‘ಸುವರ್ಣವಾಹಿನಿ’ : ಒಂದು ನೋಟ
ನಳಿನಿ ಮೈಯ, ಡೇರಿಯನ್, ಚಿಕಾಗೋ
ಕೈಯಲ್ಲಿದ್ದ ದೊಡ್ಡ ಹೊತ್ತಗೆಯ ಕಡೆಗೊಮ್ಮೆ ಕಣ್ಣು ಹಾಯಿಸಿದೆ. ಬಣ್ಣಬಣ್ಣದ ಚಿತ್ತಾರಗಳ ಮುಖಪುಟದ ಮೇಲೆ 'ಸುವರ್ಣವಾಹಿನಿ, 4ನೇ ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆ" ಎಂದು ದೊಡ್ಡ ಅಕ್ಷರದಲ್ಲಿ ಬರೆದಿತ್ತು. ಹಲವು ದಿನಗಳ ಹಿಂದೆ ನಡೆದ ಅದ್ದೂರಿಯ ವಿಶ್ವ ಕನ್ನಡ ಸಮ್ಮೇಳನ ಈಗ ಸ್ಮರಣೆಯಲ್ಲಿ ಮಾತ್ರ ಉಳಿದು ಈ ಸ್ಮರಣ ಸಂಚಿಕೆಯೊಂದೇ ಅದರ ಕುರುಹಾಗಿತ್ತು.
ಪ್ರತಿ ಬಾರಿಯಂತೆ ಕಥೆ, ಕವನ, ಪ್ರಬಂಧ, ವೈಚಾರಿಕ ಲೇಖನ ಎಲ್ಲ ಕಲಸು ಮೇಲೋಗರಗಳನ್ನೊಳಗೊಂಡ ಅತಿ ದೊಡ್ಡ ಸ್ಮರಣ ಸಂಚಿಕೆಯನ್ನು ಹೊರತರುವುದರ ಬದಲು ಈ ಬಾರಿ ಕಥಾವಾಹಿನಿ, ತಂತ್ರಜ್ಞಾನವಾಹಿನಿ ಎಂದು ಎರಡು ಪ್ರತ್ಯೇಕ ಗ್ರಂಥಗಳನ್ನು ಮಾಡಿ, ಪ್ರಬಂಧ ಮತ್ತು ಕವನಗಳಿಗಾಗಿ ಈ ಸ್ವರ್ಣವಾಹಿನಿ ಮಾಡಿದ್ದು ಬಹಳ ಔಚಿತ್ಯಪೂರ್ಣವಾಗಿದೆ ಅನ್ನಿಸಿತು. ಜೊತೆಗೆ ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಿ ಗೆದ್ದ ಸಂಪನ್ನ ಮುತಾಲಿಕ್ ಅವರ 'ಭರದ್ವಾಜ" ಕಾದಂಬರಿಯನ್ನು ಪ್ರಕಟಿಸುವ ಹೊಣೆ ಹೊತ್ತಿದ್ದಲ್ಲದೆ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಮುತಾಲಿಕ್ ಅವರನ್ನು ಭಾರತದಿಂದ ಕರೆಸಿಕೊಂಡದ್ದಂತೂ ಎಲ್ಲರೂ 'ಭೇಷ್" ಅಂತ ಬೆನ್ನು ತಟ್ಟಬೇಕಾದ ವಿಚಾರ. ಕನ್ನಡಮ್ಮನಿಗೆ ನಮ್ಮ ಅಳಿಲಸೇವೆ ಎಂಬಂತೆ ಅರಳುತ್ತಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಈ ಕೆಲಸ ಅಮೆರಿಕನ್ನಡಿಗರಾದ ನಮಗೆಲ್ಲ ಹೆಮ್ಮೆ ತರುವಂತಹ ಕೆಲಸ!
ಹೊತ್ತಗೆಯ ಒಳಗೆ ಸಂಪಾದಕೀಯದಲ್ಲಿ ''ಅಮೆರಿಕನ್ನಡಿಗರ ಅಕ್ಕರೆಯ "ಅಕ್ಕ", ರಾಜಧಾನಿಯ ಹೆಮ್ಮೆಯ ಸಂಸ್ಥೆ 'ಕಾವೇರಿ" ಕನ್ನಡ ಸಂಘದ ಸಹಯೋಗದೊಂದಿಗೆ ಆಯೋಜಿಸಿರುವ ವಿಶ್ವ ಕನ್ನಡ ಸಮ್ಮೇಳನವೆಂದರೆ ಒಂದು ತೂಕ ಹೆಚ್ಚಿನ ಮೆರುಗು"" ಎಂದು ಬರೆದಿದ್ದರು. ಈ ಸ್ಮರಣ ಸಂಚಿಕೆ ಆ ಭಾವನೆಯನ್ನು ಸಮರ್ಥವಾಗಿ ಪ್ರತಿಬಿಂಬಿಸುತ್ತದೆ ಅಂದರೆ ಅದು ಖಂಡಿತ ಅತಿಶಯೋಕ್ತಿಯಲ್ಲ! ಪ್ರಾಯಶಃ ಈ ಬಗೆಯ ಲಾಭರಹಿತವಾದ, ಸ್ವಂತದ ಏಳಿಗೆಗೆ ಯಾವ ಉಪಯೋಗಕ್ಕೂ ಬರದ, ಕನ್ನಡ ಸೇವೆಯೊಂದನ್ನು ಮಾತ್ರ ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುವ ಸಂಪಾದಕರ ಕಷ್ಟ ನಷ್ಟಗಳು ಹೊರಗೆ ನಿಂತು ನೋಡುವವರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ.
''ದಿನ ಒಂದರಲ್ಲಿರುವ ಇಪ್ಪತ್ನಾಲ್ಕು ಘಂಟೆಗಳನ್ನೂ ಹೀಜಿ, ಅತ್ತ ವೃತ್ತಿಯ ಒತ್ತಡಗಳು, ಇತ್ತ ಗೃಹಸ್ಥಾಶ್ರಮದ ಜವಾಬ್ದಾರಿಗಳ ನಡುವೆ ಸಿಕ್ಕಿ, ಪತಿ-ಪತ್ನಿಯ, ಮತ್ತು ಮಕ್ಕಳ ಸಾನ್ನಿಧ್ಯವನ್ನು ತ್ಯಜಿಸಿ, ನಿದ್ರಾಭಂಗವನ್ನು ಲೆಕ್ಕಿಸದೆ ದುಡಿದು"" ಅಂತ ಸಂಪಾದಕೀಯದಲ್ಲಿ ಬರೆದಿದ್ದೆಲ್ಲ ಅಕ್ಷರಶಃ ಸತ್ಯ!
ಕರ್ನಾಟಕದ ಹಲವು ಗಣ್ಯ ವ್ಯಕ್ತಿಗಳ ಶುಭ ಸಂದೇಶಗಳು ಈ ಸಂಚಿಕೆಗೆ ಹೆಚ್ಚಿನ ತೂಕ ತಂದುಕೊಟ್ಟಿವೆ. (ಹಾಗೆ ಮಣಭಾರದ ಈ ದಪ್ಪ ಹೊತ್ತಗೆ ತೂಕದಲ್ಲಿ ಏನೇನೂ ಕಡಿಮೆ ಇಲ್ಲ!) ನಾನು ಈ ಮುಂಚೆ ಹೇಳಿದಂತೆ ಈ ಸಂಚಿಕೆಯಲ್ಲಿ ಪ್ರಬಂಧವಾಹಿನಿ ಮತ್ತು ಕವಿತಾವಾಹಿನಿ ಎಂದು ಎರಡು ಮುಖ್ಯ ವಿಭಾಗಗಳಿವೆ. ಈಗ ಪ್ರಬಂಧವಾಹಿನಿಯ ಕಡೆಗೆ ಗಮನ ಹರಿಸೋಣ.
ಇದರ ಸಂಪಾದಕರು ಮೈ.ಶ್ರೀ.ನಟರಾಜ, ಸಂಜೀವ ಮನಗೋಳಿ, ಶ್ರೀವತ್ಸ ಜೋಶಿ ಮತ್ತು ಶಿಕಾರಿಪುರ ಹರಿಹರೇಶ್ವರ ಅವರು. ವೈವಿಧ್ಯಪೂರ್ಣವಾದ ಹಲವು ಲೇಖನಗಳನ್ನೊಳಗೊಂಡ ಈ ವಿಭಾಗದಲ್ಲಿ ಕನ್ನಡದ ವಿವಿಧ ಆಯಾಮಗಳನ್ನು ಬಿಂಬಿಸುವ ಲೇಖನಗಳು ('ಕನ್ನಡದ ಉಳಿವು, ಅಳಿವು", "ಮೊದ್ಲು ನೆಟ್ಟಗ್ ಕನ್ನಡ ಮಾತಾಡೋದ್ ಕಲಿ", 'ಕನ್ನಡ ಎಷ್ಟು ಕ್ಯಾರೆಟ್", 'ಭಾರತ ಪ್ರವಾಸಗಳಲ್ಲಿ ಕನ್ನಡದ ಅನುಭವ"), ಜೀವನಾನುಭವವನ್ನು ಚಿತ್ರಿಸುವ ಲೇಖನಗಳು ('ಬೀಸೋ ದೊಣ್ಣೇನ್ ತಪ್ಪಿಸ್ಕೊಂಡ್ರೆ", 'ಮೂಕಪ್ರೇಮ", 'ಸೇಲ್ಸು, ಕೂಪನ್ಸು, ರಿಬೇಟ್ಸು"), ವೈಚಾರಿಕ ಲೇಖನಗಳು ('ಸಮತ-ಒಮ್ಮು-ಸರಸ, ವಿಮತ-ಹಮ್ಮು-ವಿರಸ", 'ಸಂಗೀತ ಮತ್ತು ಇತರ ವಿಜ್ಞಾನ ವಿಷಯಗಳು", 'ವೈಜ್ನಾನಿಕ ದೃಷ್ಟಿಕೋನ", 'ಕಗ್ಗದ ಮೂರಕ್ಷರದ ಡಿ.ವಿ.ಜಿ")... ಏನುಂಟು, ಏನಿಲ್ಲ!
ನಿಜವಾಗಿಯೂ ನನ್ನ ಕಣ್ಣುತೆರೆಸಿದ ಲೇಖನವೆಂದರೆ ''ವಿದೇಶಿ ತೀರ್ಪು-ಭಾರತದಲ್ಲಿ ಮನ್ನಣೆ"". ವಿವಾಹ ವಿಚ್ಛೇದನ, ದತ್ತು ಸ್ವೀಕಾರ ಮುಂತಾದ ವಿಷಯಗಳಲ್ಲಿ ದೊಡ್ಡಣ್ಣ ಅಮೆರಿಕಾದ ನ್ಯಾಯಾಲಯ ಕೊಟ್ಟ ತೀರ್ಪು ಭಾರತದಲ್ಲಿ ಮನ್ನಣೆ ಪಡೆಯುತ್ತದೆ ಎಂದು ಹೇಳಲಾಗುವುದಿಲ್ಲ! ಅಮೆರಿಕನ್ನರು ಹೇಳಿದಂತೆ ''ದಿಸ್ ಇಸ್ ನ್ಯೂಸ್ ಟು ಮಿ""!
ಇನ್ನು ಆಹ್ವಾನಿತ ಬರಹಗಳಂತೂ ಒಂದೊಂದೂ ಗಟ್ಟಿಯಾದ ಸತ್ವ ಹರಳುಗಟ್ಟಿದಂತಹ ಲೇಖನಗಳು! 'ಸಾಹಿತ್ಯ ಮತ್ತು ಮನಃ ಶಾಸ್ತ್ರ " ಲೇಖನದಲ್ಲಿ ಅಶೋಕ್ ಪೈ ಅವರು ಕನ್ನಡ ಸಾಹಿತ್ಯದಲ್ಲಿ ತ್ರಿವೇಣಿ, ಶಾಂತಿನಾಥ ದೇಸಾಯಿ, ಬಿ.ಸಿ. ರಾಮಚಂದ್ರ, ಯಶವಂತ ಚಿತ್ತಾಲ, ಗಿರೀಶ್ ಕಾರ್ನಾಡ್, ಗೋಪಾಲ ಕೃಷ್ಣ ಅಡಿಗ ಮುಂತಾದವರು ಮನಃ ಶಾಸ್ತ್ರವನ್ನು ಹೇಗೆ ಬಳಸಿದ್ದಾರೆ ಎಂಬ ಪರಿಚಯ ಮಾಡಿಕೊಡುತ್ತಾರೆ.
'ಸುವರ್ಣ ಕರ್ನಾಟಕದ ಕನಸುಗಳು-ನನಸುಗಳು" ಲೇಖನದಲ್ಲಿ ಸಾ.ಶಿ. ಮರುಳಯ್ಯನವರು ಕರ್ನಾಟಕದ ಇಂದಿಗೂ ನನಸಾಗದ ಕನಸುಗಳ ಬಗ್ಗೆ ಎಷ್ಟು ಚೆನ್ನಾಗಿ ಬರೆದಿದ್ದಾರೆಂದರೆ ಒಮ್ಮೆಲೆ ನಮ್ಮ ಎಲ್ಲ ನಷ್ಟಗಳೂ ಮೈದಾಳಿ ನಮ್ಮೆದುರು ಬಂದು ನಿಂತಂತೆ ಭಾಸವಾಗುತ್ತದೆ. ಆದರೂ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ನಾವು ಮಾಡಿರುವ ಪ್ರಗತಿಯ ಬಗ್ಗೆ ಹೆಮ್ಮೆಯೂ ಆಗುತ್ತದೆ.
'ಗಡಿಗಳ ಆಚೆ-ಈಚೆ" ಲೇಖನದಲ್ಲಿ ಚಂದ್ರಶೇಖರ ಪಾಟೀಲರು ಕರ್ನಾಟಕದ ಗಡಿಗಳ ಬಗ್ಗೆ ಹೇಳುತ್ತಾ ''ಈ ಗೆರೆಗಳ (ಅಕ್ಷಾಂಶ, ರೇಖಾಂಶ, ಗಡಿ) ಪರಿವೆ ಇದ್ದಂತಿಲ್ಲ ಭೂಮಿಗೆ, ಹರಿವ ಹೊಳೆಗಳಿಗೆ, ಹಾರುವ ಹಕ್ಕಿಗಳಿಗೆ"" ಎಂದು ಮಾರ್ಮಿಕವಾಗಿ ತಮ್ಮ ಕವನದ ಒಂದು ಸಾಲನ್ನು ಉದ್ದರಿಸುತ್ತಾರೆ.
ಹನೀಫ್ ಅವರ 'ಜನಜೀವನದ ಮೇಲೆ ಚಲನಚಿತ್ರಗಳ ಪರಿಣಾಮಗಳು" ಲೇಖನದಲ್ಲಿ ಭಾರತೀಯ ಜನಜೀವನದ ಅವಿಭಾಜ್ಯ ಅಂಗವಾದ ಚಲನಚಿತ್ರಗಳು ಹೇಗೆ ಕ್ರಮೇಣ ಹಿಂಸಾತ್ಮಕವಾಗಿ, ಅಶ್ಲೀಲವಾಗಿ ಬದಲಾಗುತ್ತಿವೆ ಎಂದು ವಿವರಿಸುತ್ತಾ ಸೆನ್ಸಾರ್ ಮಂಡಲಿಯ ಕೈ ಬಿಸಿ ಮಾಡಿ ಯುವಜನರನ್ನು ನೈತಿಕ ದಿವಾಳಿಯತ್ತ ತಳ್ಳುತ್ತಿರುವ ಚಲನಚಿತ್ರಗಳ ನೈಜ ಸ್ವರೂಪವನ್ನು ಬಯಲಿಗೆಳೆಯುತ್ತಾರೆ.












Click it and Unblock the Notifications