ವಿದ್ಯಾರಣ್ಯದಲ್ಲಿ ರಂಗೇರಿದ ಸರ್ವಜಿತ್ ಯುಗಾದಿ
ಲೆಮಾಂಟ್ನ ಸಮಾರಥಿ ಸಭಾಂಗಣದಲ್ಲಿ ಶನಿವಾರ(ಏ.7) ಇಲಿನಾಯ್ನ ವಿದ್ಯಾರಣ್ಯ ಕನ್ನಡ ಕೂಟದ ಯುಗಾದಿ ಆಚರಣೆ ನಡೆಯಿತು. ಸರ್ವಜಿತ್ ಸಂವತ್ಸರದ ಆಗಮನಕ್ಕೆ ಈ ಬಾರಿ ರಂಗು ರಂಗಿನ ಸ್ವಾಗತವಿತ್ತು.
- ಅಕ್ಷರ : ಕೆ. ತ್ರಿವೇಣಿ ಶ್ರೀನಿವಾಸರಾವ್
ಮಸೂರ : ಶ್ರೀನಿವಾಸರಾವ್
ಯುಗಾದಿ ಹಬ್ಬದ ಆಚರಣೆಗೆ ‘ಬಣ್ಣಗಳು’ ಎಂಬ ಥೀಮ್ ಇದ್ದಿದ್ದರಿಂದ, ಕಾರ್ಯಕ್ರಮದ ವಿವರಗಳನ್ನು ತಿಳಿಸುವ ಕರಪತ್ರದಿಂದ ಹಿಡಿದು ಎಲ್ಲೆಲ್ಲಿ ನೋಡಿದರೂ ಬಣ್ಣಾ....ನನ್ನ ಒಲವಿನ ಬಣ್ಣಾ! ನನ್ನ ಬದುಕಿನ ಬಣ್ಣಾ!
ವಿದ್ಯಾರಣ್ಯ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯ ಪುರುಷ ಸದಸ್ಯರೆಲ್ಲರೂ ಸೂಟು,ಬೂಟು ತೊಟ್ಟು ಸೊಗಸುಗಾರರಾಗಿ ಶೋಭಿಸಿದರೆ, ಮಹಿಳೆಯರು ಬಣ್ಣ ಬಣ್ಣದ ರೇಷ್ಮೆ ಸೀರೆ, ನಿಗಿನಿಗಿ ಹೊಳೆಯುವ ಒಡವೆಗಳಿಂದ ಅಲಂಕೃತರಾದ ಸಿರಿ ಗೌರಿಯರು. ಮುಖದಲ್ಲೊಂದು ಮುಗುಳ್ನಗೆಯನ್ನು ಧರಿಸಿ, ಗೆಲುವಿನಿಂದ ಅತ್ತಿತ್ತ ಓಡಾಡುತ್ತಿದ್ದ ನಮ್ಮ ವಿದ್ಯಾರಣ್ಯದ ಸದಸ್ಯರ ಸಡಗರ ನೋಡುತ್ತಿದ್ದರೆ ಯಾವುದೋ ಮದುವೆಯ ರಿಸೆಪ್ಷನ್ಗೆ ಬಂದಂತಹ ಹಿತಾನುಭವ!
ಮೊದಲಿಗೆ ಶ್ರೀರಾಮ ದೇವಾಲಯದ ಅರ್ಚಕರಾದ ಧರ್ಮರಾವ್ ಅವರಿಂದ ಪೂಜೆ, ಪಂಚಾಂಗ ಶ್ರವಣ ನಡೆಯಿತು. ರಾಶಿಫಲ ಬಹಳ ಜನಕ್ಕೆ ಆನಂದ ನೀಡಿದಂತಿತ್ತು. ನಂತರ ಆಕಾಶ್ ಮಟ್ಟು ಹಾಡಿದ ‘ಜಯತು ಜಯ ವಿಠಲ’ ಎಂಬ ಪ್ರಾರ್ಥನೆಯಾಂದಿಗೆ ಕಾರ್ಯಕ್ರಮಕ್ಕೆ ಜಯಘೋಷವಾಯಿತು. ಉಭಯ ದೇಶಗಳ ರಾಷ್ಟ್ರಗೀತೆಗಳ ಗಾಯನಗಳು ನಡೆದವು. ವಿದ್ಯಾರಣ್ಯದ ಹೊಸ ಅಧ್ಯಕ್ಷ ದತ್ತಮೂರ್ತಿ ಅಜ್ಜಂಪುರ ಅವರು ಸಭೆಗೆ ಸ್ವಾಗತ ಕೋರಿದರು.
ಕಾಮನಬಿಲ್ಲೇ ಪ್ರತ್ಯಕ್ಷ...
ನಂತರ ನಡೆದ ಮಕ್ಕಳ ನೃತ್ಯದಲ್ಲೂ ಬಣ್ಣಗಳದೇ ದರಬಾರು. ‘ಆಚೆ ಮನೆಯ ಸುಬ್ಬಮ್ಮನಿಗೆ’, ‘ಅಂಕು ಡೊಂಕು’, ‘ವರ್ಣಮಯ ಆಧುನಿಕ ನಾಟ್ಯ’ ಮುಂತಾದ ನೃತ್ಯಗಳಿದ್ದವು. ‘ಬಣ್ಣದ ಗರಿ’ ಎಂಬ ನೃತ್ಯದಲ್ಲಿ ‘ಏಳು ಸ್ವರವು ಸೇರಿ ಸಂಗೀತವಾಯಿತು’ ಎಂಬ ಹಾಡಿಗೆ ಪುಟ್ಟ ಮಕ್ಕಳು ನರ್ತಿಸಿದರು.
ವೀಣಾ ಚೈತನ್ಯ ಸಂಯೋಜಿಸಿದ್ದ ಈ ನೃತ್ಯದಲ್ಲಿ ಏಳು ಬಣ್ಣಗಳನ್ನು ಬಿಂಬಿಸುವ ಕಾಮನಬಿಲ್ಲೇ ಪ್ರತ್ಯಕ್ಷವಾಗಿತ್ತು. ಇತ್ತೀಚೆಗೆ ಅಮೆರಿಕದಲ್ಲಿ ಪ್ರದರ್ಶನ ಕಂಡ ‘ನೆನಪಿರಲಿ’ ಚಿತ್ರದ ‘ಅಜಂತ ಎಲ್ಲೋರ’ ಹಾಡಿಗೆ ಮಕ್ಕಳು ಅದ್ಭುತವಾಗಿ ನರ್ತಿಸಿದರು. ಶೃತಿ ರಾವ್ ಮತ್ತು ರಾಧಾ ರಾವ್ ಈ ನೃತ್ಯ ತಂಡದ ರೂವಾರಿಗಳು. ಪ್ರತಿಯಾಂದು ನೃತ್ಯದಲ್ಲೂ ಸಂಯೋಜಕರು, ಮಕ್ಕಳು ಪಟ್ಟಿರುವ ಪರಿಶ್ರಮ ಎದ್ದು ಕಾಣುತ್ತಿತ್ತು.
‘ವಿನಾಯಕ ವಿನಾಯಕ ದಯಾ ಕರೊ ಭಗವಾನ್’ ಎಂಬ ಭಕ್ತಿಗೀತೆಯನ್ನು ಮಕ್ಕಳು ವೃಂದಗಾನವಾಗಿ ಹಾಡಿದರು. ರಿಷಿಕೇಶ್ ಕುಲಕರ್ಣಿ ಮತ್ತು ಸೂರ್ಯ ದೊಂಟಿ ಎಂಬ ಇಬ್ಬರು ಮಕ್ಕಳು ಶಿಶುಗೀತೆಗಳನ್ನು ಹಾಡಿದ ನಂತರ ಮಕ್ಕಳಿಂದ ಭಗವದ್ಗೀತೆಯ ಆರನೆಯ ಅಧ್ಯಾಯದ ಕೆಲವು ಶ್ಲೋಕಗಳ ಪಠನವೂ ನಡೆಯಿತು.
ನಮ್ಮೂರಿನ ಪ್ರತಿಭೆಗಳು..
ಈ ಬಾರಿ ಸಂಘದ ಸದಸ್ಯರ ಸುಪ್ತ ಪ್ರತಿಭೆಯನ್ನು ಹೊರತೆಗೆಯಲು ‘ಪ್ರತಿಭಾ ಶೋಧ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ವಯೋಮಾನದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 10-14 ವಯೋಮಾನದ ವಿಭಾಗದಲ್ಲಿ ಮೊದಲಿಗೆ ‘ಶ್ರೀ’ ಚಿತ್ರದಿಂದ ಆಯ್ದ ಗೀತೆ ‘ಮನಿಯೆ ಮನಿಯೆ ನಂ ಪ್ರಾಣ’ ಹಾಡಿನ ನೃತ್ಯವಿತ್ತು. ಸಂಧ್ಯಾ ಅಪ್ಪಲನೇನಿ ಸಂಯೋಜಿಸಿದ್ದ ಈ ನೃತ್ಯ ಪ್ರೇಕ್ಷಕರ ಮನ ಸೆಳೆಯಿತು.
ನಂತರ ಇದೇ ವಿಭಾಗದಲ್ಲಿ ಮೂಡಿ ಬಂದ ಇನ್ನೊಂದು ನೃತ್ಯವನ್ನು ಭಾಗ್ಯ ನಾಗೇಶ್ ಸಂಯೋಜಿಸಿದ್ದರು. ‘ಅಹಂ ಪ್ರೇಮಾಸ್ಮಿ’ ಚಿತ್ರದ ಶೀರ್ಷಿಕೆ ಗೀತೆಗೆ ನಿಶಿತಾ ಕುಮಾರ್, ಪ್ರೀತಿ ರಾಮ್ಮೋಹನ್, ಅನುಷ ಆಡ್ಕೋಳಿ ಮಿಂಚಿನ ಕುಡಿಗಳಂತೆ ನರ್ತಿಸಿದರು. ಲಯ ಪ್ರಧಾನವಾಗಿರುವ ಈ ಗೀತೆ ಚುರುಕಿನ ನೃತ್ಯಕ್ಕೆ ಅತ್ಯುತ್ತಮ ಆಯ್ಕೆಯಾಗಿತ್ತು.
ಪ್ರತಿಭಾ ಶೋಧದ 15-20 ರ ವಯೋಮಾನದ ಗುಂಪಿನಲ್ಲಿ ‘ಎಲ್ಲೆಲ್ಲೂ ಹಬ್ಬ ಹಬ್ಬ, ಬಂತು ಯುಗಾದಿ ಹಬ್ಬ’ ಮತ್ತು ‘ಮುಂಗಾರು ಮಳೆ’ ಚಿತ್ರದ ‘ಸುವ್ವಿ ಸುವ್ವಾಲಿ’ ನೃತ್ಯಗಳನ್ನು ಪ್ರಸ್ತುತಪಡಿಸಲಾಯಿತು. ನವ್ಯ ಕಾಮತ್, ಚೈತ್ರ ಕಿಶೋರ್, ಮೇಘನಾ ಮೂಡಬಾಗಿಲ್, ಅನುಷಾ ಮೂಲ್ಕಿ, ಲಕ್ಷ್ಮೀ ಶಾಸ್ತ್ರಿ ಮತ್ತು ಪೂಜಾ ಸಿಂಗ್ ನರ್ತಿಸಿದ ‘ಎಲ್ಲೆಲ್ಲೂ ಹಬ್ಬ’ ನೃತ್ಯ ಬಹುಮಾನ ಗಳಿಸಿತು.












Click it and Unblock the Notifications