ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಕ್ಕಾಗಿ ಕೈಎತ್ತು (ಅಮೆರಿಕಾದಲ್ಲಿದ್ದರೆ ಮಾತ್ರ) ನಿನ್ನ ಕೈ ಕಲ್ಪವೃಕ್ಷವಾಗುವುದು

By Staff
|
Google Oneindia Kannada News
ಮೊನ್ನೆ ನಡೆದ ವಿಶ್ವಕನ್ನಡ ಸಮ್ಮೇಳನಕ್ಕೆ ಕರ್ನಾಟಕದಿಂದ ಮಹಾಪೂರವೇ ಹರಿದು ಬಂದಿತ್ತು. ರಾಜಕಾರಣಿಗಳು, ಸಿನಿಮಾ ನಟರು, ನಟೀ ಮಣಿಯರು, ಸರ್ಕಾರದಿಂದ ಕಳಿಸಲ್ಪಟ್ಟವರು, ಅಕ್ಕದಿಂದ ಕರೆಸಲ್ಪಟ್ಟವರು, ಪತ್ರಕರ್ತರು ಮತ್ತು ಸಾಹಿತಿಗಳು ಹೋಗಿದ್ದರು. ಇವರಲ್ಲಿ ಬಹಳಷ್ಟು ಜನ ಕರ್ನಾಟಕದಲ್ಲಿ ನಡೆಯುವ ಕನ್ನಡ ಸಮ್ಮೇಳನ ನೋಡೇ ಇಲ್ಲ!

ಅಮೆರಿಕಾದಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನ ಕನ್ನಡಿಗರಿಗೆ ಗರ್ವದ ವಿಷಯ. ಮುಂದಿನ ಹಾಗು ಇಂದಿನ ಕನ್ನಡ ಪೀಳಿಗೆಗೆ ಮಾದರಿಯ ಕಾರ್ಯಕ್ರಮ. ಆ ರೀತಿಯ ಸಮಾರಂಭ, ಸಮ್ಮೇಳನ ಕರ್ನಾಟಕದಲ್ಲಿ ನಡೆಯಬೇಕು. ಇಲ್ಲಿಯ ಕಾರ್ಯಕ್ರಮಕ್ಕೆ ಪ್ರಚಾರ ಸಿಗಬೇಕು. ಇಲ್ಲಿ ನಡೆಯುವ ಸಮ್ಮೇಳನಕ್ಕೆ ಅಲ್ಲಿಯವರು ಬರಬೇಕು. ಅಲ್ಲಿಗೆ ಹೋದವರಲ್ಲಿ ಎಲ್ಲರೂ ಇಲ್ಲಿಯೂ ಇರಬೇಕು. ಅಲ್ಲಿಯ ಸಮಾರಂಭಕ್ಕೆ ನೀಡಿದ ದೇಣಿಗೆ ಇಲ್ಲಿಗೂ ಸಲ್ಲಬೇಕು. ಅಲ್ಲಿ ಸಲ್ಲಿದ್ದು ಇಲ್ಲಿಯೂ ಸಲ್ಲಬೇಕು.

ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರಿಗೆ ಮಾನ್ಯತೆ ಸಿಗಬೇಕು. ಕನ್ನಡವನ್ನು ಶಾಲೆಯಲ್ಲಿ ಉಳಿಸಬೇಕು. ಮಕ್ಕಳಿಗೆ ಕನ್ನಡದ ಕಂಪು ತಲುಪಿಸಬೇಕು. ಕೇವಲ ಕನ್ನಡ ಬರುವವರು ನಿಸ್ಸಂಕೋಚವಾಗಿ ಬದುಕಲು ಆಗಬೇಕು. ಇದನ್ನೆಲ್ಲಾ ಕನ್ನಡಕ್ಕಾಗಿ ಮಾಡಬೇಕು.

ಕನ್ನಡ ಕಾಳಜಿ :

ಪ್ರಸ್ತುತ ನೀವು ಬೆಂಗಳೂರಿನಲ್ಲಿ ಅಂಗಡಿಗೆ ಹೋಗಲಿ, ಹೋಟೆಲ್‌ಗೆ ಹೋಗಲಿ, ಆಸ್ಪತ್ರೆಗೆ ಹೋಗಲಿ, ಬ್ಯಾಂಕ್‌ಗೆ ಹೋಗಲಿ, ಯಾವುದೇ ಶಾಲೆಗೆ ಹೋಗಲಿ ನಿಮಗೆ ಮರ್ಯಾದೆ ನೀವು ಮಾತನಾಡುವ ಭಾಷೆಯಿಂದ ಸಿಗುತ್ತಿದೆ! ಅದು ಕನ್ನಡವಲ್ಲದ ಭಾಷೆ ಆದರೆ ಮಾತ್ರ ನಿಮಗೆ ಮರ್ಯಾದೆ! ನಮ್ಮ ನಾಡಿನಲ್ಲೆ ನಮ್ಮ ಭಾಷೆಗೆ ಮರ್ಯಾದೆ ಸಿಗದೆ ಇದ್ದರೆ, ಇನ್ನ್ಯಾರು ಕೊಡುತ್ತಾರೆ? ಕನ್ನಡಿಗರೆ ಕನ್ನಡವನ್ನು ಅಸಹ್ಯಮಾಡಿದರೆ ಉಳಿದವರಿಂದ ಏನು ಬಯಸುತ್ತೀರಾ?

ಇಲ್ಲಿಂದ ಅಮೆರಿಕದ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋದವರಲ್ಲಿ ಕನ್ನಡದ ಬಗ್ಗೆ ಕಾಳಜಿ, ಗೌರವ ಇದ್ದವರು ಕೆಲವರಷ್ಟೆ. ಕರ್ನಾಟಕದಲ್ಲಿ ಹುಟ್ಟಿದರಷ್ಟೆ ಕನ್ನಡಿಗರಾಗುವುದಿಲ್ಲ. ಕನ್ನಡ ಕಲಿಯಬೇಕು, ಕನ್ನಡ ಉಳಿಸಬೇಕು, ಕನ್ನಡ ಉಸಿರಾಡಬೇಕು, ಕನ್ನಡ ನಲಿಯಬೇಕು. ಆಗ ಕನ್ನಡಿಗರಾಗುತ್ತಾರೆ. ಕಾಗುಣಿತ ಕಲಿಯದೆ ಕನ್ನಡ ಕಲಿಯಲಾಗುವುದಿಲ್ಲ. ಎಷ್ಟು ಜನ ತಂದೆ ತಾಯಿ ಮಕ್ಕಳಿಗೆ ಕಾಗುಣಿತ ಹೇಳಿಕೊಡುತ್ತಾರೆ? ಅ ಆ ಇ ಈ ಕಲಿಸುವ ಮೊದಲು, ಎ ಬಿ ಸಿ ಡಿ ಕಲಿಸುತ್ತಾರೆ. ಇಂಗ್ಲಿಷ್‌ ಮೀಡಿಯಂಗೆ ಸೇರಿಸಲು ಅವರದೆ ಕಾರಣ ಹೇಳುತ್ತಾರೆ. ಅದು ನಿಜ ಕೂಡ! ಮಕ್ಕಳು ದೊಡ್ಡವರಾದ ಮೇಲೆ ಒಳ್ಳೆಯ ಕೆಲಸಕ್ಕೆ ಸೇರಬೇಕೆಂದರೆ ಇಂಗ್ಲಿಷ್‌ ಮುಖ್ಯವೆನ್ನುವ ವಾತಾವರಣ ನಿರ್ಮಾಣವಾಗಿದೆ.

ಅಮೆರಿಕಾ ಅಮಲು :

ನಮ್ಮ ರಾಜಕಾರಣಿಗಳು ಬುದ್ಧಿವಂತರ ಸಮಿತಿ ರಚಿಸಿ, ಅವರಿಂದ ಕನ್ನಡ ಉಳಿಯುವಂಥ, ಇಂಗ್ಲಿಷ್‌ ಕಲಿಯುವಂಥ ಪಠ್ಯಕ್ರಮವನ್ನು ಏಕೆ ರಚಿಸಬಾರದು? ಸೂಟುಬೂಟು ಹಾಕಿ, ಅಮೆರಿಕಾಗೆ ಹಾರಿದ ಮಹಾಶಯರಿಗೆ ಇದರ ಬಗ್ಗೆ ಯೋಚಿಸುವ ಸಮಯವಿದೆಯಾ? ಅಲ್ಲಿಗೆ ಹೋದವರಲ್ಲಿ ಯಾರೂ ಸಾಮಾನ್ಯರಲ್ಲ. ಅವರೆಲ್ಲಾ ಕುಳಿತು ಯೋಚಿಸಿದರೆ ಕನ್ನಡವನ್ನು ಕರ್ನಾಟಕದಲ್ಲಿ ಉಳಿಸಬಹುದು. ಆದರೆ ಅವರಿಗೆಲ್ಲ ಅಮೆರಿಕಾ ಎನ್ನುವ ಅಮಲೇರಿದೆಯೇ ಹೊರತು, ಕನ್ನಡದ ಅಮಲಲ್ಲ!

ಸಾಹಿತಿಗಳು ಕನ್ನಡವನ್ನು ಬೆಳೆಸಿದ್ದಾರೆ, ಕೆಲವು ಪತ್ರಕರ್ತರು ಅದನ್ನು ಪ್ರತಿಪಾದಿಸಿದ್ದಾರೆ. ರಾಜಕಾರಣಿಗಳು ಅದನ್ನು ತಿರಸ್ಕರಿಸಿದ್ದಾರೆ. ಜನ ಸಾಮಾನ್ಯರು ಅದರ ಕೆಳಗೆ ಮಲಗಿದ್ದಾರೆ. ಮಲಗಿದ ಜನ ಮೇಲೇಳಬೇಕು, ಪತ್ರಕರ್ತರು ಕನ್ನಡ ಹೋರಾಟವನ್ನು ವೈಭವೀಕರಿಸಬೇಕು. ಸಾಹಿತಿಗಳು ಜನರ ಜೊತೆಗೆ ಬೆರೆತು ಪ್ರೋತ್ಸಾಹಿಸಬೇಕು, ಅಡ್ಡ ಬರುವ ರಾಜಕಾರಣವನ್ನು ಮಲಗಿಸಿ ಕನ್ನಡವನ್ನು ಮೇಲಕ್ಕೆ ಎತ್ತಬೇಕು. ರಾಜಕಾರಣಿಗಳು ಕನ್ನಡದ ಬಗ್ಗೆ ಕರುಣೆ ತೋರಬೇಕು. ಇದು ಪ್ರಜಾತಂತ್ರವಾದರೂ ಇಲ್ಲಿ ರಾಜಕಾರಣಿಯೆ ದೈವ. ಅವನ ಕರುಣೆ ಬೇಕೇಬೇಕು. ಇದು ಪ್ರಜಾಪ್ರಭುತ್ವದ ವಿಪರ್ಯಾಸ.

ಕನ್ನಡವನ್ನು ಕೊನೆಪಕ್ಷ ಕನ್ನಡಿಗರಾದರು ಉಳಿಸಬಹುದಲ್ಲವೆ? ಕನ್ನಡದ ಕಾಳಜಿ ಇರುವ ಜನರಿಗೇನು ಕಡಿಮೆ ಇಲ್ಲ. ಕನ್ನಡದ ಪರ ಹೋರಾಟ ಮಾಡುವ ಸಂಘಗಳಿಗೇನು ಕಡಿಮೆ ಇಲ್ಲ. ಇರುವರಲ್ಲೆ ಒಳ್ಳೆಯವರನ್ನು ಹುಡುಕಿ ಬೆಂಬಲಿಸಿ. ನಿಮ್ಮ ಮನೆಯಿಂದ ಕನ್ನಡವನ್ನು ಮೊಳಗಿಸಿ, ಕರ್ನಾಟಕದಲ್ಲಿ ಕನ್ನಡ ಮಾತಾಡಿ. ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸಿ. ಶಾಲೆಗಳಲ್ಲಿ ಕನ್ನಡಕ್ಕೆ ಮಹತ್ವ ಕೊಡಿ. ರನ್ನ, ಪೊನ್ನ, ಪಂಪ, ಬಸವಣ್ಣ, ಅಲ್ಲಮ, ಅಕ್ಕ ಮಹಾದೇವಿ, ಕುವೆಂಪು, ಬೆಂದ್ರೆ, ಗುಂಡಪ್ಪ, ಕಾರ್ನಾಡ್‌, ಲಂಕೇಶ್‌, ಬೀಚಿ, ಭೈರಪ್ಪ, ಲಕ್ಷ್ಮಿನಾರಾಯಣ ಭಟ್ಟರು, ಕಣವಿ ಬರೆಯುತ್ತಾಹೋದರೆ ಪುಟಗಟ್ಟಲೆ ಹೆಸರಿಸುತ್ತಲೆ ಹೋಗುವಷ್ಟು ಜನ ಕನ್ನಡಕ್ಕೆ ಜೀವ ತುಂಬಿದ್ದಾರೆ, ತುಂಬುತ್ತಿದ್ದಾರೆ. ಅವರ ನೆನೆಯಲು ಆಗದಂತಹ ಪರಿಸ್ಥಿತಿ ಉದ್ಭವಿಸದಿದ್ದರೆ ಅದೇ ಕನ್ನಡಮ್ಮನ ಭಾಗ್ಯ!

ನಾವು ಮತ್ತು ನಮ್ಮ ಜವಾಬ್ದಾರಿ :

ಕನ್ನಡಕ್ಕೆ ಬೆಲೆ ಸಿಗಬೇಕಾಗಿರುವುದು ಕರ್ನಾಟಕದಲ್ಲಿ. ಕನ್ನಡವಿಲ್ಲದಿದ್ದರೂ ಅಮೆರಿಕಾ ಈಗಿರುವಷ್ಟೆ ಗಮ್ಮತ್ತಿನಿಂದ ಇರುತ್ತದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಬರಗಾಲವಾದರೆ ಕೊಟ್ಯಾಂತರ ಕನ್ನಡಿಗರಿಗೆ ಉಸಿರು ಸಿಕ್ಕಿ ಹಾಕಿಕೊಳ್ಳುತ್ತದೆ. ಕನ್ನಡವನ್ನು ಕರ್ನಾಟಕದಲ್ಲಿ ಉಳಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಕನ್ನಡನ್ನು ಉಳಿಸಲಾಗದ ಕನ್ನಡಿಗ ತನ್ನ ಉಸಿರನ್ನು ಹೊರ ಹಾಕಲಾಗದ ದುರ್ಬಲ. ಅಂತಹವರು ಕನ್ನಡನಾಡಿಗೆ ಭಾರ.

ಅಮೆರಿಕಾಗೆ ಹೋದ ಎಲ್ಲಾ ಕನ್ನಡಿಗ ಮಹನೀಯರಲ್ಲಿ ವಿನಂತಿ. ನೀವೆಲ್ಲಾ ಸಾಮಾನ್ಯರಲ್ಲ, ತಮ್ಮತಮ್ಮ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿ ಇರುವವರು. ನೀವು ಮನಸ್ಸು ಮಾಡಿದರೆ ಒಬ್ಬೊಬ್ಬರು ಸಾವಿರಾರು ಜನರನ್ನು ಉತ್ತೇಜಿಸಬಹುದು. ಅಮೆರಿಕಾಗೆ ಹೋಗಿ ಬಂದ ಹಿಂದೆಯೆ ಇಲ್ಲೊಂದು ಪ್ರಗತಿಗೆ ಚಾಲನೆ ನೀಡಿ. ಪ್ರತಿದಿನ ಕರ್ನಾಟಕದಲ್ಲಿ ಕನ್ನಡಮ್ಮನ ಉತ್ಸವ ಜರುಗಲಿ. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ, ರಾಜಬೀದಿಯಲ್ಲಿ ಕನ್ನಡ ಮಂತ್ರವಾಗಲಿ.

ನುಡಿ ಹಬ್ಬದ ಚಿತ್ರಪಟಗಳು :
ಮತ್ತೆ ಸಿಗೋಣ - 3ನೇ ದಿನ
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ
ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?

ಪೂರ್ವ ಸಿದ್ಧತೆ Be a patronate! Use .in e-mail Post Your Views

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X