ಮೈಸೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆಗೆ ಬೇಡಿಕೆ
ಮೈಸೂರು, ಆಗಸ್ಟ್ 02; ಮೈಸೂರು ಮತ್ತು ಮಂಗಳೂರು ರೈಲನ್ನು ಕಾರವಾರದ ತನಕ ವಿಸ್ತರಣೆ ಮಾಡಬೇಕು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ಗೆ ಬೇಡಿಕೆ ಇಡಲಾಗಿದೆ. ಈ ರೈಲು ಸೇವೆ ವಿಸ್ತರಣೆಯಿಂದ ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಆಗುವ ಅನುಕೂಲತೆಗಳನ್ನು ಸಚಿವರಿಗೆ ವಿವರಿಸಲಾಗಿದೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಮಂಗಳೂರು-ಮೈಸೂರು ನಡುವಿನ ರೈಲು ಸಂಖ್ಯೆ 16585/ 86 ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದರು.

ಮಂಗಳೂರು-ಮೈಸೂರು ರೈಲನ್ನು ಕಾರವಾರ ತನಕ ವಿಸ್ತರಣೆ ಮಾಡಿದರೆ ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಅನುಕೂಲವಾಗಲಿದೆ ಎಂದು ಸಂಸದರು ಮನವಿ ಪತ್ರದಲ್ಲಿ ವಿವರಣೆ ನೀಡಿದ್ದಾರೆ. ಮಂಗಳೂರು, ಮಣಿಪಾಲ್ನಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ರೈಲು ಸಹಾಯಕವಾಗಿದೆ.
ಈ ರೈಲು ಸೇವೆ ವಿಸ್ತರಣೆಯಿಂದ ಕುಕ್ಕೆ ಸುಬ್ರಮಣ್ಯ, ಉಡುಪಿ, ಬೈಂದೂರು, ಕೊಲ್ಲೂರು, ಮುರುಡೇಶ್ವರ, ಗೋಕರ್ಣ ಮುಂತಾದ ಧಾರ್ಮಿಕ ಕೇಂದ್ರಗಳಿಗೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಕರಾವಳಿ ಮತ್ತು ಮೈಸೂರು ಭಾಗದ ಸಂಪರ್ಕಕ್ಕೆ ಸಹ ಉಪಯೋಗವಾಗಲಿದೆ ಎಂದು ಸಂಸದರು ವಿವರಣೆ ಕೊಟ್ಟಿದ್ದಾರೆ.
ಮೈಸೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆಗೊಂಡರೆ ಕಾರವಾರದಿಂದ ಗೋವಾ, ಮಡಗಾಂವ್ಗೆ ಹೋಗುವ ಪ್ರವಾಸಿಗರಿಗೆ ಸಹ ಅನುಕೂಲವಾಗಲಿದೆ. ಹಿರಿಯ ನಾಗರಿಕರು, ಮಹಿಳೆಯರು ಘಾಟ್ ರಸ್ತೆಯಲ್ಲಿ ಸಂಚಾರ ನಡೆಸುವುದು ತಪ್ಪಲಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಉದ್ಯಾನ್ ಎಕ್ಸ್ಪ್ರೆಸ್ ವಿಸ್ತರಣೆ; ರೈಲ್ವೆ ಸಚಿವರ ಭೇಟಿಯ ವೇಳೆ ಸಂಸದ ಪ್ರತಾಪ್ ಸಿಂಹ ಬೆಂಗಳೂರು-ಮುಂಬೈ ನಡುವೆ ಸಂಚಾರ ನಡೆಸುವ ಉದ್ಯಾನ್ ಎಕ್ಸ್ಪ್ರೆಸ್ ರೈಲನ್ನು ಮೈಸೂರು ತನಕ ವಿಸ್ತರಣೆ ಮಾಡಿ ಎಂದು ಮತ್ತೊಂದು ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ.
ಮೈಸೂರು ಬೆಂಗಳೂರು ಬಳಿಕ ಐಟಿ ಹಬ್ ಆಗಿ ಬೆಳೆಯುತ್ತಿದೆ. ಅಲ್ಲದೇ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಮೈಸೂರು-ಬೆಂಗಳೂರು ನಡುವೆ ರಸ್ತೆ, ವಿಮಾನ ಸಂಪರ್ಕ ಉತ್ತಮವಾಗಿದೆ. ಇದೇ ಮಾದರಿಯಲ್ಲಿ ರೈಲು ಸೇವೆಯೂ ಸಿಕ್ಕಿದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಉದ್ಯಾನ್ ಎಕ್ಸ್ಪ್ರೆಸ್ ಪ್ರತಿದಿನದ ರೈಲು ಮೈಸೂರು ತನಕ ವಿಸ್ತರಣೆಯಾದರೆ ಮೈಸೂರಿನ ಮಹಾರಾಷ್ಟ್ರ, ಗುಜರಾತ್ನ ಉದ್ಯಮಿಗಳು, ನಿವಾಸಿಗಳಿಗೆ ಸಹಾಯಕವಾಗಲಿದೆ. ವಾಣಿಜ್ಯ ಉದ್ದೇಶದಿಂದಲೂ ಇದು ಅನುಕೂಲವಾಗಿದೆ ಎಂದು ಸಂಸದರು ವಿವರಣೆ ನೀಡಿದ್ದಾರೆ.
ಮೈಸೂರು ತನಕ ವಿಸ್ತರಿಸಿ; ಸಂಸದ ಪ್ರತಾಪ್ ಸಿಂಹ ಯಶವಂತಪುರ-ಬಾರ್ಮೆರ್ ಎಸಿ ಎಕ್ಸ್ಪ್ರೆಸ್ ರೈಲನ್ನು ಮೈಸೂರು ನಗರದ ತನಕ ವಿಸ್ತರಣೆ ಮಾಡಬೇಕು ಎಂದು ರೈಲ್ವೆ ಸಚಿವರಿಗೆ ಮತ್ತೊಂದು ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ.
ಈ ರೈಲು ಮೈಸೂರು ತನಕ ವಿಸ್ತರಣೆ ಮಾಡಿದರೆ ಮೈಸೂರು ಜೊತೆ ಬಾದಾಮಿ, ಹುಬ್ಬಳ್ಳಿ, ಬಾಲಗಕೋಟೆ, ಪುಣೆ, ಸೂರತ್ ಸೇರಿದಂತೆ ವಿವಿಧ ನಗರಗಳಿಗೆ ಸಂಪರ್ಕ ಸಿಗುತ್ತದೆ. ಮೈಸೂರಿನಲ್ಲಿ ರಾಜಸ್ಥಾನ ಮೂಲದ ಹಲವು ಜನರಿದ್ದಾರೆ. ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಯಾತ್ರಿಗಳಿಗೆ ಸಹ ಈ ರೈಲು ಅನುಕೂಲವಾಗಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.












Click it and Unblock the Notifications