ಬಜೆಟ್ ಬಗ್ಗೆ ವೈದ್ಯರಿಂದ ಉದ್ಯಮಿಗಳವರೆಗೆ ಯಾರು- ಏನೆಂದರು?
ಈ ಬಾರಿಯ ಕೇಂದ್ರ ಬಜೆಟ್ ಗೆ ನಾನಾ ವಲಯಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅದೇ ವೇಳೆ ಕೆಲವು ನಿರ್ದಿಷ್ಟ ವಲಯಕ್ಕೆ ನಿರೀಕ್ಷೆ ಮಾಡಿದಂಥ ಅನುಕೂಲ ಆಗಿಲ್ಲ ಅಂದರೂ ಈ ಬಾರಿಯ ಬಜೆಟ್ ದೇಶದ ಪ್ರಗತಿಗೆ ಪೂರಕವಾಗಿದೆ ಎಂಬ ಅಭಿಪ್ರಾಯ ಹೇಳಿದವರಿದ್ದಾರೆ. ಒಟ್ಟಾರೆ ವಿವಿಧ ವಲಯಗಳಿಗೆ ಸಂಬಂಧಪಟ್ಟವರ ಅನಿಸಿಕೆಗಳನ್ನು ಒಟ್ಟು ಮಾಡಿ ನಿಮ್ಮೆದುರು ಇಡಲಾಗಿದೆ.
ರಿಯಲ್ ಎಸ್ಟೇಟ್, ವೈದ್ಯಕೀಯ ವಲಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಜತೆಗೆ ಉದ್ಯಮಿಗಳು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ದೇಶದ ಪ್ರಗತಿಗೆ ಪೂರಕವಾಗಿದೆ ಎಂಬುದೇ ಅವರ ಗಟ್ಟಿ ಅಭಿಪ್ರಾಯ. ಹಾಗಿದ್ದರೆ ಯಾರು ಏನೆಂದರು ಎಂಬುದನ್ನು ಮುಂದೆ ಓದಿ.

ಎಂ.ಆರ್. ಜಯಶಂಕರ್, ಅಧ್ಯಕ್ಷ- ಕಾರ್ಯನಿರ್ವಾಹಕ ನಿರ್ದೇಶಕ, ಬ್ರಿಗೇಡ್ ಎಂಟರ್ ಪ್ರೈಸಸ್
ಹಣಕಾಸು ಸಚಿವರು ಬಹಳ ಬುದ್ಧಿವಂತಿಕೆ ಹಾಗೂ ಸಮತೋಲನದ ಬಜೆಟ್ ಮಂಡಿಸಿದ್ದಾರೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಬಜೆಟ್ ಇದು. ಮುಖ್ಯವಾಗಿ ಗ್ರಾಮೀಣ ಭಾಗದ ಆರ್ಥಿಕತೆ, ಶಿಕ್ಷಣ, ಆರೋಗ್ಯ ಸುರಕ್ಷೆ, ಮೂಲ ಸೌಕರ್ಯ ಮತ್ತಿತರ ವಲಯಗಳಿಗೆ ಪ್ರಾಮುಖ್ಯ ಸಿಕ್ಕಿದೆ. ರಿಯಲ್ ಎಸ್ಟೇಟ್ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಿದ್ದಾರೆ. ಈ ಬಜೆಟ್ ಗೆ ನಾನು ಹತ್ತಕ್ಕೆ ಎಂಟು- ಎಂಟೂವರೆ ಅಂಕ ಕೊಡ್ತೀನಿ. ಮಧ್ಯಮ ಹಾಗೂ ದೀರ್ಘಾವಧಿಯಲ್ಲಿ ಇದರಿಂದ ದೇಶಕ್ಕೆ ಅನುಕೂಲವಿದೆ.

ಆಶೀಶ್ ಆರ್. ಪುರವಂಕರ, ಕಾರ್ಯನಿರ್ವಾಹಕ ನಿರ್ದೇಶಕ, ಪುರವಂಕರ ಲಿಮಿಟೆಡ್
ಎಲ್ಲರಿಗೂ ಕೈಗೆಟುಕುವ ದರದಲ್ಲಿ ಮನೆ ಸಿಗಬೇಕು ಎಂಬ ಉದ್ದೇಶದಿಂದ ಪ್ರೋತ್ಸಾಹಕರವಾದ ಬಜೆಟ್ ಇದು. ಕಾರ್ಪೋರೇಟ್ ಟ್ಯಾಕ್ಸ್ ಬಗ್ಗೆ ತೆಗೆದುಕೊಂಡಿರುವ ಕ್ರಮ ಸ್ವಾಗತಾರ್ಹ. ಸ್ಮಾರ್ಟ್ ಸಿಟಿಗಳನ್ನು ಹೆಚ್ಚು ಮಾಡುವುದು ಸೇರಿದಂತೆ ಈಗ ಕೈಗೊಂಡಿರುವ ಬಹುತೇಕ ನಿರ್ಧಾರ ದೇಶವನ್ನು ಬಲಿಷ್ಠ, ಆರೋಗ್ಯಕರ ಹಾಗೂ ಉಜ್ವಲ ಆರ್ಥಿಕತೆಯತ್ತ ಕೊಂಡೊಯ್ಯುತ್ತದೆ.

ಸಿ.ಎನ್.ಗೋವಿಂದರಾಜು, ಅಧ್ಯಕ್ಷ- ಕಾರ್ಯನಿರ್ವಾಹಕ ನಿರ್ದೇಶಕ, ವೈಷ್ಣವಿ ಗ್ರೂಪ್
ಸ್ಟ್ಯಾಂಡರ್ಡ್ ಡಿಡಕ್ಷನ್ ನಲವತ್ತು ಸಾವಿರ ರುಪಾಯಿವರೆಗೆ ಮತ್ತೆ ಪರಿಚಯಿಸಿದ್ದು ವೇತನ ಪಡೆಯುವ ಉದ್ಯೋಗಿಗಳಿಗೆ ಹಾಗೂ ಪಿಂಚಣಿದಾರರಿಗೆ ತುಂಬ ಅನುಕೂಲ. ರಸ್ತೆ ನಿರ್ಮಾಣ, ರೈಲ್ವೆ ಮೂಲ ಸೌಕರ್ಯಕ್ಕೆ ಒತ್ತು ನೀಡುವುದರಿಂದ ದೇಶದ ನಿರ್ಮಾಣಕ್ಕೆ ಪೂರಕವಾಗಿದೆ.
ರಿಯಲ್ ಎಸ್ಟೇಟ್ ವಲಯಕ್ಕೆ ಮೂಲಸೌಕರ್ಯದ ಸ್ಥಾನಮಾನ ಸಿಗುವ ನಿರೀಕ್ಷೆ ಇತ್ತು. ಆದರೆ ಅದು ಈಡೇರಿಲ್ಲ. ಆಸ್ತಿ ಮಾರಾಟದ ವೇಳೆ ಹಾಕುವ ಜಿಎಸ್ ಟಿ ತೆಗೆದು ಹಾಕಬಹುದೆಂಬ ನಿರೀಕ್ಷೆ ಈಡೇರಿಲ್ಲ. ಇನ್ನು ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಎರಡು ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಬೇಕೆಂಬ ಬೇಡಿಕೆ ಕೂಡ ಈಡೇರಿಲ್ಲ.

ಆದರ್ಶ ನರಹರಿ, ಕ್ರೆಡಾಯ್ ಬೆಂಗಳೂರು ಕಾರ್ಯದರ್ಶಿ
ತುಂಬ ಬುದ್ಧಿವಂತಿಕೆಯಿಂದ, ಆರ್ಥಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಬಜೆಟ್ ಇದು. ಆರೋಗ್ಯ ರಕ್ಷಣೆ, ಹಿರಿಯ ನಾಗರಿಕರು, ಮೂಲ ಸೌಕರ್ಯ, ಗ್ರಾಮೀಣ ಆರ್ಥಿಕತೆ, ಶಿಕ್ಷಣ, ಕೃಷಿ ಎಲ್ಲಕ್ಕೂ ಅನುಕೂಲವಿದೆ. ಆದರೆ ರಿಯಲ್ ಎಸ್ಟೇಟ್ ವಲಯಕ್ಕೆ ನೇರವಾಗಿ ಯಾವ ಅನುಕೂಲವನ್ನೂ ಕೊಟ್ಟಿಲ್ಲ.

ಫಾರೂಕ್ ಮಹಮೂದ್, ಅಧ್ಯಕ್ಷ- ಕಾರ್ಯನಿರ್ವಾಹಕ ನಿರ್ದೇಶಕ, ಸಿಲ್ವರ್ ಲೈನ್ ರಿಯಾಲ್ಟಿ
ಮೂಲಸೌಕರ್ಯ, ಎಲ್ಲರಿಗೂ ಮನೆ, ಸ್ಮಾರ್ಟ್ ಸಿಟಿ, ನಗರ ಪ್ರದೇಶದ ಗೃಹ ನಿರ್ಮಾಣದ ಬಗ್ಗೆ ತುಂಬ ದೃಢ ಹಾಗೂ ಸಕಾರಾತ್ಮಕವಾದ ನಡೆ ಇದು. ರಿಯಲ್ ಎಸ್ಟೇಟ್ ವಲಯದ ನಿರೀಕ್ಷೆಗಳು ಈಡೇರಿಲ್ಲ. ಆದರೂ ಇದು ಸಕಾರಾತ್ಮಕ ಬಜೆಟ್.

ಡಾ.ಬನಿ ಆನಂದ್, ಸ್ಥಾಪಕರು- ಕಾರ್ಯ ನಿರ್ವಾಹಕ ನಿರ್ದೇಶಕರು, ಹೇರ್ ಲೈನ್ ಇಂಟರ್ ನ್ಯಾಷನಲ್
ಕಾರ್ಪೋರೇಟ್ ತೆರಿಗೆ ಇಳಿಸಿರುವುದರಿಂದ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿ ಆಗುತ್ತದೆ. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವುದನ್ನು ಇನ್ನಷ್ಟು ನಾನು ನಿರೀಕ್ಷೆ ಮಾಡ್ತೀನಿ. ಹೆಲ್ತ್ ಮತ್ತು ವೆಲ್ ನೆಸ್ ಸೆಂಟರ್ ಗೆ ಸಾವಿರದಾ ಇನ್ನೂರು ಕೋಟಿ ಮೀಸಲಿಟ್ಟಿರುವುದು ಒಳ್ಳೆ ಬೆಳವಣಿಗೆ.
ಕೌಶಿಕ್ ಮುರಳಿ, ಅಧ್ಯಕ್ಷರು, ಶಂಕರ ಕಣ್ಣಿನ ಆಸ್ಪತ್ರೆ
ಈ ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಪ್ರಾತಿನಿಧ್ಯ ಸಿಕ್ಕಿದೆ. ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಐವತ್ತು ಕೋಟಿ ಭಾರತೀಯರ ಜೀವನದಲ್ಲಿ ದೊಡ್ಡ ಬದಲಾವಣೆ ತರಲು ಹೊರಟಿದ್ದಾರೆ. ಪ್ರಧಾನ ಮಂತ್ರಿ ರೀಸರ್ಚ್ ಫೆಲೋಶಿಪ್ ಮತ್ತು ರೀಸರ್ಚ್ ಅಲೋಕೇಷನ್ ಆರೋಗ್ಯ ರಕ್ಷಣಾ ಕ್ಷೇತ್ರಕ್ಕೆ ಭರವಸೆ.

ರೀತಾ ಸಿಂಗ್, ಸಿಎಂಡಿ, ಮೆಸ್ಕೋ ಸ್ಟೀಲ್
ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ ಈ ಬಜೆಟ್ ಸ್ವಾಗತಾರ್ಹ. ದೇಶಿಯ ಉತ್ಪಾದನಾ ವಲಯವನ್ನು ಪ್ರೋತ್ಸಾಹಿಸುವ ಯೋಜನೆಗಳು ಸಾಕಷ್ಟಿವೆ. ಸ್ಮಾರ್ಟ್ ಸಿಟಿ, ರೈಲು ಮತ್ತು ರಸ್ತೆ ಇಂಥದ್ದಕ್ಕೆ ಹೆಚ್ಚಿನ ಮೊತ್ತವನ್ನು ಎತ್ತಿಟ್ಟಿರುವುದು ಸ್ವಾಗತಾರ್ಹ. ಉಕ್ಕಿನ ಉದ್ಯಮಕ್ಕೆ ಅನುಕೂಲ ಮಾಡುವಂಥ ನಿರ್ಧಾರ ಕೈಗೊಳ್ಳಬಹುದಿತ್ತು.
ಅಮಿತ್ ಜೈನ್, ಕಾರ್ಯನಿರ್ವಾಹಕ ನಿರ್ದೇಶಕ, ಸಿಎಂಐ ಲಿಮಿಟೆಡ್
ಮೂಲಸೌಕರ್ಯಕ್ಕೆ ಒತ್ತು ನೀಡಿರುವುದರಿಂದ ಆ ವಲಯಕ್ಕೆ ಉತ್ತಮ ಬೆಂಬಲ ದೊರೆತಂತಾಗಿದೆ. ರೈಲ್ವೆ ಇಲಾಖೆಗೆ ಬಲ ತುಂಬಲಾಗಿದೆ.












Click it and Unblock the Notifications