Haleri Waterfalls: ಮುಂಗಾರು ಮಳೆಗೆ ಮೈದುಂಬಿದ 'ಹಾಲೇರಿ ಜಲಧಾರೆ’
ಮಡಿಕೇರಿ, ಜುಲೈ 26: ಈ ಬಾರಿ ಮುಂಗಾರು ಮಳೆಯ ಅಬ್ಬರಕ್ಕೆ ನಿಸರ್ಗದ ನಡುವೆ ಹುದುಗಿ ಹೋಗಿದ್ದ ಜಲಧಾರೆಗಳೆಲ್ಲವೂ ಮೇಲೆದ್ದು, ಮೈಕೈ ತುಂಬಿಕೊಂಡ ಷೋಡಷಿಯಂತೆ ಬಳುಕಿದರೆ, ಮತ್ತೆ ಕೆಲವು ಜಲಧಾರೆಗಳು ರೌದ್ರತೆ ಮೆರೆದು ನೋಡುಗರನ್ನೇ ಬೆಚ್ಚಿ ಬೀಳಿಸಿವೆ. ಅಷ್ಟೇ ಅಲ್ಲದೆ, ಜಲಧಾರೆಗಳು ಹೀಗೂ ಧುಮ್ಮಿಕ್ಕುತ್ತವೆಯಾ ಎಂಬ ಅಚ್ಚರಿಯನ್ನು ಹುಟ್ಟಿಸಿವೆ.
ಕಳೆದ ವರ್ಷ ಮಳೆ ಸರಿಯಾಗಿ ಸುರಿಯದೆ ಮುಂಗಾರು ದುರ್ಬಲವಾಗಿತ್ತು. ಆದರೆ ಈ ಬಾರಿ ಪೂರ್ವ ಮುಂಗಾರು ಉತ್ತಮ ಆರಂಭವನ್ನು ನೀಡಿತ್ತು. ಹೀಗಾಗಿ ಜೂನ್ ನಿಂದ ಆರಂಭವಾದ ಮುಂಗಾರು ಮಳೆ ಬಿಡುವು ನೀಡದ ಸುರಿದ ಪರಿಣಾಮ ಹಳ್ಳ, ಕೊಳ್ಳ, ತೊರೆ, ಹೊಳೆ, ನದಿಗಳೆಲ್ಲವೂ ಉಕ್ಕಿ ಹರಿಯಲಾರಂಭಿಸಿವೆ.

ಹೀಗೆ ಉಕ್ಕಿ ಹರಿದ ಸಣ್ಣಪುಟ್ಟ, ಹೊಳೆ, ನದಿಗಳು ಸೃಷ್ಟಿಸಿರುವ ಜಲಧಾರೆಗಳು ಇದೀಗ ಹೆಬ್ಬಂಡೆಗಳ ಮೇಲೆ ಧುಮ್ಮಿಕ್ಕಿ ಜಿಗಿಯುವಾಗಿನ ಸುಂದರ ದೃಶ್ಯಗಳು ಕಣ್ಮನ ಸೆಳೆಯುತ್ತಿವೆ. ಸಾಮಾನ್ಯ ದಿನಗಳಲ್ಲಿ ಧುಮ್ಮಿಕ್ಕುತ್ತಿದ್ದ ಜಲಧಾರೆಗಳಿಗೂ ಈಗಿನ ಜಲಧಾರೆಗಳೂ ಅಜಗಜಾಂತರ ವ್ಯತ್ಯಾಸವಾಗಿದ್ದು, ಶ್ವೇತ ಸುಂದರಿಯರೆಲ್ಲ ಭಯಂಕರಿಯರಾಗಿ ರುದ್ರನರ್ತನಗೈಯ್ಯುತ್ತಿದ್ದಾರೆ.
ಮಳೆಗಾಲದಲ್ಲಿ ನೋಡುವುದೇ ಮಜಾ
ಮಳೆಗಾಲದ ಈ ದಿನಗಳಲ್ಲಿ ನಿಸರ್ಗ ಸೌಂದರ್ಯದ ನೆಲೆವೀಡಾದ ಕೊಡಗಿನಲ್ಲಿ ಬೆಟ್ಟಗುಡ್ಡಗಳ ಮೇಲೆ, ಕಾಫಿ ತೋಟಗಳ ನಡುವೆ ಹುಟ್ಟಿ ಹರಿಯುವ ಹೊಳೆ, ತೊರೆಗಳು ಧುಮ್ಮಿಕ್ಕಿ ಹರಿಯುವಾಗ ಸೃಷ್ಟಿಯಾಗುವ ಜಲಧಾರೆಗಳನ್ನು ನೋಡುವುದೇ ಒಂಥರಾ ಮಜಾ.

ಇದುವರೆಗೆ ತಮ್ಮ ಪಾಡಿಗೆ ಧುಮ್ಮಿಕ್ಕುತ್ತಿದ್ದ ಜಲಧಾರೆಗಳೆಲ್ಲವೂ ಈಗ ಹಠಕ್ಕೆ ಬಿದ್ದಂತೆ ಧುಮ್ಮಿಕ್ಕುತ್ತಿವೆ. ಇತರೆ ದಿನಗಳಲ್ಲಿ ಕಾಫಿ ತೋಟದಲ್ಲಿ, ಕಾಡಿನಲ್ಲಿ ಯಾರ ಗಮನಕ್ಕೂ ಬಾರದೆ ತನ್ನ ಪಾಡಿಗೆ ತಾನು ಎಂಬಂತೆ ಧುಮುಕುವ ಜಲಧಾರೆಗಳೀಗೆ ತಮ್ಮ ಆರ್ಭಟದಿಂದ ತಮ್ಮ ಇರುವಿಕೆಯನ್ನು ಖಚಿತಪಡಿಸುತ್ತಿವೆ.
ಕೆದಕಲ್ ಬಳಿಯಲ್ಲಿರುವ ಜಲಧಾರೆ
ಇಂತಹ ಜಲಧಾರೆಗಳ ನಡುವೆ ಮಡಿಕೇರಿಗೆ ಸುಮಾರು 10ಕಿ.ಮೀ ದೂರದಲ್ಲಿರುವ ಹಾಲೇರಿ ಫಾಲ್ಸ್ ಕೂಡ ಇದೀಗ ತನ್ನ ಚೆಲುವನ್ನು ಪ್ರದರ್ಶಿಸುತ್ತಿದೆ. ಇದನ್ನು ನೋಡಬೇಕಾದರೆ ಮಡಿಕೇರಿ- ಮೈಸೂರು ಹೆದ್ದಾರಿಯಲ್ಲಿ ಸುಮಾರು ಒಂಬತ್ತು ಕಿ.ಮೀ. ದೂರದ ಕೆದಕಲ್ ಗೆ ಹೋಗಬೇಕಾಗುತ್ತದೆ.
ಕೆದಕಲ್ ನಿಂದ ಎಡಕ್ಕೆ ಹಾಲೇರಿಗೆ ತೆರಳುವ ರಸ್ತೆಯಲ್ಲಿ ಒಂದು ಕಿ.ಮೀ.ನಷ್ಟು ಹೋಗಿ ಅಲ್ಲಿಂದ ಮೋದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯತ್ತ ತಿರುಗಿದರೆ ಜಲಧಾರೆ ಎದುರಾಗುತ್ತದೆ. ಸುಮಾರು ಐವತ್ತು ಅಡಿ ಎತ್ತರದಿಂದ ಕಲ್ಲುಬಂಡೆಗಳ ಮೇಲಿನಿಂದ ಧುಮುಕುವ ಈ ಜಲಪಾತ ಪುಟ್ಟದಾದರೂ ಅದ್ಭುತವಾಗಿದೆ.
ಚಿಕ್ಕಾತಿ ಚಿಕ್ಕ ಜಲಧಾರೆ
ಕಾಫಿ ತೋಟದ ನಡುವೆ ಹೆಬ್ಬಂಡೆ ಮೇಲಿನಿಂದ ಎರಡು ಹಂತದಲ್ಲಿ ಧುಮುಕುವ ಜಲಧಾರೆ. ಮೊದಲಿಗೆ ಐವತ್ತು ಅಡಿ ಎತ್ತರದಿಂದ ರಭಸದಿಂದ ಧುಮುಕುತ್ತದೆಯಾದರೂ ಬಳಿಕ ಹತ್ತು ಅಡಿ ಎತ್ತರದಿಂದ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ಹರಿದು ಹೋಗುತ್ತದೆ.
ಸಾಮಾನ್ಯವಾಗಿ ಸಮೀಪದ ತೋಟಕ್ಕೆ ಕೆಲಸಕ್ಕೆ ಬರುವ ಕಾರ್ಮಿಕರು ಹೊರತುಪಡಿಸಿದರೆ ಹೆಚ್ಚಿನವರು ಯಾರೂ ಇದರತ್ತ ಸುಳಿಯುವುದಿಲ್ಲ. ಹೀಗಾಗಿ ಮಳೆಗಾಲದಲ್ಲಿ ಮಳೆ ಸುರಿದಾಗ ತನ್ನ ಚೆಲುವನ್ನು ಪ್ರದರ್ಶಿಸಿ ಬೇಸಿಗೆ ಬರುತ್ತಿದ್ದಂತೆ ಹೆಬ್ಬಂಡೆಯಲ್ಲೇ ಲೀನವಾಗಿ ಬಿಡುತ್ತದೆ.
ಶ್ವೇತಧಾರೆಯಾಗಿ ಧುಮ್ಮಿಕ್ಕುವ ಜಲಧಾರೆ
ಕಾನನದ ಬೆಡಗಿಯಂತೆ ಕಂಗೊಳಿಸುವ ಹಾಲೇರಿ ಫಾಲ್ಸ್ನ್ನು ವೀಕ್ಷಿಸಬೇಕಾದರೆ ಮಳೆಗಾಲದ ದಿನಗಳು ಉತ್ತಮ. ಮಳೆ ಕಡಿಮೆಯಾದಾಗ ಇದರ ಚೆಲುವು ಕೂಡ ಇಳಿದು ಬಿಡುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಈ ಜಲಧಾರೆಯನ್ನು ವೀಕ್ಷಿಸಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಖುಷಿಯ ಸಂಗತಿಯಾಗಿದೆ.
ಈ ಜಲಧಾರೆಯತ್ತ ಗಮನಹರಿಸಿ ಸಂಬಂಧಿಸಿದವರು ಅಭಿವೃದ್ಧಿ ಪಡಿಸಿದ್ದೇ ಆದರೆ ಈ ಜಲಧಾರೆ ಪ್ರವಾಸಿಗರ ಸೆಳೆಯಲು ಸಾಧ್ಯವಾಗಲಿದೆ. ಈಗ ಮಳೆಗಾಲವಾಗಿರುವುದರಿಂದ ಇದರ ರೌದ್ರತೆ ಹೆಚ್ಚಾಗಿರುತ್ತದೆಯಾದರೂ ನಂತರದ ದಿನಗಳಲ್ಲಿ ಶ್ವೇತಧಾರೆಯಾಗಿ ಧುಮ್ಮಿಕ್ಕುತ್ತಾ ಗಮನಸೆಳೆಯುತ್ತದೆ. ಹೆದ್ದಾರಿಗೆ ಹತ್ತಿರದಲ್ಲಿರುವ ಕಾರಣದಿಂದ ಈ ಜಲಧಾರೆಯತ್ತ ಯಾರು ಬೇಕಾದರೂ ತೆರಳಬಹುದಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications