ಬಿಜೆಪಿಗೆ ಮತ ನೀಡಿದ್ದಕ್ಕೆ ಕ್ಷಮಿಸಿ: ನೊಂದ ಮತದಾರ

ವಚನಭ್ರಷ್ಟರನ್ನು ಅಧಿಕಾರದಿಂದ ದೂರವಿಡಿ ಎಂದು ಜನರನ್ನು ಮರಳು ಮಾಡಿ ಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದವು. ಬದಲಾವಣೆಗಾಗಿ ಬಿಜೆಪಿಗೆ ಮತ ನೀಡಿ ಎಂದು ಚುನಾವಣೆಯ ಮಂತ್ರವಾಗಿಟ್ಟುಕೊಂಡಿದ್ದ ಪಕ್ಷವು ಈಗ ಸ್ವತಃ ತಾನೇ ಬದಲಾಗಿಬಿಟ್ಟಿದೆ.
ನಾಡಿನ ಅಭಿವೃದ್ಧಿ, ಜನಪರ ಕಾಳಜಿ ವಹಿಸಬೇಕಾಗಿದ್ದ ಸರ್ಕಾರವು ವಿವಾದ ಹಾಗೂ ಹಗರಣಗಳ ಆಗರವಾಗಿದೆ.ಉಪಚುನಾವಣೆಗಳ ಸರಮಾಲೆಗೆ ಕಾರಣವಾದ 'ಆಪರೇಷನ್ ಕಮಲ" ಕುಖ್ಯಾತಿಯ ಈ ಪಕ್ಷವು ಭ್ರಷ್ಟರಿಂದ ತುಂಬಿರುವುದು ಮತ ನೀಡಿದವರಿಗೆ ನೋವಾಗಿದೆ. ಭ್ರಷ್ಟಾಚಾರದ ಜೊತೆಗೆ ಅತ್ಯಾಚಾರ, ಗಣಿ ಲೂಟಿ, ವೈದ್ಯಕೀಯ ಕಾಲೇಜುಗಳಲ್ಲಿ ಅಕ್ರಮ ನೇಮಕಾತಿ, ಹೀಗೆ ಹತ್ತಾರು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಗಳ ಈ ಆಡಳಿತ ರೋಸಿಹೋಗಿದೆ.
ಹಾವೇರಿ ಗೋಲಿಬಾರ್ ಪ್ರಕರಣ, ಗೊಬ್ಬರ ಅಭಾವ ಗಲಾಟೆ, ಅಧಿಕಾರಿಗಳ ಬೇಕಾಬಿಟ್ಟಿ ವರ್ಗಾವಣೆ, ಹಣ ಬಲದಿಂದ ಚುನಾವಣೆಗಳ ಜಯ ಸಾಧಿಸಿದ್ದು, ನೆರೆ ಸಂತ್ರಸ್ತರಿಗೆ ಸೂರು ನೀಡದಿರುವುದು, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆಯಲ್ಲಿ ಗೋಲ್ ಮಾಲ್, ಸ್ವಂತ ಜಿಲ್ಲೆಗೆ ಅಧಿಕ ಅನುದಾನ ನೀಡಿಕೆ, ರೆಸಾರ್ಟ್ ರಾಜಕೀಯ, ಬಡವರ ಹಣದಲ್ಲಿ ಬಿಟ್ಟಿ ಟೂರುಗಳು, ಸಚಿವ ಕಟ್ಟಾ ಹಾಗೂ ಅವರ ಪುತ್ರರ ಕೆಐಎಡಿಬಿ ಹಗರಣ .. ಇತ್ಯಾದಿ
ಇದು ಇಷ್ಟಕ್ಕೇ ನಿಲ್ಲಬಹುದು ಎಂದುಕೊಂಡಿದ್ದರೆ ಮುಖ್ಯಮಂತ್ರಿಗಳ ಕುಟುಂಬ ಪ್ರೇಮಕ್ಕಾಗಿ ಬಿಡಿಎ ಮತ್ತು ಐಎಡಿಬಿಯ ದುರ್ಬಳಕೆ ಮಾಡಿಕೊಂಡು ಬೇಕಾಬಿಟ್ಟಿ ಸರ್ಕಾರಿ ಭೂಮಿಯ ಡಿನೋಟಿಫಿಕೇಷನ್ ಮಾಡಿರುವುದು ಹೇಸಿಗೆ ಹುಟ್ಟಿಸುತ್ತದೆ.ಇದನ್ನು ನಾನು ಬಿಜೆಪಿಯಿಂದ ಬಯಸಿರಲಿಲ್ಲ. ಕರ್ನಾಟಕದ ಜನರೇ, ಬಿಜೆಪಿಗೆ ಮತ ನೀಡಿ ಬೆಂಬಲಿಸಿದ್ದಕ್ಕೆ ನನ್ನನ್ನು ಕ್ಷಮಿಸಿ.












Click it and Unblock the Notifications