ಬೆಂಗಳೂರಿನಲ್ಲಿ ಸಿಂಗಪುರದ ಮೇಘ್ನಾಳ ರಂಗ ಪ್ರವೇಶ
ಶಾಸ್ತ್ರೀಯ ಕಲೆಯ ಪ್ರಕಾರಗಳಲ್ಲೊಂದಾದ ಭರತನಾಟ್ಯ ಭಾರತದ ಶ್ರೀಮಂತ ಸಂಸ್ಕೃತಿಯ ಪ್ರತೀಕ. ಭಾರತೀಯರು ಎಲ್ಲೇ ಹೋದರೂ ತಮ್ಮೊಂದಿಗೆ ತಮ್ಮ ಸಂಸ್ಕೃತಿಯನ್ನೂ ಕೊಂಡೊಯ್ದು, ಅದನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಾರೆ.
ಚೆನ್ನೈಯ ಸುಪ್ರಸಿದ್ಧ ಕಲಾಕ್ಷೇತ್ರದಲ್ಲಿ ನೃತ್ಯವನ್ನು ಕಲಿತು ಸಿಂಗಪುರಕ್ಕೆ ಬಂದು ಸಿಂಗಪುರ್ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿ(SIFAS)ಯಲ್ಲಿ 15 ವರ್ಷಗಳ ಕಾಲ ನೃತ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ ಅಭಿನಯ ಸರಸ್ವತಿ ಮಾಲಿಕಾ ಗಿರೀಶ್ ಪಣಿಕ್ಕರ್ ಅವರು 2009ರಲ್ಲಿ ಸಿಂಗಪುರದಲ್ಲಿ ತಮ್ಮದೇ ಆದ "ಆಕಾಶ್ ಗಂಗಾ" ನೃತ್ಯಶಾಲೆಯನ್ನು ಪ್ರಾರಂಭಿಸಿ ಅದರ ಕಲಾನಿರ್ದೇಶಕರಾದರು. ಭಾರತೀಯ ಶಾಸ್ತ್ರೀಯ, ಜಾನಪದ ಮತ್ತು ಸಮಕಾಲೀನ (contemporary) ನೃತ್ಯವನ್ನು ಹೇಳಿಕೊಡಲಾಗುವ ಈ ನೃತ್ಯಶಾಲೆಯಿಂದ ಹಲವಾರು ವಿದ್ಯಾರ್ಥಿಗಳು ನರ್ತನಾಭ್ಯಾಸ ಪಡೆದು ಸಿಂಗಪುರ, ಭಾರತ ಮತ್ತಿತರ ಕಡೆಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಅಂತಹ ಹಲವಾರು ವಿದ್ಯಾರ್ಥಿಗಳಲ್ಲೊಬ್ಬಳಾದ ಕುಮಾರಿ ಮೇಘ್ನಾ ಹೆಬ್ಬಾರ್, 6 ಜುಲೈ 2013ರಂದು ಬೆಂಗಳೂರಿನ ಜೆ.ಎಸ್.ಎಸ್.ಸಭಾಂಗಣದಲ್ಲಿ ರಂಗ ಪ್ರವೇಶ ಮಾಡಿ ತನ್ನ 14ನೇ ವಯಸ್ಸಿನ ಆರಂಭದಲ್ಲೇ ಭರತನಾಟ್ಯ ನೃತ್ಯ ಕಲಾಪ್ರಕಾರದಲ್ಲಿ ಮಹತ್ತರವಾದ ಸಾಧನೆಯೊಂದನ್ನು ಪೂರ್ಣಗೊಳಿಸಿದಳು. ಸುಮಾರು ಮೂರು ಘಂಟೆಗಳ ಕಾಲ ನಿರರ್ಗಳವಾಗಿ ನುರಿತ ಕಲಾವಿದೆಯಂತೆ ಮಲ್ಲಾರಿ, ಜತಿಸ್ವರ, ವರ್ಣ, ಕೀರ್ತನೆ, ದೇವರನಾಮ, ಕೊರವಂಜಿ, ತಿಲ್ಲಾನ ಹೀಗೆ ಒಂದಾದ ಮೇಲೊಂದು ನೃತ್ಯವನ್ನು ಹಾವ, ಭಾವ, ಅಭಿನಯದೊಂದಿಗೆ ನಿರರ್ಗಳವಾಗಿ ನಿಭಾಯಿಸಿದ ಮೇಘ್ನಾ ನೆರೆದಿದ್ದ ಕಲಾರಸಿಕ ಸಭಿಕರ, ಅತಿಥಿಗಳ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರಳಾದಳು.
ಸಿಂಗಪುರದ ನಿವಾಸಿಗಳಾದ ಅಶೋಕ್ ಹೆಬ್ಬಾರ್ ಮತ್ತು ಸುಮನಾ ಹೆಬ್ಬಾರ್ ಅವರ ಸುಪುತ್ರಿ ಮೇಘ್ನಾ ಹೆಬ್ಬಾರ್ ಆಕಾಶ ಗಂಗಾ ನೃತ್ಯಶಾಲೆಯಲ್ಲಿ ಕಳೆದ 4 ವರ್ಷಗಳಿಂದ ಹಾಗೂ ಆ ಮೊದಲು SIFASನಲ್ಲಿ ನೃತ್ಯಾಭ್ಯಾಸ ಮಾಡಿದ್ದು,Temple Of Fine Artsನಲ್ಲಿ ಹಿಂದೂಸ್ತಾನಿ ಸಂಗೀತವನ್ನೂ ಕಲಿಯುತ್ತಿದ್ದಾಳೆ. ಸಿಂಗಪುರದ Global Indian International School(GIIS)ನಲ್ಲಿ IGCSE-Grade IXನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮೇಘ್ನಾ ಶಾಲೆಯಲ್ಲೂ ಮತ್ತು ಸಂಗೀತ-ನೃತ್ಯ ಪರೀಕ್ಷೆಗಳಲ್ಲೂ ಸತತವಾಗಿ 'A' ದರ್ಜೆಯನ್ನೇ ಗಳಿಸುತ್ತಾ ಬಂದಿದ್ದಾಳೆ. ಓದುವುದು, ಬರೆಯುವುದಲ್ಲದೇ ಸಂಗೀತ, ಚಿತ್ರಕಲೆ, ಈಜು, ಸಾಕರ್, ಮಾರ್ಶಿಯಲ್ ಆರ್ಟ್ಸ್ ಮುಂತಾದ ಹಲವು ವಿಷಯಗಳಲ್ಲಿ ಆಸಕ್ತಿಯಿರುವ ಮೇಘ್ನಾ SIFAS Festival (Singapore), GIIS (Singapore), Mediacorp TV (Singapore) ಹಾಗೂ ಕನ್ನಡ ಸಂಘ (ಸಿಂಗಪುರ)ವೂ ಸೇರಿದಂತೆ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಘ ಸಂಸ್ಠೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾಳೆ.
ಕನ್ನಡ ಸಂಘ (ಸಿಂಗಪುರ)ವು ಆಯೋಜಿಸಿದ ಹಲವಾರು ಕಾರ್ಯಕ್ರಮಗಳಲ್ಲಿ ಪ್ರತಿಭಾ ಪ್ರದರ್ಶನ ಮಾಡಿರುವ ಮೇಘ್ನಾ 2012ರಲ್ಲಿ ಸಿಂಗನ್ನಡಿಗ ಸ್ಥಳೀಯ ಕಲಾವಿದರಿಂದ ಆಯೋಜಿಸಲಾದ ರಾಗಾಂಜಲಿ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕಲಾವಿದೆಯಾಗಿ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಳು. ಇದಲ್ಲದೇ 2011 ಮತ್ತು 2012ರಲ್ಲಿ ಚೆನ್ನೈ, ಗುರುವಾಯೂರ್ ಮತ್ತು ಮುಂಬಯಿಯಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾಳೆ. GIIS, Singapore ಶಾಲೆಯ ಝಂಕಾರ್ ಹಾಗೂ ಪಾಪನಾಶನ್ ಶಿವನ್ ನೃತ್ಯ ಸ್ಪರ್ಧೆಗಳಲ್ಲಿ ಸತತವಾಗಿ ಹಲವಾರು ವರ್ಷ ಬಹುಮಾನ ಗಳಿಸಿದ್ದಾಳೆ.
ಈ ಕಾರ್ಯಕ್ರಮಕ್ಕೆ ಸುಮಧುರ ಕಂಠವನ್ನು ನೀಡಿದವರು ಕರ್ನಾಟಕದ ಪ್ರಖ್ಯಾತ ಸಂಗೀತಗಾರರಾದ ಡಿ.ಎಸ್. ಶ್ರೀವತ್ಸ ಮತ್ತು ಕಡಲಾಚೆಯ ಕೋಗಿಲೆ ಸಿಂಗಪುರದ ಭಾಗ್ಯಮೂರ್ತಿ. ಗುರು ಮಾಲಿಕಾ ಗಿರೀಶ್ ಪಣಿಕ್ಕರ್ ಅವರಿಂದ ನಟುವಾಂಗಂ; ಪಕ್ಕವಾದ್ಯದಲ್ಲಿ - ಹೆಚ್. ಎಸ್. ವೇಣುಗೋಪಾಲ್ (ಕೊಳಲು), ಎಸ್. ಲಿಂಗರಾಜು (ಮೃದಂಗ), ಎ. ಶಂಕರ್ ರಾಮನ್ (ವೀಣೆ), ಪ್ರಸನ್ನ ಕುಮಾರ್ (ರಿದಮ್ ಪ್ಯಾಡ್) ಮತ್ತು ಸಿ. ಮಧುಸೂಧನ್ (ಪಿಟೀಲು). ಬೆಂಗಳೂರಿನ Saras Communicationsನ ಸಂಧ್ಯಾ ಎಸ್. ಕುಮಾರ್ ಅವರು ಈ ಕಾರ್ಯಕ್ರಮವನ್ನು ಉತ್ತಮವಾಗಿ ನಿರ್ವಹಿಸಿದರು.
ಶ್ರೀ ಕೃಷ್ಣ ಕಲಾಕ್ಷೇತ್ರದ ನಿರ್ದೇಶಕರಾದ ಶ್ರೀ ತಿರು ಸ್ವಾಮೀಜಿ ಅವರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಅಹ್ವಾನಿತ ಅತಿಥಿಗಳು ಪ್ರೊ. ಎ. ಜನಾರ್ಧನ್ (ಕಲಾಕ್ಷೇತ್ರ, ಚೆನ್ನೈಯ ಮಾಜೀ ಪ್ರಾಂಶುಪಾಲರು), ವಿ.ವಿ. ಸುಂದರಂ ("ಕ್ಲೀವ್ಲ್ಯಾಂಡ್ ತ್ಯಾಗರಾಜ ಹಬ್ಬ"ದ ಮುಂದಾಳು), ಡಾ. ಎಮ್. ಸೂರ್ಯಪ್ರಸಾದ್ (ಬೆಂಗಳೂರಿನ ಪ್ರಖ್ಯಾತ ಸಂಗೀತ ಮತ್ತು ನೃತ್ಯ ವಿಮರ್ಶಕರು) ಹಾಗೂ ಡಾ. ಎಸ್. ಟಿ. ರಮೇಶ್ (ಕರ್ನಾಟಕ ಸರ್ಕಾರದ ನಿವೃತ್ತ ಪೋಲೀಸ್ ಡಿ.ಜಿ./ಐ.ಜಿ. ಪಿ.).