ಅಲ್ಲಿಯೂ ಸಲ್ಲುವ, ಇಲ್ಲಿಯೂ ಸಲ್ಲುವ ಆನೆಕಲ್‌ ಕೃಷ್ಣಮೂರ್ತಿ

ಅಮಾತ್ಯ
[email protected]

ಎಂ. ಕೃಷ್ಣಮೂರ್ತಿ !

ಈ ಹೆಸರನ್ನು ನೀವು ಕೇಳಿರಬಹುದು, ಕೇಳಿದ್ದೀರಾ ! ಪಳಗಿದ ಆನೆಗಳನ್ನು ಸಾಕಿಕೊಂಡಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬೇಲಿಯಾಚೆ ಮದಸೊಕ್ಕಿದ ಆನೆಗಳ ಭಯದಲ್ಲಿ ಬದುಕುವ, ಕನಕಪುರ ಪಕ್ಕದ ಆನೇಕಲ್‌ ತಾಲ್ಲೂಕು ವಾಸಿ ಮುನಿಯಪ್ಪನವರ ಮಗ ಕೃಷ್ಣಮೂರ್ತಿ. ಬುಲ್‌ಟೆಂಪಲ್‌ ರಸ್ತೆ ಬಿ. ಎಂ. ಎಸ್‌ ಕಾಲೇಜಿನಿಂದ ಬಿ.ಇ. ಪದವಿಗಳಿಸಿ ಅಮೆರಿಕಾದಲ್ಲಿ 36 ವರ್ಷ ಸಿವಿಲ್‌ ಇಂಜಿನಿಯರ್‌ ಆಗಿ ಕೆಲಸ ಮಾಡಿ ಇದೀಗ ಭಾರತಕ್ಕೆ ಹಿಂತಿರುಗಿ ಬಂದಿರುವ ಅಮೆರಿಕನ್ನಡಿಗ. ಜೀವನೋಪಾಯಕ್ಕಾಗಿ ಜಂಜಾಟಗಳನ್ನು ಅನುಭವಿಸಿದ್ದು ಸಾಕು, ಇನ್ನುಮುಂದೆ ನಮ್ಮ ದೇಶದಲ್ಲಿ ಸಾರ್ಥಕವಾಗಿ ಬದುಕೋಣ ಎಂದು ಪರಿಭಾವಿಸಿ ಬೆಂಗಳೂರಿನಲ್ಲಿ ತಳಊರಿರುವ ಕರ್ನಾಟಕ ಕನ್ನಡಿಗ.

ವಿಳಾಸ : ಮನೆ ನಂ 44, ಎಚ್‌.ಬಿ. ಸಮಾಜ ರಸ್ತೆ. ಬಸವನಗುಡಿ, ಬೆಂಗಳೂರು. 560004. ಇ-ಅಂಚೆ : [email protected]

M.Krishna Murthy - A Proud Kannadigaನೀವು ಲಾಸ್‌ಏಜಂಲಿಸ್‌ ಪ್ರದೇಶದವರಾಗಿದ್ದರೆ ಇವರ ಹೆಸರು ಕೇಳಿಯೇ ಇರುತ್ತೀರ. ವೈಯಕ್ತಿಕ ಪರಿಚಯ ಇರಲಿಕ್ಕೂ ಸಾಕು. ದಕ್ಷಿಣ ಕ್ಯಾಲಿಫೋರ್ನಿಯ ಕನ್ನಡ ಸಂಘದಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಇವರದು. ಪದಾಧಿಕಾರಿಯಾಗದೆಯೂ ಕನ್ನಡ ಸಂಬಂಧಿ ಕಾರ್ಯಕ್ರಮ, ಸುಗಮ ಸಂಗೀತ, ಕ್ಯಾಸೆಟ್‌, ಸಿ.ಡಿ ಪ್ರಚಾರ, ಕವಿ-ಕಲಾವಿದರಿಗೆ ಪ್ರೋತ್ಸಾಹ, ಆದರಾತಿಥ್ಯ ಮಾಡುವುದರಲ್ಲಿ ಸಂತೋಷಕಂಡುಕೊಡವರು. ಜೊತೆಜೊತೆಗೆ ಸಂಘ ಸಂಸ್ಥೆಗಳನ್ನು ಕಟ್ಟುವ, ಬೆಳೆಸುವ ಮತ್ತು ಸಂಘಗಳನ್ನು ಕಾಡುವ ಅನಿಷ್ಟಗಳನ್ನು ತೊಡೆದುಹಾಕುವ ಚಾಣಾಕ್ಷತನವನ್ನೂ ಮೈಗೂಡಿಸಿಕೊಂಡ ವ್ಯಕ್ತಿ.

ಅಕ್ಕ ಸಂಘಟನೆ 98ರಲ್ಲಿ ಜನ್ಮತಾಳಿದಾಗಿನಿಂದ ಅದರೊಡನೆ ಹಾಸುಹೊಕ್ಕಾಗಿರುವ ಕೃಷ್ಣಮೂರ್ತಿ ಅಕ್ಕದ ಆಜೀವ ಸದಸ್ಯ. ಫೀನಿಕ್ಸ್‌ ಸಮ್ಮೇಳನದಿಂದ ಮೊದಲುಗೊಂಡು ಸದ್ಯದ ಬಾಲ್ಟಿಮೋರ್‌ ಸಮ್ಮೇಳನದವರೆಗೆ ಸಂಸ್ಥೆಯ ಉದಯ-ಬೆಳವಣಿಗೆ ಮತ್ತು ಸವಾಲುಗಳಿಗೆ ಸಾಕ್ಷಿಯಾದವರು. 2003ರ ಅಕ್ಕ ನಿರ್ದೇಶಕ ಮಂಡಳಿಗೆ ಆಯ್ಕೆಯಾಗಿ ನಂತರ ಖಚಾಂಜಿಯಾಗಿ ಸೇವೆ ಸಲ್ಲಿಸಿದವರು.

'ನನಗೆ ಚುನಾವಣೆ ಪದವಿ ಪುರಸ್ಕಾರ ಯಾವುದೂ ಬೇಡ, ಸಾಮಾನ್ಯ ಸದಸ್ಯನಾಗಿ ಅಕ್ಕ ಕೆಲಸ ಮಾಡುತ್ತೇನೆ" ಅಂದರೂ ಅಕ್ಕ ಸ್ನೇಹಿತ ವರ್ಗ ಅದಕ್ಕೆ ಒಪ್ಪಲಿಲ್ಲ. ಹಾಗಾಗಿ ಈ ಬಾರಿ ಮತ್ತೆ ಚುನಾವಣೆಗೆ ನಿಂತು ನಿರ್ದೇಶಕನಾಗಿ ಆರಿಸಿ ಬಂದೆ ಎನ್ನುತ್ತಾರವರು.

ಸಂಘಟನೆಗಳಲ್ಲಿ ಕೆಲಸಮಾಡುವುದೆಂದರೆ ಅಪಾರ ಆಸಕ್ತಿ ಹೊಂದಿರುವ ಇವರು ಬಿಎಂಎಸ್‌ ಹಳೆ ವಿದ್ಯಾರ್ಥಿ ಸಂಘ ಕಟ್ಟಿಬೆಳೆಸುವುದರಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ. BMSAAA (BMS College of Engineering Allumni Association of America) ಸಂಸ್ಥೆಯ ವತಿಯಿಂದ ಪ್ರತಿವರ್ಷ 22 ಮಂದಿ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡಮಾಡಲಾಗುತ್ತದೆ. ಅಕ್ಕ ಚಾರಿಟಿ ಸಂಸ್ಥೆಯಲ್ಲೂ ಅನವರತ ಕ್ರಿಯಾಶೀಲ ಕೃಷ್ಣಮೂರ್ತಿ , ಸುನಾಮಿ ಸಂತ್ರಸ್ಥರಿಗೆ ನಿಧಿ ಸಂಗ್ರಹಿಸುವಲ್ಲಿ, ಅಕ್ಕ ಪ್ರಾಯೋಜಿತ ಕುವೆಂಪು ಸಮಗ್ರ ಕೃತಿಗೆ ಪ್ರಕಟಣೆಗೆ ನಿಧಿ ಸಂಗ್ರಹಿಸುವಲ್ಲಿ, ಅಕ್ಕ ಚಾರಿಟಿ ವತಿಯಿಂದ ಕರ್ನಾಟಕದ ನಾಲಕ್ಕು ಶಾಲೆಗಳಿಗೆ ದೇಣಿಗೆ ಸಂಗ್ರಹಿಸಿ ವಿತರಣೆ ಮಾಡುವುದರಲ್ಲಿ ಸಂತೋಷಪಟ್ಟಿದ್ದಾರೆ.

ಕೃಷ್ಣಮೂರ್ತಿಯವರು ಅಮೆರಿಕಾದಿಂದ ಹಿಂತಿರುಗಿ ಬಂದಿದ್ದರೂ ಅಮೆರಿಕಾದಲ್ಲಿ ತಾವೇ ಕಟ್ಟಿಕೊಂಡ ಜವಾಬ್ದಾರಿಗಳಿಂದ ಹಿಂದೆ ಸರಿದಿಲ್ಲ. ಅವರು ಬೆಂಗಳೂರಿಗೆ ಬಂದದ್ದು ಅಕ್ಕ ಸಂಸ್ಥೆಗೂ ಒಳ್ಳೆಯದಾಯಿತೆಂದೇ ಭಾವಿಸಬೇಕು. ಸದ್ಯಕ್ಕೆ ಕೆಎಂ 4 ನೇ ಅಕ್ಕ ಸಮ್ಮೇಳನದ ಭಾರತ ಸಂಯೋಜನಾಧಿಕಾರಿಯಾಗಿ ಕಾರ್ಯನಿರತರಾಗಿದ್ದಾರೆ. ಭಾರತ-ಅಮೆರಿಕಾದೊಂದಿಗೆ ಸಂವಹನ ಸಾಧಿಸುವುದಕ್ಕೆ ಅವರ ಅನುಭವ, ಸಂಪರ್ಕ, ಸ್ನೇಹಶೀಲತೆ ಸಹಕಾರಿಯಾಗಿದೆ.

ಮಾತುಕತೆ : ಬೆಂಗಳೂರು ಕಾಲಮಾನ ಜುಲೈ 26ರ ಸಂಜೆ ಕೃಷ್ಣಮೂರ್ತಿಗಳ ಭೇಟಿಯಾಯಿತು. ಬಾಲ್ಟಿಮೋರ್‌ ಸಮ್ಮೇಳನ ಕುರಿತ ಅನೇಕ ಸಂಗತಿಗಳನ್ನು ದಟ್ಸ್‌ಕನ್ನಡ ಪ್ರತಿನಿಧಿಯಾಂದಿಗೆ ಅವರು ಹಂಚಿಕೊಂಡರು. ದಿನಕ್ಕೆ 12 ಗಂಟೆಗೂ ಮಿಕ್ಕು ಸಮ್ಮೇಳನದ ಕೆಲಸ ಅವರಿಗೆ. ಸರಕಾರದೊಂದಿಗೆ ಸಂಪರ್ಕ, ಸಮ್ಮೇಳನಕ್ಕೆ ಇಲ್ಲಿಂದ ತೆರಳುವ ಪ್ರತಿನಿಧಿಗಳಿಗೆ ಮಾರ್ಗದರ್ಶನ, ವೀಸಾ-ಗೂಸಾ ಅಡಚಣೆಗಳು, ಸ್ಮರಣಸಂಚಿಕೆ, ಹೊತ್ತಿಗೆ ಮುದ್ರಣ-ರವಾನೆಯ ಜವಾಬ್ದಾರಿಗಳು. ಅವೆಲ್ಲವಿಕ್ಕಿಂತ ಮುಖ್ಯವಾಗಿ ಸ್ಮರಣಸಂಚಿಕೆಗೆ ಜಾಹಿರಾತು ಕ್ರೋಢೀಕರಣ, ದಾನಿಗಳೊಂದಿಗೆ ಸಂಪರ್ಕ, ಮಾಧ್ಯಮಗಳೊಂದಿಗೆ ಒಡನಾಟ.. ಮುಂತಾದ ಕೆಲಸಗಳನ್ನು ಯಾವ ಸಂದರ್ಭದಲ್ಲೂ ಬೇಜಾರುಪಟ್ಟುಕೊಳ್ಳದೆ ಮಾಡಿಕೊಂಡು ಬರುತ್ತಿದ್ದಾರೆ.

ಬೆಂಗಳೂರು ತುಂಬಾ ಓಡಾಡಿ ಸಮ್ಮೇಳನಕ್ಕೆ ದಾನಿಗಳನ್ನು ಹುಡುಕುತ್ತಿದ್ದಾರೆ. ಈಗಾಗಲೇ ಸುಮಾರು ನಾಲಕ್ಕೂ ಲಕ್ಷ ರೂಪಾಯಿಗಳಿಗೂ ಹೆಚ್ಚು ನಿಧಿ ಸಂಗ್ರಹಿಸಿದ್ದಾರೆ ಕೃಷ್ಣಮೂರ್ತಿ. ಕೋಟಿಗಟ್ಟಲೆ ವೆಚ್ಚವಾಗುವ ಸಮ್ಮೇಳನಕ್ಕೆ ಹೋಲಿಸಿದರೆ ಈ ಮೊತ್ತ ಅಲ್ಪ ಎನಿಸಬಹುದು. ಆದರೆ 4ನೇ ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ ಮುದ್ರಣಕ್ಕೆ ಅಗತ್ಯವಾದ 10 ಲಕ್ಷಕ್ಕೂ ಹೆಚ್ಚು ಮೊತ್ತದ ಅರ್ಧದಷ್ಟಾದರೂ ಬಂತಲ್ಲ!

ಮಕ್ಕಳು ಮೊಮ್ಮಕ್ಕಳನ್ನು ಅಮೆರಿಕಾದಲ್ಲಿ ಬಿಟ್ಟು ಇಲ್ಲಿಗೆ ಬಂದು ನೆಲೆಸಿರುವ ಕೃಷ್ಣಮೂರ್ತಿ, ಪತ್ನಿ ಶ್ರೀಮತಿ ಲಕ್ಷ್ಮಿ ಅವರೊಂದಿಗೆ ಸಮ್ಮೇಳನ ನಿಮಿತ್ತ ಮತ್ತೆ ಅಮೆರಿಕಾಗೆ ಹೋಗುತ್ತಿದ್ದಾರೆ. ಅವರು ವಿಮಾನ ಹಾರುವುದು ಆಗಸ್ಟ್‌ 14ರಂದು. ಅದಕ್ಕೆ ಮುನ್ನ ಸಮ್ಮೇಳನ ಕುರಿತಂತೆ ನಿಮಗೇನಾದರೂ ಹೆಚ್ಚಿನ ವಿವರ ಬೇಕಿದ್ದರೆ ಫೋನ್‌ ಎತ್ತಿಕೊಳ್ಳಿ : 9844758300.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+