ಫ್ಲಾರಿಡಾ ಸಮ್ಮೇಳನ : ಬೆಂಗಳೂರಲ್ಲಿ ರೇಣುಕಾ ರಾಮಪ್ಪ ಸುದ್ದಿಗೋಷ್ಠಿ
ಎಸ್ಕೆ.
ಶಾಮಸುಂದರ [email protected] |
ಉತ್ತರ ಅಮೆರಿಕದ ಫ್ಲಾರಿಡಾ ರಾಜ್ಯದ ಆರ್ಲ್ಯಾಂಡೊದಲ್ಲಿ 2004ರ ಸೆಪ್ಟಂಬರ್ 3ರಿಂದ 5ರ ವರೆಗೆ (Labor Day ; Long Week-End) ಮೂರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಕಲ ಏರ್ಪಾಟುಗಳನ್ನು ಭರದಿಂದ ಮಾಡಲಾಗುತ್ತಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷೆ ಡಾ. ರೇಣುಕ ರಾಮಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಜೂನ್ 19ರ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮ್ಮೇಳನದ ವಿವಿಧ ಆಯಾಮಗಳ ವಿವರಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ಒದಗಿಸಿದರು. ಗೋಷ್ಠಿಯಲ್ಲಿ ರೇಣುಕಾ ಅವರೊಂದಿಗೆ ಸಮ್ಮೇಳನದ ಸಹ ಸಂಚಾಲಕಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿ ಇಂದಿರಾ ಶಾಸ್ತ್ರಿ ಹಾಜರಿದ್ದರು.
ಸು-ದ್ದಿಗೋಷ್ಠಿಯ ಪ್ರಮುಖ ಅಂಶಗಳು :
- ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳು ಮರಿಗಳಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಹಬ್ಬದ ವಾತಾವರಣದಲ್ಲಿ ಪರಿಚಯಿಸುವ ಮೂಲಕ ಒಂದು ಪರಂಪರೆಯನ್ನು ಮುಂದಿನ ಜನಾಂಗಕ್ಕೆ ರವಾನಿಸುವುದು ಸಮ್ಮೇಳನದ ಉದ್ದೇಶಗಳಲ್ಲಿ ಪ್ರಮುಖವಾದದ್ದು.
- ಎರಡು ವರ್ಷಗಳಿಗೊಮ್ಮೆ ನಡೆಯುವ ವಿಶ್ವ ಕನ್ನಡ ಸಮ್ಮೇಳನ ಈ ಬಾರಿ ಫ್ಲಾರಿಡಾ ರಾಜ್ಯದಲ್ಲಿ ನಡೆಯುವುದು. ಸ್ಥಳೀಯ ಕನ್ನಡ ಸಂಘವಾದ ಶ್ರೀಗಂಧ ಕನ್ನಡ ಕೂಟ ಸಮ್ಮೇಳನದ ಆತಿಥ್ಯ ವಹಿಸಿದೆ. ಸೂರ್ಯ ರಶ್ಮಿಯ ನಾಡು ಎಂದೇ ಪ್ರಸಿದ್ಧವಾದ ಆರ್ಲ್ಯಾಂಡೊ ನಗರದಲ್ಲಿ ಮೂರು ದಿನಗಳ ಸಮ್ಮೇಳನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಗೇಲಾರ್ಡ್ ರೆಸಾರ್ಟ್ ನ ವಿಶಾಲ ಸೌಧ ಸಭಾಂಗಣವೇ ಸಮ್ಮೇಳನದ ರಂಗಸ್ಥಳ.
- ಉತ್ತರ ಅಮೆರಿಕಾದ ಮೂಲೆಮೂಲೆಗಳಲ್ಲಿ ನೆಲೆಸಿರುವ ಕನ್ನಡಿಗರು ಸಮ್ಮೇಳನ ಮುಖಿಗಳಾಗಿ ಆರ್ಲ್ಯಾಂಡೊಗೆ ಬರುತ್ತಾರೆ. ಅಲ್ಲದೆ, ಕನಾಟಕದಿಂದ ಸುಮಾರು 50 ಮಂದಿ ಹಾಗೆಯೇ ಬ್ರಿಟನ್, ಸಿಂಗಾಪುರ, ಆಸ್ಟ್ರೇಲಿಯಾದಿಂದ ಕನ್ನಡಿಗರು ಆಗಮಿಸುವ ನಿರೀಕ್ಷೆ ಇದೆ. ಒಟ್ಟಾರೆ 3000 ದಿಂದ 4000 ಪ್ರತಿನಿಧಿಗಳನ್ನು ಸಮ್ಮೇಳನ ಎದುರು ನೋಡುತ್ತಿದೆ. ಈಗಾಗಲೇ Early Bird Discount ಪ್ರಯೋಜನ ಪಡೆದ 750 ಮಂದಿ ಪ್ರತಿನಿಧಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.
- ಕರ್ನಾಟಕದ ಮುಖ್ಯಮಂತ್ರಿ ಧರಮ್ ಸಿಂಗ್, ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಆಹ್ವಾನ ನೀಡಲಾಗಿದೆ. ಅವರು ಸಮ್ಮೇಳನದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದಾರೆ ಕೂಡ. ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರನ್ನು ಆಹ್ವಾನಿಲಾಗಿದೆ.
- ಕಲಾವಿದ-ಗಾಯಕ ಕ್ಷೇತ್ರದಿಂದ ಸಮ್ಮೇಳನಕ್ಕೆ ಬರುತ್ತಿರುವವರ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರು ಹಿನ್ನೆಲೆ ಗಾಯಕ ಎಸ್ಪಿ, ನಿಮ್ಮ ಎಸ್. ಪಿ. ಬಾಲಸುಬ್ರಮಣ್ಯಂ.
- ಎರಡೂವರೆ ದಿವಸ ನಡೆಯುವ ಕನ್ನಡ ಹಬ್ಬದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ದೀರ್ಘವಾಗಿದೆ. ಸಮ್ಮೇಳನದ ಮೊದಲ ದಿನ ಎಲ್ಲರೂ ಪಾಲ್ಗೊಳ್ಳುವ ಆಕರ್ಷಕ ಸಂಸ್ಕೃತಿ ಮೆರವಣಿಗೆ ಇರುತ್ತದೆ. ಕರ್ನಾಟಕದಿಂದ ಆಗಮಿಸುವ ನಾನಾ ಕಲಾವಿದರು, ಗಾಯಕ ಗಾಯಕಿಯರ ಕಾರ್ಯಕ್ರಮಕ್ಕೆ ಆದ್ಯತೆ ಕೊಡಲಾಗುವುದು. ಅಂತೆಯೇ, ಅಮೆರಿಕಾದ ಅನೇಕಾನೇಕ ಕನ್ನಡ ಕೂಟಗಳನ್ನು ಪ್ರತಿನಿಧಿಸುವವರು ನಡೆಸಿಕೊಡುವ ನಾಟಕ, ನೃತ್ಯ, ಹಾಡು, ಕವಿಗೋಷ್ಠಿ, ಸಾಹಿತ್ಯ ವಿಹಾರ, ಸಮೂಹಗಾನ ಮುಂತಾದ ಸಾಂಸ್ಕೃತಿಕ ಕಲರವಗಳಿಗೆ ಹೇರಳ ಅವಕಾಶ ಕಲ್ಪಿಸಲಾಗುತ್ತದೆ.
*ಕನ್ನಡ ಕೂಟಗಳಿಗೆ ಆಹ್ವಾನ ಹೋಗಿದೆಯಾ ?
ಪ್ರತಿಯಾಂದು ಕನ್ನಡ ಕೂಟಗಳ ಮುಖ್ಯಸ್ಥರಿಗೆ ಆಹ್ವಾನ ಕಳುಹಿಸಲಾಗಿದೆ. ಮುಖ್ಯಸ್ಥರು ತಮ್ಮತಮ್ಮ ಸಂಘಗಳ ಸದಸ್ಯ ಕುಟುಂಬಗಳಿಗೆ ಮಾಹಿತಿ ಕೊಡುತ್ತಾರೆ, ಕೊಟ್ಟಿದ್ದಾರೆ.
*ಕರ್ನಾಟಕದಿಂದ ಆಗಮಿಸುವ ಕವಿ-ಲೇಖಕರು ಯಾರ್ಯಾರು?
ಪ್ರೊ. ಅ.ರಾ. ಮಿತ್ರ, ಪ್ರೊ. ಲಕ್ಕಪ್ಪ ಗೌಡ, ಎಚ್. ಎಸ್. ಪಾರ್ವತಿ, ನೀಳಾದೇವಿ, ಉಷಾ ಪಿ. ರೈ ಇನ್ನು ಮುಂತಾದವರು
*ಕರ್ನಾಟಕ ಸರಕಾರದ ವತಿಯಿಂದ ಭಾಗವಹಿಸುವ ಕಲಾವಿದ ವೃಂದದಲ್ಲಿ ಯಾರ್ಯಾರಿರುತ್ತಾರೆ? ಪ್ರತೀ ಬಾರಿಯೂ ಇದೊಂದು ಫಜೀತಿಯಾಗಿ ಪರಿಣಮಿಸುತ್ತಿದೆ, ಯಾಕೆ?
ಇಂ-ತಿಂಥ ಕ್ಷೇತ್ರದಿಂದ ಇಂ-ತಿಂಥವರನ್ನು ಸಮ್ಮೇಳನಕ್ಕೆ ಕಳಿಸಿ ಎಂದು ನಾವು ಇಲಾಖೆಗೆ (ಸಂಸ್ಕೃತಿ ಇಲಾಖೆಯ ನಿರ್ದೇಶಕ-ಮುದ್ದು ಮೋಹನ್) ತಿಳಿಸಿದ್ದೇವೆ. ಅವರು ಕೈಗೊಳ್ಳುವ ತೀರ್ಮಾನವನ್ನು ಎದುರು ನೋಡುತ್ತೇವೆ.
*ಅಕ್ಕ ಸಂಸ್ಥೆಯನ್ನು ಹುಟ್ಟು ಹಾಕಿದವರು ಯಾರು ?
ನಾವೈದಾರು ಜನ ಸೇರಿ ಸ್ಥಾಪಿಸೆದೆವು. ನಾನು ಕೂಡ ಒಬ್ಬ ಫೌಂಡರ್ ( ರೇಣುಕಾ ರಾಮಪ್ಪ)
*ಅಕ್ಕ ಸಂಸ್ಥೆಯಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಅಕ್ಕ ಎರಡು ಹೋಳಾಗಿತ್ತಲ್ಲ, ಈಗ ಏನು ಸಮಾಚಾರ?
ಭಿನ್ನಾಭಿಪ್ರಾಯಗಳೆಲ್ಲ ಬಗೆಹರಿದಿವೆ. ಇರುವುದೊಂದೆ ಅಕ್ಕ.
*ಅಕ್ಕ ನಿರ್ದೇಶಕ ಮಂಡಳಿಯ ಚುನಾವಣೆ ನಡೆದು ತುಂಬಾ ದಿವಸ ಆಯಿತು. ಇನ್ನೂ ಅಧ್ಯಕ್ಷರ ಪ್ರಕಟಣೆ ಆಗೇ ಇಲ್ಲ. ಯಾಕೆ?
ಜುಲೈ ಎರಡನೇ ವಾರದ ಹೊತ್ತಿಗೆ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ. ಅಧ್ಯಕ್ಷರು ಮತ್ತಿತರ ಪದಾಧಿಕಾರಿಗಳ ಹೆಸರನ್ನು ಅಕ್ಕ ಚುನಾವಣಾ ಅಧಿಕಾರಿಗಳು ಸದ್ಯದಲ್ಲೇ ಪ್ರಕಟಿಸುವವರಿದ್ದಾರೆ.
*ಅಕ್ಕದಲ್ಲಿ ಎಷ್ಟು ಮಂದಿ ಸದಸ್ಯರಿದ್ದಾರೆ?
ಸುಮಾರು 400. ಸದಸ್ಯರಲ್ಲದೆ, ಭೌಗೋಳಿಕ ಇತಿಮಿತಿಗಳಿಲ್ಲದೆ ಕನ್ನಡದ ಪ್ರೀತಿ ಇರುವ ಯಾವುದೇ ಕನ್ನಡಿಗ ಸಮ್ಮೇಳನದಲ್ಲಿ ಭಾಗವಸಿಸಬಹುದು.
*ಅಮೆರಿಕಾದ ಗೌರ್ನಮೆಂಟ್ ಸಮ್ಮೇಳನಕ್ಕೆ ನೆರವು ಕೊಡತ್ತಾ?
ಇಲ್ಲಿ, ಸರಕಾರದ ನೆರವಿನ ಪ್ರಶ್ನೆ ಉಧ್ಬವಿಸುವುದಿಲ್ಲ. ಆರ್ಲ್ಯಾಂಡೋದ ಮೇಯರ್ ಮತ್ತು ಫ್ಲಾರಿಡಾದ ಸಾಲಿಸಿಟರ್ ಜನರಲ್ ಅವರಿಗೆ ಆಮಂತ್ರಣ ಕೊಟ್ಟಿದ್ದೇವೆ. ಅವರು ಭಾಗವಹಿಸಲಿದ್ದಾರೆ. Is there anything we could do? ಎಂದು ಅವರು ಕೇಳುತ್ತಾರೆ. ನೆನಪಿರಲಿ : ‘ಅಕ್ಕ’ ಒಂದು ಲಾಭ ರಹಿತ ಸಂಸ್ಥೆ.
*ಅಲ್ಲಿ ಎಷ್ಟು ಮಂದಿ ಕನ್ನಡಿಗರಿದ್ದಾರೆ ?
ಫ್ಲಾರಿಡಾದಲ್ಲಿ ಸುಮಾರು 10.000 ಕನ್ನಡಿಗರಿದ್ದಾರೆ ಎಂಬ ಅಂದಾಜು ಇದೆ. ಭಾರತೀಯರಲ್ಲಿ ಗುಜರಾತಿಗಳದೇ ಸಿಂಹಪಾಲು. ಆನಂತರ ತೆಲುಗು ಭಾಷಿಕರು. ತದನಂತರದಲ್ಲಿ ಕನ್ನಡಿಗರೇ ಹೆಚ್ಚು ಸಂಖ್ಯೆಯಲ್ಲಿ ನೆಲೆಸಿದ್ದಾರೆ ಎಂದು ಹೇಳುತ್ತಾರೆ .
*ಭಾರತದ ಇನ್ನಿತರ ಭಾಷಾಗುಂಪುಗಳು ಮತ್ತು ಫಾರಿನ್ ಜನ ಸಮ್ಮೇಳನಕ್ಕೆ ಬರುತ್ತಾರಾ ?
ನಮ್ಮ ಸಂಸ್ಕೃತಿಯ ಬಗ್ಗೆ ಅನೇಕರಿಗೆ ಕುತೂಹಲ, ಆಸಕ್ತಿ ಇದೆ. ಸೀರೆ ಉಟ್ಟುಕೊಳ್ಳುವುದು ಹೇಗೆ? ಅಂತ ಕರಿಯ-ಬಿಳಿಯ ಜನಾಂಗದ ಸ್ನೇಹಿತರು ಕೇಳುತ್ತಿರುತ್ತಾರೆ ಎಂದು ಇಂಡಿಯನ್ ಬ್ರೌನ್ ಇಂದಿರಾ ಶಾಸ್ತ್ರಿ ಉತ್ತರಿಸಿದರು.
ಇನ್ನೇನಾದರೂ ಸಂದೇಹ, ಮಾಹಿತಿ, ವಿವರಣೆ ಬೇಕಿದ್ದರೆ ನಮ್ಮ ಇಂಡಿಯಾ, ಅಂದರೆ ಕರ್ನಾಟಕ ಸಂಯೋಜಕರನ್ನು ಸಂಪರ್ಕಿಸಿ ಎಂದು ಸು-ದ್ದಿಗೋಷ್ಠಿ ಮುಗಿಸಿದರು, ರೇಣುಕಾ ರಾಮಪ್ಪ ಮತ್ತು ಇಂದಿರಾ ಶಾಸ್ತ್ರಿ.
ಕರ್ನಾಟಕ
ಸಂಯೋಜಕರು
:
1)
ಭಾರತಿ
ಸಿ.ಎಸ್,
ಬೆಂಗಳೂರು
91---80-22691655/
ಸಂಚಾರಿ-9844075995,
ಈ-ಪತ್ರ
ವಿಳಾಸ:
[email protected]
2)
ವೀರ
ಮಾರೇಗೌಡ,
(
ರಾಜು)
ಬೆಂಗಳೂರು
91-80-23715158/
ಸಂಚಾರಿ-9845404751,
[email protected]
3)
ಜಗದೀಶ್
ರಂಗಸ್ವಾಮಿ
91-80-23490346
/
ಸಂಚಾರಿ
9845430062
[email protected]