂರು ಅರಸರು ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬಂದರೆಂದು ಹೇಳಲಾಗುತ್ತಿದೆ. ಅದು ಏನೇ ಇರಲಿ ಕಪ್ಪಡಿ ಕ್ಷೇತ್ರದ ಮಹಿಮೆ ಬಗ್ಗೆ ಬಹಳಷ್ಟು ಕಥೆಗಳು ಜನವಲಯದಲ್ಲಿವೆ. ಹೀಗಾಗಿ ಈ ಕ್ಷೇತ್ರದತ್ತ ಭಕ್ತರು ಪ್ರತಿದಿನವೂ ಆಗಮಿಸುತ್ತಿರುತ್ತಾರೆ. ಇಲ್ಲಿ ದೇವರಿಗೆ ಹರಕೆಯಾಗಿ ಕೋಳಿ, ಕುರಿಯನ್ನು ಅರ್ಪಿಸಲಾಗುತ್ತದೆ.












Click it and Unblock the Notifications