ಒಹಾಯೊ ಸಿನ್ಸಿನಾಟಿಯಲ್ಲಿ ಕನ್ನಡಿಗರ ಯುಗಾದಿ
ಕಾರಣವಿಷ್ಟೆ ಸಿನ್ಸಿನಾಟಿ ಕನ್ನಡ ಗೆಳೆಯರ ಬಳಗ 'ಸಿಂಚನ' ಏಪ್ರಿಲ್ 23ರಂದು ಯುಗಾದಿಯ ಸಂಭ್ರಮದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ದೇವಾಲಯದ ಅಂಗಳದಲ್ಲಿ ಸಂಭ್ರಮವೋ ಸಂಭ್ರಮ. ನೆರೆದಿದ್ದ ಮಹಿಳೆಯರೆಲ್ಲ ಕರ್ನಾಟಕದ ಸಾಂಸ್ಕೃತಿಕ ದಿರಿಸಿನಲ್ಲಿ ಲವಲವಿಕೆಯಿಂದ ಕಂಗೊಳಿಸುತ್ತಿದ್ದರು. ಯಾವಾಗಲೋ ಒಮ್ಮೆ ಸಿಗುವ ಪುರುಷರ ಹರಟೆ ಸಾಂಗವಾಗಿ ನಡೆದಿತ್ತು. ಮಕ್ಕಳಿಗಂತೂ ಎಲ್ಲಿಲ್ಲದ ಸಂಭ್ರಮ.
ಮೂರು ಗಂಟೆಯ ಕಾರ್ಯಕ್ರಮದಲ್ಲಿ, ಮಕ್ಕಳ ಫ್ಯಾಷನ್ ಶೋ, ದಾಸರ ಪದ, ಹಾಸ್ಯದ ಹರಟೆ, ಮಹಿಳೆಯರ ನೃತ್ಯ, ಲಘು ನಾಟಕ ಇತ್ಯಾದಿಗಳು ಆಕರ್ಷಕವಾಗಿ ಮೂಡಿ ಬಂದವು. ಅಷ್ಟೇ ಅಲ್ಲದೆ ಯುಗಾದಿ ಎಂದರೇನು, ಯುಗಾದಿಯ ಮಹತ್ವವೇನು, ಯುಗಾದಿಯ ಬಗ್ಗೆ ಎಲ್ಲೆಲ್ಲಿ ಉಲ್ಲೇಖ ಸಿಗುತ್ತದೆ. ನಾನಾ ಪ್ರಾಂತ್ಯದಲ್ಲಿ ಯುಗಾದಿಯನ್ನು ಹೇಗೆ ಆಚರಿಸಲಾಗುತ್ತದೆ ಎಂಬುದನ್ನೂ ತಿಳಿಸಿಕೊಡಲಾಯಿತು.
ಮಧ್ಯೆ ಮಧ್ಯೆ ಹಾಸ್ಯದ ಒಗ್ಗರಣೆಯ ಮೂಲಕ ನಿರೂಪಕರಾದ ಪ್ರಸನ್ನ ಮತ್ತು ಶ್ರೀಧರ ಮೂರ್ತಿಯವರು ಗಮನ ಸೆಳೆದರು. ಕನ್ನಡದ ಅನೇಕ ಪದಗಳನ್ನು ಅವುಗಳ ಅರ್ಥ/ಅನರ್ಥಗಳ ಸಂಯೋಗದೊಂದಿಗೆ ಬಳಸಿಕೊಂಡು, ಮಧ್ಯ ಮಧ್ಯ ನಾ ಕಸ್ತೂರಿಯವರ ಅನರ್ಥಕೋಶ, ವೈಎನ್ಕೆಯವರ ವಂಡರ್ ಕಣ್ಣಿನ ಪನ್ಗಳನ್ನು ಉದಾಹರಿಸಿದ್ದು ನೆರೆದಿದ್ದವರನ್ನೆಲ್ಲಾ ನಗೆಗಡಲಲ್ಲಿ ತೇಲಿಸಿತು. ಸಮೋಸ, ಕಾಫಿ ಸೇವಿಸಿ, ಕಾರ್ಯಕ್ರಮವನ್ನು ಸವಿದು, ಭೋಜನ ಮುಗಿಸಿ ಎಲ್ಲರೂ ಭಾರ ಹೃದಯದಿಂದ ಬೀಳ್ಕೊಟ್ಟರು. ಮತ್ತೊಂದು ಕನ್ನಡದ ಕಾರ್ಯಕ್ರಮ ಬೇಗ ಬರಲಿ, ನಾವೆಲ್ಲರೂ ಇನ್ನಷ್ಟು ಉತ್ಸಾಹದಿಂದ ಸೇರುವಂತಾಗಲಿ ಎಂದು ಎಲ್ಲರ ಮನ ಹಾರೈಸಿದ್ದು ಸುಳ್ಳಲ್ಲ.