ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಕ್ಕ’ರೆಯ ಅಚ್ಚುಕಟ್ಟಿನ ಸಮ್ಮೇಳನಕ್ಕೆ ಸಜ್ಜು

By Staff
|
Google Oneindia Kannada News

ಅಮೆರಿಕದಲ್ಲಿ ನೆಲೆಸಿರುವ ಬಹುತೇಕ ಕನ್ನಡಿಗರು ಈ ಸಮಾವೇಶಕ್ಕೆ ಉದಾರವಾಗಿ ಹಣ ನೀಡಿದ್ದಾರೆ. ಸ್ಥಳೀಯ ಮೇರಿಲ್ಯಾಂಡ್‌ ಸರಕಾರ 25 ಸಾವಿರ ಡಾಲರ್‌ ಕೊಡುಗೆಯಾಗಿ ನೀಡಿದೆ. ಇಷ್ಟೇ ಹಣ ನೀಡುವುದಾಗಿ ಕರ್ನಾಟಕ ಸರಕಾರ ತಿಳಿಸಿದೆ. ಆದರೆ ಈತನಕ ಹಣ ಬಂದಿಲ್ಲ. ಸಮ್ಮೇಳನದ ಹೊತ್ತಿಗೆ ಕೊಡಬಹುದೆಂಬ ನಿರೀಕ್ಷೆಯಿದೆ.

ಈ ಸಮ್ಮೇಳನಕ್ಕಾಗಿ ಎರಡು ವರ್ಷಗಳಿಂದ ಸಿದ್ಧತೆ, ರೂಪರೇಷೆ ನಡೆದಿದೆ. ಈಗಾಗಲೇ 3,300 ಪ್ರತಿನಿಧಿಗಳು ಹೆಸರು ನೋಂದಣಿ ಮಾಡಿಸಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಬಹುದು. ಕರ್ನಾಟಕದಿಂದ ಇನ್ನೂರು ಮಂದಿ ಆಗಮಿಸಲಿದ್ದಾರೆ.

250ಕಾರ್ಯಕರ್ತರು ಅವಿಶ್ರಾಂತ ದುಡಿಯಲಿದ್ದಾರೆ. ಪ್ರತಿಯಾಬ್ಬರಿಗೂ ಗೌರವ, ಆತ್ಮೀಯತೆ, ಉಪಚಾರ ನೀಡಿ ಖುಷಿಯಿಂದ ಕಳಿಸುವ ಏರ್ಪಾಡು ಮಾಡಲಾಗಿದೆ.

ಅಮೆರಿಕದ ಏಳು ಸಂಸದರು, ಮೇರಿಲ್ಯಾಂಡ್‌ ಗವರ್ನರ್‌, ಅಮೆರಿಕದಲ್ಲಿನ ಭಾರತೀಯ ರಾಯಭಾರಿ, ಕರ್ನಾಟಕದ ಸುಮಾರು 50 ಶಾಸಕರು, ರಾಜ್ಯದ ಎಂಟು ಐಎಎಸ್‌ ಅಧಿಕಾರಿಗಳು, ಕಾಸಿಯಾ ನಿಯೋಗದ ಸದಸ್ಯರು, ಉದ್ಯಮಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಕರ್ನಾಟಕ ಸರಕಾರದ ಪರವಾಗಿ ಉಪಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಲಿದ್ದಾರೆ.

ಅಮೆರಿಕಕ್ಕೆ ಕನ್ನಡ ಸಮ್ಮೇಳನ ಹೊಸತೇನಲ್ಲ. ಪ್ರತಿ ಎರಡು ವರ್ಷಗಳಿಗೊಮ್ಮೆ ಸಮ್ಮೇಳನ ನಡೆಸುತ್ತಾ ಬಂದಿದ್ದೇವೆ. ಕರ್ನಾಟಕದ ಅಭಿವೃದ್ಧಿ ಹಾಗೂ ಕನ್ನಡ ಜಾಗೃತಿ ಈ ಸಮಾವೇಶದ ಮುಖ್ಯ ಆಶಯ. ವಿಶ್ವದ ಎಲ್ಲ ಕನ್ನಡಿಗರನ್ನು ಒಂದೆಡೆ ಸೇರಿಸಿ, ಚಿಂತಕರ ಚಾವಡಿ ರೂಪಿಸಿ ಕರ್ನಾಟಕದ ಪ್ರಗತಿಗೆ ಸ್ಪಷ್ಟ ರೂಪರೇಷೆ ಕೊಡುವುದು ನಮ್ಮ ಗುರಿ. ಅದಕ್ಕಾಗಿ ಈ ಸಲ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ವ್ಯಾಪಾರ, ವ್ಯವಹಾರಗಳಿಗೆ ಒತ್ತು ನೀಡುವ ಬಿಜಿನೆಸ್‌ ಗೋಷ್ಠಿಯನ್ನು ಏರ್ಪಡಿಸಿರುವುದು ವೈಶಿಷ್ಟ್ಯ. ಇದರಿಂದ ಕನ್ನಡಿಗರಿಗೆ ಕರ್ನಾಟಕ ಹಾಗೂ ಅಮೆರಿಕದಲ್ಲಿ ಹೊಸ ಉದ್ಯಮ ಆರಂಭಿಸಲು ಸಹಾಯಕವಾಗಲಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮೆರೆದ ಕನ್ನಡಿಗ ಉದ್ಯಮಪತಿಗಳು ಮಾರ್ಗದರ್ಶನ, ಸಲಹೆ ನೀಡಲಿದ್ದಾರೆ. ಸದವಕಾಶಗಳ ನಾಡಾದ ಅಮೆರಿಕದಲ್ಲಿ ಕನಸುಗಳನ್ನು ಬಿತ್ತುವ ಮೂಲಕ ಕನ್ನಡಿಗರನ್ನು ಉದ್ಯಮಗಳತ್ತ ಸೆಳೆಯುವುದೂ ಇದರ ಉದ್ದೇಶ.

ಊಟ ಹಾಗೂ ತಿಂಡಿಯ ಮೂಲಕ ಸಹ ಅಮೆರಿಕದಲ್ಲಿ ಕರ್ನಾಟಕವನ್ನು ಅನಾವರಣಗೊಳಿಸಲು ರಾಜ್ಯದ ಎಲ್ಲ ಭಾಗಗಳ ತಿಂಡಿ, ತಿನಿಸುಗಳನ್ನು ಉಣಬಡಿಸಲಾಗುವುದು. ಅದಕ್ಕಾಗಿ ವಿಶೇಷ ಅಡುಗೆಭಟ್ಟರನ್ನು ಅಣಿಗೊಳಿಸಲಾಗಿದೆ. ಸಮ್ಮೇಳನದ ಅಡುಗೆಮನೆ ಕರ್ನಾಟಕದ ಬಾಯಿರುಚಿ ಭಾವರುಚಿಯ ಸಂಗಮವಾಗಲಿದೆ. ಸಮ್ಮೇಳನದ ಎಲ್ಲ ದಿನ ರಾಮನವಮಿಯಂದು ನೀಡುವಂಥ ಮಜ್ಜಿಗೆ ನೀಡಲಾಗುತ್ತದೆ.

ಅಮೆರಿಕದಲ್ಲಿ ಪ್ರಪ್ರಥಮ ಬಾರಿಗೆ ‘ಕರ್ನಾಟಕ ದರ್ಶನ’ ಮೆರವಣಿಗೆ ಸಿದ್ಧಪಡಿಸಲಾಗಿದೆ. ಅಮೆರಿಕದ ಒಂದೊಂದು ಕನ್ನಡ ಸಂಘ ಒಂದೊಂದು ಜಿಲ್ಲೆಯ ವೈಶಿಷ್ಟ್ಯಗಳನ್ನು ಸ್ತಬ್ಧ ಚಿತ್ರಗಳ ಮೂಲಕ ಬಿಂಬಿಸಲಿದೆ. ಒಂದೆರಡು ಮೈಲಿ ಉದ್ದದ ಮೆರವಣಿಗೆ ಕರ್ನಾಟಕದ ಸಮಗ್ರ ಪರಿಚಯ ಮಾಡಿಕೊಡಲಿದೆ.

ಸಮ್ಮೇಳನದಲ್ಲಿ ಮೊದಲ ಬಾರಿಗೆ ಅಧ್ಯಾತ್ಮಿಕ ಗೋಷ್ಠಿ ಏರ್ಪಡಿಸಲಾಗಿದ್ದು, ಆರ್ಟ್‌ ಆಫ್‌ ಲಿವಿಂಗ್‌ ಖ್ಯಾತಿಯ ಶ್ರೀಶ್ರೀ ರವಿಶಂಕರ್‌, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ವಿಜಾಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮುಂತಾದವರು ಭಾಗವಹಿಸಲಿದ್ದಾರೆ.

ಇದೇ ಮೊದಲ ಬಾರಿಗೆ ಸಮ್ಮೇಳನದಲ್ಲಿ ಆರು ಪುಸ್ತಕಗಳು ಬಿಡುಗಡೆಯಾಗಲಿವೆ. ಕಾದಂಬರಿ, ಸಣ್ಣಕತೆ, ತಂತ್ರಜ್ಞಾನ ವಿಷಯಗಳಲ್ಲಿ ಅಮೆರಿಕ ಕನ್ನಡಿಗರ ಬರಹಗಳನ್ನೊಳಗೊಂಡ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಅಲ್ಲದೆ ಸಮ್ಮೇಳನದ ಎರಡು ದಿನ ಮಕ್ಕಳಿಗೆ ಕನ್ನಡ ಕಲಿಸುವ ಗೋಷ್ಠಿಯನ್ನು ಸಹ ಏರ್ಪಡಿಸಲಾಗಿದೆ. ಅಮೆರಿಕದಲ್ಲಿ ಕನ್ನಡ ಹೇಳಿಕೊಡುವ ಶಾಂತಿತಂತ್ರ ಈ ಗೋಷ್ಠಿ ನಡೆಸಿಕೊಡಲಿದ್ದಾರೆ.

ಪ್ರತಿಭಾ ಜ್ಯೂಯೆಲರ್ಸ್‌, ನವರತ್ನ ಜ್ಯೂಯೆಲರ್ಸ್‌, ದೀಪಂ ಸಿಲ್ಕ್ಸ್‌ ಸೇರಿದಂತೆ ಪ್ರತಿಷ್ಠಿತ ಉದ್ಯಮ ಸಂಸ್ಥೆಗಳು ಮಳಿಗೆಗಳನ್ನು ತೆರೆದಿವೆ. ಸಮ್ಮೇಳನಕ್ಕೆ ಆಗಮಿಸುವ ರಾಜ್ಯದ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಅನೇಕ ವರ್ಷಗಳ ನಂತರ ನಿರ್ಮಾಣಗೊಂಡ ಪೌರಾಣಿಕ ಕಥಾವಸ್ತು ಒಳಗೊಂಡಿರುವ ಶಿವರಾಜಕುಮಾರ್‌ ನಟಿಸಿದ ‘ಗಂಡುಗಲಿ ಕುಮಾರರಾಮ’ ಚಿತ್ರ ಸುಮಾರು ನಾಲ್ಕುಸಾವಿರ ಪ್ರೇಕ್ಷಕರು ಏಕಕಾಲದಲ್ಲಿ ನೋಡಬಹುದಾದ ಚಿತ್ರಮಂದಿರದಲ್ಲಿ ಪ್ರದರ್ಶಿತವಾಗಲಿದೆ. ಅಂದ ಹಾಗೆ ಸಮ್ಮೇಳನದ ಮುಖ್ಯ ಸಭಾಂಗಣಕ್ಕೆ ಕರ್ನಾಟಕ ರತ್ನ ಡಾ.ರಾಜ್‌ಕುಮಾರ್‌ ಅವರ ಹೆಸರನ್ನಿಡಲಾಗಿದೆ.

***

ಈ ಸಲದ ವಿಶ್ವ ಕನ್ನಡ ಸಮ್ಮೇಳನ ಸಾಹಿತ್ಯ, ಸಂಸ್ಕೃತಿ ಹಾಗೂ ವ್ಯಾಪಾರದ ಜತೆಗೆ ವಧು-ವರರಿಗೂ ವೇದಿಕೆಯಾಗಲಿದೆ. ಸಮ್ಮೇಳನದಲ್ಲಿ ಮೊದಲ ಬಾರಿಗೆ ವ್ಯವಸ್ಥಿತವಾಗಿ ವಧು- ವರರನ್ನು ಮುಖಾಮುಖಿಯಾಗಿಸಲು ವಿಶೇಷ ಏರ್ಪಾಟು ಮಾಡಲಾಗಿದೆ. ಈಗಾಗಲೇ 75 ಮಂದಿ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದಾರೆ. ಮೂರು ದಿನಗಳ ಕಾಲ ವಧುವರರು ಖುದ್ದಾಗಿ ಅಥವಾ ತಮ್ಮ ತಂದೆ-ತಾಯಿ ಸಮ್ಮುಖದಲ್ಲಿ ಮುಖಾಮುಖಿಯಾಗಬಹುದು.

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :
ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?
ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ
ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004

ಪೂರ್ವ ಸಿದ್ಧತೆ Be a patronate! Use .in e-mail Post Your Views

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X