Get Updates
Get notified of breaking news, exclusive insights, and must-see stories!

ಮುಲ್ಕಿ ದುರ್ಗಾ ದೇಗುಲದಲ್ಲಿ ಬಿಟ್ಟಿ ಊಟ ಇಲ್ಲ

Bappanadu temple, Mulki
ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಬಪ್ಪನಾಡು ದುರ್ಗಾಪರಮೇಶ್ವರಿ ದೇವಳದಲ್ಲಿ ಶುಕ್ರವಾರದ ಊಟದ ವ್ಯವಸ್ಥೆಯನ್ನು ಇದ್ದಕ್ಕಿದ್ದಂತೆ ನಿಲ್ಲಿಸಿರುವುದು ಸ್ಥಳೀಯ ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೆ ಜಿಲ್ಲೆಯ ಹೆಚ್ಚಿನ ದೇವಳದಲ್ಲಿ ಇರುವಂತೆ ಪ್ರತೀ ಶುಕ್ರವಾರ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದೀಗ ದೇವಸ್ಥಾನದ ಆಡಳಿತ ಮಂಡಳಿ ಖರ್ಚುವೆಚ್ಚದ ನೆಪವೊಡ್ಡಿ ಕೇವಲ ಹೊರಗಿನ ಮಂದಿಗೆ( ಕೆಲವೊಮ್ಮೆ ಅದೂ ಇಲ್ಲ ಎನ್ನುವ ಆರೋಪ ಇದೆ) ಮಾತ್ರ ಊಟದ ವ್ಯವಸ್ಥೆ ಮಾಡಿರುವುದಾಗಿ ಸ್ಥಳೀಯ ಭಕ್ತರು ದೂರಿದ್ದಾರೆ.

ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಐತಿಹಾಸಿಕ ಮಹತ್ವವಿದ್ದು ಈ ಹಿನ್ನೆಲೆಯಲ್ಲಿ ಬಪ್ಪನಾಡು ಆಸುಪಾಸಿನ ಅನೇಕ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಅಲ್ಲದೆ ಈ ದೇವಾಲಯ ಒಂಭತ್ತು ಮಾಗಣೆಗೆ ಒಳಪಟ್ಟಿರುವುದರ ಹಿನ್ನೆಲೆಯಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಹರಕೆ ಹಾಕುತ್ತಾರೆ. ಹೀಗೆ ಬರುವವರು ದೇವಾಲಯದ ಪ್ರಸಾದವೆಂದು ಊಟ ಮಾಡುತ್ತಾರೆ. ಆದರೆ ಇಲ್ಲಿನ ಆಡಳಿತ ಮಂಡಳಿ ಇದನ್ನು ನಿಲ್ಲಿಸುವ ಮೂಲಕ ಸ್ಥಳೀಯ ಭಕ್ತಾದಿಗಳ ಭಾವನೆಗೆ ಹಾನಿ ಮಾಡಿದೆ.

ಒಂದು ವೇಳೆ ಸ್ಥಳೀಯ ಭಕ್ತಾದಿಗಳು ಊಟ ಮಾಡಲೇ ಬೇಕಿದ್ದರೆ ಅವರು ದೇವಾಲಯದ ಯಾವುದಾದರೂ ಸೇವೆಯನ್ನು ಕಡ್ಡಾಯವಾಗಿ ಮಾಡಬೇಕಿದೆ. ಉದಾಹರಣೆಗೆ ಒಂದು ಪಂಚಕಜ್ಜಾಯ ಮಾಡಿದರೆ ಅವರಿಗೆ ಊಟದ ಕೂಪನ್ ಕೊಡಲಾಗುತ್ತದೆ. ಒಬ್ಬನಿಗೆ ಒಂದೇ ಕೂಪನ್. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಬಂದವರು ಒಬ್ಬ ಊಟ ಮಾಡಿದರೆ ಬಾಕಿ ಮಂದಿ ಉಪವಾಸ ಕೂರಬೇಕಾಗುತ್ತದೆ. ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರೂ ಇಲ್ಲಿನ ಆಡಳಿತ ಸಮಿತಿ ಮನೆಯಿಂದ ಹಣ ತಂದು ಭಕ್ತರಿಗೆ ಊಟ ಹಾಕುವಂತೆ ಮಾಡುತ್ತಿದ್ದಾರೆ ಎಂಬ ಆರೋಪ ಭಕ್ತಾದಿಗಳದ್ದು.

ದೇಗುಲ ದರ್ಶನ : ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಾಲಯ

ಹಾಗೆಂದು ದೇವಳದ ಆಡಳಿತ ಮಂಡಳಿ ಇಲ್ಲಿನ ಖರ್ಚು ವೆಚ್ಚಗಳನ್ನು ನಿಯಂತ್ರಿಸಲು ಹೊರಟಿದೆ ಅಂದುಕೊಂಡರೆ ಶುದ್ಧ ತಪ್ಪಾಗುತ್ತದೆ. ಇಲ್ಲಿನ ವಿದ್ಯುತ್ ಬಿಲ್ ತಿಂಗಳಿಗೆ ೫೦ ಸಾವಿರ ಬರುತ್ತಿದೆ. ಆದರೆ ಇಷ್ಟೊಂದು ಬಿಲ್ ಯಾಕೆ ಬರುತ್ತಿದೆ? ಎಲ್ಲೆಲ್ಲಿ ವಿದ್ಯುತ್ ಸೋರಿಕೆಯಾಗುತ್ತಿದೆ ಎನ್ನುವುದಕ್ಕೂ ಇನ್ನೂ ಉತ್ತರ ಸಿಕ್ಕಿಲ್ಲ. ಅರ್ಚಕರಿಗೂ ಇಲ್ಲಿ ಸರಿಯಾಗಿ ವೇತನ ಸಿಗುತ್ತಿಲ್ಲ. ಹಾಗಾಗಿ ಅವರು ಹೊರಗೆ ಬಂದು ತೀರ್ಥ ಕೊಡುತ್ತಿದ್ದಾರೆ. ಕನಿಷ್ಠ ಭಕ್ತರು ಕೊಡುವ ಹಣವಾದರೂ ಸಿಗಬಹುದು ಎಂಬ ಆಸೆ ಅವರದ್ದು.

ದೇವಸ್ಥಾನದ ಹಾಲ್‌ನಲ್ಲಿ ಶುಕ್ರವಾರ ಮದುವೆ ನಡೆದರೆ ಭಕ್ತಾದಿಗಳಿಗೆ ಹೊರಗಡೆ ಬಿಸಿಲಿನಲ್ಲೇ ಊಟ. ಇನ್ನಿಲ್ಲಿ 100 ಜನ ಊಟ ಮಾಡಿದರೆ 200 ಮಂದಿಯ ಲೆಕ್ಕವನ್ನು ಆಡಳಿತ ಮಂಡಳಿ ತೋರಿಸುತ್ತದೆ ಎನ್ನುವ ಆರೋಪವೂ ಭಕ್ತಾದಿಗಳಿಂದ ಕೇಳಿ ಬಂದಿದೆ. ಸ್ಥಳೀಯ ರೋಟರಿ ಕ್ಲಬ್ ಭಕ್ತಾದಿಗಳಿಗೆಂದು 15 ಲಕ್ಷ ವೆಚ್ಚ ಮಾಡಿ ಶೌಚಾಲಯ ನಿರ್ಮಿಸಿದ್ದರೂ ಅದಕ್ಕೆ ದೇವಳದ ವತಿಯಿಂದ ನೀರಿನ ಸಂಪರ್ಕ ಕೊಟ್ಟಿಲ್ಲ.

ಕೋಮು ಸೌಹಾರ್ದತೆಗೂ ಖ್ಯಾತಿ: ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯ ಕೋಮು ಸೌಹಾರ್ದತೆಗೂ ಖ್ಯಾತಿ ಪಡೆದಿದೆ. ಆದರೆ ಈಗ ಇಲ್ಲಿ ಅವ್ಯವಸ್ಥೆಗೆ ಕುಖ್ಯಾತಿಯಾಗುತ್ತಿದೆ. ಜಿಲ್ಲೆಯ ಹೆಚ್ಚಿನ ದೇವಾಲಯಗಳಲ್ಲಿ ಮಧ್ಯಾಹ್ನ ಹೊತ್ತು ಬರುವ ಭಕ್ತಾದಿಗಳಿಗೆ ಜಾತಿ, ಮತ ನೋಡದೆ ತುತ್ತು ಅನ್ನ ನೀಡಲಾಗುತ್ತದೆ. ಅದು ಜಿಲ್ಲೆಯ ದೇವಾಲಯಗಳ ಸತ್ಸಂಪ್ರದಾಯವೂ ಹೌದು. ಆದರೆ ಇದೆಲ್ಲಾ ಸತ್ಸಂಪ್ರದಾಯವನ್ನು ಬಪ್ಪನಾಡು ದೇವಸ್ಥಾನದ ಆಡಳಿತ ಮಂಡಳಿ ನಿಲ್ಲಿಸಿ ಭಕ್ತಾದಿಗಳು ಕೇವಲ ಹುಂಡಿಗೆ ಹಣ ಹಾಕಿದರೆ ಸಾಕು ಎಂಬ ಮನೋಭಾವನೆಯಲ್ಲಿರುವಂತೆ ಕಾಣುತ್ತಿದೆ.

ಮಧ್ಯಾಹ್ನದ ಹೊತ್ತು ಎಲ್ಲರಿಗೂ ಊಟ ಹಾಕುವ ಖರ್ಚುವೆಚ್ಚವನ್ನು ನೋಡಿಕೊಳ್ಳಲು ಮುಲ್ಕಿಯಲ್ಲಿ ಉದ್ಯಮಿಗಳಿಗೇನೂ ಕೊರತೆಯಿಲ್ಲ. ಹಾಗೆಂದು ಬಪ್ಪನಾಡು ದೇವಸ್ಥಾನದಲ್ಲಿ ಹಣ ಇಲ್ಲ ಎಂದಲ್ಲ. ಇಲ್ಲೂ ಲಕ್ಷಾಂತರ ಆದಾಯವಿದೆ. ಒಂದೊತ್ತು ಊಟ ಹಾಕಿ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಕೊಡುವಷ್ಟು ಹಣ ಇಲ್ಲಿದೆ. ಆದರೆ ಇಲ್ಲಿರುವ ಆಡಳಿತ ಮಂಡಳಿಯಲ್ಲಿರುವ ಅವಿವೇಕಿಗಳಿಗೆ ಅಷ್ಟೊಂದು ಕಾಳಜಿ, ಯೋಗ್ಯತೆ ಇರಬೇಕಲ್ಲ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. [ಜಿಲ್ಲಾಸುದ್ದಿ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+