ಯಾದಗಿರಿ: ಜಾತಿ ಭೂತಕ್ಕೆ ದಶಕಗಳಿಂದ ಈ ಶಾಲೆ ಮಕ್ಕಳಿಗಿಲ್ಲ ಬಿಸಿಯೂಟ
ಯಾದಗಿರಿ, ನವೆಂಬರ್ 10: ಈ ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟದ ಭಾಗ್ಯವಿಲ್ಲ. ಅಡುಗೆ ಸಿಬ್ಬಂದಿ ದಲಿತ ಮಹಿಳೆ ಎಂಬ ಕಾರಣಕ್ಕೆ ಬಿಸಿಯೂಟ ಬಂದ್ ಮಾಡಲಾಗಿದೆ. ಇದರಿಂದ ಕಲ್ಲದೇವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹೊಟ್ಟೆ ಸೇರುತ್ತಿಲ್ಲ.
ಇಲ್ಲಿಯವರೆಗೂ ಯಾದಗಿರಿ ಜಿಲ್ಲೆಯ ಈ ಶಾಲೆಯಲ್ಲಿ ಬಿಸಿಯೂಟ ಆರಂಭಿಸಲು ಅಧಿಕಾರಿಗಳು ಪ್ರಮಾಣಿಕ ಪ್ರಯತ್ನವನ್ನೂ ಮಾಡಿಲ್ಲ. ಇದೆಲ್ಲದರ ಪರಿಣಾಮ ಕಲ್ಲದೇವನಹಳ್ಳಿಯಲ್ಲಿ ಜಾತಿ ವ್ಯವಸ್ಥೆ ಎಂಬುದು ಇನ್ನೂ ಜೀವಂತವಾಗಿದೆ. ಮಾತ್ರವಲ್ಲ ಜಾತಿ ವ್ಯವಸ್ಥೆಯ ಕರಾಳ ಮುಖ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಮೇಲೂ ಬಿದ್ದಿದೆ.
ಅಕ್ಷರ ದಾಸೋಹ ಯೋಜನೆ ಜಾರಿಯಾಗಿ ದಶಕಗಳೇ ಕಳೆದರೂ ಮಕ್ಕಳಿಗೆ ಊಟ ತಲುಪದಂತೆ ಜಾತಿ ವ್ಯವಸ್ಥೆ ನೋಡಿಕೊಳ್ಳುತ್ತಿದೆ. ದಲಿತ ಮಹಿಳೆಯೊಬ್ಬರು ಅಕ್ಷರ ದಾಸೋಹದ ಸಿಬ್ಬಂದಿಯಾಗಿ ನೇಮಕವಾಗಿದ್ದಾರೆ.

ದಲಿತ ಮಹಿಳೆ ಮಾಡಿದ ಅಡುಗೆ ಬೇಡ
ದಲಿತ ಮಹಿಳೆ ಮಾಡಿದ ಅಡುಗೆಯನ್ನು ಮಕ್ಕಳು ಸೇವಿಸಬಾರದೆಂದು ಕಲ್ಲದೇವನಹಳ್ಳಿಯ ಮೇಲ್ವರ್ಗದ ಜನರು ಬಿಸಿಯೂಟವನ್ನೇ ಬಂದ್ ಮಾಡಿಸಿದ್ದಾರೆ. ಹೀಗೆ ರಾಜಾರೋಷವಾಗಿ ಅಸ್ಪೃಶ್ಯತೆ ಚಾಲ್ತಿಯಲ್ಲಿದ್ದರೂ ಯಾವ ಅಧಿಕಾರಿಗಳೂ ಇತ್ತ ಗಮನ ಹರಿಸಿಲ್ಲ.

2003ರಲ್ಲಿ ಬಿಸಿಯೂಟ ಆರಂಭ
2003ರಲ್ಲೇ ರಾಜ್ಯ ಸರ್ಕಾರವು ಶಾಲಾ ಮಕ್ಕಳಿಗಾಗಿ ಅಕ್ಷರ ದಾಸೋಹ ಯೋಜನೆಯನ್ನು ಜಾರಿಗೆ ತಂದಿದೆ. ಆ ವೇಳೆ ಕಲ್ಲದೇವನಹಳ್ಳಿಯಲ್ಲಿ ಎಸ್ಸಿ/ಎಸ್ಟಿ, ಹಿಂದುಳಿದ ವರ್ಗ, ಸಾಮಾನ್ಯ ಎಂದು ಮೂವರು ಅಡುಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.

ಬಿಸಿಯೂಟ ಬಂದ್
ಆ ಸಂದರ್ಭದಲ್ಲಿ ದಲಿತ ವರ್ಗದಿಂದ ನೇಮಕವಾಗಿದ್ದ ಮಹಿಳೆಯು ಮುಖ್ಯ ಅಡುಗೆ ಸಿಬ್ಬಂದಿಯಾಗಿದ್ದರು. ಬಳಿಕ ಆರು ತಿಂಗಳಲ್ಲೇ ಬೇರೊಂದು ಹುದ್ದೆಗೆ ನೇಮಕವಾಗಿದ್ದರಿಂದ ಆ ಸ್ಥಳಕ್ಕೆ ಮತ್ತೋರ್ವ ದಲಿತ ಮಹಿಳೆ ನೇಮಕವಾದರು.
ಅಂದಿನಿಂದ ಕಲ್ಲದೇವನಹಳ್ಳಿಯ ಶಾಲೆಯಲ್ಲಿ ಬಿಸಿಯೂಟವನ್ನು ಬಂದ್ ಮಾಡಲಾಗಿದೆ. ಆಗೊಮ್ಮೆ- ಈಗೊಮ್ಮೆ ಎನ್ಜಿಒ ಮೂಲಕ ಮಧ್ಯಾಹ್ನದ ಊಟವನ್ನು ಸಪ್ಲೈ ಮಾಡಿಸುತ್ತಾ ಅಧಿಕಾರಿಗಳು ಕೈ ತೊಳೆದುಕೊಳ್ಳುತ್ತಿದ್ದಾರೆ.

ಅಸ್ಪೃಶ್ಯತೆ ಆಚರಣೆಗೆ ಹಿಡಿದ ಕನ್ನಡಿ
ಗ್ರಾಮೀಣ ಭಾಗದಲ್ಲಿ ಇವತ್ತಿಗೂ ಅಸ್ಪೃಶ್ಯತೆ ಹೇಗೆ ಅಸ್ತಿತ್ವ ಹೊಂದಿದೆ ಎಂಬುದಕ್ಕೆ ಕಲ್ಲದೇವನಹಳ್ಳಿಯೇ ಸಾಕ್ಷಿ. ದಲಿತ ಮಹಿಳೆ ಅಡುಗೆ ಮಾಡುತ್ತಾಳೆ ಎಂಬ ಕಾರಣಕ್ಕೆ ಮಕ್ಕಳ ಬಿಸಿಯೂಟವನ್ನೇ ಇಲ್ಲಿ ಕಿತ್ತುಕೊಳ್ಳಲಾಗಿದೆ. ಸರ್ಕಾರಿ ಶಾಲೆಯಲ್ಲೇ ಅಸ್ಪೃಶ್ಯತೆ ಆಚರಣೆ ನಡೆಯುತ್ತಿರುವುದು ದುರಂತವೇ ಸರಿ.












Click it and Unblock the Notifications