Indian Railways: ಚಿಕ್ಕಬಳ್ಳಾಪುರಕ್ಕೆ 6 ಹೆಚ್ಚುವರಿ ರೈಲು- ಯಾವಾಗ, ಎಲ್ಲಿಂದ, ಸಮಯ ತಿಳಿಯಿರಿ
ಚಿಕ್ಕಬಳ್ಳಾಪುರ, ಡಿಸೆಂಬರ್, 06: ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ನೀಡುತ್ತಲೇ ಇರುತ್ತದೆ. ಇದೀಗ ಮತ್ತೆ ಚಿಕ್ಕಬಳ್ಳಾಪುರ ಜನತೆಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಈ ಭಾಗಕ್ಕೆ ವಿಶೇಷ 6 ಹೆಚ್ಚುವರಿಗೆ ರೈಲುಗಳನ್ನು ಬಿಡಲು ಗ್ರೀನ್ ಸಿಗ್ನಲ್ ನೀಡಿದೆ. ಹಾಗಾದರೆ ಈ ರೈಲುಗಳು ಯಾವ ಮಾರ್ಗದಲ್ಲಿ? ಯಾವಾಗಿನಿಂದ ಆರಂಭವಾಗಲಿದೆ. ಹಾಗೂ ಸಮಯಗಳ ವಿವರಗಳನ್ನು ತಿಳಿಯಿರಿ.
ರೈಲ್ವೆ ಸೇವೆ ಸೌಲಭ್ಯ ಹೆಚ್ಚಳದ ನಿರೀಕ್ಷೆಯ ನಡುವೆ ಈ ಭಾಗದ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಹೊಸದಾಗಿ ಮತ್ತೆ 6 ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ರಾಜಧಾನಿಯಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಬರುತ್ತಿದ್ದ ರೈಲುಗಳ ಓಡಾಟವನ್ನು ಚಿಕ್ಕಬಳ್ಳಾಪುರದವರೆಗೂ ವಿಸ್ತರಿಸಲಾಗಿದೆ. ಇದರಿಂದ ಈ ಭಾಗದಲ್ಲಿ ಬೆಂಗಳೂರಿಗೆ ಕಡಿಮೆ ದರದಲ್ಲಿ ಪಯಣಿಸಲು ಪ್ರಯಾಣಿಕರಿಗೆ ಅನುಕೂಲವಾಗಿದೆ.

ಪ್ರಸ್ತುತ ಭಾನುವಾರ ರಜಾ ದಿನ ಹೊರತುಪಡಿಸಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾನಪುರ ಮತ್ತು ಕೋಲಾರದ ನಡುವೆ ಎರಡು ಭೋಗಿಗಳನ್ನು ಒಳಗೊಂಡ ರೈಲುಗಳು ಸಂಚಾರ ನಡೆಸುತ್ತಿವೆ.
ಪ್ರತಿದಿನ ಬೆಳಗ್ಗೆ ಒಂದು ರೈಲು ಕೋಲಾರದ ಕಡೆಯಿಂದ ಬೆಂಗಳೂರಿಗೆ ಮತ್ತು ಮತ್ತೊಂದು ರೈಲು ಬೆಂಗಳೂರಿನಿಂದ ಕೋಲಾರದ ಕಡೆಗೆ ಸಂಚಾರ ಮಾಡುತ್ತಿದೆ. ಇದರ ನಡುವೆ ಬೆಂಗಳೂರು, ಯಶವಂತಪುರದಿಂದ 6 ಹೊಸ ರೈಲುಗಳು ಚಿಕ್ಕಬಳ್ಳಾಪುರ ನಿಲ್ದಾಣಕ್ಕೆ ಬಂದು ಹೋಗಲಿವೆ. ಇವುಗಳ ಸೇವೆ ಇದೇ ತಿಂಗಳು ಅಂದರೆ ಡಿಸೆಂಬರ್ 11ರಿಂದ ಪ್ರಯಾಣಿಕರ ಸೇವೆಗೆ ಸಿಗಲಿದೆ.
ದೇವನಹಳ್ಳಿ ಬಳಿ ಇರುವ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರ ನಗರವನ್ನು ಬೆಂಗಳೂರು ಮಹಾನಗರಕ್ಕೆ ಪರ್ಯಾಯವಾಗಿ ಉಪ ನಗರವನ್ನಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂಬ ಮಾತುಗಳನ್ನು ಮೊದಲಿನಿಂದಲೂ ಹೇಳಲಾಗುತ್ತಿದೆ. ಇದರ ಭಾಗವಾಗಿ ಮೊದಲ ಹೆಜ್ಜೆಯನ್ನಿಟ್ಟಿರುವ ಸರ್ಕಾರ ಮೊದಲ ಹಂತವಾಗಿ ರೈಲ್ವೆ ಸೇವೆಗಳ ವಿಸ್ತರಣೆ ಯೋಜನೆಯ ಅನುಷ್ಠಾನದ ಸಾಧನೆಯನ್ನು ಕಾಣಲಾಗುತ್ತಿದೆ.
ಈಗಾಗಲೇ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ನಗರ ಮಾರ್ಗವಾಗಿ 1.10 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಹಳಿ ನಿರ್ಮಾಣದ ಅಂತಿಮ ಸರ್ವೇ ಕಾರ್ಯವನ್ನು ಕೇಂದ್ರ ರೈಲ್ವೆ ಇಲಾಖೆ ಕೈಗೊಂಡಿದೆ. ಇದರ ಅನುಮೋದಿತ ವರದಿ ಇನ್ನೂ ಹೊರಬರಬೇಕಾಗಿದೆ.
ಮತ್ತೊಂದೆಡೆ ಚಿಕ್ಕಬಳ್ಳಾಪುರ-ಬಾಗೇಪಲ್ಲಿ ಪುಟ್ಟಪರ್ತಿ ಸಂಚಾರ ಪ್ರಾರಂಭವು ಈ ಭಾಗದ ಜನರ ಬೇಡಿಕೆಯಾಗಿದ್ದು, ತಾಲೂಕಿನ ಮುದ್ದೇನಹಳ್ಳಿಯಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆ ಇದೆ. ವಿದೇಶಿಗರು ಸೇರಿದಂತೆ ಪುಟ್ಟಪರ್ತಿ ಭಗವಾನ್ ಸಾಯಿಬಾಬಾರ ಸಾವಿರಾರು ಭಕ್ತರು ಪುಟ್ಟಪರ್ತಿಗೆ ಪ್ರತಿನಿತ್ಯ ಸಂಚರಿಸುತ್ತಿರುತ್ತಾರೆ.
ನೆರೆಯ ಆಂದ್ರಪ್ರದೇಶದೊಂದಿಗೆ ಗಡಿ ಭಾಗವನ್ನು ಹಾಗೂ ವಾಣಿಜ್ಯ ವಾಹಿವಾಟು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಈ ಭಾಗದಲ್ಲಿ ರೈಲು ಸಂಚಾರ ಸಹಕಾರಿಯಾಗಲಿದೆ ಎಂಬಾಸೆ ಸುತ್ತಮುತ್ತಲಿನ ಜನರದ್ದಾಗಿದೆ. ಈ ಹಿನ್ನೆಲೆ ಪುಟ್ಟಪರ್ತಿಗೆ ಚಿಕ್ಕಬಳ್ಳಾಪುರದಿಂದ ರೈಲು ಸೇವೆ ಒದಗಿಸಲು ಒತ್ತಾಯಿಸಲಾಗುತ್ತಿದೆ. ಇದರ ನಡುವೆ ಸರ್ವೇ ಕಾರ್ಯ ಸಹ ಪ್ರಾರಂಭ ಮಾಡುವ ಸಾಧ್ಯತೆಗಳಿವೆ ಎಂಬ ಮಾಹಿತಿ ಇದೆ.
ಇನ್ನು ವಂದೇ ಭಾರತ್ ರೈಲು ಸಂಚಾರಕ್ಕೆ ಡೋನ್/ಮೊಬೈಲ್ ಲೈನರ್ ಸರ್ವೇಯನ್ನು ಇಲಾಖೆ ಮುಗಿಸಿದೆ. ಚೆನ್ನಸಂದ್ರದಿಂದ ದೊಡ್ಡಬಳ್ಳಾಪುರ, ಬೆಂಗಳೂರು ನಗರದಿಂದ ಯಶವಂತಪುರ, ಯಶವಂತಪುರದಿಂದ ಯಲಹಂಕ, ಯಶವಂತಪುರದಿಂದ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ಮಾರ್ಗವಾಗಿ ಅಧ್ಯಯನ ವರದಿಯನ್ನೂ ಈಗಾಗಲೇ ತಯಾರಿಸಲಾಗಿದೆ.
ಪ್ರತಿನಿತ್ಯವೂ ಈ ಭಾಗದಿಂದ ಉದ್ಯೋಗಕ್ಕಾಗಿ ಬೆಂಗಳೂರು, ಯಲಹಂಕ ಸೇರಿದಂತೆ ವಿವಿಧ ಭಾಗಗಳಿಗೆ ಪ್ರಯಾಣ ಮಾಡುತ್ತಿರುತ್ತಾರೆ. ರಾಜಧಾನಿಯಲ್ಲಿನ ಕಚೇರಿಗಳಲ್ಲಿ ಕೆಲಸ, ಆಸ್ಪತ್ರೆ ಸೇವೆ ನಾನಾ ಕಾರಣಗಳಿಗೆ ಪ್ರಯಾಣಿಸಲು ತುಂಬಾ ಕಡಿಮೆ ದರದ ರೈಲ್ವೆ ಸೇವೆಯನ್ನು ಈ ಭಾಗದ ನೌಕರರು ನೆಚ್ಚಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಕೇವಲ 20 ರೂಪಾಯಿಗೆ ತೆರಳಬಹುದು. ಇನ್ನು ಬಸ್ಗಳಲ್ಲಿ ಟಿಕೆಟ್ ಶುಲ್ಕ ಮೂರು ನಾಲ್ಕು ಪಟ್ಟು ದುಬಾರಿಯಾಗಿದೆ. ಇದಕ್ಕೆ ರೈಲುಗಳ ಸಂಚಾರ ವ್ಯವಸ್ಥೆಯನ್ನು ಒದಗಿಸುವುದರ ಬಗ್ಗೆ ಅನೇಕ ವರ್ಷಗಳಿಂದ ಒತ್ತಾಯಗಳು ಕೇಳಿಬರುತ್ತಿವೆ. ಮತ್ತೊಂದೆಡೆ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕಿಂತ ರೈಲ್ವೆ ಸೇವೆಯಲ್ಲಿ ಗೌರಿಬಿದನೂರು ಹೆಚ್ಚಿನ ಪ್ರಗತಿ ಸಾಧಿಸಿದೆ.
ನೆರೆ ರಾಜ್ಯದ ಹಿಂದೂಪುರ, ಅನಂತಪುರ ಸೇರಿದಂತೆ ದೇಶದ ಪ್ರಮುಖ ಸ್ಥಳಗಳಿಗೆ ಗೌರಿಬಿದನೂರು ರೈಲ್ವೆ ಸಂಪರ್ಕವನ್ನು ಹೊಂದಿದೆ. ಇಲ್ಲಿ ಪ್ರತಿನಿತ್ಯ ಅನೇಕ ರೈಲುಗಳು ಸಂಚರಿಸುತ್ತಿರುತ್ತವೆ. ಇದರಿಂದ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ನಡುವೆ ರೈಲು ಸಂಚಾರ ಪ್ರಾರಂಭದಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಆಗಲಿದೆ.
ನೆರೆಯ ಜಿಲ್ಲೆ ಹಾಗೂ ರಾಜ್ಯಗಳಿಗೆ ಸಂಪರ್ಕ ವ್ಯವಸ್ಥೆಯಿಂದ ಅಭಿವೃದ್ಧಿ ಹೆಚ್ಚಾಗಲಿದೆ. ಈ ಭಾಗದಿಂದ ಕೃಷಿ ಉತ್ಪನ್ನಗಳು, ವಿವಿಧ ಬಗೆಯ ಸರಕುಗಳು ಅತಿ ಕಡಿಮೆ ದರದಲ್ಲಿ ಇತರ ಭಾಗಗಳಿಗೆ ಸಾಗಾಣೆ ಮಾಡಲು ರೈತರಿಗೆ ಹಾಗೂ ವ್ಯಾಪಾರಿಗಳಿಗೆ ಸಹಕಾರಿಯಾಗಲಿದೆ.
ಪ್ರಾಯೋಗಿಕ ಸೇವೆ ಪ್ರಾರಂಭ ಯಾವಾಗ?
ಇದೇ ಡಿಸೆಂಬರ್ 11ರಿಂದ ಹೊಸ ರೈಲುಗಳ ಸಂಚಾರ ಪ್ರಾಯೋಗಿಕವಾಗಿ ಪ್ರಾರಂಭವಾಗಲಿದ್ದು, ಮುಂಬರುವ ದಿನಗಳಲ್ಲಿ ಪ್ರಯಾಣಿಕರ ಸ್ಪಂದನೆ, ಆರ್ಥಿಕ ಲಾಭ ಸೇರಿದಂತೆ ತಾಂತ್ರಿಕ ಅಂಶಗಳನ್ನಾಧಾರಿಸಿ, ಸಂಚಾರ ಮುಂದುವರೆಸಬೇಕೋ? ಇಲ್ಲವೇ ನಿಲ್ಲಿಸಬೇಕೋ ಎಂಬ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ರೈಲುಗಳ ಸಂಚರಿಸುವ ಸಮಯಗಳ ವಿವರ
06531 ಸಂಖ್ಯೆಯ ರೈಲು ಬೆಂಗಳೂರು ವಲಯದಿಂದ ಬೆಳಗ್ಗೆ 5.10ಕ್ಕೆ ಹೊರಟು 6.55 ಕ್ಕೆ ಚಿಕ್ಕಬಳ್ಳಾಪುರ ತಲುಪಲಿದೆ. ಇದೇ ರೈಲು ಸಂಖ್ಯೆ (06535) ಬೆಳಗ್ಗೆ 8.20ಕ್ಕೆ ಚಿಕ್ಕಬಳ್ಳಾಪುರ ಬಿಟ್ಟು ಬೆಂಗಳೂರು ವಲಯಕ್ಕೆ ಬೆಳಗ್ಗೆ 10:40ಕ್ಕೆ ತಲುಪಲಿದೆ.
ನಂತರ 06536 ಸಂಖ್ಯೆಯ ರೈಲು ಮಧ್ಯಾಹ್ನ 12:20ಕ್ಕೆ ಬೆಂಗಳೂರು ವಲಯ ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಮಧ್ಯಾಹ್ನ 1:40ಕ್ಕೆ ತಲುಪಲಿದೆ. 06537 ಸಂಖ್ಯೆಯ ರೈಲು ಚಿಕ್ಕಬಳ್ಳಾಪುರದಿಂದ ಮಧ್ಯಾಹ್ನ 2 ಗಂಟೆಗೆ ಬಿಟ್ಟು, ಬೆಂಗಳೂರು ವಲಯಕ್ಕೆ ಮಧ್ಯಾಹ್ನ 3:15ಕ್ಕೆ ತಲುಪಲಿದೆ.
ತದನಂತರ 06538 ಸಂಖ್ಯೆಯ ರೈಲು ಸಂಜೆ 4ಕ್ಕೆ ಬೆಂಗಳೂರು ವಲಯ ಬಿಟ್ಟು ಚಿಕ್ಕಬಳ್ಳಾಪುರ ನಿಲ್ದಾಣಕ್ಕೆ ಸಂಜೆ 6ಕ್ಕೆ ತಲುಪಲಿದೆ. 06532 ಸಂಖ್ಯೆಯ ರೈಲು ರಾತ್ರಿ 6.30ಕ್ಕೆ ಬಿಟ್ಟು ಬೆಂಗಳೂರು ವಲಯವನ್ನು ರಾತ್ರಿ 9ಕ್ಕೆ ಸೇರಲಿದೆ. ಹಾಗೆಯೇ 06593 ಸಂಖ್ಯೆಯ ರೈಲು ಬೆಳಗ್ಗೆ 10:10ಕ್ಕೆ ಯಶವಂತಪುರ ನಿಲ್ದಾಣ ಬಿಟ್ಟು ಚಿಕ್ಕಬಳ್ಳಾಪುರಕ್ಕೆ 11:40ಕ್ಕೆ ತಲುಪಲಿದೆ. 06594 ಸಂಖ್ಯೆಯ ರೈಲು ಮಧ್ಯಾಹ್ನ 1ಕ್ಕೆ ಚಿಕ್ಕಬಳ್ಳಾಪುರ ಬಿಟ್ಟು ಮಧ್ಯಾಹ್ನ 2:50ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ.
ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಡುವೆ ರೈಲ್ವೆ ಸಂಚಾರ ಸೇವೆಯನ್ನು ಹೆಚ್ಚಿಸಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಇನ್ನು ಕೇಂದ್ರ ರೈಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಡಾ.ಜಿ.ವಿ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಪ್ರಯಾಣಿಕರ ಒತ್ತಾಯದ ಮೇರೆಗೆ ಕೇಂದ್ರ ರೈಲ್ವೆ ಸಮಿತಿಗೆ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಡುವೆ ರೈಲ್ವೆ ಸೇವೆ ಒದಗಿಸಲು ಹಲವು ಬಾರಿ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿ ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ.












Click it and Unblock the Notifications