ವಿಜಯಪುರ : ಮುಳವಾಡ ಏತ ನೀರಾವರಿ ಯೋಜನೆಗೆ ಚಾಲನೆ
ವಿಜಯಪುರ, ನವೆಂಬರ್ 16 : ದಶಕಗಳ ಕಾಲದ ನಿರೀಕ್ಷೆಯಾದ ಮುಳವಾಡ ಏತ ನೀರಾವರಿ ಯೋಜನೆಗೆ ಚಾಲನೆ ಸಿಕ್ಕಿದೆ. ಈ ನೀರಾವರಿ ಯೋಜನೆ ವಿಜಯಪುರ ಜಿಲ್ಲೆಯ ಜನರ ಹಲವು ವರ್ಷಗಳ ಕನಸಾಗಿತ್ತು.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕೂಡಗಿಯಲ್ಲಿ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗೆ ಪ್ರಾಯೋಗಿಕವಾಗಿ ನೀರನ್ನು ಹರಿಸಲಾಗಿದೆ.
ಇದರಿಂದಾಗಿ ಕರ್ನಾಟಕ ರಾಜ್ಯದ ನೀರಾವರಿ ಇತಿಹಾಸದಲ್ಲಿಯೇ ಹೊಸ ಅಧ್ಯಾಯ ಆರಂಭವಾಗಿದೆ. ನೀರಾವರಿ ಯೋಜನೆಯಲ್ಲಿಯೇ ಅತಿ ಉದ್ದನೆಯ ಹಾಗೂ ದೊಡ್ಡದಾದ ಕಾಲುವೆಗಳನ್ನು ಈ ನೀರಾವರಿ ಯೋಜನೆ ಹೊಂದಿದೆ.

650 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ಬ್ರಿಟಿಷರ ಕಾಲದಲ್ಲಿಯೇ ರೂಪಿಸಲಾಗಿತ್ತು. ಆದರೆ, ಅನೇಕ ಕಾರಣಗಳಿಂದ ಕುಂಠಿತವಾಗಿತ್ತು.
ಬರಪೀಡಿತ ವಿಜಯಪುರ ಜಿಲ್ಲೆಗೆ ನೀರಿನ ಆಸರೆಯಾಗಿದ್ದ ಈ ಯೋಜನೆಗೆ ಕಳೆದ ಕೆಲವು ವರ್ಷಗಳಲ್ಲಿ ಕಾಯಕಲ್ಪ ನೀಡಲಾಗಿತ್ತು. ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಸುಮಾರು 220 ಕಿ.ಮೀ. ಉದ್ದದ ಬೃಹತ್ ಕಾಲುವೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿತ್ತು.
ಕೂಡಗಿ ರೈಲ್ವೆ ಕ್ರಾಸಿಂಗ್ ಬಳಿಯ ಕಾಮಗಾರಿ ವಿಳಂಬವಾದ್ದರಿಂದ ಕಾಲುವೆಗೆ ನೀರು ಹರಿಸುವುದು ಸಾಧ್ಯವಾಗಿರಲಿಲ್ಲ. ಈ ತೊಂದರೆ ನಿವಾರಿಸಲು ತಾತ್ಕಾಲಿಕವಾಗಿ ಪೈಪ್ ಅಳವಡಿಸಿ ಪರಿಹಾರ ಕಂಡುಕೊಳ್ಳಲಾಗಿದ್ದಿ, ಕಾಲುವೆಗೆ ನೀರು ಹರಿಸಲಾಗಿದೆ.
ಯೋಜನೆಯಿಂದಾಗಿ ವಿಜಯಪುರ, ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲೂಕುಗಳಿಗೆ ಸಹಾಯಕವಾಗಲಿದೆ. ಪ್ರತಿ ತಾಲೂಕಿನಲ್ಲಿಯ 10 ಕೆರೆಗಳನ್ನು ಯೋಜನೆಯಡಿ ತುಂಬಿಸಲಾಗುತ್ತದೆ.
'ಈ ಯೋಜನೆ ಅನ್ವಯ ಕುಡಿಯುವ ನೀರು ಪೂರೈಕೆಗೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಕೃಷಿ ಚಟುವಟಿಕೆಗೆ ನೀರನ್ನು ನೀಡುವುದಿಲ್ಲ' ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.











Click it and Unblock the Notifications