ಗಾನ ಲೋಕದ ಭರವಸೆ ಕನ್ನಡದ ಪೋರ ಅಮೋಘವರ್ಷ
ಕಲಾಸರಸ್ವತಿ ಎಲ್ಲರಿಗೂ ಒಲಿಯುವುದಿಲ್ಲ ಎಂಬ ಮಾತೊಂದಿದೆ. ಅದಕ್ಕೆ ಅವಿರತ ಪರಿಶ್ರಮ, ಅವಿರಳ ಪ್ರೋತ್ಸಾಹ, ಅರ್ಪಣಾಭಾವ ಅಂದರೆ ತನ್ನನ್ನು ತಾನೇ ಕಲೆಗೆ ಅರ್ಪಿಸುವುದು, ಇತ್ಯಾದಿಗಳನ್ನು ಮೈಗೂಡಿಸಿಕೊಂಡು ಮುಂದುವರಿದರೆ ಕಲಾ ಮಾತೆ ಆಶೀರ್ವದಿಸಿ ಮುನ್ನಡೆಸುವುದರಲ್ಲಿ ಎರಡು ಮಾತಿಲ್ಲ.
ಕೆಲವರಿಗೆ ಕಲೆಯು ಹುಟ್ಟಿನಲ್ಲಿಯೇ ಬಂದರೆ, ಇನ್ನೂ ಕೆಲವರಿಗೆ ದೈವದತ್ತವಾಗಿರುತ್ತದೆ. ಕೆಲವರು ಏಕಲವ್ಯನಂತೆ ಕಂಡು- ಕೇಳಿ, ಇತರರ ಸಹಾಯ ಇಲ್ಲದೆ ಕಲಿತು ಮುಂದೆ ಬರುವವರೂ ಇದ್ದಾರೆ.

ಅಮ್ಮ ತೊಟ್ಟಿಲಲ್ಲಿ ಮಗನನ್ನು ಮಲಗಿಸಿ ಜೋಗುಳ ಹಾಡುತ್ತಿದ್ದಾರೆ.
ವಾತಾಪಿ ಗಣಪತಿಂಭಜೇ, ಆಡಿಸಿದಳು ಯಶೋದೆ... ಅಮ್ಮನೂ ಗಾಯಕಿಯೇ. ಅಮ್ಮನ ಇಷ್ಟವಾದ ಹಾಡದು. ಎರಡೂವರೆ ವರುಷದ ಮಗು ಸಹ ಅಮ್ಮನ ತುಟಿಯನ್ನೇ ನೋಡುತ್ತಾ ತೊದಲು ನುಡಿಯಲ್ಲಿ ಹಾಡಿಯೇಬಿಟ್ಟಿತು,"ಮುಲಿ ಪಲ ಪಾಪೂಜಿತಂ" ...ಅದೇ ಹಾಡು ಆಗಬೇಕು ನಿದ್ದೆ ಬರಬೇಕಿದ್ದರೆ.
ಇದು ದುಬೈಯಲ್ಲಿ ಉದ್ಯೋಗದಲ್ಲಿರುವ ಬಂಟ್ವಾಳ ತಾಲೂಕಿನ ತೆಂಕಬೈಲಿನವರಾದ ಪ್ರಸನ್ನ ಟಿ.ಎನ್. ಹಾಗೂ ಸ್ಮಿತಾ ಭಟ್ ದಂಪತಿ ಮಗನಾದ 10 ವರುಷ ವಯಸ್ಸಿನ ಪೋರನು ಎಳೆವೆಯಲ್ಲಿ,ಆಗತಾನೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ನಡೆಯುವ ಸಮಯದಲ್ಲಿ, ಆಟಿಕೆಗಳಲ್ಲಿ ಆಡುವ ಪ್ರಾಯದಲ್ಲಿ ಹೇಗೆ ಹಾಡಿನ ಬಗ್ಗೆ ಒಲವು ತೋರಿಸುತ್ತಿದ್ದ, ಹಾಡನ್ನು ಎಷ್ಟು ಇಷ್ಟ ಪಡುತ್ತಿದ್ದ ಎಂದು ಇದರಲ್ಲಿ ಅರ್ಥ ಮಾಡಿಕೊಳ್ಳಬಹುದು.

ಇವನು ಬೇರಾರೂ ಅಲ್ಲ. ಗಾಯನ ಲೋಕಕ್ಕೆ ಹೆಜ್ಜೆ ಇಟ್ಟಿರುವ, ದುಬೈಯ ಡಿಪಿಎಸ್ ಶಾಲೆಯಲ್ಲಿ ಈಗ ನಾಲ್ಕನೆಯ ತರಗತಿಯಲ್ಲಿ ಕಲಿಯುತ್ತಿರುವ ಕನ್ನಡದ ಕುಡಿ ಅಮೋಘ ವರ್ಷ ಭಟ್. ಇಷ್ಟು ಸಣ್ಣ ವಯಸ್ಸಿನಲ್ಲಿ ಅಮೋಘ ಮಾಡಿದ ಸಾಧನೆಗಳು ಹಲವು. ಭಾರತದಂತೆ ಇಲ್ಲಿ ಅವಕಾಶಗಳು ಹೆಚ್ಚು ಇರದಿದ್ದರೂ ಸಿಗುವ ಅವಕಾಶಗಳನ್ನು ಕೈ ಬಿಡುವುದಿಲ್ಲ.
"ಗ್ಲೋಬಲ್ ವಿಲೇಜ್ 2017", ಶಾರ್ಜಾ ಕರ್ನಾಟಕ ಸಂಘ, ಓಶಿಯಾನ್ ಕಿಡ್ಸ್ ಎಕ್ಸ್ಟ್ರಾವೆಗಾನ್ಸ 2017, ದುಬೈ ಕನ್ನಡಿಗರು ಕಾರ್ಯಕ್ರಮದ ವೇದಿಕೆ, ಧ್ವನಿ ಪ್ರತಿಷ್ಠಾನದ 2ನೆಯ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ, 20ನೆಯ ಹವ್ಯಕ ವಾರ್ಷಿಕೋತ್ಸವ, ಬಸವ ಜಯಂತಿ ಕಾರ್ಯಕ್ರಮ, ದೇವಾಡಿಗ ಸಂಘದ ಕದಂ ವಾರ್ಷಿಕ ಸಮ್ಮೇಳನ ಇತ್ಯಾದಿಗಳಲ್ಲಿ ಕಂಠಸಿರಿಯನ್ನು ಪ್ರದರ್ಶಿಸಿ ತನ್ನ ಹೆಸರಿನ ಮೊಹರನ್ನು ಮೂಡಿಸಿದ್ದಾನೆ.

ಅಮೋಘನ ಸಂದರ್ಶನವು ಯುಎಇಯ ಪ್ರಮುಖ ಬಾನುಲಿ ಕೇಂದ್ರ ಸ್ಪೈಸ್ 105.4ನಲ್ಲಿ ಪ್ರಸಾರವಾಗಿದೆ. ಅವನು ಹಾಡಿದ ಹಾಡುಗಳು ಅಮೆರಿಕಾದ ಚಾನೆಲ್ 1170 ಎಎಮ್ ನ "ಹಾಡು ಸಂತೋಷಕ್ಕೆ" ಹಾಗೂ "ಗಾಥಾ ರಹೇ ಮೇರಾ ದಿಲ್" ಕಾರ್ಯಕ್ರಮಗಳಲ್ಲಿ ಪ್ರಸಾರವಾಗಿದೆ.
ಮಂಗಳೂರಿನ ಪಾವಂಜೆ ದೇವಸ್ಥಾನದಲ್ಲಿ ಹಾಗೂ ಪುತ್ತೂರಿನಲ್ಲಿ ಕಚೇರಿಗಳನ್ನು ಕೊಟ್ಟಿರುವುದು ಇವನ ಹಾಡಿನ ರೆಕ್ಕೆಗೆ ಮೂಡಿದ ಗರಿಗಳು.

ಅಮೋಘನ ಸಾಧನೆಯ ಹಿಂದೆ ಅಮ್ಮ ಸ್ಮಿತಾ ಮತ್ತು ಅಪ್ಪ ಪ್ರಸನ್ನ ಅವರ ಪರಿಶ್ರಮವಿದ್ದೇ ಇದೆ. ಅಮ್ಮನೇ ಮೊದಲ ಗುರು ಎಂಬ ನಾಣ್ನುಡಿಗೆ ಸರಿತೂಗುವಂತೆ ತನ್ನ 5ನೆಯ ವರ್ಷದಲ್ಲಿ ಅಮ್ಮನ ಬಳಿ ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡತೊಡಗಿದ. ಸದ್ಯ ಶ್ರೀಮತಿ ದಿವ್ಯಶಂಕರಿ ಇವರ ಬಳಿ ಅಭ್ಯಸಿಸುತ್ತಿದ್ದಾನೆ. ಇದರ ಜತೆ ಮೃದಂಗ ಹಾಗೂ ಗಿಟಾರ್ ಸಹ ಕಲಿಯುತ್ತಿದ್ದಾನೆ.
ಸ್ಮಿತಾ ಭಟ್ ತಮ್ಮ ಮಗನ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ, "ಅವನು ಚಿಕ್ಕವನಿದ್ದಾಗ ತಿರುಗುತ್ತಿರುವ ಫ್ಯಾನ್ ನ ಲಯಕ್ಕೆ ಹಾಡುತ್ತಿದ್ದ, ನಲ್ಲಿಯ ನೀರಿನಲ್ಲಿ ಹೊರಹೊಮ್ಮುವ ಶ್ರುತಿಗೆ ಹಾಡುತ್ತಿದ್ದ. ಆಗಲೇ ನಾನು ಇದನ್ನೇ ಗಮನಿಸಿದ್ದೆ. ನಾಲ್ಕನೇ ವರುಷದಲ್ಲಿ ಬಾಲಿವುಡ್ ಡ್ಯಾನ್ಸ್ ಕ್ಲಾಸಿಗೆ ಸೇರಿಸಬೇಕೆಂದು ಹೋದಾಗ ಪಿಯಾನೋ ಬಾರಿಸುತ್ತಿದ್ದ ಮಕ್ಕಳನ್ನು ಕಂಡು ಅದಕ್ಕೆ ಸೇರಬೇಕಾಗಿ ಬಂತು. ಇದೆಲ್ಲ ಅಮೋಘನ ಗಾಯನದಲ್ಲಿದ್ದ ಉತ್ಸಾಹ ತೋರಿಸುತ್ತದೆ".
ಒಂದೆರಡು ಕಡೆ ತನ್ನ ಪ್ರೀತಿಯ ತಂಗಿ 5 ವರುಷದ ನಿನಾದಳ ಜತೆ ವೇದಿಕೆ ಹಂಚಿಕೊಂಡು ಹಾಡಿದ್ದು ತನ್ನ ಅಮೂಲ್ಯ ಕ್ಷಣವೆಂದು ನೆನಪಿಸುವ ಅಮೋಘನಿಗೆ ಅರ್ಜಿತ್ ಸಿಂಗ್ ಹಾಗೂ ಶ್ರೇಯ ಘೋಷಾಲ್ ಅಂದರೆ ತುಂಬಾ ಇಷ್ಟ.

ಯುಎಇ ಮಟ್ಟದ ಕನ್ನಡ ಚಿತ್ರ ಗೀತೆಗಳ ಸ್ಪರ್ಧೆಯಲ್ಲಿ 2ನೆಯ ಪ್ರಶಸ್ತಿ, "ವಾಫಿ ಸೂಪರ್ ಸ್ಟಾರ್ 2017" ಹಾಗೂ "ಕಿಡ್ಸ್ ಸೂಪರ್ ಸ್ಟಾರ್ 2017" ಸ್ಪರ್ಧೆಗಳಲ್ಲಿ ಸೆಮಿಫೈನಲಿಸ್ಟ್ ಆಗಿ ಹೊರಬಂದರೆ, ಇಲ್ಲಿಯ ಬಿಗ್ ಐಡಿಇಎ ಗ್ರೂಪ್ ನಡೆಸಿದ ಅಮೆಜಿಂಗ್ ಸ್ಟಾರ್ಸ್ 2015 ಮಕ್ಕಳ ಅಭೂತ ಕೌಶಲ ಗುರುತಿಸುವ ಕಾರ್ಯಕ್ರಮದಲ್ಲಿ "ಎಮರ್ಜಿಂಗ್ ಟ್ಯಾಲೆಂಟ್ " ಬಿರುದನ್ನ ತನ್ನ ಮುಡಿಗಾಗಿಸಿಕೊಂಡಿದ್ದಾನೆ.
2015ರ ಮಕ್ಕಳ ರೆಡ್ ಇಂಟರ್ -ನ್ಯಾಷನಲ್ ಯುವಜನೋತ್ಸವದಲ್ಲಿ ಹಿಂದಿ ಸುಗಮ ಸಂಗೀತದಲ್ಲಿ ಎರಡನೇ ಸ್ಥಾನ, ಇಂಟರ್ ಜೂನಿಯರ್ ಶಾಲೆಯ ಉತ್ಸವ "ಕ್ರಿಸಾಲೀಸ್"ನಲ್ಲಿ ತನ್ನ ಶಾಲೆಯ ವಿಜೇತ ಕ್ಯಾಡೆನ್ಸ್ -ಕೊರಲ್ ತಂಡದ ಸದಸ್ಯನಾಗಿದ್ದಾನೆ.

ಕಲಿಕೆಯಲ್ಲೂ ಮುಂದಿರುವ ಅಮೋಘವರ್ಷ ಶಾಲೆಯಲ್ಲಿ ನೀಡುವ ಬಿರುದು "ಟಿಎಂಎಸ್ ಐಡಲ್", "ಸಾಂಗ್ ಬರ್ಡ್" ಹಾಗೂ ಗೋಲ್ಡನ್ ಸ್ಟಾರ್ ಪ್ರಶಸ್ತಿಗಳನ್ನು ಪಡೆದಿದ್ದಾನೆ.
"ವಾಯ್ಸ್ ಆಫ್ ಯುಎಇ": ಎಸ್ ಕೆ ಎಸ್ ಇವೆಂಟ್ಸ್ ಅರ್ಪಿಸುವ ಯುಎಇ ಮಟ್ಟದ ಗಾಯನ ಸ್ಪರ್ಧೆಯಲ್ಲಿ "ವಾಯ್ಸ್ ಆಫ್ ಯುಎಇ" ಕಾರ್ಯಕ್ರಮದ 200ಕ್ಕೂ ಅಧಿಕ ಮಂದಿ ಸ್ಪರ್ಧಾಳುಗಳಿದ್ದರು. ಇದರಲ್ಲಿ ಅಮೋಘನು ಫೈನಲ್ ತಲಪಿರುವ ಏಕಮಾತ್ರ ಕನ್ನಡಕುವರ. ಅದಕ್ಕಾಗಿ ಭರಪೂರ ಸಿಧ್ಧತೆಯಲ್ಲಿರುವ ಈತನು ಡಿಸೆಂಬರ್ 1, 2017ರಂದು ಶೇಖ್ ರಶೀದ್ ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾನೆ.

ಈ ಕಾರ್ಯಕ್ರಮಕ್ಕೆ ಪ್ರಸಿದ್ಧ ಹಿಂದಿ ಗಾಯಕಿ, ದಕ್ಷಿಣ ಭಾರತದ ಗಾನ ಕೋಗಿಲೆ ಕವಿತಾ ಕೃಷ್ಣಮೂರ್ತಿಯವರ ಉಪಸ್ಥಿತಿ ಮೆರುಗು ಕೊಡಲಿದೆ. ಕವಿತಾಜಿ ಅವರೊಂದಿಗೆ ತೀರ್ಪುಗಾರರಾಗಿ ಮಿಥುನ್ ಡೇ ಸರ್ಕಾರ್ ಅವರು ಜತೆ ಸೇರಲಿದ್ದಾರೆ. ಅಂದು ಅಮೋಘ ಹಾಡುಗಳ ವರ್ಷಧಾರೆಯನ್ನೇ ಸುರಿಸಲಿರುವ ಅಮೋಘವರ್ಷ ಕಾರ್ಯಕ್ರಮದಲ್ಲಿ ಜಯಶಾಲಿಯಾಗಿ ಬರಲಿ ಎಂದು ನಾವೆಲ್ಲರೂ ಆಶಿಸೋಣ. ನಮ್ಮೆಲ್ಲರ ಹರಕೆ, ಹಾರೈಕೆಗಳು ಈ ಪುಟ್ಟ ಪೋರನ ಮೇಲಿರಲಿ.
ಭರವಸೆಯ ಗಾಯಕನಾಗಿರುವ ಈತ ಮುಂಬರುವ ದಿನಗಳಲ್ಲಿ ಪ್ರಬುದ್ಧ ಗಾಯಕನಾಗಿ ಹೊರಬರಲಿ ಹಾಗೂ ನಮ್ಮೆಲ್ಲರ ಮನದಲ್ಲಿ ಅವನ ಹಾಡುಗಳು ಮನೆ ಮಾಡಲಿ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications